ಚುನಾವಣಾ ಆಯೋಗದ ಕಣ್ತಪ್ಪಿಸಲು ಹೀಗೂ ಮಾಡ್ತಾರೆ; ಎಟಿಎಂಗೆ ಹಣ ಕೊಂಡೊಯ್ಯುವ ವಾಹನದಲ್ಲೇ ಮತದಾರರಿಗೆ ಹಂಚಲು ನಗದು ಸಾಗಣೆ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಮತದಾರರಿಗೆ ಆಮಿಷವೊಡ್ಡುವ, ಉಡುಗೊರೆ, ನಗದು ಹಂಚುವ ಕೃತ್ಯಗಳು ಹೆಚ್ಚಾಗಿವೆ.

ಮುಖ್ಯಾಂಶಗಳು
- ರಾಜ್ಯದಲ್ಲಿ ಮತದಾರರಿಗೆ ಆಮಿಷವೊಡ್ಡುವ, ಉಡುಗೊರೆ, ನಗದು ಹಂಚುವ ಕೃತ್ಯಗಳು ಹೆಚ್ಚಾಗಿವೆ.
- ಎಟಿಎಂಗೆ ಹಣ ತುಂಬಲು ಕೊಂಡೊಯ್ಯುವ ವಾಹನಗಳಲ್ಲೂ ಅಕ್ರಮವಾಗಿ ನಗದು ಸಾಗಾಟ.
- ಎಟಿಎಂಗೆ ಹಣ ಸಾಗಿಸುವ 3 ವಾಹನಗಳ ಜಪ್ತಿ.
ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Election) ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಮತದಾರರಿಗೆ ಆಮಿಷವೊಡ್ಡುವ, ಉಡುಗೊರೆ, ನಗದು ಹಂಚುವ ಕೃತ್ಯಗಳು ಹೆಚ್ಚಾಗಿವೆ. ಇಂಥ ಕೃತ್ಯಗಳನ್ನು ತಡೆಯಲು ಚುನಾವಣಾ ಆಯೋಗವು ಹದ್ದಿನ ಕಣ್ಣಿಟ್ಟಿದ್ದರೂ ಇದನ್ನು ತಪ್ಪಿಸಿ ಹಣ, ಉಡುಗೊರೆ ಹಂಚಲು ಮತ್ತು ಸಾಗಾಟಕ್ಕೆ ರಾಜಕೀಯ ಪಕ್ಷಗಳ ಮುಖಂಡರು, ಬೆಂಬಲಿಗರು ಮತ್ತಷ್ಟು ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದೀಗ ಎಟಿಎಂಗೆ ಹಣ ತುಂಬಲು ಕೊಂಡೊಯ್ಯುವ ವಾಹನಗಳಲ್ಲೂ ಅಕ್ರಮವಾಗಿ ನಗದು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೆಚ್ಚುವರಿ ಹಣ ತೆಗೆದುಕೊಂಡು ಹೋಗುತ್ತಿದ್ದ ಮೂರು ವಾಹನಗಳನ್ನು ಬೆಂಗಳೂರಿನ ಹೆಬ್ಬಗೋಡಿ ಚೆಕ್ಪೋಸ್ಟ್ನಲ್ಲಿ ಜಪ್ತಿ ಮಾಡಲಾಗಿದೆ.
ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಎಟಿಎಂಗೆ ಹಣ ಸಾಗಿಸುವ 3 ವಾಹನಗಳನ್ನು ಚೆಕ್ಪೋಸ್ಟ್ನಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ, ಮೂರು ವಾಹನಗಳ ಪೈಕಿ ಒಂದು ವಾಹನದಲ್ಲಿ ಹೆಚ್ಚುವರಿ ಹಣ ಇರುವುದು ಪತ್ತೆಯಾಗಿದೆ. ಸಿಬ್ಬಂದಿ ಹೇಳಿದ ಲೆಕ್ಕಕ್ಕೂ ಹಣಕ್ಕೂ ವ್ಯತ್ಯಾಸ ಕಂಡು ಬಂದಿದೆ. ಹೆಚ್ಚುವರಿ 10 ಲಕ್ಷ ರೂ. ಹಣ ಸಾಗಿಸುತ್ತಿದ್ದು ಕಂಡುಬಂದ ಕಾರಣ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮಕ್ಕೆ ಹಲವು ದಾರಿ
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಚೆಕ್ ಪೋಸ್ಟ್ನಲ್ಲಿ ಎರಡು ದಿನಗಳ ಹಿಂದಷ್ಟೇ ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರ ಬ್ಯಾಗ್ನಲ್ಲಿ 2 ಕೋಟಿ ರೂ. ನಗದು ದೊರೆತಿತ್ತು. ಸಾರ್ವಜನಿಕ ಸಾರಿಗೆಗಳ ಮೂಲಕವೂ ಕೋಟ್ಯಂತರ ರೂ. ನಗದು ಸಾಗಾಟ ಮಾಡುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: Karnataka Elections 2023: ಕಂತೆ ಕಂತೆ ಹಣ ಸೊಂಟಕ್ಕೆ ಕಟ್ಟಿಕೊಂಡು ಬೈಕ್ನಲ್ಲಿ ಸಾಗಾಟ; 7 ಲಕ್ಷ ರೂ. ಪೊಲೀಸರ ವಶಕ್ಕೆ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ನ್ಯಾಮತಿ ತಾಲೂಕಿನ ಜೀನಹಳ್ಳಿ ಚೆಕ್ ಪೊಸ್ಟ್ನಲ್ಲಿ ಬೈಕ್ ತಡೆದ ಪೊಲೀಸರು ಸವಾರನನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಸೊಂಟದಲ್ಲಿ ಕಂತೆಕಂತೆ ನೋಟುಗಳು ಪತ್ತೆಯಾಗಿವೆ.
ಅಫಜಲಪುರದಲ್ಲಿ 3.2 ಲಕ್ಷ ರೂ. ನಗದು ವಶ
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಚೆಕ್ಪೋಸ್ಟ್ನಲ್ಲಿ ದಾಖಲೆಯಿಲ್ಲದ 3.2 ಲಕ್ಷ ರೂ. ನಗದು ಹಣ ಜಪ್ತಿ ಮಾಡಲಾಗಿದೆ. ಬೈಕ್ನಲ್ಲಿ ನಗದು ತೆಗೆದುಕೊಂಡು ಹೋಗುತ್ತಿದ್ದ ಶ್ರೀಕಾಂತ್ ಮ್ಯಾಳೇಸಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಇವರು ಅಫಜಲಪುರದಿಂದ ಬೈಕ್ನಲ್ಲಿ ಮಹಾರಾಷ್ಟ್ರದ ನಾಗಣಸೂರ್ಗೆ ಹಣ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾಚವಣೆಯ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ




