Karnataka Politics: ಬಿಜೆಪಿಯಲ್ಲಿ ಬಿನ್ನಮತದ ಬಿರುಗಾಳಿ‌; ರಾಜ್ಯಕ್ಕೆ ಆಗಮಿಸಿದ ಅರುಣ್ ಸಿಂಗ್

|

Updated on: Apr 12, 2023 | 10:57 PM

ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಅಸಮಾಧಾನ, ಭಿನ್ನಮತ ಸ್ಫೋಟಗೊಂಡಿದೆ. ಇದೀಗ ಬಂಡಾಯ ತಣಿಸುವ ಜವಾಬ್ದಾರಿ ಹೊತ್ತು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ.

Karnataka Politics: ಬಿಜೆಪಿಯಲ್ಲಿ ಬಿನ್ನಮತದ ಬಿರುಗಾಳಿ‌; ರಾಜ್ಯಕ್ಕೆ ಆಗಮಿಸಿದ ಅರುಣ್ ಸಿಂಗ್
ಅರುಣ್ ಸಿಂಗ್
Follow us on

ಬೆಂಗಳೂರು: ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ (BJP Candidates List) ಬಿಡುಗಡೆಯಾಗುತ್ತಿದ್ದಂತೆಯೇ ಅಸಮಾಧಾನ, ಭಿನ್ನಮತ ಸ್ಫೋಟಗೊಂಡಿದೆ. ಇದೀಗ ಬಂಡಾಯ ತಣಿಸುವ ಜವಾಬ್ದಾರಿ ಹೊತ್ತು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ. ಬುಧವಾರ ರಾತ್ರಿ ಅವರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವಂತೆ ವರಿಷ್ಠರಿಂದ ಬಂದ ಸೂಚನೆಗೆ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಬಂಡಾಯವೆದ್ದಿದ್ದರು. ಅವರನ್ನು ದೆಹಲಿಗೆ ಕರೆಸಿಕೊಂಡು ಅವರ ಅಸಮಾಧಾನ ಶಮನಗೊಳಿಸುವಲ್ಲಿ ಹೈಕಮಾಂಡ್ ಬಹುಮಟ್ಟಿಗೆ ಯಶಸ್ವಿಯಾಗಿದೆ. ಆದಾಗ್ಯೂ, ರಾಜ್ಯದ ಹಲವೆಡೆ ಬಂಡಾಯ ಅಭ್ಯರ್ಥಿಗಳಿಂದ ಪಕ್ಷೇತರರಾಗಿ ಸ್ಪರ್ಧಿಸುವ ಬೆದರಿಕೆ, ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ ಮುಂದುವರಿದಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ತುಮಕೂರು ನಗರ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಟಿಕೆಟ್ ಸಿಗದೆ ನಿರಾಶರಾಗಿರುವ ಸೊಗಡು ಶಿವಣ್ಣ ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದ್ದರು. ಇದರ ಬೆನ್ನಲ್ಲೇ ಸೊಗಡು ಶಿವಣ್ಣ ಬೆಂಬಲಿಸಿ 400ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಬಿಜೆಪಿಗೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: BJP’s First Candidate List: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 189 ಮಂದಿಗೆ ಟಿಕೆಟ್, 52 ಮಂದಿ ಹೊಸಬರಿಗೆ ಮಣೆ

ಮತ್ತೊಂದೆಡೆ, ಆರ್. ಶಂಕರ್ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆರ್.ಶಂಕರ್ ಅವರು ರಾಣಿಬೆನ್ನೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಸಿಡಿದ ಸವದಿ

ಮಾಜಿ ಉಪಮುಖ್ಯಂತ್ರಿ, ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರು ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಈ ಮಧ್ಯೆ, ಅವರ ಮನವೊಲಿಕೆಗೆ ಮುಂದಾಗಿರುವ ಬಿಜೆಪಿ ಹೈಕಮಾಂಡ್, ಲಕ್ಷ್ಮಣ ಸವದಿ ಬಿಜೆಪಿಯ ಹಿರಿಯ ನಾಯಕರು, ಅವರು ಪಕ್ಷದಲ್ಲೇ ಇರುತ್ತಾರೆ ಎಂದಿದೆ.

ಬೆಳಗಾವಿಯ ಬೈಲಹೊಂಗಲದಲ್ಲಿಯೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ವೇಳೆ ಅತಿ ಹೆಚ್ಚು ಮತ ಪಡೆದ ವ್ಯಕ್ತಿಗೇ ಟಿಕೆಟ್ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

ರಾಜ್ಯದಾದ್ಯಂತ ಭಿನ್ನಮತ ಸ್ಫೋಟಗೊಂಡಿರುವುದು ಹೈಕಮಾಂಡ್​ ಮಧ್ಯ ಪ್ರವೇಶಿಸುವಂತೆ ಮಾಡಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ