ಮಾಜಿ ಶಾಸಕ ತಿಪ್ಪೇಸ್ವಾಮಿ ಕಾಂಗ್ರೆಸ್ ತೊರೆದು ವಾಪಸ್​ ಬಿಜೆಪಿಗೆ, ಕುತೂಹಲ ಮೂಡಿಸಿದ ಶ್ರೀರಾಮುಲು ರಾಜಕೀಯ ನಡೆ

ತಮ್ಮ ವಿರುದ್ಧ ವೈಯಕ್ತಿಕ ಸಮರ ಸಾರಿದ್ದ ಮಾಜಿ ಶಾಸಕ ತಿಪ್ಪೇಸ್ವಾಮಿಯವರನ್ನು ಶ್ರೀರಾಮುಲು ಮತ್ತೆ ವಾಪಸ್​ ಬಿಜೆಪಿಗೆ ಬರಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ರಾಜಕೀಯ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಮಾಜಿ ಶಾಸಕ ತಿಪ್ಪೇಸ್ವಾಮಿ ಕಾಂಗ್ರೆಸ್ ತೊರೆದು ವಾಪಸ್​ ಬಿಜೆಪಿಗೆ, ಕುತೂಹಲ ಮೂಡಿಸಿದ ಶ್ರೀರಾಮುಲು ರಾಜಕೀಯ ನಡೆ
ಶ್ರೀರಾಮುಲು, ತೀಪ್ಪೇಸ್ವಾಮಿ

Updated on: Feb 26, 2023 | 11:29 AM

ಬೆಂಗಳೂರು/ಚಿತ್ರದುರ್ಗ: ಮೊಣಕಾಲ್ಮೂರು ಮಾಜಿ ಶಾಸಕ ಕ ಎಸ್.ತಿಪ್ಪೇಸ್ವಾಮಿ(Molakalmuru Ex MLA S Thippeswamy )ಕಾಂಗ್ರೆಸ್ ತೊರೆದು ವಾಪಸ್​ ಬಿಜೆಪಿ ಸೇರ್ಪಡೆಯಾದರು. ಇಂದು(ಫೆಬ್ರುವರಿ 26) ಸಚಿವ ಶ್ರೀರಾಮುಲು (Sriramulu), ಶಾಸಕ ತಿಪ್ಪಾರೆಡ್ಡಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಬಳಿಕ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ‌ ಗ್ರಾಮದ ತಿಪ್ಪೇರುದ್ರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಮೂಲಕ ದ್ವೇಷ ಮರೆತು ಶ್ರೀರಾಮುಲು ಜೊತೆ ಕೈಜೋಡಿಸಿದರು. 2018ರ ವಿಧಾಸಭೆ ಚುನಾವಣೆಯಲ್ಲಿ ಮೊಣಕಾಲ್ಮೂರಿಗೆ ವಲಸೆ ಬಂದು ತಮ್ಮ ಟಿಕೆಟ್​ ಕೈತಪ್ಪಿಸಿದ್ದ ಶ್ರೀರಾಮುಲು ವಿರುದ್ಧ ತಿಪ್ಪೇಸ್ವಾಮಿ ಸಮರ ಸಾರಿದ್ದರು. ಅಲ್ಲದೇ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿದ್ದರು. ಆದ್ರೆ, ಇದೀಗ ತಿಪ್ಪೇಸ್ವಾಮಿ ಮರಳಿ ಗೂಡಿಗೆ ಸೇರಿಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಶ್ರೀರಾಮುಲು ಮುಂದಿನ ರಾಜಕೀಯ ನಡೆ ಸಂಚಲನ ಮೂಡಿಸಿದೆ.

ಹೌದು…ಶ್ರೀರಾಮುಲು ಮೊಣಕಾಲ್ಮೂರಿನ ಹಾಲಿ ಬಿಜೆಪಿ ಶಾಸಕ. ತಿಪ್ಪೇಸ್ವಾಮಿ ಸಹ ಮೊಣಕಾಲ್ಮೂರಿನ ಟಿಕೆಟ್ ಆಕಾಂಕ್ಷಿ. ಕೆಳೆದ ಚುನಾವಣೆಯಲ್ಲಿ ಟಿಕೆಟ್​ ದೊರೆಯದಿದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್​ನಿಂದ ಸ್ಪರ್ಧಿಸಿ ಶ್ರೀರಾಮುಲು ವಿರುದ್ಧ ಸೋಲುಕಂಡಿದ್ದರು. ಇದೀಗ ಶ್ರೀರಾಮುಲು ಜೊತೆ ಕೈಜೋಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ತಿಪ್ಪೇಸ್ವಾಮಿ ಅವರನ್ನು ವಾಪಸ್​ ಬಿಜೆಪಿಗೆ ಕರೆದುತಂದಿರುವುದು ಇದಕ್ಕೆ ಪುಷ್ಟಿ ನೀಡಿದೆ. ತಿಪ್ಪೇಸ್ವಾಮಿ ಅವರಿಗೆ ಮೊಣಕಾಲ್ಮೂರು ಕ್ಷೇತ್ರವನ್ನು ಬಿಟ್ಟುಕೊಟ್ಟು ತಾವು ಬೇರೆ ಕ್ಷೇತ್ರಕ್ಕೆ ಹಾರುವ ಪ್ಲಾನ್ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಎರಡು ಕ್ಷೇತ್ರಗಳ ಮೇಲೆ ಶ್ರೀರಾಮುಲು ಕಣ್ಣು
Molkalmuru Ex MLA S Thippeswamy Rejoins BJP

ಕಳೆದ ಚುನಾವಣೆಯಲ್ಲಿ ಮೊಣಕಾಲ್ಮೂರಿನಿಂದ ಗೆದ್ದಿರುವ ಶ್ರೀರಾಮುಲು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೇರೊಂದು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಎಸ್​ಟಿ ಮೀಸಲು ಕ್ಷೇತ್ರವಾದ ಬಳ್ಳಾರಿ ಗ್ರಾಮೀಣ ಅಥವಾ ಸಂಡೂರು ಕ್ಷೇತ್ರದಿಂದ ಕಣಕ್ಕಿಳಿಯುಲು ಚಿಂತನೆ ನಡೆಸಿದ್ದಾರೆ. ಈ ಎರಡು ಕ್ಷೇತ್ರಗಳ ಪೈಕಿ ಹೆಚ್ಚಾಗಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮೇಲೆ ಆಸೆ ಇದೆ. ತವರು ಜಿಲ್ಲೆಯಲ್ಲೇ ಇದ್ದುಕೊಂಡು ರಾಜಕೀಯ ಮಾಡಬೇಕೆಂದುಕೊಂಡಿರುವ ಶ್ರೀರಾಮುಲು ಚಿತ್ರದುರ್ಗ ಜಿಲ್ಲಾ ಉಸ್ತುವಾರಿಯನ್ನು ನಿರಾಕರಿಸಿ ಬಳ್ಳಾರಿಯನ್ನೇ ಪಟ್ಟು ಹಿಡಿದು ಪಡೆದುಕೊಂಡಿದ್ದರು. ಇದೀಗ ಮೊಣಕಾಲ್ಮೂರು ಬಿಟ್ಟು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಅಖಾಡಕ್ಕಿಯಲು ತೆರೆಮರೆಯ ಕಸರತ್ತು ನಡೆಸಿದ್ದಾರೆ.

ಇತ್ತೀಚೆಗೆ ಸಂಡೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶ್ರೀರಾಮುಲು, ರಾಜ್ಯದ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನ ಬರುತ್ತಿದೆ. ನಾನು ಬಳ್ಳಾರಿಯಲ್ಲಿ ಸ್ಪರ್ಧೆ ಮಾಡುವ ಉದ್ದೇಶ ಹೊಂದಿದ್ದೇನೆ. ನಾನು ಸಂಡೂರು ಕ್ಷೇತ್ರದಿಂದ ಸಹ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ನನ್ನ ಮೇಲೆ ಇದೆ. ಒಂದು ವೇಳೆ ಹೈ ಕಮಾಂಡ್ ಬಯಸಿದರೆ ಇಲ್ಲಿ ಸ್ಪರ್ಧೆ ಮಾಡುವೆ ಎಂದು ಹೇಳುವ ಮೂಲಕ ಬಳ್ಳಾರಿ ಗ್ರಾಮೀಣ ಹಾಗೂ ಸಂಡೂರು ಎರಡು ಕಡೆಯಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು.

kಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ (ಬಾದಾಮಿ, ಮೊಣಕಾಲ್ಮೂರು) ಸ್ಪರ್ಧಿಸಿದ್ದ ಸಚಿವ ಬಿ.ಶ್ರೀರಾಮುಲು ಈ ಬಾರಿಯೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನು ಸಂಡೂರು ಕಾಂಗ್ರೆಸ್​ ಭದ್ರಕೋಟೆಯಾಗಿದೆ. 10 ಬಾರಿ ಕಾಂಗ್ರೆಸ್ ಗೆಲವು ಸಾಧಿಸಿದೆ. 2 ಬಾರಿ ಮಾತ್ರ ಬೇರೆ ಪಾರ್ಟಿ ಗೆಲುವಾಗಿದೆ. ಈ ಬಾರಿ ಕೈ ಭದ್ರಕೋಟೆಯನ್ನು ಮುರಿಯಲು ಹೈಕಮಾಂಡ್, ​ ಶ್ರೀರಾಮುಲು ಅವರನ್ನು ಅಖಾಡಕ್ಕಿಳಿಸಿದರೂ ಅಚ್ಚರಿಪಡಬೇಕಿಲ್ಲ.

ಶ್ರೀರಾಮುಲುಗೆ ಬಳ್ಳಾರಿ ಗ್ರಾಮೀಣ ಟಿಕೆಟ್ ಖಚಿತವಾಯ್ತಾ? ಸಂಡೂನಿಂದ ಸ್ಪರ್ಧೆಗೆ ಹೈಕಮಾಂಡ್​ ಗ್ರೀನ್ ಸಿಗ್ನಲ್ ನೀಡಿದ್ಯಾ? ಹೀಗೆ ಶ್ರೀರಾಮುಲು ತಮ್ಮ ವಿರೋಧಿ ತಿಪ್ಪೇಸ್ವಾಮಿಯವರನ್ನು ವಾಪಸ್​ ಬಿಜೆಪಿಗೆ ಬರಮಾಡಿಕೊಂಡಿದ್ದಕ್ಕೆ ಅವರ ರಾಜಕೀಯ ನಡೆ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.

ಒಟ್ಟಿನಲ್ಲಿ ಶ್ರೀರಾಮುಲು ತಮ್ಮ ಮೊಣಕಾಲ್ಮೂರಿನಲ್ಲಿ ತಮ್ಮ ಸ್ಥಾನಕ್ಕೆ ವಿರೋಧ ತಿಪ್ಪೇಸ್ವಾಮಿ ಅವರನ್ನು ಕರೆದುತಂದಿರುವ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಮುಂದೆ ಏನೆಲ್ಲಾ ಬೆಳವಣಿಗೆಗಳು ನಡೆಯಲಿವೆ ಎನ್ನುವುದನ್ನು ಕಾದುನೋಡಬೇಕಿದೆ.

Published On - 11:28 am, Sun, 26 February 23

Loading...
Unable to load recommendations.
Follow Us