ನಿಷೇಧಿತ ಪಿಎಫ್​ಐ ರಾಜಕೀಯ ಪಕ್ಷ ಎಸ್​ಡಿಪಿಐ ಬೆಂಬಲ ಕೇಳಿದ ಕಾಂಗ್ರೆಸ್: ಪ್ರತಾಪ್ ಸಿಂಹ ವಾಗ್ದಾಳಿ

ಅಧಿಕಾರಕ್ಕೆ ಬರಲು ಕಾಂಗ್ರೆಸ್​ ಏನು ಬೇಕಾದರೂ ಮಾಡುತ್ತದೆ. ಎಸ್​ಡಿಪಿಐ ಬೆಂಬಲ ಕೋರುವ ಮೂಲಕ ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರ ತರಲು ಹೊರಟಿದೆ. ಆ ಮೂಲಕ ಕರ್ನಾಟಕವನ್ನು ಮತ್ತೊಂದು ಕೇರಳ ಮಾಡಲು ಮುಂದಾಗಿದೆ ಎಂದು ಪ್ರತಾಪ್ ಸಿಂಗ ವಾಗ್ದಾಳಿ ನಡೆಸಿದ್ದಾರೆ.

ನಿಷೇಧಿತ ಪಿಎಫ್​ಐ ರಾಜಕೀಯ ಪಕ್ಷ ಎಸ್​ಡಿಪಿಐ ಬೆಂಬಲ ಕೇಳಿದ ಕಾಂಗ್ರೆಸ್: ಪ್ರತಾಪ್ ಸಿಂಹ ವಾಗ್ದಾಳಿ
ಪ್ರತಾಪ್ ಸಿಂಹ ಮತ್ತು ಸಿದ್ದರಾಮಯ್ಯ
Rakesh Nayak Manchi

Updated on: Apr 15, 2023 | 4:23 PM

ಮೈಸೂರು: ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಕಾಂಗ್ರೆಸ್​ ಬೆಂಬಲಿಸುವಂತೆ ನಿಷೇಧಿತ ಪಿಎಫ್​ಐ (PFI) ಸಂಘನೆಯ ರಾಜಕೀಯ ಪಕ್ಷ ಎಸ್​ಡಿಪಿಐಗೆ (SDPI) ಮಾಜಿ ಗೃಹಸಚಿವ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ (Dr. G. Parameshwar) ಕರೆ ನೀಡಿದ್ದಾರೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ (Pratap Simha) ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿಕಾರಕ್ಕೆ ಬರಲು ಕಾಂಗ್ರೆಸ್​ ಏನು ಬೇಕಾದರೂ ಮಾಡುತ್ತದೆ. ಎಸ್​ಡಿಪಿಐ ಬೆಂಬಲ ಕೋರುವ ಮೂಲಕ ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರ ತರಲು ಹೊರಟಿದೆ. ಆ ಮೂಲಕ ಕರ್ನಾಟಕವನ್ನು ಮತ್ತೊಂದು ಕೇರಳ ಮಾಡಲು ಮುಂದಾಗಿದೆ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ನಿಷೇಧಿತ ಸಂಘಟನೆಯ ರಾಜಕೀಯ ವಿಭಾಗದ ಬೆಂಬಲ ಕೇಳುತ್ತಿದ್ದಿರಾ? ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರಾ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಅಧಿಕಾರಕ್ಕೆ ಬರಲು ದೇಶದ್ರೋಹಿಗಳ ಜೊತೆ ಕಾಂಗ್ರೆಸ್ ಕೈಜೋಡಿಸಿದೆ. ಪಿಎಫ್​ಐ ಮತ್ತು ಕೆಎಫ್​ಡಿ ಸಂಘಟನೆಗಳನ್ನು ಕೇಂದ್ರ ಸರಕಾರ ಬ್ಯಾನ್ ಮಾಡಿದೆ. ಈ ನಿಷೇಧ ಪಿಎಫ್​ಐ ಸಂಘಟನೆಗಳು ಎಸ್​ಡಿಪಿಐನ ಮಾತೃ ಸಂಸ್ಥೆಗಳು. ಅಧಿಕಾರಕ್ಕೆ ಬರಲು ದೇಶದ್ರೋಹಿಗಳ ಜೊತೆ ಸಮಾಜ ಘಾತುಕರ ಜೊತೆ ಕಾಂಗ್ರೆಸ್ ಕೈ ಜೋಡಿಸುತ್ತಿದೆ ಎಂದು ಆರೋಪಿಸಿದರು.

ಪರಮೇಶ್ವರ್ ಅವರು ದೇಶದ್ರೋಗಿಗಳ ಬೆಂಬಲ ಕೋರುವ ಮೂಲಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಸಮಾಜಕ್ಕೆ ಯಾವ ಸಂದೇಶ ಕಳುಹಿಸಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ರಾಜಕೀಯವಾಗಿ ಅಧಿಕಾರಕ್ಕೆ ಬರಬೇಕೆನ್ನುವ ಉದ್ದೇಶಕ್ಕಾಗಿ ಒಂದು ನಿಷೇಧಿತ ಸಂಘಟನೆಯ ರಾಜಕೀಯ ಪಕ್ಷದ ಬೆಂಬಲ ಕೋರಿ ಅಂದಿನ ಕಾಲದ ಉತ್ತರ ಪ್ರದೇಶ, ಬಿಹಾರದಂತೆ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಎಸ್​ಡಿಪಿಐ-ಪಿಎಫ್​​ಐ ಒಂದೇ ನಾಣ್ಯದ ಎರಡು ಮುಖಗಳು: ಸಂಸದ ತೇಜಸ್ವಿ ಸೂರ್ಯ

ಪಿಎಫ್​ಐ, ಕೆಎಫ್​ಡಿ, ಎಸ್​ಡಿಪಿಐ ಸಂಘಟನೆಯ ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ದತ್ತು ಮಕ್ಕಳು ಇದ್ದಂತೆ ಎಂದು ಪ್ರತಾಪ್ ಸಿಂಹ ಹೇಳಿದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಕರ್ನಾಟಕದಲ್ಲಿ ತಾಲಿಬಾನ್ ಸರಕಾರ ತರಲು ಹೊರಟ್ಟಿದ್ದಾರೆ. ಸಮಾಜಘಾತುಕ ಸಂಘಟನೆಯ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜಕೀಯ ಹತ್ಯೆಗಳು ಹೆಚ್ಚಾಗುತ್ತವೆ. ಸಿದ್ದರಾಮಯ್ಯರ ಸಾಕು ಮಕ್ಕಳಿಂದ ರಾಜ್ಯದಲ್ಲಿ ಸಾಲು ಸಾಲು ಹತ್ಯೆ ನಡೆದಿವೆ. ಕರ್ನಾಟಕ ಇನ್ನೊಂದು ಕೇರಳ ಮಾಡಲು ಹೊರಟ್ಟಿದ್ದಾರೆ. ನಾಳೆ ರಾಜ್ಯ ಎಸ್​ಡಿಪಿಐ ಕೈಗೆ ಹೋದರು ಪರವಾಗಿಲ್ಲ ನಾವು ಅಧಿಕಾರಕ್ಕೆ ಬರಬೇಕು ಅನ್ನೋದು ಕಾಂಗ್ರೆಸ್ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದರು.

ಮಹಾಜನ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಹುಣಸೂರಿನ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಣ ಮಾಡಿ ಎದೆಬಗೆದು ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಮಾಡಿದ್ದ ಪ್ರಮುಖ ಆರೋಪಿ ಅಮಿತ್ ಪಾಷಾ 2015ರಲ್ಲಿ ರಾಜು ಹತ್ಯೆಯಲ್ಲಿ ಭಾಗಿಯಾಗಿದ್ದ. ಪ್ರಕರಣ ಸಂಬಂಧ ಈತನನ್ನು ಬಂಧಿಸಿದ 90 ದಿನಗಳ ವರೆಗೆ ಚಾರ್ಜ್​ಶೀಟ್ ಸಲ್ಲಿಸದೇ ಜಾಮೀನು ಸಿಗುವಂತೆ ಮಾಡಿದ್ದು ಇದೇ ಸಿದ್ದರಾಮಯ್ಯ ಸರ್ಕಾರ. ಅಷ್ಟು ಮಾತ್ರವಲ್ಲದೆ, ಪೊಲೀಸ್ ಇಲಾಖೆಯ ವಿರೋಧದ ನಡುವೆ ಪಿಎಫ್​ಐ, ಕೆಎಫ್​ಡಿ, ಎಸ್​ಡಿಪಿಐ ಗೂಂಡಾಗಳ ಮೇಲಿನ ಪ್ರಕರಣಗಳನ್ನು ಕ್ಯಾಬಿನೆಟ್ ಮೂಲಕ ಹಿಂಪಡೆದಿದ್ದೂ ಇದೇ ಸಿದ್ದರಾಮಯ್ಯ ಸರ್ಕಾರ. ಆ ಮೂಲಕ ಬಿಜೆಪಿ ಕಾರ್ಯಕರ್ತರ ಸರಣಿ ಹತ್ಯೆಗೆ ಸರ್ಕಾರ ದಾರಿ ಮಾಡಿಕೊಟ್ಟಿತ್ತು ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Sat, 15 April 23

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us