Karnataka Assembly Election 2023: ಬಿಜೆಪಿ ಭದ್ರಕೋಟೆ ರಾಜಾಜಿನಗರ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಭಾರಿ ಪೈಪೋಟಿ?

|

Updated on: Mar 13, 2023 | 2:39 PM

ರಾಜಾಜಿನಗರ ವಿಧಾನಸಭಾ ಕ್ಷೇತ್ರ ಹಲವು ಕಾರಣಗಳಿಂದ ಈ ಬಾರಿಯ ಚುನಾವಣೆಯಲ್ಲಿ ಚರ್ಚೆಯಲ್ಲಿದೆ. ಇದಕ್ಕೆ ಕಾರಣ ಸುರೇಶ್ ಕುಮಾರ್​ಗೆ ಮತ್ತೆ ಬಿಜೆಪಿ ಟಿಕೆಟ್ ಸಿಗುತ್ತೋ, ಇಲ್ಲ ಹೈಕಮಾಂಡ್ ಹೊಸ ಮುಖಕ್ಕೆ ಮಣೆಹಾಕುತ್ತೋ? ಇದರ ಜೊತೆಗೆ ಕಾಂಗ್ರೆಸ್ಸಿನಿಂದ ಯಾರು ಅಭ್ಯರ್ಥಿಗಳಾಗುತ್ತಾರೆ?

Karnataka Assembly Election 2023: ಬಿಜೆಪಿ ಭದ್ರಕೋಟೆ ರಾಜಾಜಿನಗರ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಭಾರಿ ಪೈಪೋಟಿ?
ಡಿಕೆ ಶಿವಕುಮಾರ್​ ಭೇಟಿಯಾದ ರಾಜಾಜಿನಗರ ಕಾಂಗ್ರೆಸ್​ ಆಕಾಂಕ್ಷಿಗಳು
Follow us on

ಬೆಂಗಳೂರು: ಸತತ ನಾಲ್ಕು ಬಾರಿ ಶಿಕ್ಷಕರ ಕ್ಷೇತ್ರದಿಂದ ಗೆದ್ದು ವಿಧಾನ ಪರಿಷತ್​ ಸದಸ್ಯರಾಗಿದ್ದ ಪುಟ್ಟಣ್ಣ(Putanna) ಇದೀಗ ಬಿಜೆಪಿ(BJP) ತೊರೆದು ಕಾಂಗ್ರೆಸ್(Congress)​ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ರಾಜಾಜಿನಗರ ಕ್ಷೇತ್ರದಿಂದ(rajajinagar constituency) ಕಣಕ್ಕಿಳಿಯಲು ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂಲ ಕಾಂಗ್ರೆಸ್​ನ​ ಟಿಕೆಟ್​​ ಆಕಾಂಕ್ಷಿಗಳಿಗೆ (rajajinagar ticket aspirants) ಟೆನ್ಷನ್ ಶುರುವಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಸುರೇಶ್ ಕುಮಾರ್​ ಸತತ ಐದು ಬಾರಿ ಗೆಲುವು ಸಾಧಿಸಿ ಕ್ಷೇತ್ರವನ್ನು ಭದ್ರವಾಗಿ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದು, ರಾಜಾಜಿನಗರ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದೆ. ಆದರೂ ಕಾಂಗ್ರೆಸ್​ನಲ್ಲಿ ಈ ಕ್ಷೇತ್ರದ ಟಿಕೆಟ್​ಗಾಗಿ ಭಾರೀ ಪೈಪೋಟಿ ನಡೆದಿದೆ.

ಇದನ್ನೂ ಓದಿ: ಧ್ರುವನಾರಾಯಣ ಹಠಾತ್ ನಿಧನ, ನಂಜನಗೂಡು ಕಾಂಗ್ರೆಸ್​ ಟಿಕೆಟ್ ಯಾರಿಗೆ? ವ್ಯಾಪಕ ಚರ್ಚೆ

ರಾಜಾಜಿನಗರ ಬಿಜೆಪಿಯ ಭದ್ರಕೋಟೆ

ರಾಜಾಜಿನಗರ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿರುವ ಬಿಜೆಪಿಯ ಎಸ್​, ಸುರೇಶ್ ಕುಮಾರ್ ಮತ್ತೊಮ್ಮೆ ಸ್ಪರ್ಧೆಗೆ ಸಿದ್ಧರಾಗಿದ್ದಾರೆ. 1978ರಿಂದ ಈಚೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್​ ಕೇವಲ ಎರಡು ಬಾರಿ(1989 ಹಾಗೂ 2004) ಮಾತ್ರ ಗೆಲುವು ಕಂಡಿದೆ. ಇನ್ನುಳಿದಂತೆ ಜನತಾ ಪಕ್ಷ ಮತ್ತು ಸಿಪಿಐನ ಎಂ.ಎಸ್​. ಕೃಷ್ಣನ್​​ ಎರಡು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದರು. ಬಳಿಕ ಬಿಜೆಪಿ ರಾಜಾಜಿನಗರವನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿದೆ. ಆದ್ರೆ, ಈ ಬಾರಿ ಹೊಸಬರಿಗೆ ಟಿಕೆಟ್​ ನೀಡಬೇಕೆಂಬ ಮಾತುಗಳು ಬಿಜೆಪಿಯಲ್ಲಿ ಕೇಳಿಬಂದಿವೆ. ಮಾಜಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಎಸ್.ರಘುನಾಥ್, ಮಾಜಿ ಕಾರ್ಪೋರೇಟರ್​ಗಳಾದ ಮಂಜುನಾಥ್, ರಂಗಣ್ಣ ಬಾರಿಯ ಟಿಕೆಟ್​ಗಾಗಿ ಕಸರತ್ತು ನಡೆಸಿದ್ದಾರೆ. ಈ ಪೈಕಿ ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ರಘನಾಥ್​ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಕಾಂಗ್ರೆಸ್​ನಲ್ಲಿ ಟಿಕೆಟ್​ಗಾಗಿ ಭಾರೀ ಪೈಪೋಟಿ

ಹೌದು…ಕೆಳ ಹಾಗೂ ಮಧ್ಯಮ ವರ್ಗದ ಜನರು ಇರುವ ರಾಜಾಜಿನಗರ ಕ್ಷೇತ್ರದ ಟಿಕೆಟ್​​ಗಾಗಿ ಕಾಂಗ್ರೆಸ್​ನಲ್ಲಿ ಭಾರೀ ಪೈಪೋಟಿ ನಡೆದಿದೆ. ಮಾಜಿ ಮೇಯರ್ ಪದ್ಮಾವತಿ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ ಘಟಕದ ಆರ್.ಮಂಜುಳಾ ನಾಯ್ಡು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಹಾಗೂ ಬೆಂಗಳೂರು ನಗರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಘುವೀರ್.ಎಸ್.ಗೌಡ ಟಿಕೆಟ್​ ಆಕಾಂಕ್ಷಿಗಳಾಗಿದ್ದಾರೆ. ಇದರಲ್ಲಿ ಭವ್ಯ ನರಸಿಂಹಮೂರ್ತಿ ಟಿಕೆಟ್​ಗಾಗಿ ಪ್ರಬಲ ಪೈಪೋಟಿ ನಡೆಸಿದ್ದಾರೆ. ಇದರ ಮಧ್ಯೆ ಇದೀಗ ಪುಟ್ಟಣ್ಣ ಎಂಟ್ರಿಕೊಟ್ಟಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಪುಟ್ಟಣ್ಣಗೆ ಸಿಗುತ್ತಾ ಕಾಂಗ್ರೆಸ್​ ಟಿಕೆಟ್​?

ಸತತ ನಾಲ್ಕು ಬಾರಿ ಶಿಕ್ಷಕರ ಕ್ಷೇತ್ರದಿಂದ ಗೆದ್ದು ವಿಧಾನ ಪರಿಷತ್​ ಸದಸ್ಯರಾಗಿದ್ದ ಪುಟ್ಟಣ್ಣ ಜೆಡಿಎಸ್​ ತೊರೆದು ಬಿಜೆಪಿ ಸೇರಿದ್ದರು. ಬಳಿಕ ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಪುಟ್ಟಣ್ಣ ಮೊನ್ನೇ ಅಷ್ಟೇ ಬಿಜೆಪಿಗೆ ಗುಡ್​ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಜೊತೆ ರಾಜಾಜಿನಗರ ಟಿಕೆಟ್​ ಕನ್ಫರ್ಮ್​ ಮಾಡಿಕೊಂಡೇ ಪುಟ್ಟಣ್ಣ, ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲ ಸಮ್ಮುಖದಲ್ಲೇ ಕಾಂಗ್ರೆಸ್ ಸೇರಿದ್ದಾರೆ ಎನ್ನಲಾಗಿದೆ. ಇನ್ನು ತಮ್ಮ ವಿಧಾನಪರಿಷತ್ ಅವಧಿ ಇನ್ನೂ ನಾಲ್ಕು ಇರುವಾಗಲೇ ರಾಜೀನಾಮೆ ನೀಡಿದ್ದ ಅಚ್ಚರಿ ಮೂಡಿಸಿದೆ. ಹೀಗಾಗಿ ಈ ಬಾರಿ ರಾಜಾಜಿನಗರ ವಿಧಾನಸಭೆ ಟಿಕೆಟ್ ಪುಟ್ಟಣ್ಣ ಅವರಿಗೆ ಸಿಗುವ ಸಾಧ್ಯತೆಗಳು ಹೆಚ್ಚಿವೆ ಎಂದು ತಿಳಿದುಬಂದಿದೆ. ಇದು ಇನ್ನುಳಿದ ಟಿಕೆಟ್​ ಆಕಾಂಕ್ಷಿಗಳ ನಿದ್ದೆಗೆಡಿಸಿದೆ. ​​

ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆಗೆ ವಿರೋಧ

ಇನ್ನು ರಾಜಾಜಿನಗರ ಟಿಕೆಟ್​ ಖಚಿತಪಡಿಸಿಕೊಂಡೇ ಕಾಂಗ್ರೆಸ್​ ಸೇರ್ಪಡೆಯಾಗುತ್ತಿದ್ದಾರೆಂದು ವಿಷಯ ತಿಳಿದ ಭವ್ಯ ನರಸಿಂಹಮೂರ್ತಿ ಹಾಗೂ ಇತರೆ ಮುಖಂಡರು ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ವಲಸಿಗರಿಗೆ ಮಣೆ ಹಾಕಬಾರದು. ಮೂಲ ಕಾಂಗ್ರೆಸ್​ನ ನಮ್ಮಲ್ಲಿ ಒಬ್ಬರಿಗೆ ಟಿಕೆಟ್​ ನೀಡಬೇಕೆಂದು ಆಗ್ರಹಿಸಿದ್ದರು. ಈ ಬಗ್ಗೆ ಆಕಾಂಕ್ಷಿಗಳಾದ ಭವ್ಯ ನರಸಿಂಹಮೂರ್ತಿ, ಮನೋಹರ್ ಖುದ್ದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಳಿ ಹೋಗಿ ಪುಟ್ಟಣ್ಣಗೆ ಟಿಕೆಟ್ ನೀಡದಂತೆ ಮನವಿ ಮಾಡಿದ್ದರು.

ಮತ್ತೊಮ್ಮೆ ಡಿಕೆಶಿ ಭೇಟಿಯಾದ ಟಿಕೆಟ್ ಆಕಾಂಕ್ಷಿಗಳು

ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಆಕಾಂಕ್ಷಿಗಳಾದ ಭವ್ಯ ನರಸಿಂಹಮೂರ್ತಿ, ಮನೋಹರ್, ರಘುವೀರ್ ಗೌಡ, ಪುಟ್ಟರಾಜ್ ಅವರು ಬೆಂಗಳೂರಿನ ಅವರ ನಿವಾಸದಲ್ಲಿ ಶಿವಕುಮಾರ್​ ಅವರನ್ನು ಭೇಟಿ ಮಾಡಿ, ನಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್​ ನೀಡಬೇಕೆಂದು ಮನವಿ ಮಾಡಿದ್ದಾರೆ. ಹೊರಗಿನವರಿಗೆ ಟಿಕೆಟ್ ನೀಡಬೇಡಿ ಎಂದು ಪರೋಕ್ಷವಾಗಿ ಬಿಜೆಪಿಯಿಂದ ವಲಸೆ ಬಂದ ಪುಟ್ಟಣ್ಣಗೆ ಮಣೆ ಹಾಕಬೇಡಿ ಎಂದಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್​ನಲ್ಲಿ ರಾಜಾಜಿನಗರ ಟಿಕೆಟ್​ಗಾಗಿ ಆಕಾಂಕ್ಷಿಗಳಿಂದ ಭಾರೀ ಪೈಪೋಟಿ ನಡೆದಿದ್ದು, ಅಂತಿಮವಾಗಿ ಹೈಕಮಾಂಡ್​ ಯಾರಿಗೆ ಮಣೆ ಹಾಕುತ್ತೆ ಎನ್ನುವುದು ಕುತೂಹಲ ಮೂಡಿಸಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ