Ratna Mamani: ನನ್ನ ನಾಮಪತ್ರ ಸರಿಯೇ ಇತ್ತು, ವಿಪಕ್ಷದವರು ಗೊಂದಲ ಮಾಡಿದರು: ರತ್ನಾ ಮಾಮನಿ

|

Updated on: Apr 22, 2023 | 5:38 PM

ಸಾಕಷ್ಟು ಕುತೂಹಲ ಮೂಡಿಸಿದ್ದ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಗೊಂದಲ ತೆರೆಕಂಡಿದ್ದು, ಎದುರಾಳಿ ಅಭ್ಯರ್ಥಿಗಳ ಗೊಂದಲಗಳೇ ಇದಕ್ಕೆಲ್ಲ ಕಾರಣವೆಂದಿದ್ದಾರೆ.

ಬೆಳಗಾವಿ: ನಾಮಪತ್ರ ಕ್ರಮಬದ್ಧವಾಗಿತ್ತು, ಎದುರಾಳಿ ಅಭ್ಯರ್ಥಿಗಳು ಗೊಂದಲ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ  (Ratna Mamani) ಹೇಳಿದರು. ಜಿಲ್ಲೆಯ ಸವದತ್ತಿ (Savadatti) ಯಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ನಾನು ಸ್ಪರ್ಧೆ ಮಾಡಬಾರದೆಂದು ಷಡ್ಯಂತ್ರ ಮಾಡಲು ಹೊರಟಿದ್ದರು. ವಿರೋಧಿಗಳ ಆಕ್ಷೇಪಣೆ ತಿರಸ್ಕಾರ ಆಗಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಇಂದು ಬೆಳಗ್ಗೆ ಯಲ್ಲಮ್ಮ ದೇವಿಯ ದರ್ಶನ ಪಡೆದು ಬೇಡಿಕೊಂಡಿದ್ದೆ. ನಾನು ಸರಿಯಿದ್ದರೆ ಜಯ ತೋರಿಸುವಂತೆ ಬೇಡಿಕೊಂಡು ಬಂದಿದ್ದೆ. ಪತಿ ಆನಂದ್ ಮಾಮನಿ ಸಾಗಿದ ದಾರಿಯಲ್ಲೇ ಮುಂದುವರಿಯುತ್ತೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

ನನ್ನ ಮನಸಿಗೆ ತುಂಬಾ ನೋವಾಗಿತ್ತು. 15 ವರ್ಷ ರಾಜಕೀಯ ಹೇಗೆ ಕಳಿದಿದ್ದೇವೆ ಗೊತ್ತಾಗಿಲ್ಲ. ಈಗ ಏನು ಸಮಸ್ಯೆ ಬರುತ್ತಿವೆಯಲ್ಲ ಇದನ್ನ ನೋಡಿ ನೋವಾಯಿತು. ಯಜಮಾನರು ಹಾಕಿಕೊಟ್ಟ ದಾರಿಯಲ್ಲಿ ನಾನು ಸರಿಯಾಗಿ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಜನರೇ ನಿರ್ಣಯ ಕೈಗೊಳ್ಳುತ್ತಾರೆ. ಮುಂದಿನ ದಿನಮಾನಗಳಲ್ಲಿ ಎಲ್ಲ ಜನರೂ ನನ್ನೊಂದಿಗೆ ಇರುತ್ತಾರೆ ಎಂದರು.

ಇದನ್ನೂ ಓದಿ: ರತ್ನಾ ಮಾಮನಿ ನಾಮಪತ್ರ ಅಂಗೀಕಾರ: ಇದಕ್ಕೆಲ್ಲ ರಾಜಕೀಯ ಒತ್ತಡವೇ ಕಾರಣ ಎಂದ ಕಾಂಗ್ರೆಸ್‌ ಅಭ್ಯರ್ಥಿ

ರತ್ನಾ ಮಾಮನಿಗೆ ಬಿಗ್​ ರಿಲಿಫ್

ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಗೊಂದಲ ತೆರೆಕಂಡಿದ್ದು, ರತ್ನಾ ಮಾಮನಿ ಅವರಿಗೆ ಬಿಗ್​ ರಿಲಿಫ್ ಸಿಕ್ಕಿದೆ. ​​ರತ್ನಾ ಮಾಮನಿಯವರು ಸಲ್ಲಿಸಿದ ಅಫಿಡವಿಟ್​ಗೆ ಕಾಂಗ್ರೆಸ್​, ಆಮ್​ ಆದ್ಮಿ ಪಕ್ಷದ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಇಂದು (ಏ.22) ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿದ್ದು, ಪರ, ವಿರುದ್ಧದ ವಕೀಲರ ವಾದ ಆಲಿಸಿ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಸ್ವೀಕರಿಸಿದ್ದಾರೆ.

ರತ್ನಾ ಮಾಮನಿ ಅವರು ಏ.18 ಹಾಗೂ ಏ.19ರಂದು ಎರಡು ಬಾರಿ ನಾಮಪತ್ರ ಸಲ್ಲಿಸಿದ್ದರು. ಎರಡೂ ಬಾರಿಯೂ ಪ್ರಜಾಪ್ರತಿನಿಧಿ ಕಾಯ್ದೆ 2019ರ ತಿದ್ದುಪಡಿ ಪ್ರಕಾರ ಪರಿಷ್ಕೃತ ಫಾರ್ಮ್ ಸಂಖ್ಯೆ 26 (ಅಫಿಡೆವಿಟ್) ಸಲ್ಲಿಸದೆ, 2018ರ ಮಾದರಿಯ ಫಾರ್ಮ್ ಸಂಖ್ಯೆ 26 (ಅಫಿಡೆವಿಟ್) ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷದ​ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ವಿಪಕ್ಷಗಳು ಆಗ್ರಹಿಸಿದ್ದವು.

ಇದನ್ನೂ ಓದಿ: ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ: ಹೈಕೋರ್ಟ್​ ಮೆಟ್ಟಿಲೇರಲು ಸಜ್ಜಾದ ಕಾಂಗ್ರೆಸ್​ ಅಭ್ಯರ್ಥಿ

ರತ್ನಾ ಮಾಮನಿ ಮೇಲೆ ವೈಯಕ್ತಿಕ ದ್ವೇಷ ಇಲ್ಲ: ಕಾಂಗ್ರೆಸ್‌ ಅಭ್ಯರ್ಥಿ ವಿಶ್ವಾಸ ವೈದ್ಯ

ರತ್ನಾ ಮಾಮನಿ ನಾಮಪತ್ರ ಅಂಗೀಕಾರ ಬೆನ್ನಲ್ಲೇ ಕಾಂಗ್ರೆಸ್‌ ಅಭ್ಯರ್ಥಿ ವಿಶ್ವಾಸ ವೈದ್ಯ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಅವರು, ರಾಜಕೀಯ ಒತ್ತಡದಿಂದ ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಫಾರ್ಮ್ ನಂಬರ್ 26 ಅಡಿ ಸರಿಯಾಗಿ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ನಾವು ಆಕ್ಷೇಪಣೆ ಸಲ್ಲಿಸಿದ್ದೇವು ಎಂದು ಸ್ಪಷ್ಟಣೆ ನೀಡಿದ್ದಾರೆ.

ಚುನಾವಣಾ ಅಧಿಕಾರಿಗಳು ಅದನ್ನ ಅಂಗೀಕಾರ ಮಾಡಿದ್ದಾರೆ. ವಕೀಲರು ಮತ್ತು ನಮ್ಮ ಕಾನೂನು ತಂಡದ ಗಮನಕ್ಕೆ ತಂದಿದ್ದೇವೆ. ನಮಗೇನು ಅವರ ಮೇಲೆ ವೈಯಕ್ತಿಕ ದ್ವೇಷ ಇಲ್ಲ. ಬೆನ್ನಿಗೆ ಚೂರಿ ಹಾಕಿದರು ಅಂತೆಲ್ಲ ಏಕೆ ಹೇಳುತ್ತಿದ್ದಾರೆ ಗೊತ್ತಿಲ್ಲ. ಅವರು ಮಾಡಿದ ತಪ್ಪು ಎತ್ತಿ ತೋರಿಸಲಿಲ್ಲ ಅಂದರೆ ನಾನು ನನ್ನ ಜನತೆಗೆ ಮೋಸ ಮಾಡಿದ ಹಾಗೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Sat, 22 April 23