ವರುಣ ಕ್ಷೇತ್ರದಲ್ಲೇ ನನ್ನನ್ನು ಕಟ್ಟಿಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ: ಸಿದ್ದರಾಮಯ್ಯ
ನನ್ನ ಜನಪ್ರಿಯತೆ ಕುಗ್ಗಿಸಲು ಬಿಜೆಪಿಯಿಂದ ಷಡ್ಯಂತ್ರ ನಡೀತಿದೆ. ವರುಣ ಕ್ಷೇತ್ರದಲ್ಲೇ ನನ್ನನ್ನು ಕಟ್ಟಿಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವರುಣ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಹೇಳಿದರು.

ಮುಖ್ಯಾಂಶಗಳು
- ನನ್ನ ಜನಪ್ರಿಯತೆ ಕುಗ್ಗಿಸಲು ಬಿಜೆಪಿಯಿಂದ ಷಡ್ಯಂತ್ರ ನಡೀತಿದೆ
- RSS, ಬಿಜೆಪಿ, ಸೋಮಣ್ಣ ಏನೇ ಮಾಡಿದರೂ ಪ್ರಯೋಜನವಾಗಲ್ಲ
- ಬಿ.ಎಲ್.ಸಂತೋಷ್, ಸೋಮಣ್ಣಗೂ ವರುಣ ಕ್ಷೇತ್ರಕ್ಕೂ ಸಂಬಂಧವಿಲ್ಲ
ಮೈಸೂರು: ನನ್ನ ಜನಪ್ರಿಯತೆ ಕುಗ್ಗಿಸಲು ಬಿಜೆಪಿಯಿಂದ ಷಡ್ಯಂತ್ರ ನಡೀತಿದೆ. ವರುಣ ಕ್ಷೇತ್ರದಲ್ಲೇ ನನ್ನನ್ನು ಕಟ್ಟಿಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವರುಣ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ (Siddaramaiah) ಹೇಳಿದರು. ಮೈಸೂರಿನಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, RSS, ಬಿಜೆಪಿ, ಸೋಮಣ್ಣ ಏನೇ ಮಾಡಿದರೂ ಪ್ರಯೋಜನವಾಗಲ್ಲ. ಆದರೆ ವರುಣ ವಿಧಾನಸಭಾ ಕ್ಷೇತ್ರದ ಜನತೆ ನನ್ನ ಕೈಹಿಡಿಯುತ್ತಾರೆ. ಬಿ.ಎಲ್.ಸಂತೋಷ್, ಸೋಮಣ್ಣಗೂ ವರುಣ ಕ್ಷೇತ್ರಕ್ಕೂ ಸಂಬಂಧವಿಲ್ಲ. ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದೆ, ಲಿಂಗಾಯತರೇ ಸಿಎಂ ಆಗಿರುವುದು. ಇವಾಗ ಅವರೇ ಅಲ್ವ ಭ್ರಷ್ಟಾಚಾರ ಮಾಡಿ ಕೆಟ್ಟಹೆಸರು ತಂದಿರುವುದು ಎಂದು ಕಿಡಿಕಾರಿದರು. ಈ ಚುನಾವಣೆ ಮಹತ್ತರವಾದ ಚುನಾವಣೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನದ ಮುಂದೆ ಯಾರು ಎಷ್ಟೇ ದ್ವೇಷದ ರಾಜಕಾರಣ ಮಾಡಿದರು ಅದು ನಗಣ್ಯ. ಎರಡು ಬಾರಿ ವರುಣದಿಂದ ಗೆಲ್ಸಿದ್ದೀರಿ ಎಂದು ಹೇಳಿದರು.
ನಾನು ಸಿಎಂ ಆಗುವುದಕ್ಕೆ ವರುಣ ಕ್ಷೇತ್ರದ ಜನರೇ ಕಾರಣ
ನಾನು ಸಿಎಂ ಆದಾಗ ಎಲ್ಲ ಜಾತಿಯ ಜನಾಂಗದವರಿಗೆ ಕಾರ್ಯಕ್ರಮ ಕೊಟ್ಟಿದ್ದೇನೆ. ಈ ಕ್ಷೇತ್ರದಿಂದ ಗೆದ್ದಾಗ ನಾನು ಸಿಎಂ ಆದೆ. ನಾನು ಸಿಎಂ ಆಗುವುದಕ್ಕೆ ವರುಣ ಕ್ಷೇತ್ರದ ಜನರೇ ಕಾರಣ. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಅಧಿಕಾರಕ್ಕೆ ಬಂದಾಗ ಇನ್ನೂ ಹೆಚ್ಚಿನ ರೀತಿ ಬಡವರಿಗೆ ಸಹಾಯ ಮಾಡುತ್ತೇವೆ. ಬಿಜೆಪಿ ಅಥವಾ ಜೆಡಿಎಸ್ ಅಭ್ಯರ್ಥಿ ನಮ್ಮ ಕ್ಷೇತ್ರಕ್ಕೆ ಏನೂ ಮಾಡಿಲ್ಲ. ಅವರು ದಲಿತರ ಪರವಾಗಿಯೂ ಇಲ್ಲ, ಬಡವರ ಪರವಾಗಿಯೂ ಇಲ್ಲ, ರೈತರ ಪರವಾಗಿಯಂತೂ ಇಲ್ಲವೇ ಇಲ್ಲ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: Ratna Mamani: ನನ್ನ ನಾಮಪತ್ರ ಸರಿಯೇ ಇತ್ತು, ವಿಪಕ್ಷದವರು ಗೊಂದಲ ಮಾಡಿದರು: ರತ್ನಾ ಮಾಮನಿ
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ವಸತಿ ಸಚಿವ ಸೋಮಣ್ಣ ಇಡೀ ರಾಜ್ಯಕ್ಕೆ ಒಂದೇ ಒಂದು ಮನೆ ಕೊಡಲಿಲ್ಲ. ಯಾರ ಕಷ್ಟ ಸುಖ ಕೂಡ ಕೇಳಿಲ್ಲ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಅವರಿಗೆ ಅಪಾರ ಜನ ಬೆಂಬಲ ಇದೆ: ಡಾ.ಯತೀಂದ್ರ
ಶಾಸಕ ಡಾ.ಯತೀಂದ್ರ ಮಾತನಾಡಿ, ನನ್ನ ತಂದೆ ಸಿದ್ದರಾಮಯ್ಯನವರಿಗೆ ಅಪಾರ ಜನರ ಬೆಂಬಲ ಇದೆ. ಬಿಜೆಪಿಯವರು ಜಾತಿ ರಾಜಕೀಯ ಮಾಡಲ್ಲ ಎಂದು ಹೇಳುತ್ತಾರೆ. ವರುಣ ಕ್ಷೇತ್ರದಲ್ಲಿ ಯಾವ ತಂತ್ರಗಾರಿಕೆಯೂ ನಡೆಯುವುದಿಲ್ಲ. ಬಿ.ಎಲ್.ಸಂತೋಷ್ ವರುಣ ವಿಧಾನಸಭಾ ಕ್ಷೇತ್ರದಲ್ಲೇ ಇದ್ದಾರೆ. ಆರ್ಎಸ್ಎಸ್ನವರ ಮೂಲ ಆದಾಯ ಬಹಿರಂಗವಾಗಬೇಕು. ಬಿ.ಎಲ್.ಸಂತೋಷ್ ಮೂಲ ಆದಾಯವೂ ಬಹಿರಂಗವಾಗಬೇಕು ಎಂದು ಹೇಳಿದರು.
ಪ್ರಚಾರ ವಾಹನದಿಂದ ಕೆಳಗೆ ಇಳಿಯುವಂತೆ ಗ್ರಾಮಸ್ಥರ ಪಟ್ಟು
ವರುಣ ಕ್ಷೇತ್ರದ ಅಭ್ಯರ್ಥಿ ಸಿದ್ದರಾಮಯ್ಯ ಪ್ರಚಾರ ಆರಂಭಿಸಿದ್ದು, ಪ್ರಚಾರ ವಾಹನದಿಂದ ಕೆಳಗೆ ಇಳಿಯುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದ್ದು, ಇನ್ನೂ 16 ಗ್ರಾಮಗಳಿಗೆ ಪ್ರಚಾರಕ್ಕೆ ಹೋಗಬೇಕು ಎಂದು ಕೈಮುಗಿದು ಮನವಿ ಮಾಡಿದ್ದಾರೆ. ಜನರ ಒತ್ತಾಯಕ್ಕೆ ಮಣಿದು ವಾಹನದಿಂದ ಸಿದ್ದರಾಮಯ್ಯ ಇಳಿದಿದ್ದಾರೆ. ಜನರು ನಿಂತಿದ್ದ ಸ್ಥಳಕ್ಕೆ ತೆರಳಿ ಮತಯಾಚಿಸಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




