AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿರೋಧಿಗಳ ಫಿಕ್ಸಿಂಗ್​ ಆತಂಕ: ಕಾರ್ಯಕರ್ತರಿಗೆ ಮಹತ್ವದ ಕರೆ ಕೊಟ್ಟ ಯತೀಂದ್ರ

ಕೊನೆ ಚುನಾವಣೆ ಅಂತಿರುವ ಸಿದ್ದರಾಮಯ್ಯನವರನ್ನು ಈ ಬಾರಿ ಸೋಲಿನ ಬೋನಿನಲ್ಲಿ ಬಂಧನ ಮಾಡಲೇಬೇಕು ಎನ್ನುವ ಲೆಕ್ಕಾಚಾರದ ಸುನಾಮಿಯೇ ಎದ್ದಿದೆ. ಈ ಹಿನ್ನೆಲೆಯಲ್ಲಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರಚಾರದ ವೇಳೆ ಆತಂಕ ಹೊರಹಾಕಿದ್ದಾರೆ.

ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿರೋಧಿಗಳ ಫಿಕ್ಸಿಂಗ್​ ಆತಂಕ: ಕಾರ್ಯಕರ್ತರಿಗೆ ಮಹತ್ವದ ಕರೆ ಕೊಟ್ಟ ಯತೀಂದ್ರ
ರಮೇಶ್ ಬಿ. ಜವಳಗೇರಾ
|

Updated on: Apr 04, 2023 | 7:49 AM

Share

ಮೈಸೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023)  ಅಗ್ನಿಪರೀಕ್ಷೆಗೆ ಇಳಿದಿರುವ ಸಿದ್ದರಾಮಯ್ಯ(Siddaramaiah), ಎರಡು ಕನಸು ಹೊತ್ತು, ಎರಡು ಕಡೆ ಅಖಾಡಕ್ಕೆ ಇಳಿಯುವುದಕ್ಕೆ ಸನ್ನದ್ಧರಾಗಿದ್ದಾರೆ. ಅದರಲ್ಲಿ ಒಂದು ಕ್ಷೇತ್ರ ವರುಣಾ (varuna) ಎಂದಯ ಅಧಿಕೃತವಾಗಿ ಘೋಷಣೆ ಮಾಡಿದ್ರೆ, ಇನ್ನೊಂದು ಯಾವುದು ಎನ್ನುವುದು ಇನ್ನೂ ನಿಗೂಢವಾಗಿದೆ. ಹೀಗಿರುವಾಗ ವರುಣಾ ಎಂದಯ ಘೋಷಣೆ ಮಾಡಿರುವ ಸಿದ್ದರಾಮಯ್ಯಗೆ ಅದೇ ಸ್ವಕ್ಷೇತ್ರದಲ್ಲಿ ಖೆಡ್ಡಾ ತೋಡಲು ಎದುರಾಳಿಗಳು ರೆಡಿ ಆಗಿದ್ದಾರೆ. ಸಿದ್ದರಾಮಯ್ಯ ಎಲ್ಲೇ ಹೋಗಲಿ, ಯಾವ ಕದನ ಕಣದಲ್ಲೇ ನಿಲ್ಲಲಿ, ಅವರನ್ನ ಹಣಿಯಲೇ ಬೇಕು ಎಂದು ಬಿಜೆಪಿ ಜಿದ್ದಿಗೆ ಬಿದ್ದವರಂತೆ ಕಾದು ಕುಳಿತಿದೆ. ನಮ್ಮನ್ನ ಕುಟುಕುವ ಸಿದ್ದರಾಮಯ್ಯರನ್ನ ರಾಜಕೀಯವಾಗಿಯೇ ಚಿವುಟಿ ಹಾಕಲೇಬೇಕು ಎಂದು ಕೇಸರಿ ಪಡೆ ಪಣ ತೊಟ್ಟು ಓಡಾಡುತ್ತಿದೆ. ಇನ್ನು ವಿರೋಧ ಪಕ್ಷಗಳ ತಂತ್ರಗಾರಿಕೆಗೆ ಪುತ್ರ ಯತೀಂದ್ರ ಸಿದ್ದರಾಮಯ್ಯ(yathindra siddaramaiah )ಪ್ರಚಾರದ ವೇಳೆ ಆತಂಕ ಹೊರಹಾಕಿದ್ದು, ಬಹಳ ಎಚ್ಚರಿಕೆಯಿಂದ ಚುನಾವಣೆ ನಡೆಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಪಟ್ಟಿ, ವಿಜಯೇಂದ್ರ ಸ್ಪರ್ಧಿಸುವ ಕ್ಷೇತ್ರದ ಗೊಂದಲಗಳಿಗೆ ತೆರೆ ಎಳೆದ ಯಡಿಯೂರಪ್ಪ

ಸಾರ್ವಜನಿಕ ಸಭೆಯಲ್ಲಿ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಮ್ಯಾಚ್​ ಫಿಕ್ಸಿಂಗ್ ಆರೋಪದ ಬಗ್ಗೆ ಮಾತನಾಡಿರುವ ಯತೀಂದ್ರ, ಸಿದ್ದರಾಮಯ್ಯ ಎಲ್ಲೇ ನಿಂತರು ಸೋಲಿಸಲು ಎಲ್ಲರೂ ಒಂದಾಗುತ್ತಾರೆ. ಸಿದ್ದರಾಮಯ್ಯ ಸೋಲಿಸಲು ಬಿಜೆಪಿ, ಜೆಡಿಎಸ್​ನವರು ಒಂದಾಗುತ್ತಾರೆ. ಒಟ್ಟಾಗಿ ಸೇರಿ ಷಡ್ಯಂತ್ರ ರೂಪಿಸುತ್ತಾರೆ, ಹಣದ ಹೊಳೆ ಹರಿಸುತ್ತಾರೆ. ತಂದೆಗೆ 76 ವರ್ಷ ಆಗಿದೆ. ಇದು ಅವರಿಗೆ ಕೊನೆಯ ಚುನಾವಣೆ. ತಂದೆಯವರು ಗೆದ್ದು ಗೌರವಯುತವಾಗಿ ನಿವೃತ್ತಿ ಪಡೆಯಬೇಕು. ಹಾಗಾಗಿ ಬಹಳ ಎಚ್ಚರಿಕೆಯಿಂದ ಚುನಾವಣೆ ನಡೆಸುವಂತೆ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

ಬಿಜೆಪಿ ಲೆಕ್ಕಾಚಾರವೇನು?

ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ಹೆಚ್ಚಿವೆ. ಒಟ್ಟು 48 ಸಾವಿರ ದಲಿತ ಮತಗಳಿದ್ರೆ, ಒಕ್ಕಲಿಗ 12 ಸಾವಿರ, ಕುರುಬ ಸಮುದಾಯಕ್ಕೆ ಸೇರಿರೋ 27 ಸಾವಿರ ಮತಗಳಿವೆ. ಇದರ ಜೊತೆಗೆ ಉಪ್ಪಾರ ಸಮುದಾಯಕ್ಕೆ ಸೇರಿರುವ 14 ಸಾವಿರ ಮತಗಳಿದ್ರೆ, ಎಸ್​ಟಿ ಸಮುದಾಯಕ್ಕೆ ಸೇರಿರೋ 23 ಸಾವಿರ ಮತಗಳು ಇವೆ. ಮುಸ್ಲಿಂ ಸಮುದಾಯದ 15 ಸಾವಿರ ಮತಗಳಿದ್ರೆ, ಇತರೆ 35 ಸಾವಿರ ಮತಗಳಿವೆ. ಹೀಗಾಗಿ ಜಾತಿ ಗಣಿತ ಆಧಾರದ ಮೇಲೆ ಬಿಜೆಪಿ ಮಹಾ ಸ್ಟ್ರಾಟರ್ಜಿಯನ್ನೇ ಹಾಕಿದೆ.

ಇದನ್ನೂ ಓದಿ: ವರುಣಾ ಕಣದಲ್ಲಿ ನಡೆದಿದ್ಯಾ ಮ್ಯಾಚ್ ಫಿಕ್ಸಿಂಗ್ ಮಸಲತ್ತು? ಮರುಕಳಿಸುತ್ತಾ 2006ರ ಚಾಮುಂಡೇಶ್ವರಿ ಚುನಾವಣೆಯ ಚಮಕ್..?

ವರುಣಾ ಕ್ಷೇತ್ರದಲ್ಲಿ ಹೆಚ್ಚಾಗಿರುವ ಲಿಂಗಾಯತ ಮತಗಳ ಮೂಲಕ ಸಿದ್ದರಾಮಯ್ಯಗೆ ಶಾಕ್ ನೀಡಲು ಬಿಜೆಪಿ ಮುಂದಾಗಿದೆ. ಹಾಗೇ ಸಿದ್ದರಾಮಯ್ಯ ವಿರೋಧಿ ಆಗಿರುವ ಜೆಡಿಎಸ್‌ ಮುಖಂಡರ ಬೆಂಬಲವನ್ನ ಪಡೆದು ಪ್ಲ್ಯಾನ್‌ ಮಾಡಿ ಸೋಲಿಸುವುದಕ್ಕೆ ದಾಳ ಉರುಳಿಸುವ ಪ್ಲ್ಯಾನ್​ ಮಾಡಿದ್ದಾರೆ. ಇಷ್ಟೇ ಅಲ್ಲ ಲಿಂಗಾಯತ ಮತಗಳು ಮತ್ತು ದಲಿತ ಮತಗಳನ್ನ ಸೆಳೆದು ಸಿದ್ದರಾಮಯ್ಯಗೆ ಸೋಲಿನ ರುಚಿ ತೋರಿಸುವುದು ಬಿಜೆಪಿ ತಂತ್ರಗಾರಿಕೆಯಾಗಿದೆ.

ಬಿವೈ ವಿಜಯೇಂದ್ರ ಮೂಲಕ ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ಪ್ಲ್ಯಾನ್ ಮಾಡಿತ್ತು. ಆದ್ರೆ, ಅಂತಿಮವಾಗಿ ವಿಜಯೇಂದ್ರ ವರುಣಾದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಖಚಿತವಾಗಿದೆ. ಈ ಬಗ್ಗೆ ಸ್ವತಃ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿಜಯೇಂದ್ರ ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಲಿದ್ದಾರೆ. ವರುಣಾದಲ್ಲಿ ಸ್ಪರ್ಧೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಚುನಾವಣೆ ಘೋಷಣೆ ಬೆನ್ನಲ್ಲೇ ವರುಣಾ ಕದನಕಣ ಮತ್ತಷ್ಟು ರಂಗೇರಿದೆ. ಸ್ವಕ್ಷೇತ್ರದಲ್ಲಿ ಅಗ್ನಿಪರಿಕ್ಷೆಗೆ ಇಳಿದಿರುವ ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್​ ಕೊಡಲು ಕೇಸರಿ ತಂತ್ರ, ಪ್ರತಿತಂತ್ರಗಳ ಬೆಟ್ಟವನ್ನೇ ಕಟ್ಟಿಕೊಂಡಿದೆ.

ಕರ್ನಾಟಕ ಅಸೆಂಬ್ಲಿ ಚುನಾವಣೆ ಕುರಿತಾದ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.