ಕಾಂಗ್ರೆಸ್ ಯಾವಾಗಲೂ ರೈತರಿಗೆ ದ್ರೋಹ ಮಾಡಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ: ನರೇಂದ್ರ ಮೋದಿ

ಕಾಂಗ್ರೆಸ್ ಯಾವಾಗಲೂ ಒಂದು ಪ್ರದೇಶದ ಜನರನ್ನು ಇತರರ ವಿರುದ್ಧ ಎತ್ತಿಕಟ್ಟುತ್ತದೆ. ಕಾಂಗ್ರೆಸ್ ಸಿಎಂ ಚನ್ನಿ ನಿನ್ನೆ ನೀಡಿದ ಹೇಳಿಕೆಯನ್ನು ದೆಹಲಿಯ ಕುಟುಂಬದ ಸದಸ್ಯರೊಬ್ಬರು ಶ್ಲಾಘಿಸಿದ್ದಾರೆ.

ಕಾಂಗ್ರೆಸ್ ಯಾವಾಗಲೂ ರೈತರಿಗೆ ದ್ರೋಹ ಮಾಡಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ: ನರೇಂದ್ರ ಮೋದಿ
ಪಂಜಾಬ್​​ನಲ್ಲಿ ಮೋದಿ
Edited By: ರಶ್ಮಿ ಕಲ್ಲಕಟ್ಟ

Updated on: Feb 17, 2022 | 2:17 PM

ಅಬೋಹರ್: ಪಂಜಾಬ್‌ನ (Punjab Election) ಫಜಿಲ್ಕಾ ಜಿಲ್ಲೆಯ ಅಬೋಹರ್ ನಗರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) “ಇಂದು, ಪಂಜಾಬ್‌ಗೆ ರಾಜ್ಯದ ಅಭಿವೃದ್ಧಿಯಿಂದ, ದೇಶಭಕ್ತಿಯಿಂದ ಸ್ಫೂರ್ತಿ ಪಡೆಯುವ ಸರ್ಕಾರದ ಅಗತ್ಯವಿದೆ. ಪಂಜಾಬ್‌ನ ಭದ್ರತೆ ಮತ್ತು ಅಭಿವೃದ್ಧಿಯ ಸಂಕಲ್ಪದೊಂದಿಗೆ ಬಿಜೆಪಿ ನಿಮ್ಮ ಮುಂದೆ ಬಂದಿದೆ ಎಂದು ಹೇಳಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ (Charanjit Singh Channi) ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು “ಯುಪಿ, ಬಿಹಾರ ಕೆ ಭಾಯಿ” ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, “ಕಾಂಗ್ರೆಸ್ ಯಾವಾಗಲೂ ಒಂದು ಪ್ರದೇಶದ ಜನರನ್ನು ಇತರರ ವಿರುದ್ಧ ಎತ್ತಿಕಟ್ಟುತ್ತದೆ. ಕಾಂಗ್ರೆಸ್ ಸಿಎಂ ಚನ್ನಿ ನಿನ್ನೆ ನೀಡಿದ ಹೇಳಿಕೆಯನ್ನು ದೆಹಲಿಯ ಕುಟುಂಬದ ಸದಸ್ಯರೊಬ್ಬರು ಶ್ಲಾಘಿಸಿದ್ದಾರೆ. ಇಂತಹ ಹೇಳಿಕೆಗಳಿಂದ ಯಾರನ್ನು ಅವಮಾನಿಸುತ್ತಿದ್ದಾರೆ? ಉತ್ತರ ಪ್ರದೇಶ ಮತ್ತು ಬಿಹಾರದ ಜನರು ಕೆಲಸ ಮಾಡದ ಒಂದೇ ಒಂದು ಹಳ್ಳಿಯೂ ಇಲ್ಲ ಎಂದು ಹೇಳಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, “ಕಾಂಗ್ರೆಸ್ ಯಾವಾಗಲೂ ರೈತರಿಗೆ ದ್ರೋಹ ಮಾಡಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕೆಂಬ ಬಹುದಿನಗಳ ಬೇಡಿಕೆ ಇತ್ತು. ಅವರು ಆ ಕಡತಗಳ ಮೇಲೆ ಕುಳಿತು ಸುಳ್ಳು ಹೇಳುತ್ತಿದ್ದರು. ನಾವು ಕೇಂದ್ರದಲ್ಲಿ ನಮ್ಮ ಸರ್ಕಾರವನ್ನು ರಚಿಸಿದಾಗ, ನಾವು ಆ ಶಿಫಾರಸುಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದಾರೆ.

ಗುರು ಗೋವಿಂದ್ ಸಿಂಗ್ ಎಲ್ಲಿ ಜನಿಸಿದರು? ಬಿಹಾರದ ಪಾಟ್ನಾ ಸಾಹಿಬ್‌ನಲ್ಲಿ. ಬಿಹಾರದ ಜನರನ್ನು ಒಳಗೆ ಬರಲು ಬಿಡುವುದಿಲ್ಲ ಎಂದು ನೀವು ಹೇಳುತ್ತೀರಿ, ಹಾಗಾದರೆ ಗುರು ಗೋವಿಂದ್ ಸಿಂಗ್ ಅವರನ್ನೂ ಅವಮಾನಿಸುತ್ತೀರಾ?  ಸಂತ ರವಿದಾಸ್ ಹುಟ್ಟಿದ್ದು ಪಂಜಾಬಿನಲ್ಲಿಯೇ? ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನಿಸಿದರು. ಉತ್ತರ ಪ್ರದೇಶದ ‘ಭೈಯಾ’ (ಪಂಜಾಬ್‌ನಲ್ಲಿ) ಪ್ರವೇಶಿಸಲು ಬಿಡುವುದಿಲ್ಲ ಎಂದು ನೀವು ಹೇಳುತ್ತೀರಿ. ಹಾಗಾದರೆ ಸಂತ ರವಿದಾಸ್ ಅವರನ್ನೂ ದೂರವಿಡುತ್ತೀರಾ? ನೀವು ಅವರ ಹೆಸರನ್ನು ಅಳಿಸುತ್ತೀರಾ? ನೀವು ಯಾವ ಭಾಷೆ ಬಳಸುತ್ತೀರಿ? ಎಂದು ಮೋದಿ ಪಂಜಾಬ್ ಸಿಎಂ ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ದಶಕದಲ್ಲಿ ಬಿಜೆಪಿಗೆ ಅವಕಾಶ ನೀಡುವಂತೆ ಪಂಜಾಬ್ ಜನತೆಗೆ ಪ್ರಧಾನಿ ಮೋದಿ ಮನವಿ ಮಾಡಿದರು. “ಪಂಜಾಬ್‌ನಲ್ಲಿ ಡಬಲ್ ಇಂಜಿನ್ ಸರ್ಕಾರ ಎಂದರೆ- ಈ ದಶಕದಲ್ಲಿ ರಾಜ್ಯದ ಅತ್ಯಂತ ವೇಗದ ಅಭಿವೃದ್ಧಿ. ಮರಳು ಮಾಫಿಯಾ, ಡ್ರಗ್ಸ್ ಮಾಫಿಯಾಗಳು ರಾಜ್ಯದಿಂದ ಕಣ್ಮರೆಯಾಗುತ್ತವೆ ಮತ್ತು ಕೈಗಾರಿಕೆಗಳು ಹೊಸ ಮಟ್ಟವನ್ನು ಮುಟ್ಟುತ್ತವೆ ಮತ್ತು ಪಂಜಾಬ್‌ನ ಯುವಕರಿಗೆ ಉದ್ಯೋಗ, ಸ್ವಯಂ ಉದ್ಯೋಗಕ್ಕೆ ಹೊಸ ಅವಕಾಶಗಳು ಸಿಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅಬೋಹರ್‌ನಲ್ಲಿ ಹೇಳಿದ್ದಾರೆ.

ರ್ಯಾಲಿಗೆ ಒಂದು ದಿನ ಮುಂಚಿತವಾಗಿ, ಫಜಿಲ್ಕಾ ಆಡಳಿತವು ತನ್ನ ವ್ಯಾಪ್ತಿಯಲ್ಲಿರುವ ವಾಯುಪ್ರದೇಶವನ್ನು ಗುರುವಾರದವರೆಗೆ ಹಾರಾಟ-ನಿಷೇಧ ವಲಯ ಎಂದು ಘೋಷಿಸಿದೆ.

ಆಮ್ ಆದ್ಮಿ ಪಕ್ಷ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ ದಿನದ ನಂತರ ರ್ಯಾಲಿ ಬಂದಿದೆ. ಪಂಜಾಬ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಎಎಪಿ ಕಾಂಗ್ರೆಸ್‌ನ ಫೋಟೋಕಾಪಿ ಎಂದು ಹೇಳಿದರು. ಎರಡೂ ಪಕ್ಷಗಳು ಅಯೋಧ್ಯೆಯಲ್ಲಿ ರಾಮಮಂದಿರವನ್ನು ವಿರೋಧಿಸುತ್ತಿವೆ ಮತ್ತು ಸೈನಿಕರ ಶೌರ್ಯವನ್ನು ಪ್ರಶ್ನಿಸುತ್ತಿವೆ ಎಂದು ಮೋದಿ ಆರೋಪಿಸಿದರು.

ಒಬ್ಬರು ಪಂಜಾಬ್ ಅನ್ನು ಲೂಟಿ ಮಾಡಿದರೆ ಮತ್ತೊಬ್ಬರು ದೆಹಲಿಯಲ್ಲಿ ಒಂದರ ಹಿಂದೆ ಒಂದರಂತೆ ಹಗರಣಗಳನ್ನು ಮಾಡುತ್ತಿದ್ದಾರೆ. ಯೇ ಏಕ್ ಹೀ ಥೈಲಿ ಕೇ ಚಟ್ಟೆ ಬಟ್ಟೆ ಹೈಂ (ಇಬ್ಬರೂ ಒಂದೇ).  ಈಗ ಈ ಎರಡು ಪಕ್ಷಗಳು ಡಬ್ಲ್ಯುಡಬ್ಲ್ಯುಇನಂತೆ ಪಂಜಾಬ್‌ನಲ್ಲಿ ನಿಶ್ಚಿತ ಹೋರಾಟ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಬುಧವಾರ ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ, ಬಿಹಾರ, ದೆಹಲಿಯಿಂದ ಭಯ್ಯಾಗಳು ಇಲ್ಲಿ ಬಂದು ಅಧಿಕಾರ ನಡೆಸಲು ಸಾಧ್ಯವಿಲ್ಲ: ಚರಣ್​ಜಿತ್ ಸಿಂಗ್ ಚನ್ನಿ

Published On - 1:53 pm, Thu, 17 February 22

TV9 Web

TV9 Kannada

Read More
Follow Us