ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಮತದಾರರರಿಗೆ ನೀಡಿದ ಭರವಸೆ ಈಡೇರಿಸಿದ ರೇವಂತ್ ರೆಡ್ಡಿ

|

Updated on: Dec 07, 2023 | 7:25 PM

Revanth Reddy: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಮ್ಮ ಅಧಿಕೃತ ನಿವಾಸದ ಮುಂಭಾಗದ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ತೆಗೆಯುವುದಾಗಿ ತಮ್ಮ ಚುನಾವಣಾ ಪ್ರಚಾರದ ವೇಳೆ ರೇವಂತ್ ರೆಡ್ಡಿ ಹೇಳಿದ್ದರು. ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತದಾರರರಿಗೆ ನೀಡಿದ ಈ ಭರವಸೆ ಈಡೇರಿಸಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಮತದಾರರರಿಗೆ ನೀಡಿದ ಭರವಸೆ ಈಡೇರಿಸಿದ ರೇವಂತ್ ರೆಡ್ಡಿ
ರೇವಂತ್ ರೆಡ್ಡಿ
Follow us on

ಹೈದರಾಬಾದ್ ಡಿಸೆಂಬರ್ 07: ತೆಲಂಗಾಣ (Telangana) ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಅವರು ಅಧಿಕಾರ ವಹಿಸಿಕೊಂಡ ಕೆಲವೇ ನಿಮಿಷಗಳಲ್ಲಿ ತಮ್ಮ ಅಧಿಕೃತ ನಿವಾಸದ ಮುಂಭಾಗದ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ತೆಗೆದುಹಾಕುವ ಮೂಲಕ ತಮ್ಮ ಪ್ರಚಾರದ ಪ್ರಮುಖ ಭರವಸೆ ಈಡೇರಿಸಿದ್ದಾರೆ.ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಯುವ ಮುನ್ನವೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಹೈದರಾಬಾದ್‌ನ ಪ್ರಗತಿ ಭವನದಲ್ಲಿ  (Pragathi Bhavan) ಬಿರುಸಿನ ಚಟುವಟಿಕೆಗಳು ನಡೆದಿದ್ದವು.

ಹಲವಾರು ಬುಲ್ಡೋಜರ್‌ಗಳು, ಟ್ರ್ಯಾಕ್ಟರ್‌ಗಳು ಮತ್ತು ಕಟ್ಟಡ ಕಾರ್ಮಿಕರು ನಿವಾಸದ ಹೊರಗೆ ಕಬ್ಬಿಣದ ರಾಡ್‌ಗಳನ್ನು ಕಿತ್ತುಹಾಕುತ್ತಿರುವುದು ಕಂಡುಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬ್ಯಾರಿಕೇಡ್‌ಗಳನ್ನು ತೆಗೆಯುವುದಾಗಿ ತಮ್ಮ  ಚುನಾವಣಾ ಪ್ರಚಾರದ ವೇಳೆ ರೆಡ್ಡಿ ಹೇಳಿದ್ದರು.


ಇಂದು ಬೆಳಗ್ಗೆ ರೇವಂತ್ ರೆಡ್ಡಿ ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 54 ವರ್ಷ ವಯಸ್ಸಿನ ರೆಡ್ಡಿ 2014 ರಲ್ಲಿ ತೆಲಂಗಾಣ ಹುಟ್ಟಿದಾಗಿನಿಂದ ಪ್ರಸ್ತುತ ರಾಜ್ಯದ ಚುಕ್ಕಾಣಿ ಹಿಡಿದಿರುವ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ.

ಇದನ್ನೂ ಓದಿ: LIVE | Revanth Reddy Swearing-In: ತೆಲಂಗಾಣ 2ನೆ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ ಪ್ರಮಾಣ ವಚನ  

ಕಳೆದ ತಿಂಗಳು ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಬಳಿಕ ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಆಕಾಂಕ್ಷಿ ಮಲ್ಲು ಭಟ್ಟಿ ವಿಕ್ರಮಾರ್ಕ ಸೇರಿದಂತೆ ಶರೆಡ್ಡಿ ಅವರ ಹನ್ನೊಂದು ಸಹೋದ್ಯೋಗಿಗಳು ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು.

ರೆಡ್ಡಿ ಮತ್ತು ಅವರ ಕ್ಯಾಬಿನೆಟ್ ಈಗ ಮಂಕಾದ ಬೊಕ್ಕಸವನ್ನು ನಿರ್ವಹಿಸುವ ಮತ್ತು ಕಾಂಗ್ರೆಸ್ ಪಕ್ಷವು ಚುನಾವಣೆಯ ಪೂರ್ವದಲ್ಲಿ ನೀಡಿದ “ಆರು ಭರವಸೆಗಳನ್ನು” ಪೂರೈಸುವ ಕೆಲಸವನ್ನು ಮಾಡಬೇಕಿದೆ. ಆರು ಗ್ಯಾರಂಟಿಗಳನ್ನು ಎತ್ತಿ ಹಿಡಿಯುವ ಕಾಂಗ್ರೆಸ್ ನ ಅಬ್ಬರದ ಪ್ರಚಾರವೂ ಪಕ್ಷದ ಗೆಲುವಿಗೆ ಒಂದು ಕಾರಣ ಎನ್ನಲಾಗಿದೆ. ಈ “ಆರು” ಭರವಸೆಗಳ ಪೈಕಿ ಅತ್ಯಂತ ಆಕರ್ಷಕವಾದದ್ದು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ