
ತಮಿಳು ನಟ ವಿಶಾಲ್ ಅವರು (Vishal) ‘ಮುಗುಡಂ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದಲ್ಲಿ ಇದು ಅವರಿಗೆ ಚೊಚ್ಚಲ ಅನುಭವ. ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮ ನಡೆದಿದೆ. ಈ ವೇಳೆ ಅವರು ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ಜೊತೆಗಿನ ತಮ್ಮ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ವಿಜಯ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅದರ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
‘ಎರಡು ವರ್ಷಗಳ ಹಿಂದೆ ನಾನು ವಿಜಯ್ ಅವರಿಗೆ ಕಥೆ ಹೇಳಲು ಹೋಗಿದ್ದೆ. ಆದರೆ, ಅವರು ಕಥೆ ಒಪ್ಪಿಲ್ಲ. ಈಗ ಅವರು ಮುಖ್ಯಮಂತ್ರಿಯಾಗಿದ್ದಾರೆ. ಇತ್ತೀಚೆಗೆ ನಾನು ಅವರನ್ನು ಮತ್ತೆ ಭೇಟಿಯಾದೆ. ನಿಮಗೆ ಹೇಳಿದ ಕಥೆ ನೆನಪಿದೆಯೇ? ಎಂದು ಕೇಳಿದೆ. ಅವರು ಹೌದು ನೆನಪಿದೆ ಎಂದರು. ನಾನು ನೀವು ಈಗ ಸಿನಿಮಾದಲ್ಲಿಲ್ಲ. ಅದಕ್ಕೆ ನಿಮ್ಮ ಹೆಸರನ್ನು ನಾನು ಬಳಸಿಕೊಳ್ಳುತ್ತಿದ್ದೇನೆ ಎಂದೆ. ಇದನ್ನು ಕೇಳಿ ವಿಜಯ್ ಜೋರಾಗಿ ನಕ್ಕರು’ ಎಂದು ವಿಶಾಲ್ ವೇದಿಕೆಯಲ್ಲಿ ಹೇಳಿದರು.
ವಿಶಾಲ್ ಮತ್ತು ಸಿಎಂ ವಿಜಯ್ ನಡುವೆ 30 ವರ್ಷಗಳ ಹಳೆಯ ಸ್ನೇಹವಿದೆ. ಕಾಲೇಜು ದಿನಗಳಿಂದಲೂ ಇಬ್ಬರಿಗೂ ಪರಿಚಯವಿದೆ. ವಿಜಯ್ ಅವರು ವಿಶಾಲ್ ಅಣ್ಣನ ಜೊತೆ ಕಾಲೇಜಿನಲ್ಲಿ ಓದುತ್ತಿದ್ದರು. ‘ಅವರು ಮುಖ್ಯಮಂತ್ರಿಯಾದರೂ ಅವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದೇ ಬಾಡಿ ಲಾಂಗ್ವೇಜ್ ಮತ್ತು ಅದೇ ಒಳ್ಳೆಯ ಗುಣಗಳು ಅವರಲ್ಲಿವೆ. ಕೇವಲ ಅವರ ಹುದ್ದೆ ಮಾತ್ರ ಬದಲಾಗಿದೆ’ ಎಂದು ವಿಶಾಲ್ ಹೊಗಳಿದ್ದಾರೆ.
ಭೇಟಿಯ ಸಂದರ್ಭದಲ್ಲಿ ವಿಶಾಲ್ ಅವರು ವಿಜಯ್ ಅವರನ್ನು ‘ಡಾರ್ಲಿಂಗ್’ ಎಂದು ಕರೆದಿದ್ದಾರಂತೆ. ‘ಒಬ್ಬ ಮುಖ್ಯಮಂತ್ರಿಯನ್ನು ಡಾರ್ಲಿಂಗ್ ಎಂದು ಕರೆಯುವುದು ಒಂದು ಅದ್ಭುತ ಅನುಭವ. ಸ್ನೇಹಿತನ ಜೊತೆ ಮಾತನಾಡಿದ ಹಾಗೆ ಅನಿಸಿತು’ ಎಂದು ವಿಶಾಲ್ ಖುಷಿ ಹಂಚಿಕೊಂಡಿದ್ದಾರೆ.
ಸಿಎಂ ವಿಜಯ್ ಅವರನ್ನು ಭೇಟಿಯಾದಾಗ ವಿಶಾಲ್ ಹೂಗುಚ್ಛ ನೀಡಲಿಲ್ಲ. ಅದರ ಬದಲಾಗಿ ವಿಜಯ್ ಅವರ ಹೆಸರಿನಲ್ಲಿ ಮೂವರು ಬಡ ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿ ಪಡೆದಿದ್ದಾರೆ. ‘ನಿಮ್ಮ ಹೆಸರಿನಲ್ಲಿ ಮೂವರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತೇನೆ ಎಂದೆ. ಇದಕ್ಕೆ ವಿಜಯ್ ತುಂಬಾ ಸಂತೋಷದಿಂದ ಒಪ್ಪಿಕೊಂಡರು’ ಎಂದು ವಿಶಾಲ್ ತಿಳಿಸಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಈ ಹೆಣ್ಣುಮಕ್ಕಳು ವಿಜಯ್ ಹೆಸರಿನಲ್ಲಿ ವಿದ್ಯಾಭ್ಯಾಸ ಮಾಡಲಿದ್ದಾರೆ.
ಇದನ್ನೂ ಓದಿ: ‘ವಿಜಯ್ ಅತ್ಯಂತ ಸಮರ್ಥ ಮುಖ್ಯಮಂತ್ರಿ’: ಮುಕ್ತಕಂಠದಿಂದ ಹೊಗಳಿದ ನಟ ವಿಶಾಲ್
ವಿಶಾಲ್ ನಟಿಸಿ, ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ ‘ಮಗುಡಂ’. ಇದು ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಮೂಡಿಬರುತ್ತಿದೆ. ಈ ಸಿನಿಮಾ ಇದೇ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Tue, 30 June 26