ರಜನೀಕಾಂತ್ ಬಳಿಕ ‘ಜೈಲರ್’ ನಿರ್ದೇಶಕನಿಗೂ ಕಾರು, ಹಣ ಉಡುಗೊರೆ ಕೊಟ್ಟ ನಿರ್ಮಾಪಕ

Jailer: 'ಜೈಲರ್' ಸಿನಿಮಾದ ಅದ್ಭುತ ಜಯದ ಬಳಿಕ, ಸಿನಿಮಾದ ನಿರ್ಮಾಪಕ ಕಲಾನಿಧಿ ಮಾರನ್, ರಜನೀಕಾಂತ್​ಗೆ ಚೆಕ್ ಒಂದನ್ನು ನೀಡಿ ಅದರ ಜೊತೆಗೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದರು, ಇದೀಗ ಸಿನಿಮಾದ ನಿರ್ದೇಶಕ ನೆಲ್ಸನ್​ಗೂ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ರಜನೀಕಾಂತ್ ಬಳಿಕ ಜೈಲರ್ ನಿರ್ದೇಶಕನಿಗೂ ಕಾರು, ಹಣ ಉಡುಗೊರೆ ಕೊಟ್ಟ ನಿರ್ಮಾಪಕ
ನೆಲ್ಸನ್-ಕಲಾನಿಧಿ ಮಾರನ್

Updated on: Sep 02, 2023 | 3:32 PM

ರಜನೀಕಾಂತ್ (Rajinikanth) ನಟನೆಯ ‘ಜೈಲರ್‘ (Jailer) ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ‘ಜೈಲರ್’ ಸಿನಿಮಾ ಬಿಡುಗಡೆ ಆದ ಮೂರು ವಾರದಲ್ಲಿ 625 ಕೋಟಿಗೂ ಹೆಚ್ಚು ಮೊತ್ತ ಕಲೆ ಹಾಕಿದೆ. ಸಿನಿಮಾ ದೊಡ್ಡ ಹಿಟ್ ಆದ ಬೆನ್ನಲ್ಲೆ, ನಿರ್ಮಾಪಕ ಕಲಾನಿಧಿ ಮಾರನ್ ಅವರು, ಲಾಭಾಂಶದ ಭಾಗವನ್ನು ರಜನೀಕಾಂತ್ ಜೊತೆಗೆ ಹಂಚಿಕೊಂಡಿದ್ದಾರೆ. ಸಂಭಾವನೆ ಹೊರತಾಗಿ ಉಡುಗೊರೆಯಾಗಿ ದೊಡ್ಡ ಮೊತ್ತದ ಹಣವನ್ನೇ ರಜನೀಕಾಂತ್​ಗೆ ಕಲಾನಿಧಿ ಮಾರನ್ ನೀಡಿದ್ದಾರೆ. ಅದರ ಜೊತೆಗೆ ಎರಡು ಅತ್ಯಾಧುನಿಕ, ಹೊಚ್ಚ ಹೊಸ ಐಶಾರಾಮಿ ಬಿಎಂಡಬ್ಲು ಕಾರುಗಳನ್ನು ಸಹ ಉಡುಗೊರೆಯಾಗಿ ನೀಡಿದ್ದಾರೆ.

ರಜನೀಕಾಂತ್ ಅವರಿಗೆ ಉಡುಗೊರೆ ಬಳಿಕ ಇದೀಗ ‘ಜೈಲರ್’ ಸಿನಿಮಾದ ನಿರ್ದೇಶಕ ನೆಲ್ಸನ್ ಅವರಿಗೂ ಕಲಾನಿಧಿ ಮಾರನ್ ದಬಾರಿ ಉಡುಗೊರೆ ಹಾಗೂ ಚೆಕ್ ಮೂಲಕ ಹಣವನ್ನು ನೀಡಿದ್ದಾರೆ. ಇಂದು ನಿರ್ದೇಶಕ ನೆಲ್ಸನ್ ಅವರ ಭೇಟಿಯಾಗಿದ್ದ ಕಲಾನಿಧಿ ಮಾರನ್, ನೆಲ್ಸನ್​ಗೆ ಚೆಕ್ ಒಂದನ್ನು ನೀಡಿದ್ದಾರೆ. ಆ ಚೆಕ್​ನಲ್ಲಿ ಎಷ್ಟು ಮೊತ್ತ ನಮೂದಿಸಲಾಗಿತ್ತು ಎಂಬುದು ಬಹಿರಂಗಗೊಂಡಿಲ್ಲ. ಸುಮಾರು 10 ಕೋಟಿ ಹಣ ನೀಡಿದ್ದಾರೆ ಎನ್ನಲಾಗುತ್ತಿದೆ.

ಹಣದ ಜೊತೆಗೆ ಐಶಾರಾಮಿ ಕಾರನ್ನೂ ಸಹ ನೆಲ್ಸನ್​ಗೆ ಉಡುಗೊರೆಯನ್ನಾಗಿ ಕಲಾನಿಧಿ ಮಾರನ್ ನೀಡಿದ್ದಾರೆ. ಬಿಎಂಡಬ್ಲು, ಪೋರ್ಶೆ ಸೇರಿದಂತೆ ಇನ್ನೂ ಕೆಲವು ಐಶಾರಾಮಿ ಕಾರುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ನೆಲ್ಸನ್​ಗೆ ಅವಕಾಶ ನೀಡಿದ್ದರು ಕಲಾನಿಧಿ ಮಾರನ್. ಅಂತಿಮವಾಗಿ ಕಪ್ಪು ಬಣ್ಣದ ದುಬಾರಿ ಪೋರ್ಶೆ ಕಾರನ್ನು ಆರಿಸಿಕೊಂಡಿದ್ದಾರೆ. ಪ್ರಪಂಚದ ದುಬಾರಿ ಕಾರುಗಳಲ್ಲಿ ಇದು ಸಹ ಒಂದಾಗಿದೆ.

ನೆಲ್ಸನ್​ಗೆ ಕಾರು ಉಡುಗೊರೆ ಕೊಟ್ಟ ಕಲಾನಿಧಿ ಮಾರನ್

ಸಿನಿಮಾದಲ್ಲಿ ನಟಿಸಿರುವ ರಜನೀಕಾಂತ್, ನಿರ್ದೇಶಕ ನೆಲ್ಸನ್​ಗೆ ಉಡುಗೊರೆ ನೀಡಿರುವ ಕಲಾನಿಧಿ ಮಾರನ್, ಅದೇ ಸಿನಿಮಾದಲ್ಲಿ ನಟಿಸಿರುವ ಶಿವರಾಜ್ ಕುಮಾರ್, ಮೋಹನ್​ಲಾಲ್, ಸುನಿಲ್ ಅವರುಗಳಿಗೂ ಉಡುಗೊರೆ ನೀಡುತ್ತಾರಾ ಕಾದು ನೋಡಬೇಕಿದೆ. ಶಿವರಾಜ್ ಕುಮಾರ್ ಅವರ ಸಣ್ಣ ಅತಿಥಿ ಪಾತ್ರ ಭಾರಿ ಜನಮನ್ನಣೆಗೆ ಪಾತ್ರವಾಗಿದೆ.

‘ಜೈಲರ್’ ಸಿನಿಮಾ ಕೆಲವೇ ದಿನಗಳಲ್ಲಿ 625 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಕೇರಳ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಎಲ್ಲ ಭಾಷೆಗಳಲ್ಲಿಯೂ ಕನಿಷ್ಟ 50 ಕೋಟಿಗೂ ಹೆಚ್ಚು ಹಣ ಗಳಿಸಿದ ಕೆಲವೇ ಸಿನಿಮಾಗಳ ಪಟ್ಟಿಗೆ ‘ಜೈಲರ್’ ಸಹ ಸೇರಿಕೊಂಡಿದೆ. ನಿವೃತ್ತ ಜೈಲರ್ ಒಬ್ಬನ ಮಗನನ್ನು ವಿಲನ್ ಅಪಹರಣ ಮಾಡಿರುತ್ತಾನೆ, ಅವನನ್ನು ವಾಪಸ್ ಕರೆದುಕೊಂಡು ಬರಲು ಅಪ್ಪ, ತನ್ನ ಹಳೆಯ ಗೆಳೆಯರನ್ನು ಬಳಸಿಕೊಂಡು ಹೇಗೆ ವ್ಯೂಹ ಹೂಡುತ್ತಾನೆ ಎಂಬುದೇ ಸಿನಿಮಾದ ಕತೆ.

Published On - 3:31 pm, Sat, 2 September 23

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us