ತೆಲುಗು ಚಿತ್ರರಂಗದ ನಿರ್ದೇಶಕ ವಿವೇಕ್ ಆತ್ರೇಯ ಈಗ ದಕ್ಷಿಣ ಭಾರತದ ಇಬ್ಬರು ದಗ್ಗಜ ನಟರನ್ನು ಒಂದೇ ಪರದೆಯ ಮೇಲೆ ತರಲು ಭಾರಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಹೌದು, ನಂದಮೂರಿ ಬಾಲಕೃಷ್ಣ (Balayya) ಅವರ ಮುಂದಿನ ಚಿತ್ರಕ್ಕಾಗಿ ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಅವರನ್ನು ಕರೆತರಲು ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈ ಸುದ್ದಿ ಈಗ ಸಿನಿವಲಯದಲ್ಲಿ ಸಂಚಲನ ಮೂಡಿಸಿದೆ.
‘ಸರಿಪೋದಾ ಶನಿವಾರಂ’ ಚಿತ್ರದ ಯಶಸ್ಸಿನ ಬಳಿಕ ವಿವೇಕ್ ಆತ್ರೇಯ ಅವರು ಬಾಲಕೃಷ್ಣ ಅವರಿಗಾಗಿ ಔಟ್ ಅಂಡ್ ಔಟ್ ಮಾಸ್ ಎಂಟರ್ಟೈನರ್ ಕಥೆಯೊಂದನ್ನು ಸಿದ್ಧಪಡಿಸುತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರದಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಕಥೆಯ ಮತ್ತೊಂದು ಪ್ರಮುಖ ಪಾತ್ರಕ್ಕೆ ಅಷ್ಟೇ ತೂಕವಿರುವ ಬೇರೆ ನಟರೊಬ್ಬರನ್ನು ಹಾಕಿಕೊಳ್ಳಲು ನಿರ್ದೇಶಕರು ನಿರ್ಧರಿಸಿದ್ದಾರೆ. ಆ ಪ್ರಭಾವಿ ಪಾತ್ರಕ್ಕಾಗಿ ಈಗ ಮೋಹನ್ಲಾಲ್ ಅವರ ಹೆಸರನ್ನು ಪರಿಗಣಿಸಲಾಗಿದ್ದು, ಸದ್ಯದಲ್ಲೇ ಅವರಿಗೆ ಕಥೆ ಹೇಳಲು ಚಿತ್ರತಂಡ ಸಜ್ಜಾಗಿದೆ.
ಮೋಹನ್ಲಾಲ್ ಅವರಿಗೆ ಈಗಾಗಲೇ ತೆಲುಗಿನಲ್ಲಿ ಭಾರಿ ಜನಪ್ರಿಯತೆ ಇದೆ. ಈ ಹಿಂದೆ ಜೂನಿಯರ್ ಎನ್ಟಿಆರ್ ಅಭಿನಯದ ‘ಜನತಾ ಗ್ಯಾರೇಜ್’ ಚಿತ್ರದಲ್ಲಿ ಅವರು ಅದ್ಭುತವಾಗಿ ನಟಿಸಿದ್ದರು. ಇನ್ನು ವಿಶೇಷವೆಂದರೆ, ಸುಮಾರು ಮೂರು ದಶಕಗಳ ಹಿಂದೆ ಮೂಡಿಬಂದಿದ್ದ ‘ಗಾಂಡೀವಂ’ ಚಿತ್ರದ ಹಾಡಿನಲ್ಲಿ ಬಾಲಕೃಷ್ಣ ಮತ್ತು ಮೋಹನ್ಲಾಲ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ವಿವೇಕ್ ಆತ್ರೇಯ ಚಿತ್ರದಲ್ಲಿ ಇವರಿಬ್ಬರಿಗೂ ಪೂರ್ಣ ಪ್ರಮಾಣದ ಸ್ಕ್ರೀನ್ ಸ್ಪೇಸ್ ಸಿಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಜೈಲರ್ 2’ ಸಿನಿಮಾದಿಂದ ಬಾಲಯ್ಯ ಔಟ್? ವಿಜಯ್ ಸೇತುಪತಿಗೆ ದೊಡ್ಡ ಚಾನ್ಸ್
ಪ್ರಸ್ತುತ ಬಾಲಕೃಷ್ಣ ಅವರು ಗೋಪಿಚಂದ್ ಮಲಿನೇನಿ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಬಳಿಕ ಕೊರಟಾಲ ಶಿವ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇತ್ತ ನಿರ್ದೇಶಕ ವಿವೇಕ್, ರವಿತೇಜ ಅವರ ಜೊತೆ ಒಂದು ಸಿನಿಮಾ ಮುಗಿಸಿ ನಂತರ ಬಾಲಯ್ಯ ಪ್ರಾಜೆಕ್ಟ್ಗೆ ಕೈಹಾಕಲಿದ್ದಾರೆ. ಈ ಬಿಗ್ ಕಾಂಬಿನೇಷನ್ ಅಧಿಕೃತವಾಗಿ ಅನೌನ್ಸ್ ಆದಲ್ಲಿಅಭಿಮಾನಿಗಳಿಗೆ ಖುಷಿಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.