‘ಮೆಗಾ ಸ್ಟಾರ್​’ ಚಿರಂಜೀವಿಗೆ ದೆಹಲಿಯಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆ; ಬೇಕಿದೆ ಒಂದು ವಾರ ವಿಶ್ರಾಂತಿ

|

Updated on: Aug 16, 2023 | 3:19 PM

ನಟ ಚಿರಂಜೀವಿ ಅವರ ಆರೋಗ್ಯದ ಬಗ್ಗೆ ಗಾಸಿಪ್​ಗಳು ಕೇಳಿಬಂದಿದ್ದರಿಂದ ಅಭಿಮಾನಿಗಳು ಚಿಂತೆಗೆ ಒಳಗಾಗಿದ್ದರು. ಬೆಂಗಳೂರಿನಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು ಎಂದು ಕೂಡ ಹೇಳಲಾಗಿತ್ತು. ಆದರೆ ಈಗ ಅವರು ದೆಹಲಿಯಲ್ಲಿ ಆಪರೇಷನ್​ ಮಾಡಿಸಿಕೊಂಡಿರುವುದು ಖಚಿತವಾಗಿದೆ. ಸದ್ಯಕ್ಕೆ ಅಲ್ಲಿಯೇ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.

‘ಮೆಗಾ ಸ್ಟಾರ್​’ ಚಿರಂಜೀವಿಗೆ ದೆಹಲಿಯಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆ; ಬೇಕಿದೆ ಒಂದು ವಾರ ವಿಶ್ರಾಂತಿ
ಮೆಗಾಸ್ಟಾರ್​ ಚಿರಂಜೀವಿ
Follow us on

ಟಾಲಿವುಡ್​ನ ಖ್ಯಾತ ನಟ ‘ಮೆಗಾ ಸ್ಟಾರ್’ ಚಿರಂಜೀವಿ (Mega Star Chiranjeevi) ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್​ ಮಾಡಲಾಗಿದೆ. ಒಂದು ವಾರಗಳ ಕಾಲ ಅವರು ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಒಂದು ವಾರದ ನಂತರ ಹೈದರಾಬಾದ್‌ಗೆ ವಾಪಸ್​ ಬರಲಿದ್ದಾರೆ ಎಂದು ಸುದ್ದಿ ಆಗಿದೆ. ಚಿರಂಜೀವಿ ಅವರಿಗೆ ಆಗಾಗ ಮೊಣಕಾಲು ನೋವು (Knee Pain) ಕಾಣಿಸಿಕೊಳ್ಳುತ್ತಿತ್ತು. ಆ ಕಾರಣದಿಂದ ಅವರು ಪರೀಕ್ಷೆ ಮಾಡಿಸಿದ್ದರು. ನೋವು ನಿವಾರಣೆಗಾಗಿ ಅವರು ನೀ ವಾಶ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಮೊಣಕಾಲು ಚಿಪ್ಪಿನಲ್ಲಿ ಇರುವ ಸೋಂಕನ್ನು ನಿವಾರಿಸುವ ಸಲುವಾಗಿ ಈ ಶಸ್ತ್ರಚಿಕಿತ್ಸೆ (Knee Surgery) ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದಷ್ಟು ಬೇಗ ಅವರು ಮತ್ತೆ ಹೈದರಾಬಾದ್​ಗೆ ಮರಳಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ.

ಆಗಸ್ಟ್​ 11ರಂದು ಚಿರಂಜೀವಿ ನಟನೆಯ ‘ಭೋಲಾ ಶಂಕರ್​’ ಸಿನಿಮಾ ಬಿಡುಗಡೆ ಆಯಿತು. ಅದರ ಜೊತೆಗೆ ಕೆಲವು ಗಾಸಿಪ್​ ಹಬ್ಬಿತ್ತು. ಇತ್ತೀಚೆಗೆ ಚಿರಂಜೀವಿ ಅವರ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಕುರಿತಂತೆ ಅನೇಕ ಅಂತೆ-ಕಂತೆಗಳು ಹರಿದಾಡಿದ್ದವು. ನೆಚ್ಚಿನ ನಟನ ಆರೋಗ್ಯದ ಬಗ್ಗೆ ಗಾಸಿಪ್​ಗಳು ಕೇಳಿಬಂದಿದ್ದರಿಂದ ಅಭಿಮಾನಿಗಳು ಚಿಂತೆಗೆ ಒಳಗಾಗಿದ್ದರು. ಬೆಂಗಳೂರಿನಲ್ಲಿ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬಹುದು ಎಂದು ಕೂಡ ಹೇಳಲಾಗಿತ್ತು. ಆದರೆ ಈಗ ಅವರು ದೆಹಲಿಯಲ್ಲಿ ಆಪರೇಷನ್​ ಮಾಡಿಸಿಕೊಂಡಿರುವುದು ಖಚಿತವಾಗಿದೆ.

ಇದನ್ನೂ ಓದಿ: ಚಿರಂಜೀವಿ ವಿರುದ್ಧ ಸುಳ್ಳು ಆರೋಪ: ನಟ ರಾಜಶೇಖರ್, ಪತ್ನಿ ಜೀವಿತಾಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಇನ್ನು, ಸಿನಿಮಾದ ವಿಚಾರಕ್ಕೆ ಬರುವುದಾದರೆ ‘ಭೋಲಾ ಶಂಕರ್’ ಸಿನಿಮಾಗೆ ಮೆಹರ್ ರಮೇಶ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಹೀನಾಯವಾಗಿ ಸೋತಿದೆ. ಅಭಿಮಾನಿಗಳ ನಿರೀಕ್ಷೆಯನ್ನು ಈ ಚಿತ್ರ ಹುಸಿಗೊಳಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಮುಗ್ಗರಿಸಿದೆ. ಈ ಚಿತ್ರದಲ್ಲಿ ಯಾವುದೇ ಹೊಸತನ ಇಲ್ಲ ಎಂದು ವಿಮರ್ಶಕರು ಜರಿದಿದ್ದಾರೆ. ಅಲ್ಲದೇ, ‘ಜೈಲರ್’, ‘ಗದರ್​ 2’, ‘ಒಎಂಜಿ 2’ ಮುಂತಾದ ಸಿನಿಮಾಗಳ ಪೈಪೋಟಿ ಎದುರು ‘ಭೋಲಾ ಶಂಕರ್​’ ಚಿತ್ರ ಸೋತಿದೆ.

ಇದನ್ನೂ ಓದಿ: ಚಿರಂಜೀವಿ ತೊಟ್ಟ ಈ ವಾಚ್​​ನಲ್ಲಿ ಎರಡು ಐಷಾರಾಮಿ ಕಾರು ಖರೀದಿಸಬಹುದು

‘ಭೋಲಾ ಶಂಕರ್​’ ಸಿನಿಮಾ ಸೋತರೂ ಕೂಡ ನಿರ್ಮಾಪಕ ಉತ್ಸಾಹ ಕಡಿಮೆ ಆಗಿಲ್ಲ. ‘ಎಕೆ ಎಂಟರ್ಟೈನ್ಮೆಂಟ್ಸ್’ ಬ್ಯಾನರ್ ಅಡಿಯಲ್ಲಿ ತೆಲುಗಿನಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಹಿಂದಿಯಲ್ಲಿ ರಿಲೀಸ್​ ಮಾಡಲು ತಯಾರಿ ನಡೆದಿದೆ. ಆಗಸ್ಟ್ 25ರಂದು ಚಿತ್ರವು ಹಿಂದಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಈಗಾಗಲೇ ಹಿಂದಿ ಅವತರಣಿಕೆಯ ಟೀಸರ್ ಕೂಡ ಬಿಡುಗಡೆ ಆಗಿದೆ. ತಮನ್ನಾ ಭಾಟಿಯಾ, ಕೀರ್ತಿ ಸುರೇಶ್, ಸುಶಾಂತ್, ತರುಣ್ ಅರೋರಾ, ಮುರಳಿ ಶರ್ಮಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.