Akshay Kumar: ತಪ್ಪಿನಿಂದ ಬದಲಾವಣೆ ಕಂಡ ಅಕ್ಷಯ್ ಕುಮಾರ್; ಸತತ ಸೋಲಿನ ಬಳಿಕ ಬದಲಾದ ಸ್ಟಾರ್ ಹೀರೋ

|

Updated on: Jul 13, 2023 | 3:26 PM

Akshay Kumar Remuneration: ಕಳೆದ ವರ್ಷ ಅಕ್ಷಯ್ ಕುಮಾರ್​ ಅವರು ಪ್ರತಿ ಚಿತ್ರಕ್ಕೆ 75-100 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಬಹುತೇಕ ನಿರ್ಮಾಪಕರಿಗೆ ನಷ್ಟ ಉಂಟಾಗಿದೆ.

Akshay Kumar: ತಪ್ಪಿನಿಂದ ಬದಲಾವಣೆ ಕಂಡ ಅಕ್ಷಯ್ ಕುಮಾರ್; ಸತತ ಸೋಲಿನ ಬಳಿಕ ಬದಲಾದ ಸ್ಟಾರ್ ಹೀರೋ
ಅಕ್ಷಯ್​ ಕುಮಾರ್​
Follow us on

ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಸಿನಿಮಾ ಸೋತ ಬಗ್ಗೆ ಅವರು ಹೆಚ್ಚು ಬೇಸರ ಮಾಡಿಕೊಳ್ಳುವುದಿಲ್ಲ. ಸೋಲನ್ನು ಮರೆತು ಹೊಸ ಸಿನಿಮಾ ಬಗ್ಗೆ ಗಮನ ಹರಿಸುತ್ತಾರೆ. ಸಾಲು ಸಾಲು ಚಿತ್ರಗಳು ಸೋತ ಹೊರತಾಗಿಯೂ ಅಕ್ಷಯ್ ಕುಮಾರ್ ಅವರು ಸಂಭಾವನೆಯಲ್ಲಿ (Akshay Kumar Remuneration) ಇಳಿಕೆ ಮಾಡಿಕೊಂಡಿರಲಿಲ್ಲ. ಈಗ ಅವರು ಕೊನೆಗೂ ಪಾಠ ಕಲಿತಂತಿದೆ. ಅವರು ‘ಒಎಂಜಿ 2’ (OMG 2) ಚಿತ್ರಕ್ಕಾಗಿ ವೇತನ ಕಡಿತ ಮಾಡಿಕೊಂಡಿದ್ದಾರೆ. ಇದರಿಂದ ನಿರ್ಮಾಪಕರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಸ್ಟಾರ್​ ಹೀರೋಗಳ ಸಿನಿಮಾ ಗೆಲ್ಲುತ್ತಿದೆ ಎಂದರೆ ನಿರ್ಮಾಪಕರು ಹೆಚ್ಚು ಸಂಭಾವನೆ ಕೊಡಲು ರೆಡಿ ಇರುತ್ತಾರೆ. ಏಕೆಂದರೆ ಅದರಿಂದ ನಿರ್ಮಾಪಕರಿಗೆ ಮಿನಿಮಮ್ ಲಾಭ ಆಗುತ್ತದೆ. ಆದರೆ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲುತ್ತಿವೆ ಎಂದಾಗ ನಿರ್ಮಾಪಕರೂ ಯೋಚಿಸುತ್ತಾರೆ. ಆ ನಟನ ಜೊತೆ ಕೆಲಸ ಮಾಡಲು ಹಿಂಜರಿಯುತ್ತಾರೆ. ಅಕ್ಷಯ್ ಕುಮಾರ್ ವಿಚಾರದಲ್ಲೂ ಹಾಗೆಯೇ ಆಗಿದೆ. 2022ರಲ್ಲಿ ಅಕ್ಷಯ್ ಕುಮಾರ್ ನಟನೆಯ ಹಲವು ಸಿನಿಮಾಗಳು ರಿಲೀಸ್ ಆದವು. ‘ಸೂರ್ಯವಂಶಿ’ ಹೊರತುಪಡಿಸಿ ಮತ್ತಾವುದೇ ಸಿನಿಮಾ ಗೆದ್ದಿಲ್ಲ. ಕಳೆದ ವರ್ಷ ಪ್ರತಿ ಚಿತ್ರಕ್ಕೆ ಅಕ್ಷಯ್ 75-100 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಬಹುತೇಕ ನಿರ್ಮಾಪಕರಿಗೆ ನಷ್ಟ ಉಂಟಾಗಿದೆ. ಈ ಕಾರಣಕ್ಕೆ ಸ್ವ-ಇಚ್ಛೆಯಿಂದ ಅವರು ಸಂಭಾವನೆ ಕಡಿತ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ‘ಓಎಂಜಿ 2’ಗೆ ಸಂಕಷ್ಟ: ಪ್ರಮಾಣ ಪತ್ರ ನೀಡಲು ನಿರಾಕರಣೆ

‘ಒಎಂಜಿ’ ಸಿನಿಮಾ ಹಿಟ್ ಆಗಿತ್ತು. ಹೀಗಾಗಿ, ಇದರ ಸೀಕ್ವೆಲ್ ಮಾಡಲಾಗಿದೆ. ಮೊದಲ ಭಾಗ ಹಿಟ್ ಆದರೆ ಎರಡನೇ ಪಾರ್ಟ್ ಬಗ್ಗೆ ಹೆಚ್ಚು ನಿರೀಕ್ಷೆ ಇರುತ್ತದೆ. ಹೀಗಿದ್ದರೂ ಅಕ್ಷಯ್ ಅವರು ‘ಓಎಂಜಿ 2’ ಚಿತ್ರಕ್ಕೆ ಪಡೆದ ಸಂಭಾವನೆ 35 ಕೋಟಿ ರೂಪಾಯಿ ಎನ್ನಲಾಗಿದೆ. ಇದರಿಂದ ನಿರ್ಮಾಪಕರು ನಿಟ್ಟುಸಿರು ಬಿಟ್ಟಿದ್ದಾರೆ. ಆಸ್ತಿಕನ ಪಾತ್ರ ಮಾಡಿರುವ ಪಂಕಜ್ ತ್ರಿಪಾಠಿ ಅವರು 5 ಕೋಟಿ ರೂಪಾಯಿ ಹಾಗೂ ಯಾಮಿ ಗೌತಮ್ 2 ಕೋಟಿ ರೂಪಾಯಿ ಪಡೆದಿದ್ದಾರೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ನನ್ನ ಕೊಲ್ಲಲು ಯತ್ನಿಸಿದ್ದ, ನನ್ನ ಬಂಧನಕ್ಕೆ ಅವನೇ ಕಾರಣ: ಕೆಆರ್​ಕೆ ಆರೋಪ

ಅಕ್ಷಯ್ ಕುಮಾರ್ ನಟನೆಯ ‘ಒಎಂಜಿ 2’ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಇದರ ಜೊತೆಗೆ ಒಂದು ಸಂಕಷ್ಟವೂ ಎದುರಾಗಿದೆ. ಸಿನಿಮಾ ವೀಕ್ಷಣೆ ಮಾಡಿರುವ ಸೆನ್ಸಾರ್ ಮಂಡಳಿಯವರು ಪರಿಶೀಲನಾ ಸಮಿತಿಗೆ ಸಿನಿಮಾವನ್ನು ಕಳುಹಿಸಿದ್ದಾರೆ. ಅವರು ಈ ಚಿತ್ರದ ಬಗ್ಗೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ದೇವರ ವಿಚಾರದಲ್ಲಿ ಸಿನಿಮಾ ಮಾಡುವಾಗ ಸಾಕಷ್ಟು ಎಚ್ಚರಿಕೆ ಬೇಕು. ಸ್ವಲ್ಪ ಹೆಚ್ಚು ಕಡಿಮೆ ತೋರಿಸಿದರೂ ಜನರು ಪ್ರತಿಭಟನೆ ಮಾಡುತ್ತಾರೆ. ಈ ಕಾರಣಕ್ಕೆ ಸೆನ್ಸಾರ್ ಮಂಡಳಿಯವರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.