ಕಡಿಮೆ ಬಜೆಟ್​ನಲ್ಲಿ ಸಿನಿಮಾ ಮಾಡಲಿರುವ ‘ಅನಿಮಲ್​’ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ

‘ಅನಿಮಲ್​’ ಸಿನಿಮಾದ ಸಲುವಾಗಿ ಇಷ್ಟು ದಿನಗಳ ಕಾಲ ಸಂದೀಪ್​ ರೆಡ್ಡಿ ವಂಗಾ ಅವರು ಮುಂಬೈನಲ್ಲಿ ವಾಸವಾಗಿದ್ದರು. ಆದರೆ ಅವರು ಈಗ ಹೈದರಾಬಾದ್​ಗೆ ವಾಪಸ್​ ಬಂದಿದ್ದು, ಹೊಸ ಆಫೀಸ್​ ತೆರೆದಿದ್ದಾರೆ. ಪ್ರಭಾಸ್​ ಜೊತೆಗಿನ ಸಿನಿಮಾ ಹಾಗೂ ತಮ್ಮ ನಿರ್ಮಾಣದ ಚಿತ್ರಗಳ ಸಲುವಾಗಿ ಮುಂದಿನ ಎರಡು ವರ್ಷ ಅವರು ಈ ಆಫೀಸ್​ನಲ್ಲೇ ಕೆಲಸ ಮಾಡಲಿದ್ದಾರೆ.

ಕಡಿಮೆ ಬಜೆಟ್​ನಲ್ಲಿ ಸಿನಿಮಾ ಮಾಡಲಿರುವ ‘ಅನಿಮಲ್​’ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ
ಸಂದೀಪ್​ ರೆಡ್ಡಿ ವಂಗಾ

Updated on: Mar 28, 2024 | 2:55 PM

ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ (Sandeep Reddy Vanga) ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ‘ಕಬೀರ್​ ಸಿಂಗ್​’ ಹಾಗೂ ‘ಅನಿಮಲ್​’ (Animal) ಸಿನಿಮಾಗಳ ಯಶಸ್ಸಿನ ಬಳಿಕ ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಅವರನ್ನು ನಂಬಿಕೊಂಡು ನೂರಾರು ಕೋಟಿ ರೂಪಾಯಿ ಸುರಿಯಲು ನಿರ್ಮಾಪಕರು ಸಿದ್ಧವಾಗಿದ್ದಾರೆ. ಪ್ರಭಾಸ್​ (Prabhas) ನಟನೆಯ ಹೊಸ ಸಿನಿಮಾಗೆ ಸಂದೀಪ್​ ರೆಡ್ಡಿ ವಂಗಾ ನಿರ್ದೇಶನ ಮಾಡಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಈ ನಡುವೆ ಅವರು ನಿರ್ಮಾಣದಲ್ಲೂ ಆಸಕ್ತಿ ತೋರಿಸಿದ್ದಾರೆ. ವಿಶೇಷ ಏನೆಂದರೆ, ಕಡಿಮೆ ಬಜೆಟ್​ನ ಸಿನಿಮಾಗಳನ್ನು ಸಂದೀಪ್​ ರೆಡ್ಡಿ ವಂಗಾ ನಿರ್ಮಾಣ ಮಾಡಲಿದ್ದಾರೆ.

ಸಂದೀಪ್​ ರೆಡ್ಡಿ ವಂಗಾ ಅವರು ನಿರ್ಮಾಣದಲ್ಲೂ ಆಸಕ್ತಿ ಹೊಂದಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಅವರು ಕಡಿಮೆ ಬಜೆಟ್​ನ ಸಿನಿಮಾಗಳನ್ನು ನಿರ್ಮಾಣ ಮಾಡಲಿದ್ದಾರೆ. ಅವರ ತಂಡದವರು ಈಗ ಸ್ಕ್ರಿಪ್ಟ್​ ಆಯ್ಕೆಯಲ್ಲಿ ನಿರತರಾಗಿದ್ದಾರೆ. ಯಾವ ಕಥೆಯನ್ನು ಸಿನಿಮಾ ಮಾಡಬೇಕು ಎಂಬ ಅಂತಿಮ ನಿರ್ಧಾರವನ್ನು ಸಂದೀಪ್​ ರೆಡ್ಡಿ ವಂಗಾ ಅವರು ತೆಗೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: ಶಾರುಖ್​ ಖಾನ್​ ಜತೆ ಕಾಮಿಡಿ ಸಿನಿಮಾ ಮಾಡುವ ಹಂಬಲದಲ್ಲಿ ‘ಅನಿಮಲ್​’ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ

ಇಷ್ಟು ದಿನಗಳ ಕಾಲ ‘ಅನಿಮಲ್​’ ಸಿನಿಮಾದ ಸಲುವಾಗಿ ಸಂದೀಪ್​ ರೆಡ್ಡಿ ವಂಗಾ ಅವರು ಮುಂಬೈನಲ್ಲಿ ವಾಸವಾಗಿದ್ದರು. ಈಗ ಅವರು ಹೈದರಾಬಾದ್​ಗೆ ವಾಪಸ್​ ಬಂದಿದ್ದಾರೆ. ಹೈದರಾಬಾದ್​ನಲ್ಲಿ ಅವರು ಹೊಸ ಆಫೀಸ್​ ತೆರೆದಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಅವರು ಈ ಹೊಸ ಆಫೀಸ್​ನಲ್ಲೇ ಕೆಲಸ ಮಾಡಲಿದ್ದಾರೆ. ತಮ್ಮ ನಿರ್ಮಾಣದಲ್ಲಿ ಸಂದೀಪ್ ರೆಡ್ಡಿ ವಂಗ ಅವರು ಯಾವ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಚಿರಂಜೀವಿ ಭೇಟಿ ಮಾಡಿದ ‘ಅನಿಮಲ್​’ ನಿರ್ದೇಶಕ ಸಂದೀಪ್​ ರೆಡ್ಡಿ ವಂಗ; ಫೋಟೋ ವೈರಲ್​

ಸಂದೀಪ್​ ರೆಡ್ಡಿ ವಂಗಾ ಅವರು ಈವರೆಗೂ ನಿರ್ದೇಶಿಸಿರುವುದು ಮೂರು ಸಿನಿಮಾ (ಅರ್ಜುನ್​ ರೆಡ್ಡಿ, ಕಬೀರ್ ಸಿಂಗ್​, ಅನಿಮಲ್​) ಮಾತ್ರ. ಈ ಎಲ್ಲ ಸಿನಿಮಾಗಳು ಭಾರಿ ಟೀಕೆಗೆ ಒಳಗಾಗಿದ್ದವು. ಮಹಿಳಾ ವಿರೋಧಿ ಸಂಭಾಷಣೆ ಮತ್ತು ದೃಶ್ಯಗಳು ಇವೆ ಎಂಬ ಕಾರಣಕ್ಕೆ ಈ ಚಿತ್ರಗಳನ್ನು ಅನೇಕರು ಟೀಕಿಸಿದ್ದುಂಟು. ಆದರೆ ಅಂಥ ಟೀಕೆಗಳಿಗೆ ಸಂದೀಪ್ ರೆಡ್ಡಿ ವಂಗಾ ಅವರು ತಲೆ ಕೆಡಿಸಿಕೊಂಡಿಲ್ಲ. ಅವರ ಮುಂದಿನ ‘ಸ್ಪಿರಿಟ್​’ ಸಿನಿಮಾ ಹೇಗಿರಲಿದೆ ಎಂಬ ಕೌತುಕ ಎಲ್ಲರಲ್ಲೂ ಇದೆ. ಇತ್ತೀಚೆಗೆ ಸಂದೀಪ್​ ರೆಡ್ಡಿ ವಂಗಾ ಅವರು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮುಡಿಕೊಟ್ಟಿದ್ದರು. ಆಗ ‘ಸ್ಪಿರಿಟ್​’ ಬಗ್ಗೆ ಮಾತನಾಡಿದ್ದರು. ಈ ಚಿತ್ರದ ಕೆಲಸಗಳು ಆರಂಭ ಆಗಿವೆ ಎಂದು ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us