
ಈಗಿನ ಖ್ಯಾತ ನಟಿ ಅನನ್ಯಾ ಪಾಂಡೆ ಅವರ ತಂದೆ, ಒಂದು ಕಾಲದ ಸ್ಟಾರ್ ನಟ ಚಂಕಿ ಪಾಂಡೆ ವಿರುದ್ಧ 1987ರಲ್ಲೇ ನಿಷೇಧ ಹೇರಲಾಗಿತ್ತು. ಇಡೀ ಚಿತ್ರರಂಗ ಪ್ರತಿಭಟನೆ ಮಾಡುತ್ತಿದ್ದಾಗ ಚಂಕಿ ಪಾಂಡೆ, ಪೆಹ್ಲಾಜ್ ನಿಹಲಾನಿ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದರು. ಪ್ರತಿಭಟನೆ ಇದ್ದಾಗಿಯೂ ಬೆಂಗಳೂರು ಮತ್ತು ಊಟಿಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಹಾಗಾಗಿ ಚಂಕಿ ಮೇಲೆ ನಿಷೇಧ ಹೇರಲಾಗಿತ್ತು. ವಾರದ ಬಳಿಕ ಚಂಕಿ ಪಾಂಡೆ ಕ್ಷಮೆ ಕೇಳಿದರು. ನಿಷೇಧವನ್ನು ತೆರವು ಮಾಡಲಾಯ್ತು.

ಖ್ಯಾತ ಗಾಯಕ ಮತ್ತು ನಟ ದಿಲ್ಜೀತ್ ದೊಸ್ಸಾಂಜ್ ವಿರುದ್ಧ ಪರೋಕ್ಷ ನಿಷೇಧ ಹೇರಲಾಗಿತ್ತು. ದಿಲ್ಜೀತ್ ದೊಸ್ಸಾಂಜ್ ಅವರು ತಮ್ಮ ‘ಸರ್ದಾರ್ ಜಿ 3’ ಪಂಜಾಬಿ ಸಿನಿಮಾನಲ್ಲಿ ಪಾಕಿಸ್ತಾನಿ ನಟಿ ಹಾನಿಯಾ ಅಮೀರ್ ಅವರಿಗೆ ಅವಕಾಶ ನೀಡಿದ್ದರು. ಇದನ್ನು ವಿರೋಧಿಸಿ ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯನ್ ಸಿನಿ ಎಂಪ್ಲಾಯಿಸ್ ದಿಲ್ಜೀತ್ ವಿರುದ್ಧ ಅಸಹಕಾರ ಘೋಷಿಸಿತ್ತು. ‘ಬಾರ್ಡರ್ 2’ ಸಿನಿಮಾದಿಂದ ಅವರನ್ನು ಹೊರಗಿಡುವಂತೆ ಸಹ ಸನ್ನಿ ಡಿಯೋಲ್ ಮೇಲೆ ಒತ್ತಡ ತರಲಾಗಿತ್ತು. ಆದರೆ ಚಿತ್ರೀಕರಣ ಶುರುವಾಗಿದ್ದ ಕಾರಣ ಸನ್ನಿ ಡಿಯೋಲ್ ಸಂಧಾನ ನಡೆಸಿ ಎಲ್ಲವನ್ನೂ ತಿಳಿಗೊಳಿಸಿದರು.

ನಟಿ ಗೌಹರ್ ಖಾನ್ ವಿರುದ್ಧ ಕೆಲ ವರ್ಷಗಳ ಹಿಂದೆ ತಾತ್ಕಾಲಿಕ ಅಸಹಕಾರ ಘೋಷಿಸಲಾಗಿತ್ತು. ಕೋವಿಡ್ ಸಮಯದಲ್ಲಿ ಚಿತ್ರರಂಗದ ಒಕ್ಕೂಟಗಳು ಕೆಲ ನಿಯಮಗಳನ್ನು ಹೇರಿತ್ತು. ಆದರೆ ನಟಿ ಗೌಹರ್ ಖಾನ್ ಆ ನಿಯಮಗಳನ್ನು ಮುರಿದು, ಕೋವಿಡ್ ಪಾಸಿಟಿವ್ ಆಗಿದ್ದಾಗಿಯೂ ಚಿತ್ರೀಕರಣದಲ್ಲಿ ಭಾಗವಹಿಸಿದ್ದರಿಂದ ಅವರ ವಿರುದ್ಧ ತಾತ್ಕಾಲಿಕ ಅಸಹಕಾರ ಘೋಷಿಸಲಾಗಿತ್ತು.

ಖ್ಯಾತ ಗಾಯಕ ಮಿಕ್ಕಾ ಸಿಂಗ್ ವಿರುದ್ಧ ಫೆರಡೇಷನ್ ನಿಷೇಧ ಘೋಷಿಸಿತ್ತು. ಮಿಕ್ಕಾ ಸಿಂಗ್ ಅವರು ವರ್ಷಗಳ ಹಿಂದೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಮದುವೆಯೊಂದರಲ್ಲಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಇದೇ ಕಾರಣಕ್ಕೆ ಅವರ ವಿರುದ್ಧ ನಿಷೇಧ ಹೇರಲಾಗಿತ್ತು. ಬಳಿಕ ಅವರೂ ಸಹ ಕ್ಷಮೆ ಕೇಳಿದರು, ಪರಿಸ್ಥಿತಿ ತಿಳಿಯಾಯ್ತು.

‘ಡಾನ್ 3’ ಸಿನಿಮಾನಲ್ಲಿ ನಟಿಸಲು ಒಪ್ಪಂದ ಮಾಡಿಕೊಂಡು, ಚಿತ್ರೀಕರಣ ಶುರುವಾಗುವ ವೇಳೆ ಒಪ್ಪಂದ ಮುರಿದಿದ್ದು ಮಾತ್ರವಲ್ಲದೆ, ನಿರ್ಮಾಪಕರಿಗೆ ಆಗಿರುವ ನಷ್ಟವನ್ನು ತುಂಬಿ ಕೊಡಲು ನಿರಾಖರಿಸಿದ ಕಾರಣ ಸ್ಟಾರ್ ನಟ ರಣ್ವೀರ್ ಸಿಂಗ್ ವಿರುದ್ಧ ಇದೀಗ ಸಿನಿಮಾ ನೌಕರರ ಒಕ್ಕೂಟ ಅಸಹಕಾರ ಘೊಷಣೆ ಮಾಡಿದೆ.