‘ಹಿಂದಿ ಚಿತ್ರರಂಗದವರಿಗೆ ಎಥಿಕ್ಸ್​ನ ಕೊರತೆ ಇದೆ’; ಚರ್ಚೆ ಹುಟ್ಟುಹಾಕಿದ ಕಾಜಲ್ ಅಗರ್​ವಾಲ್ ಹೇಳಿಕೆ

ಸಿಂಗಮ್​’ ಮೊದಲಾದ ಹಿಂದಿ ಚಿತ್ರಗಳಲ್ಲಿ ಕಾಜಲ್ ನಟಿಸಿದ್ದಾರೆ. ಸದ್ಯ ‘ಉಮಾ’ ಹೆಸರಿನ ಹಿಂದಿ ಚಿತ್ರ ಅವರ ಕೈಯಲ್ಲಿದೆ. ಆದಾಗ್ಯೂ ಅವರು ಬೋಲ್ಡ್ ಹೇಳಿಕೆ ನೀಡಿದ್ದಾರೆ.

‘ಹಿಂದಿ ಚಿತ್ರರಂಗದವರಿಗೆ ಎಥಿಕ್ಸ್​ನ ಕೊರತೆ ಇದೆ’; ಚರ್ಚೆ ಹುಟ್ಟುಹಾಕಿದ ಕಾಜಲ್ ಅಗರ್​ವಾಲ್ ಹೇಳಿಕೆ
ಕಾಜಲ್

Updated on: Apr 01, 2023 | 8:02 AM

ನಟಿ ಕಾಜಲ್ ಅಗರ್​ವಾಲ್ (Kajal Aggarwal) ಅವರು ಸದಾ ವಿವಾದದಿಂದ ದೂರ ಉಳಿಯೋಕೆ ಪ್ರಯತ್ನಿಸುತ್ತಾರೆ. ಟ್ರೋಲ್​ಗಳ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಈಗ ಕಾಜಲ್ ಅಗರ್​ವಾಲ್ ಅವರು ನೀಡಿರೋ ಹೇಳಿಕೆ ಸಾಕಷ್ಟು ಚರ್ಚೆಹುಟ್ಟು ಹಾಕಿದೆ. ಬಾಲಿವುಡ್ (Bollywood) ಚಿತ್ರರಂಗದಲ್ಲಿ ಕಾಜಲ್ ಗುರುತಿಸಿಕೊಂಡಿದ್ದಾರೆ. ಹೀಗಿದ್ದರೂ ಅಲ್ಲಿನವರಿಗೆ ಎಥಿಕ್ಸ್​ನ ಕೊರತೆ ಇದೆ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ. ಇದಕ್ಕೆ ಬಾಲಿವುಡ್​ನ ಕೆಲವರು ಅಪಸ್ವರ ತೆಗೆದಿದ್ದಾರೆ. ಈ ಹೇಳಿಕೆಯಿಂದ ಕಾಜಲ್ ಅಗರ್​ವಾಲ್​ಗೆ ಹಿಂದಿಯಿಂದ ಬರುವ ಆಫರ್​ಗಳು ಕೈತಪ್ಪಿದರೂ ಅಚ್ಚರಿ ಏನಿಲ್ಲ.

ಕಾಜಲ್ ಅಗರ್​ವಾಲ್ ಅವರು ಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹಿಂದಿ ಚಿತ್ರರಂಗದ ಮೂಲಕ. ‘ಕ್ಯೂ ಹೋ ಗಯಾ ನಾ’ ಅವರ ಮೊದಲ ಚಿತ್ರ. ಈ ಸಿನಿಮಾದಲ್ಲಿ ಐಶ್ವರ್ಯಾ ರೈ ಅವರ ಸಹೋದರಿಯ ಪಾತ್ರವನ್ನು ಮಾಡಿದ್ದರು ಕಾಜಲ್. ಈ ಚಿತ್ರದಲ್ಲಿ ಅವರದ್ದು ಅತಿಥಿ ಪಾತ್ರ ಆಗಿತ್ತು. ಬಳಿಕ ‘ಸಿಂಗಮ್​’ ಮೊದಲಾದ ಹಿಂದಿ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಸದ್ಯ ‘ಉಮಾ’ ಹೆಸರಿನ ಹಿಂದಿ ಚಿತ್ರ ಅವರ ಕೈಯಲ್ಲಿದೆ. ಆದಾಗ್ಯೂ ಅವರು ಬೋಲ್ಡ್ ಹೇಳಿಕೆ ನೀಡಿದ್ದಾರೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಫೋಟೋಶೂಟ್ ಮಾಡಿಸಿದ ಕಾಜಲ್ ಅಗರ್​ವಾಲ್​; ಇಲ್ಲಿವೆ ಚಿತ್ರಗಳು

ನ್ಯೂಸ್​18 ಇಂಗ್ಲಿಷ್ ನಡೆಸಿದ ‘ರೈಸಿಂಗ್ ಇಂಡಿಯಾ ರಿಯಲ್ ಹೀರೋಸ್’ ವೇದಿಕೆ ಮೇಲೆ ಕಾಜಲ್ ಮಾತನಾಡಿದ್ದಾರೆ. ‘ದಕ್ಷಿಣ ಸಿನಿಮಾ ಇಂಡಸ್ಟ್ರಿಯ ನೈತಿಕತೆ, ಶಿಸ್ತು ನನಗೆ ಇಷ್ಟವಾಗುತ್ತದೆ. ಹಿಂದಿ ಚಿತ್ರರಂಗದಲ್ಲಿ ಅದರ ಕೊರತೆಯಿದೆ ಎಂದು ನನಗೆ ಅನಿಸುತ್ತದೆ’ ಎಂದಿದ್ದಾರೆ ಕಾಜಲ್ ಅಗರ್​ವಾಲ್. ಬಾಲಿವುಡ್​-ದಕ್ಷಿಣ ಭಾರತ ಎಂಬ ಚರ್ಚೆ ಜೋರಾಗಿರುವಾಗಲೇ ಕಾಜಲ್ ನೀಡಿದ ಈ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

‘ಕಾಜಲ್ ಅಗರ್​ವಾಲ್​ ನಿಜವಾದ ಕ್ವೀನ್. ಇದನ್ನು ವೇದಿಕೆ ಮೇಲೆ ಹೇಳೋಕೆ ಧೈರ್ಯ ಬೇಕು’ ಎಂದು ಅನೇಕರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಕಾಜಲ್ ಅಗರ್​ವಾಲ್ ಅವರ ವಿರುದ್ಧ ಕ್ಯಾತೆ ತೆಗೆದಿದ್ದಾರೆ. ‘ಬಾಲಿವುಡ್​ನಲ್ಲಿ ನಟಿಸಿ ಈ ರೀತಿ ಹೇಳೋದು ಸರಿ ಅಲ್ಲ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಜಲ್ ಅಗರ್​ವಾಲ್​ ಅವರು ಸದ್ಯ ‘ಇಂಡಿಯನ್ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಕಮಲ್ ಹಾಸನ್ ಹೀರೋ. ಈ ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us