ನಟನೆ, ನಿರ್ದೇಶನ, ನಿರ್ಮಾಣದ ಬಳಿಕ ಸಂಗೀತ ಸಂಯೋಜನೆ ಮಾಡ್ತಾರಾ ಕಂಗನಾ? ನೆಟ್ಟಿಗರಿಗೆ ಮೂಡಿದೆ ಗುಮಾನಿ

‘ಎಮರ್ಜೆನ್ಸಿ’ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸ ನಡೆಯುತ್ತಿದೆ. ಜಿ.ವಿ. ಪ್ರಕಾಶ್​ ಅವರ ಸಂಗೀತ ನಿರ್ದೇಶನದಲ್ಲಿ ಕಂಗನಾ ರಣಾವತ್​ ಹಸ್ತಕ್ಷೇಪ ಮಾಡಬಹುದು ಎಂಬುದು ಕೆಲವರ ಅನಿಸಿಕೆ.

ನಟನೆ, ನಿರ್ದೇಶನ, ನಿರ್ಮಾಣದ ಬಳಿಕ ಸಂಗೀತ ಸಂಯೋಜನೆ ಮಾಡ್ತಾರಾ ಕಂಗನಾ? ನೆಟ್ಟಿಗರಿಗೆ ಮೂಡಿದೆ ಗುಮಾನಿ
ಕಂಗನಾ

Updated on: Apr 26, 2023 | 7:30 AM

ಬೇರೆ ನಟಿಯರಿಗಿಂತ ಕಂಗನಾ ರಣಾವತ್​ (Kangana Ranaut) ಅವರು ಕೊಂಚ ಡಿಫರೆಂಟ್​. ಕ್ಯಾಮೆರಾ ಮುಂದೆ ಕೇವಲ ಗ್ಲಾಮರಸ್​ ಆಗಿ ಕಾಣಿಸಿಕೊಂಡು ಸುಮ್ಮನಾಗುವ ನಟಿ ಅವರಲ್ಲ. ಸಿನಿಮಾದ ಎಲ್ಲ ವಿಭಾಗಗಳಲ್ಲೂ ಅವರು ತೊಡಗಿಕೊಳ್ಳುತ್ತಾರೆ. ನಟನೆ ಮಾತ್ರವಲ್ಲದೇ ಅವರು ನಿರ್ದೇಶನದಲ್ಲೂ ಆಸಕ್ತಿ ಹೊಂದಿ​ದ್ದಾರೆ. ಅವರ ನಿರ್ದೇಶನದಲ್ಲಿ ‘ಎಮರ್ಜೆನ್ಸಿ’ ಸಿನಿಮಾ (Emergency Movie) ಮೂಡಿಬರುತ್ತಿದೆ. ಈ ಚಿತ್ರದ ನಿರ್ಮಾಣದಲ್ಲಿ ಅವರು ಪಾಲುದಾರಿಕೆ ಹೊಂದಿ​ದ್ದಾರೆ. ಹಾಗಾಗಿ ಅವರು ನಿರ್ಮಾಪಕಿ ಕೂಡ ಹೌದು. ಈ ಸಿನಿಮಾವನ್ನು ನಿರ್ಮಾಣ ಮಾಡಲು ಅವರು ಆಸ್ತಿ ಅಡವಿಟ್ಟಿರುವ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಈಗ ಅವರು ಸಂಗೀತ ಸಂಯೋಜನೆ ವಿಭಾಗದಲ್ಲೂ ಮೂಗು ತೂರಿಸುತ್ತಿದ್ದಾರಾ ಎಂಬ ಗುಮಾನಿ ಮೂಡಿದೆ. ಅದಕ್ಕೆ ಕಾರಣ ಆಗಿರುವುದ ಒಂದು ವಿಡಿಯೋ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಎಮರ್ಜೆನ್ಸಿ’ ಸಿನಿಮಾಗೆ ಜಿ.ವಿ. ಪ್ರಕಾಶ್​ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಕಂಗನಾ ರಣಾವತ್​ ಅವರು ಜಿ.ವಿ. ಪ್ರಕಾಶ್​ ಜೊತೆ ಇರುವ ವಿಡಿಯೋವನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಸಂಗೀತ ನಿರ್ದೇಶಕನ ಪ್ರತಿಭೆಯನ್ನು ಅವರು ಹೊಗಳಿದ್ದರು. ಅದನ್ನು ನೋಡಿದ ನೆಟ್ಟಿಗರಿಗೆ ಬೇರೆ ಗುಮಾನಿ ಮೂಡಿದೆ.

ಇದನ್ನೂ ಓದಿ: ಕಂಗನಾ ರಣಾವತ್​-ಕರಣ್​ ಜೋಹರ್​ ನಡುವಿನ ಜಗಳ ಜೋರಾಯ್ತು; ಪರೋಕ್ಷವಾಗಿ ಕುಟುಕಿದ ನಿರ್ಮಾಪಕ

ಜಿ.ವಿ. ಪ್ರಕಾಶ್​ ಅವರ ಸಂಗೀತ ಸಂಯೋಜನೆಯ ಕೆಲಸದಲ್ಲಿ ಕಂಗನಾ ಅವರು ಮೂಗು ತೂರಿಸಬಹುದು ಎಂಬುದು ಕೆಲವರ ಅನಿಸಿಕೆ. ಯಾಕೆಂದರೆ ಈ ಹಿಂದೆ ‘ಮಣಿಕರ್ಣಿಕ’ ಸಿನಿಮಾದಲ್ಲಿ ಕಂಗನಾ ಅವರು ನಿರ್ದೇಶಕನ ಸ್ಥಾನವನ್ನು ಆಕ್ರಮಿಸಿಕೊಂಡಿದ್ದರು. ಅದೇ ರೀತಿ ಅವರು ‘ಎಮರ್ಜೆನ್ಸಿ’ ಚಿತ್ರದ ಮ್ಯೂಸಿಕ್​ ವಿಭಾಗದಲ್ಲೂ ಏನಾದರೂ ಹಸ್ತಕ್ಷೇಪ ಮಾಡುತ್ತಿದ್ದಾರಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಮೂವೀ ಮಾಫಿಯಾ ವಿಚಾರ ಬಂದ್ರೆ ನೀವೆಲ್ಲ ಸೈಲೆಂಟ್ ಆಗ್ತೀರಿ’; ಮತ್ತೆ ಸಿಟ್ಟಾದ ಕಂಗನಾ ರಣಾವತ್

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಆಧರಿಸಿ ‘ಎಮರ್ಜೆನ್ಸಿ’ ಸಿನಿಮಾ ಸಿದ್ಧವಾಗುತ್ತಿದೆ. ಆ ಕಾಲಘಟ್ಟದಲ್ಲಿ ಭಾರತದ ರಾಜಕೀಯದಲ್ಲಿ ಬದಲಾವಣೆ ತರಲು ಕಾರಣರಾದ ಅನೇಕ ನಾಯಕರ ಪಾತ್ರಗಳು ಈ ಸಿನಿಮಾದಲ್ಲಿ ಹೈಲೈಟ್​ ಆಗಲಿವೆ. ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಂಗನಾ ರಣಾವತ್​ ನಟಿಸಿದ್ದಾರೆ. ಈ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ.

ಈ ಸಿನಿಮಾದಲ್ಲಿ ಶ್ರೇಯಸ್​ ತಲ್ಪಡೆ, ಅನುಪಮ್​ ಖೇರ್​, ಮಿಲಿಂದ್​ ಸೋಮನ್​, ಸತೀಶ್​ ಕೌಶಿಕ್​, ಮಹಿಮಾ ಚೌಧರಿ ಮುಂತಾದವರು ನಟಿಸುತ್ತಿದ್ದಾರೆ. ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್​ ಅವರ ಲುಕ್​ ನೋಡಿದಾಗ ಎಲ್ಲರಿಗೂ ಅಚ್ಚರಿ ಆಗಿತ್ತು. ಆದಷ್ಟು ಬೇಗ ಈ ಚಿತ್ರ ಬಿಡುಗಡೆ ಆಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us