ಸಿಸಿಎಲ್: ಸೆಮಿಫೈನಲ್​ನಲ್ಲಿ ಚೆನ್ನೈ ವಿರುದ್ಧ ಮುಗ್ಗರಿಸಿದ ಸುದೀಪ್ ತಂಡ

|

Updated on: Mar 02, 2025 | 8:48 AM

CCL 2025: ಸೆಲೆಬ್ರಿಟಿ ಕ್ರಿಕೆಟ್ ಲೀಗ್​ 2025ರ ಸೆಮಿಫೈನಲ್ ಪಂದ್ಯ ನಿನ್ನೆ ಮೈಸೂರಿನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮತ್ತು ಚೆನ್ನೈ ರೈನೋಸ್ ನಡುವೆ ನಡೆಯಿತು. ಲೀಗ್ ಹಂತದಲ್ಲಿ ಚೆನ್ನೈ ತಂಡವನ್ನು ಸುಲಭವಾಗಿ ಮಣಿಸಿದ್ದ ಕರ್ನಾಟಕ ತಂಡ ಪಂದ್ಯ ಗೆಲ್ಲುವ ಫೇವರೇಟ್ ಆಗಿತ್ತು. ಆದರೆ ಪಂದ್ಯದಲ್ಲಿ ಆಗಿದ್ದೇ ಬೇರೆ.

ಸಿಸಿಎಲ್: ಸೆಮಿಫೈನಲ್​ನಲ್ಲಿ ಚೆನ್ನೈ ವಿರುದ್ಧ ಮುಗ್ಗರಿಸಿದ ಸುದೀಪ್ ತಂಡ
Ccl 2025
Follow us on

ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ ಸೆಮಿಫೈನಲ್ ಪಂದ್ಯ ನಿನ್ನೆ (ಮಾರ್ಚ್ 01) ಮೈಸೂರಿನಲ್ಲಿ ನಡೆದಿದ್ದು, ಕರ್ನಾಟಕ ಬುಲ್ಡೋಜರ್ಸ್​ ಮತ್ತು ಚೆನ್ನೈ ರೈನೋಸ್ ತಂಡಗಳು ಪರಸ್ಪರ ಮುಖಾಮುಖಿ ಆದವು. ಸಹಜವಾಗಿಯೇ ಅತ್ಯುತ್ತಮ ಫಾರಂನಲ್ಲಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡವೇ ಗೆಲ್ಲುವ ಫೇವರೇಟ್ ಆಗಿತ್ತು. ಮೈಸೂರಿನಲ್ಲಿ ಮೊದಲ ಬಾರಿಗೆ ಸಿಸಿಎಲ್ ಪಂದ್ಯ ನಡೆಯುತ್ತಿದ್ದ ಕಾರಣ ಭಾರಿ ಸಂಖ್ಯೆಯ ಜನ ಆಗಮಿಸಿ ಕರ್ನಾಟಕ ತಂಡಕ್ಕೆ ಬೆಂಬಲ ನೀಡುತ್ತಿದ್ದರು. ಆದರೆ ಕರ್ನಾಟಕ ತಂಡ ಚೆನ್ನೈ ವಿರುದ್ಧ ಹೀನಾಯ ಸೋಲು ಕಂಡಿತು. ಆ ಮೂಲಕ ಸೆಮಿಫೈನಲ್ ಹಂತದಲ್ಲಿ ಟೂರ್ನಿಯಿಂದ ಹೊರಬಿತ್ತು.

ಲೀಗ್ ಹಂತದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಬಹಳ ಸುಲಭವಾಗಿ ಚೆನ್ನೈ ರೈನೋಸರ್ಸ್ ತಂಡವನ್ನು ಸೋಲಿಸಿತ್ತು. ಹಾಗಾಗಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಚೆನ್ನೈ ತಂಡವನ್ನು ಸುಲಭವಾಗಿ ಮಣಿಸಿ ಪ್ರವೇಶ ಮಾಡುವ ನಿರೀಕ್ಷೆ ಇತ್ತು. ಅಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು ಎದುರಿಸುವ ನಿರೀಕ್ಷೆ ಇತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ಹೀನಾಯ ಸೋಲನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ಕಂಡಿದೆ. ಈ ಸೋಲಿನ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ ಟೂರ್ನಿಯಿಂದ ಹೊರ ಬಿದ್ದಿದೆ.

ಇದನ್ನೂ ಓದಿ:ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು

ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ತಂಡ 10 ಓವರ್​ಗಳಲ್ಲಿ 111 ರನ್ ಕಲೆ ಹಾಕಿತು. ಚೇಸ್ ಮಾಡಿದ ಚೆನ್ನೈ ತಂಡ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 10 ಓವರ್​ಗೆ 105 ರನ್ ಗಳಿಸಿತು. ಎರಡನೇ ಇನ್ನಿಂಗ್ಸ್​ನಲ್ಲಿ ಕರ್ನಾಟಕ ತಂಡ 123 ರನ್ ಕಲೆ ಹಾಕಿತು. ಅಲ್ಲಿಗೆ ಚೆನ್ನೈ ತಂಡಕ್ಕೆ ಗೆಲ್ಲಲು 10 ಓವರ್​ನಲ್ಲಿ 129 ರನ್​ಗಳ ಅವಶ್ಯಕತೆ ಇತ್ತು. ಚೆನ್ನೈ ತಂಡದವರು ಬಹಳ ಸುಲಭವಾಗಿ ಈ ಗುರಿ ತಲುಪಿಬಿಟ್ಟರು.

ಪಂದ್ಯ ಸೋಲಲು ಕರ್ನಾಟಕ ತಂಡದ ಕಳಪೆ ಬೌಲಿಂಗ್ ಪ್ರಮುಖ ಕಾರಣ. ರಾಜೀವ್, ಡಾರ್ಲಿಂಗ್ ಕೃಷ್ಣ, ಸುನಿಲ್, ಚಂದನ್ ಸೇರಿದಂತೆ ಬೌಲಿಂಗ್ ಮಾಡಿದ ಎಲ್ಲರೂ ಸಹ ದುಬಾರಿಯಾದರು. ಇನ್ನೂ ಮೂರು ಚೆಂಡು ಉಳಿದಿರುವಂತೆಯೇ ಕೇವಲ ಮೂರು ವಿಕೆಟ್ ಕಳೆದುಕೊಂಡು ಚೇಸ್ ಮಾಡಿ ಗೆದ್ದು ಬೀಗಿತು ಚೆನ್ನೈ ತಂಡ. 129 ರನ್​ಗಳ ಉತ್ತಮ ಟಾರ್ಗೆಟ್ ಅನ್ನು ಕರ್ನಾಟಕ ತಂಡ ಉಳಿಸಿಕೊಳ್ಳಲು ಆಗಲಿಲ್ಲ. ನಿರಾಸೆ ಅನುಭವಿಸಿ ಟೂರ್ನಿಯಿಂದ ಹೊರಗೆ ಹೋಗಬೇಕಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ