ರಣ್ವೀರ್ ನಿಷೇಧ ಪ್ರಕರಣ: ಒಕ್ಕೂಟಗಳ ನಡುವೆ ಶುರುವಾಯ್ತು ಜಗಳ

Ranveer Singh: ‘ಡಾನ್ 3’ ಸಿನಿಮಾದ ಒಪ್ಪಂದ ಮುರಿದು ನಿರ್ಮಾಪಕರಿಗೆ ಆಗಿರುವ ನಷ್ಟವನ್ನು ತುಂಬಿಕೊಡಲು ನಿರಾಕರಿಸಿದ್ದಕ್ಕಾಗಿ ರಣ್ವೀರ್ ವಿರುದ್ಧ ಈ ನಿಷೇಧ ಹೇರಲಾಗಿದೆ. ಆದರೆ ಇದೀಗ ರಣ್ವೀರ್ ಬೆಂಬಲಕ್ಕೆ ಸಿನಿಮಾ ಮತ್ತು ಟಿವಿ ನಟರ ಒಕ್ಕೂಟ ಬಂದಿದ್ದು, ರಣ್ವೀರ್ ಪರವಾಗಿ ನಾವು ನಿಲ್ಲುತ್ತೇವೆ’ ಎಂದಿದ್ದಾರೆ. ಇದೀಗ ಈ ಪ್ರಕರಣ ಎರಡು ಪ್ರಬಲ ಒಕ್ಕೂಟಗಳ ನಡುವಿನ ಯುದ್ಧವಾಗಿ ಮಾರ್ಪಾಟಾಗಿದೆ.

ರಣ್ವೀರ್ ನಿಷೇಧ ಪ್ರಕರಣ: ಒಕ್ಕೂಟಗಳ ನಡುವೆ ಶುರುವಾಯ್ತು ಜಗಳ
Ranveer Singh

Updated on: May 30, 2026 | 3:07 PM

ಬಾಲಿವುಡ್​​ನ ಸ್ಟಾರ್ ನಟ ರಣ್ವೀರ್ ಸಿಂಗ್ (Ranveer Singh) ಮೇಲೆ ಸಿನಿಮಾ ನೌಕರರ ಒಕ್ಕೂಟ (FWICE) ಅನಧಿಕೃತ ನಿಷೇಧ ಘೋಷಿಸಿದ್ದು, ರಣ್ವೀರ್ ಸಿಂಗ್ ಕೆಲಸ ಮಾಡುವ ಸಿನಿಮಾನಲ್ಲಿ ತಮ್ಮ ಒಕ್ಕೂಟದ ಯಾವುದೇ ನಟರು, ತಂತ್ರಜ್ಞರು, ಇತರೆ ಕಾರ್ಮಿಕರು ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ‘ಡಾನ್ 3’ ಸಿನಿಮಾದ ಒಪ್ಪಂದ ಮುರಿದು ನಿರ್ಮಾಪಕರಿಗೆ ಆಗಿರುವ ನಷ್ಟವನ್ನು ತುಂಬಿಕೊಡಲು ನಿರಾಕರಿಸಿದ್ದಕ್ಕಾಗಿ ರಣ್ವೀರ್ ವಿರುದ್ಧ ಈ ನಿಷೇಧ ಹೇರಲಾಗಿದೆ. ಆದರೆ ಇದೀಗ ರಣ್ವೀರ್ ಬೆಂಬಲಕ್ಕೆ ಸಿನಿಮಾ ಮತ್ತು ಟಿವಿ ನಟರ ಒಕ್ಕೂಟ ಬಂದಿದ್ದು, ರಣ್ವೀರ್ ಪರವಾಗಿ ನಾವು ನಿಲ್ಲುತ್ತೇವೆ’ ಎಂದಿದ್ದಾರೆ. ಇದೀಗ ಈ ಪ್ರಕರಣ ಎರಡು ಪ್ರಬಲ ಒಕ್ಕೂಟಗಳ ನಡುವಿನ ಯುದ್ಧವಾಗಿ ಮಾರ್ಪಾಟಾಗಿದೆ.

ಸಿನಿ ಆಂಡ್ ಟಿವಿ ಆರ್ಟಿಸ್ಟ್ ಅಸೋಸಿಯೇಷನ್ (CINTAA) ಇದೀಗ ನಟ ರಣ್ವೀರ್ ಸಿಂಗ್​​ಗೆ ಬೆಂಬಲ ಘೋಷಿಸಿದ್ದು, ಸಿನಿ ನೌಕರರ ಒಕ್ಕೂಟ ಘೋಷಿಸಿರುವ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದೆ. ರಣ್ವೀರ್ ಸಿಂಗ್ ಅವರು ಸಿಂಟಾ (CINTAA)ನ ಸದಸ್ಯರಾಗಿದ್ದು, ಇದೇ ಕಾರಣಕ್ಕೆ ಇಂದು (ಮೇ 30) ಪತ್ರಿಕಾಗೋಷ್ಠಿ ನಡೆಸಿರುವ ಸಿಂಟಾದ ಉಪಾಧ್ಯಕ್ಷೆ ಪದ್ಮಿನಿ ಕೊಲ್ಲಾಪುರಿ, ರಣ್ವೀರ್ ಸಿಂಗ್ ಮೇಲೆ ಹೇರಲಾಗಿರುವ ನಿಷೇಧವನ್ನು ವಿರೋಧಿಸಿದ್ದಲ್ಲದೆ, ರಣ್ವೀರ್ ಪರವಾಗಿ ಮುಂದಿನ ದಿನಗಳಲ್ಲಿ ತಮ್ಮ ಸಂಘ ನಿಲ್ಲುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ:ರಣ್ವೀರ್ ಸಿಂಗ್​​ಗೆ ಮುಂಚೆ ಬಾಲಿವುಡ್​​ನಲ್ಲಿ ನಿಷೇಧಕ್ಕೊಳಗಾಗಿದ್ದ ನಟರಿವರು

‘ರಣವೀರ್ ಸಿಂಗ್ ಅವರು ನಮ್ಮ ಸಿಂಟಾ (CINTAA) ಸಂಘದ ಸದಸ್ಯರಾಗಿ ಇರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಅವರಿಗೆ ನಮ್ಮ ಅಗತ್ಯವಿದ್ದಾಗಲೆಲ್ಲಾ ನಾವು ಅವರ ಪರವಾಗಿ ಮತ್ತು ಅವರ ಬೆಂಬಲವಾಗಿ ನಿಲ್ಲುತ್ತೇವೆ. ಈ ಪ್ರಕರಣ ಈಗಾಗಲೇ ಕಾನೂನು ಪ್ರಕ್ರಿಯೆಯ ಅಡಿಯಲ್ಲಿದೆ, ಆದ್ದರಿಂದ ನಾನು ಇದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ನಾವು ಈ ವಿವಾದದಲ್ಲಿ ರಣ್ವೀರ್ ಅವರ ಬೆಂಬಲವಾಗಿ ನಿಲ್ಲುತ್ತೇವೆಂದು ಘೋಷಿಸುತ್ತಿದ್ದೇವೆ. ಅವರಿಗೆ ಎಂದಾದರೂ ನಮ್ಮ ಅಗತ್ಯವಿದ್ದರೆ, ನಾವು ರಣವೀರ್ ಸಿಂಗ್ ಪರವಾಗಿದ್ದೇವೆ’ ಎಂದಿದ್ದಾರೆ. ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಅನು ಮಲ್ಲಿಕ್ ಸಹ ಉಪಾಧ್ಯಕ್ಷೆ ಪದ್ಮಿನಿ ಕೊಲ್ಲಾಪುರಿ ಅವರೊಟ್ಟಿಗಿದ್ದರು.

ರಣ್ವೀರ್ ಸಿಂಗ್ ಅವರು ಫರ್ಹಾನ್ ಅಖ್ತರ್ ನಿರ್ದೇಶಿಸಿ, ನಿರ್ಮಾಣ ಮಾಡಲಿದ್ದ ‘ಡಾನ್ 3’ ಸಿನಿಮಾನಲ್ಲಿ ನಟಿಸುವುದಾಗಿ ಒಪ್ಪಿಕೊಂಡಿದ್ದರು. ಆದರೆ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಯಶಸ್ಸಿನ ಬಳಿಕ ‘ಡಾನ್ 3’ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದು ಹಿಂದೆ ಸರಿದರು. ಆದರೆ ಸಿನಿಮಾದ ಚಿತ್ರೀಕರಣ ಮಾಡಲು ನಿರ್ಮಾಪಕರು ಸಜ್ಜಾಗಿಬಿಟ್ಟಿದ್ದರು. ಕೊನೆಯ ಹಂತದಲ್ಲಿ ಒಪ್ಪಂದ ಮುರಿದ ಕಾರಣ 45 ಕೋಟಿ ರೂಪಾಯಿ ಹಣವನ್ನು ನಷ್ಟಪರಿಹಾರವಾಗಿ ನೀಡುವಂತೆ ಫರ್ಹಾನ್ ಅಖ್ತರ್ ಕೇಳಿದರು. ಆದರೆ ರಣ್ವೀರ್ ಸಿಂಗ್ ಇದಕ್ಕೆ ಒಪ್ಪಲಿಲ್ಲ. ಕೊನೆಗೆ ಫರ್ಹಾನ್ ಅಖ್ತರ್ ಪ್ರಕರಣವನ್ನು ಸಿನಿಮಾ ನೌಕರರ ಒಕ್ಕೂಟ (FWICE)ಕ್ಕೆ ಕೊಂಡೊಯ್ದು ದೂರು ನೀಡಿದರು. ಅಲ್ಲಿ ವಿಚಾರಣೆ ನಡೆದು ರಣ್ವೀರ್ ವಿರುದ್ಧ ಅನಧಿಕೃತ ನಿಷೇಧ ಹೇರಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us