‘ವಿಜಯ್ ಅತ್ಯಂತ ಸಮರ್ಥ ಮುಖ್ಯಮಂತ್ರಿ’: ಮುಕ್ತಕಂಠದಿಂದ ಹೊಗಳಿದ ನಟ ವಿಶಾಲ್

ನಟ ದಳಪತಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆದ ಬಳಿಕ ಚಿತ್ರರಂಗದ ಮನವಿಗೆ ಕೂಡಲೇ ಸ್ಪಂದಿಸಿದ್ದಾರೆ. ಅದಕ್ಕಾಗಿ ಸೆಲೆಬ್ರಿಟಿಗಳು ಅವರಿಗೆ ಧನ್ಯವಾದ ತಿಳಿಸುತ್ತಿದ್ದಾರೆ. ಹೊಸ ಸಿನಿಮಾಗಳು ಮೊದಲ ವಾರದಲ್ಲಿ ಪ್ರತಿ ದಿನ 5 ಪ್ರದರ್ಶನಗಳನ್ನು ಕಾಣಲು ವಿಜಯ್ ಅವರು ಅನುಮತಿ ನೀಡಿದ್ದಕ್ಕೆ ವಿಶಾಲ್ ಕೃತಜ್ಞತೆ ಸಲ್ಲಿಸಿದ್ದಾರೆ.

‘ವಿಜಯ್ ಅತ್ಯಂತ ಸಮರ್ಥ ಮುಖ್ಯಮಂತ್ರಿ’: ಮುಕ್ತಕಂಠದಿಂದ ಹೊಗಳಿದ ನಟ ವಿಶಾಲ್
Vishal, CM Vijay

Updated on: May 26, 2026 | 3:59 PM

ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ಸಿ. ಜೋಸೆಫ್ ವಿಜಯ್ (CM Vijay) ಅವರು ತಮಿಳು ಚಿತ್ರರಂಗದ ನೆರವಿಗಾಗಿ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದಾರೆ. ಚಿತ್ರರಂಗದಲ್ಲಿ ಎದುರಾಗಿರುವ ಪ್ರಸ್ತುತ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಚಿತ್ರೋದ್ಯಮಿಗಳು ಇತ್ತೀಚೆಗಷ್ಟೇ ಸಿಎಂ ಅವರಿಗೆ ಕೆಲವು ಮನವಿಗಳನ್ನು ಸಲ್ಲಿಸಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಇನ್ಮುಂದೆ ರಾಜ್ಯದಲ್ಲಿ ಹೊಸದಾಗಿ ಬಿಡುಗಡೆಯಾಗುವ ಸಿನಿಮಾಗಳಿಗೆ ಮೊದಲ ವಾರದಲ್ಲಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಚಿತ್ರಮಂದಿರಗಳಿಗೆ ಅನುಮತಿ ನೀಡಿದ್ದಾರೆ. ದಳಪತಿ ವಿಜಯ್ ಅವರ ಈ ಮಹತ್ವದ ನಿರ್ಧಾರವನ್ನು ಕಾಲಿವುಡ್ ನಟ ವಿಶಾಲ್ (Vishal) ಮುಕ್ತಕಂಠದಿಂದ ಶ್ಲಾಘಿಸಿದ್ದು, ವಿಜಯ್ ಅವರನ್ನು ‘ಅತ್ಯಂತ ಸಮರ್ಥ ನಟ, ರಾಜಕಾರಣಿ’ ಎಂದು ಬಣ್ಣಿಸಿದ್ದಾರೆ.

ಮುಖ್ಯಮಂತ್ರಿಗಳ ನಿರ್ಧಾರದ ಬೆನ್ನಲ್ಲೇ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ನಟ ವಿಶಾಲ್, ‘ನಮ್ಮ ಪ್ರೀತಿಯ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೇ, ಜನಸಾಮಾನ್ಯರ ನೆಚ್ಚಿನ ನಾಯಕ ಹಾಗೂ ರಾಜಕೀಯಕ್ಕೆ ಬಂದ ಅತ್ಯಂತ ಪ್ರಭಾವಶಾಲಿ ನಟರಾದ ನಿಮಗೆ ಧನ್ಯವಾದಗಳು. ಚಿತ್ರರಂಗದ ಸದ್ಯದ ಕಷ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಹೊಸ ಚಿತ್ರಗಳು ಬಿಡುಗಡೆಯಾದ ಮೊದಲ 7 ದಿನಗಳವರೆಗೆ ದಿನಕ್ಕೆ 5 ಪ್ರದರ್ಶನಗಳನ್ನು ಮಾಡಲು ಅನುಮತಿ ಜಾರಿಗೊಳಿಸಿದ್ದಕ್ಕಾಗಿ ಕೃತಜ್ಞತೆಗಳು’ ಎಂದು ಬರೆದುಕೊಂಡಿದ್ದಾರೆ.

ನಟ ವಿಶಾಲ್ ಪೋಸ್ಟ್:

ಅಲ್ಲದೆ, ‘ಮುಂದಿನ ದಿನಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ವಲಯಗಳಲ್ಲೂ ಇಂತಹ ಹಲವು ಸರ್ಕಾರಿ ಆದೇಶಗಳು ಹೊರಬೀಳಲಿ. ಆ ಮೂಲಕ ಪ್ರಗತಿಪರ ಬೆಳವಣಿಗೆಯಾಗಲಿ ಎಂದು ಎದುರು ನೋಡುತ್ತಿದ್ದೇನೆ. ನಮ್ಮ ಇಡೀ ಚಿತ್ರರಂಗದ ಪರವಾಗಿ ನಿಮಗೆ ದೊಡ್ಡ ಶಿಳ್ಳೆ’ ಎಂದು ವಿಶಾಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮುಖ್ಯಮಂತ್ರಿ ವಿಜಯ್ ಅವರ ಅಧಿಕೃತ ‘ಎಕ್ಸ್’ ಖಾತೆಯಿಂದ ಈ ಕುರಿತು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಲಾಗಿದೆ. ‘ಚಲನಚಿತ್ರ ರಂಗದ ಗಣ್ಯರು ಏಪ್ರಿಲ್ 16ರಂದು ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿ. ಜೋಸೆಫ್ ವಿಜಯ್ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಮಂಡಿಸಿದ್ದರು. ಅವುಗಳಲ್ಲಿ ಪ್ರಮುಖವಾಗಿ, ತಮಿಳುನಾಡಿನಾದ್ಯಂತ ಚಿತ್ರಮಂದಿರಗಳಲ್ಲಿ ಎಲ್ಲಾ ಸಿನಿಮಾಗಳಿಗೆ ದಿನಕ್ಕೆ ಐದು ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡಬೇಕೆಂದು ಕೋರಿದ್ದರು’ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆ ಇಟ್ಟ ನಟ ಕಮಲ್ ಹಾಸನ್; ಏನದು?

‘ಚಿತ್ರರಂಗದ ಈ ಮನವಿಯನ್ನು ಪರಿಗಣಿಸಿದ ತಮಿಳುನಾಡು ಮುಖ್ಯಮಂತ್ರಿಗಳು, ‘ತಮಿಳುನಾಡು ಸಿನಿಮಾ ಥಿಯೇಟರ್ಸ್ (ರೆಗ್ಯುಲೇಶನ್) ನಿಯಮಾವಳಿ’ಗೆ ತಿದ್ದುಪಡಿ ತಂದಿದ್ದಾರೆ. ಇದರ ಪ್ರಕಾರ, ತಮಿಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲಿ ಹೊಸದಾಗಿ ಬಿಡುಗಡೆಯಾಗುವ ತಮಿಳು ಸಿನಿಮಾಗಳಿಗೆ ಬಿಡುಗಡೆಯಾದ ದಿನದಿಂದ ಏಳು ದಿನಗಳವರೆಗೆ ಪ್ರತಿದಿನ ಐದು ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಇದರೊಂದಿಗೆ ಸ್ಥಳೀಯ ಹಬ್ಬ ಹರಿದಿನಗಳು, ಸಾರ್ವಜನಿಕ ರಜಾದಿನಗಳು, ಶನಿವಾರ ಮತ್ತು ಭಾನುವಾರಗಳಲ್ಲೂ ದಿನಕ್ಕೆ 5 ಪ್ರದರ್ಶನಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:57 pm, Tue, 26 May 26

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us