ತುಳು ಸಿನಿಮಾದಲ್ಲಿ ಕಾಮಿಡಿಯನ್ಸ್ ಫಸ್ಟ್, ಹೀರೋ ನೆಕ್ಸ್ಟ್; ಯಾಕೆ?

|

Updated on: Apr 08, 2024 | 11:52 AM

ಕನ್ನಡದಲ್ಲಿ ಹೀರೋ ಫಸ್ಟ್, ಕಾಮಿಡಿಯನ್ಸ್ ನೆಕ್ಸ್ಟ್​. ಆದರೆ, ತುಳು ಸಿನಿಮಾದಲ್ಲಿ ಕಾಮಿಡಿಯನ್ಸ್ ಫಸ್ಟ್​, ಹೀರೋ ನೆಕ್ಸ್ಟ್. ಇದು ಯಾಕೆ ಹೀಗೆ? ಸಿನಿಮಾ ಆರಂಭದಿಂದ ಮುಕ್ತಾಯದ ವರೆಗೆ ಜನರನ್ನು ಹಾಸ್ಯದಲ್ಲೇ ತೇಲಾಡಿಸಲು ಮಾಡುವ ತಯಾರಿಗಳೇನು? ಈ ಬಗ್ಗೆ ತುಳು ಸಿನಿಮಾದ ನಿರ್ದೇಶಕ ಮತ್ತು ನಟ ವಿಜಯ್ ಕುಮಾರ್ ಕೊಡಿಯಾಲ್​ಬೈಲ್ ಅವರ ಸಂದರ್ಶನ ಇಲ್ಲಿದೆ.

ತುಳು ಸಿನಿಮಾದಲ್ಲಿ ಕಾಮಿಡಿಯನ್ಸ್ ಫಸ್ಟ್, ಹೀರೋ ನೆಕ್ಸ್ಟ್; ಯಾಕೆ?
ತುಳು ಸಿನಿಮಾದಲ್ಲಿ ಕಾಮಿಡಿಯನ್ಸ್ ಫಸ್ಟ್, ಹೀರೋ ನೆಕ್ಸ್ಟ್; ಯಾಕೆ ಎಂಬುದರ ಬಗ್ಗೆ ವಿಜಯ್ ಕುಮಾರ್ ಕೊಡಿಯಾಲ್​ಬೈಲ್ ಸಂದರ್ಶನ
Follow us on

ಕರಾವಳಿಗೆ ಸೀಮಿತವಾಗಿರುವ ತುಳು ಸಿನಿಮಾಗಳು ಸದ್ಯ ರಾಜ್ಯದಲ್ಲಿ ಮಾತ್ರವಲ್ಲದೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದು ಮಾಡಲು ಆರಂಭಿಸಿವೆ. ಆದರೆ, ತುಳು ಸಿನಿಮಾ ಒಂದು ರೀತಿ ಡಿಫರೆಂಟ್ ಕಣ್ರೀ.. ಸಾಮಾನ್ಯವಾಗಿ ಕನ್ನಡ ಅಥವಾ ಬೇರೆ ಯಾವುದೇ ಭಾಷೆಗಳಲ್ಲಿನ ಸಿನಿಮಾಗಳನ್ನು ನೋಡಿದರೆ ಹೀರೋ ಫಸ್ಟ್, ಇತರರು ನೆಕ್ಸ್ಟ್​. ಆದರೆ, ತುಳು ಸಿನಿಮಾದಲ್ಲಿ ಕಾಮಿಡಿಯನ್ಸ್ ಫಸ್ಟ್, ಹೀರೋ ನೆಕ್ಸ್ಟ್. ಇದು ಯಾಕೆ ಹೀಗೆ ಎಂಬುದನ್ನು ತಿಳಿಯೋಣ.

ಭಾರತದಲ್ಲಿ ರಂಗಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ನಾಟಕಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ನಾಟಕ ಕ್ಷೇತ್ರದಲ್ಲಿ ಕಲಾವಿದರು ಪಾತ್ರಕ್ಕೆ ತಕ್ಕಂತೆ ಬಣ್ಣ ಹಚ್ಚಿ ಅಭಿನಯಿಸಿ ಪ್ರೇಕ್ಷಕರನ್ನು ಮನರಂಜಿಸುತ್ತಾರೆ. ಇಂತಹ ನಾಟಕ ರಂಗ ಸಿನಿಮಾ ರಂಗಕ್ಕೆ ಅನೇಕ ನಟರನ್ನು ನೀಡಿದೆ ಎಂಬ ವಿಚಾರ ಎಲ್ಲರಿಗೂ ತಿಳಿದೆ. ಡಾ.ರಾಜ್​ಕುಮಾರ್ ಅವರು ಕನ್ನಡ ಸಿನಿಮಾಗಳಲ್ಲಿ ಖ್ಯಾತಿ ಪಡೆದು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಆದರೆ, ಇವರು ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ರಂಗಭೂಮಿಯ ಮೇರುನಟರಾಗಿ ಗುರುತಿಸಿಕೊಂಡಿದ್ದರು. ಹೀಗೆ ಅನೇಕ ನಟರು ನಾಟಕಗಳಲ್ಲಿ ಅಭಿನಯಿಸಿ ಸಿನಿಮಾ ಕ್ಷೇತ್ರಗಳಲ್ಲೂ ನಟಿಸಿ ಮಿಂಚಿದ್ದಾರೆ.

ಅದೇ ರೀತಿ ಕರ್ನಾಟಕದಲ್ಲಿರುವ ಮತ್ತೊಂದು ಸಿನಿಮಾ ರಂಗ ಕೋಸ್ಟಲ್​ವುಡ್​ನಲ್ಲೂ (ತುಳು ಸಿನಿಮಾ) ಬಹುತೇಕ ನಟರು ನಾಟಕ ರಂಗದಲ್ಲಿ ಪಳಗಿದವರಾಗಿದ್ದಾರೆ. ಆದರೆ, ಸ್ಯಾಂಡಲ್​ವುಡ್, ಬಾಲಿವುಡ್, ಟಾಲಿವುಡ್​ ಸಿನಿಮಾಗಳಲ್ಲಿ ಹೀರೋಗೆ ಹೆಚ್ಚು ಪ್ರಾಮುಖ್ಯತೆ ನೀಡಿದಂತೆ ತುಳು ಸಿನಿಮಾಗಳಲ್ಲಿ ಹೀರೋಗಳಿಗೆ ಪ್ರಾಮುಖ್ಯತೆ ಇರುವುದಿಲ್ಲ. ಯಾಕೆ ಎಂಬುದರ ಬಗ್ಗೆ ಅನೇಕ ನಾಟಕಗಳಿಗೆ ಸಾಹಿತ್ಯ ಮತ್ತು ಸಂಭಾಷಣೆ ಬರೆದಿರುವ ನಿರ್ದೇಶಕ, ನಟ ವಿಜಯ್ ಕುಮಾರ್ ಕೊಡಿಯಾಲ್​ಬೈಲ್ ಅವರು ಟಿವಿ9 ಪ್ರೀಮಿಯಂ ನ್ಯೂಸ್ ಆ್ಯಪ್​ಗೆ ತಿಳಿಸಿದ್ದಾರೆ.

ಅದೇ ರೀತಿ, 1971 ರಲ್ಲಿ ತುಳುನಾಡಿನಲ್ಲಿ ಕೋಸ್ಟಲ್​ವುಡ್​ ಹುಟ್ಟುಕೊಂಡಿದ್ದರೂ ನಾಟಕ ರಂಗದ ನಂಟನ್ನು ಬಿಟ್ಟಿಲ್ಲ. ಅಂದರೆ, ಇತರೆ ಭಾಗಗಳಲ್ಲಿ ಇರುವಂತೆ ಕರಾವಳಿ ಭಾಗದಲ್ಲೂ ನಾಟಕ ರಂಗದ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದಾರೆ. ಆದರೆ, ಕರಾವಳಿ ಭಾಗದ ಜನರು ಹೆಚ್ಚು ಹಾಸ್ಯವನ್ನು ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಹಾಸ್ಯವನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾಗಳನ್ನು ಮಾಡತೊಡಗಿದರು ಎಂದು ವಿಜಯ್ ಕುಮಾರ್ ಕೊಡಿಯಾಲ್​ಬೈಲ್ ಹೇಳಿದ್ದಾರೆ.

ಇದೇ ಕಾರಣಕ್ಕೆ ತುಳು ಸಿನಿಮಾಗಳಲ್ಲಿ ಹೀರೋಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿಲ್ಲ. ಬದಲಾಗಿದೆ ಹಾಸ್ಯ ಪಾತ್ರಗಳನ್ನೇ ಪ್ರಮುಖವಾಗಿರಿಸಿಕೊಂಡು ಸಿನಿಮಾಗಳನ್ನು ಮಾಡಿಕೊಂಡು ಬರಲಾಗುತ್ತಿದೆ.

ಹಾಸ್ಯ ಪ್ರಧಾನವಾಗಿ ಮೂಡಿಬರುವ ತುಳು ಸಿನಿಮಾಗಳನ್ನು ಕನ್ನಡ ಸೇರಿದಂತೆ ಇತರೆ ಭಾಷೆಗಳ ಸಿನಿಮಾಗಳಂತೆ ಹೀರೋ ಪ್ರಧಾನ ಸಿನಿಮಾಗಳನ್ನು ಮಾಡುವ ಆಸೆಯೂ ತುಳು ಚಿತ್ರರಂಗಕ್ಕಿದೆ. ಆದರೆ, ಪ್ರಸ್ತುತ ಹಾಸ್ಯಗಳಿಂದಲೇ ಸಿನಿಮಾಗಳು ಹಿಟ್ ಆಗುತ್ತಿರುವುದರಿಂದ “ಹೀರೋ ಪ್ರಧಾನ ಸಿನಿಮಾ ಮಾಡಿ ಕೈಸುಟ್ಟುಕೊಳ್ಳುವ ಸ್ಥಿತಿ ಬಂದರೆ ಏನು ಮಾಡುವುದು?” ಎಂಬ ಭೀತಿಯೂ ತುಳು ಚಿತ್ರರಂಗಕ್ಕಿದೆ.

“ಹೀರೋ ಪ್ರಧಾನ ತುಳು ಸಿನಿಮಾಗಳನ್ನು ಮಾಡುವ ಆಸಕ್ತಿ ಇದ್ದರೂ ಸಿನಿಮಾ ಫ್ಲಾಪ್ ಆಗುವ ಭೀತಿಯಿಂದ ಯಾರು ಕೂಡ ಹೀರೋಗಳನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾಗಳನ್ನು ಮಾಡಲು ಮುಂದಾಗುತ್ತಿಲ್ಲ. ಯಾರಾದರೊಬ್ಬರು ಹೀರೋ ಪ್ರಧಾನ ಸಿನಿಮಾ ಮಾಡಿ ಹಿಟ್ ಆದರೆ ಬಳಿಕ ಎಲ್ಲರೂ ಹೀರೋ ಪ್ರಧಾನ ಸಿನಿಮಾಗಳನ್ನು ಮಾಡುವ ಸಾಧ್ಯತೆ ಇದೆ” ಎಂದು ವಿಜಯ್ ಕುಮಾರ್ ಕೊಡಿಯಾಲ್​ಬೈಲ್ ಹೇಳುತ್ತಾರೆ.

“ತುಳು ಸಿನಿಮಾನದಲ್ಲಿ ನಾನು ಹೀರೋ ಪ್ರಧಾನವಾಗಿಸಿಕೊಂಡು ಸಿನಿಮಾವನ್ನು ಮಾಡಲು ಹೊರಟಿದ್ದೇನೆ. ಇದೊಂದು ಸವಾಲು ಹಾಗೂ ಸಾಹಸ ಕೂಡ ಹೌದು. ಒಂದೊಮ್ಮೆ ತುಳು ಸಿನಿಮಾದಲ್ಲಿ ಹೀರೋ ಪ್ರಧಾನ ಸಿನಿಮಾಗಳು ಸಕ್ಸಸ್ ಆದರೆ ಮುಂದೆ ಹಲವು ಸಿನಿಮಾಗಳು ಹೀರೋ ಪ್ರಧಾನವಾಗಿ ಬರಬಹುದು” -ಕಿಶೋರ್ ಕುಮಾರ್ ಕೊಡಿಯಾಲ್​ಬೈಲ್

ಸದ್ಯ, ತುಳು ಸಿನಿಮಾದ ದಿಗ್ಗಜರಾಗಿರುವ (ಹಾಸ್ಯ ನಟರು) ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ಕುಸಲ್ದ ಅರಸ ನವೀನ್ ಡಿ ಪಡಿಲ್, ನವರಸ ರಾಜ ಭೋಜರಾಜ್ ವಾಮಂಜೂರ್, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ತುಳು ಸಿನಿಮಾಗಳಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.

ಬಹುಭಾಷಾ ನಟರಾಗಿ ಹೊರಹೊಮ್ಮಿದ ತುಳು ಸಿನಿಮಾದ ದಿಗ್ಗಜರು

ತುಳು ಸಿನಿಮಾಗಳಲ್ಲಿ ದಿಗ್ಗಜರಾಗಿರುವ ಅರವಿಂದ ಬೋಳಾರ್, ನವೀನ್ ಡಿ ಪಡಿಲ್, ಭೋಜರಾಜ್ ವಾಮಂಜೂರ್, ದೇವದಾಸ್ ಕಾಪಿಕಾಡ್ ಅವರು ಸದ್ಯ ಬಹುಭಾಷಾ ನಟರಾಗಿ ಹೊರಹೊಮ್ಮುತ್ತಿದ್ದಾರೆ ಎಂದೇ ಹೇಳಬಹುದು. ಹೌದು, ದಕ್ಷಿಣ ಭಾರತದಲ್ಲಿ ಕರಾವಳಿ ಭಾಗದಲ್ಲಿ ಮಾತ್ರ ಬಳಕೆಯಲ್ಲಿರುವ ತುಳು ಭಾಷೆಯ ಸಿನಿಮಾದ ಮೇಲೆ ಕನ್ನಡ ಸಿನಿಮಾ ಮಾತ್ರವಲ್ಲದೆ, ನೆರೆಯ ರಾಜ್ಯ ಕೇರಳದ ಮಲಯಾಳಂ ಸಿನಿಮಾ ರಂಗ ಕೂಡ ಕಣ್ಣಿಟ್ಟಿದೆ. ಹಾಸ್ಯ ದಿಗ್ಗಜರ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಗುತ್ತಿದೆ.

ತುಳು ಸಿನಿ ರಂಗದ ದಿಗ್ಗಜರ ಹಾಸ್ಯಕ್ಕೆ ಫಿದಾ ಆಗಿರುವ ಸ್ಯಾಂಡಲ್​ವುಡ್ ನಾಲ್ವರಿಗೆ ಕನ್ನಡ ಸಿನಿಮಾಗಳಲ್ಲಿ ಅವಕಾಶಗಳನ್ನು ನೀಡಿದೆ. ಅರವಿಂದ್ ಬೋಳಾರ್ ಅವರು ‘ಚೆಲ್ಲಾ ಪಿಲ್ಲಿ’, ‘ಪುರುಷೋತ್ತಮನ ಪ್ರಸಂಗ’, ‘ರಂಗೋಲು’, ‘ಬದ್ರಿ vs ಮಧುಮತಿ’, ‘ಪೆನ್ಸಿಲ್ ಬಾಕ್ಸ್’ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ನವೀನ್ ಡಿ ಪಡೀಲ್ ಅವರು ‘ಜರಾಸಂಧ’, ‘ಹ್ಯಾಪಿ ಜರ್ನಿ’, ‘ಅನಂತು vs ನುಸ್ರತ್’ ಎಂಬ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು, ‘ವಿಧೇಯನ್’ ಎಂಬ ಮಲಯಾಳಂ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. ಅಲ್ಲದೆ, ‘ಮಜಾ ಟಾಕಿಸ್’​ ಎಂಬ ಕಾಮಿಡಿ ಶೋದಲ್ಲಿ ಹಾಸ್ಯಗಾರರಾಗಿ ಕಾಣಿಸಿಕೊಂಡಿದ್ದಾರೆ.

ಭೋಜರಾಜ್ ವಾಮಂಜೂರ್ ಅವರು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ‘ಪೆನ್ಸಿಲ್ ಬಾಕ್ಸ್’, ‘ಡಿಕೆ ಬೋಸ್’, ‘ಪುರುಷೋತ್ತಮನ ಪ್ರಸಂಗ’ ಸಿನಿಮಾಗಳಲ್ಲಿ ಪಾತ್ರಗಳನ್ನು ಮಾಡಿದ್ದಾರೆ. ಅದೇ ರೀತಿ, ದೇವದಾಸ್ ಕಾಪಿಕಾಡ್ ಅವರು, ನಟ ರಮೇಶ್ ಅರವಿಂದ್ ಅಭಿನಯದ ‘ವೆಂಕಟ ಇನ್ ಸಂಕಟ’, ‘ನಾವೆಲ್ರೂ ಹಾಫ್ ಬಾಯ್ಲ್ಡ್’ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೆ, ‘ಪುರುಷೋತ್ತಮನ ಪ್ರಸಂಗ’ ಎಂಬ ಕನ್ನಡ ಸಿನಿಮಾವನ್ನು ಇವರು ನಿರ್ದೇಶಿಸಿದ್ದು, ಚಿತ್ರಕಥೆ, ಸಂಭಾಷಣೆಯೂ ಇವರದ್ದೇ. ಈ ಚಿತ್ರಕ್ಕೆ ದೇವದಾಸ್ ಕಾಪಿಕಾಡ್ ಅವರ ಮಗ, ತುಳು ನಟ ಅರ್ಜುನ್ ಕಾಪಿಕಾಡ್ ಅವರು ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಹಾಗಂತ, ತುಳು ಸಿನಿಮಾದ ಹೀರೋಗಳಿಗೆ ಬೇಡಿಕೆ ಇಲ್ಲ ಎಂದಲ್ಲ. ತುಳು ಹೀರೋಗಳಿಗೆ ಬೇರೆ ಭಾಷೆಗಳಲ್ಲಿ ಅವಕಾಶಗಳು ಬಂದಿವೆ. 2020ರಲ್ಲಿ ತೆರೆಕಂಡ ‘ದಿಯಾ’ ಎಂಬ ಸೂಪರ್ ಹಿಟ್ ಕನ್ನಡ ಸಿನಿಮಾದಲ್ಲಿ ತುಳು ನಟ ಪೃಥ್ವಿ ಅಂಬಾರ್ ಅವರು ಆದಿ ಎಂಬ ಹೆಸರಿನಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಲ್ಲದೆ, ‘ಡಿಕೆ ಬಾಸ್’, ‘ಬೈರಾಗಿ’, ‘ಸಕ್ಕರೆರಹಿತ’, ‘ದೂರದರ್ಶನ’, ‘ಪೆಂಟಗಾನ್’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ‘ಆತ್ಮೀಯ ದಿಯಾ’ ಎಂಬ ಹಿಂದಿ ಸಿನಿಮಾದಲ್ಲಿ ಆದಿ ಪಾತ್ರದಲ್ಲಿ ಪೃಥ್ವಿ ನಟಿಸಿದ್ದು, ಇದು ಇವರ ಮೊದಲ ಹಿಂದಿ ಸಿನಿಮಾವೂ ಆಗಿದೆ. ಮರಾಠಿ ಭಾಷೆಯ ‘ಸೀರೆ’ ಎಂಬ ಸಿನಿಮಾದಲ್ಲೂ ಆದಿ ಪಾತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ‘ರಾಧಾ ಕಲ್ಯಾಣ’, ‘ಸಾಗರ ಸಂಗಮ’, ‘ಜೊತೆಜೊತೆಯಲಿ’ ಎಂಬ ಕನ್ನಡ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

ಅದೇ ರೀತಿ ತುಳು ಸಿನಿಮಾದ ಮತ್ತೊಬ್ಬ ನಟ ಅರ್ಜುನ್ ಕಾಪಿಕಾಡ್ ಅವರು ಕೂಡ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಮಧುರಾ ಸ್ವಪ್ನಾ’, ‘ಮುಗುಳು ನಗೆ’, ‘ಮಾಲ್ಗುಡಿ ಡೇಸ್’ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಅರ್ಜುನ್ ಅವರು ನಟ ರಿಷಬ್ ಶೆಟ್ಟಿ ನಟನೆಯ ಸೂಪರ್ ಹಿಟ್ ‘ಕಾಂತಾರ’ ಸಿನಿಮಾದ ತುಳು ಡಬ್ಬಿಂಗ್ ಆವೃತ್ತಿಯಲ್ಲಿ ಡಬ್ಬಿಂಗ್ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 9ರ ವಿನ್ನರ್ ಆಗಿರುವ ತುಳು ನಟ ರೂಪೇಶ್ ಶೆಟ್ಟಿ ಅವರು ‘ಅಪಾಯ ವಲಯ’, ‘ಸ್ಮೈಲ್ ಪ್ಲೀಸ್’, ‘ಅನುಷ್ಕಾ’, ‘ಗೋವಿಂದಾ ಗೋವಿಂದಾ’, ‘ಮಂಕು ಭಾಯಿ ಫಾಕ್ಸಿ ರಾಣಿ’ ಎಂಬ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತುಳು ಸಿನಿಮಾ ರಂಗ ಹುಟ್ಟಿ ಐದು ದಶಕಗಳು ಕಳೆದಿವೆಯಾದರೂ ಅಂಬೆಗಾಲಿನ ನಡಿಗೆಯಿಂದ ಮೇಲೆದ್ದಿದೆಯಷ್ಟೇ. ಸದ್ಯ, ಕನ್ನಡ ಭಾಷೆ ಪ್ರಧಾನವಾಗಿರುವ ಕರ್ನಾಟಕದಲ್ಲಿ ಕನ್ನಡ ಸಿನಿಮಾ ರಂಗ ಸ್ಯಾಂಡಲ್​ವುಡ್​ಗೆ ಪ್ರತಿಯಾಗಿ ಬೆಳೆದು ನಿಲ್ಲಲು ಕೋಸ್ಟಲ್​ವುಡ್ ಪ್ರಯತ್ನಿಸುತ್ತಿದೆ. ಕರ್ನಾಟಕದಲ್ಲಿ ಅನ್ಯ ಭಾಷೆಯ ಸಿನಿಮಾಗಳಿಗೂ ಬೇಡಿಕೆ ಇದೆ. ಹೀಗಾಗಿ ವಿಶ್ವಮಟ್ಟದಲ್ಲಿ ಸಿನಿಮಾಗಳು ಪ್ರದರ್ಶನವಾಗುತ್ತಿರುವುದರಿಂದ ರಾಜ್ಯದಲ್ಲಿ ತುಳು ಸಿನಿಮಾದ ಗೆಲುವಿಗೆ ಭಾಷೆಯ ತೊಡಕು ಉಂಟಾಗುವ ಸಾಧ್ಯತೆ ಕಡಿಮೆ ಎಂದು ಹೇಳಬಹುದು.

Published On - 11:49 am, Mon, 8 April 24