
ನಟ ದರ್ಶನ್ (Darshan), ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಇತ್ತೀಚೆಗಷ್ಟೆ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ದರ್ಶನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಇನ್ನೂ ಒಂದು ವರ್ಷಗಳ ಕಾಲ ದರ್ಶನ್ಗೆ ಜೈಲು ಖಾಯಂ ಆಗುವಂತೆ ಮಾಡಿದೆ. ಸುಪ್ರೀಂಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಸಿದ್ದ ದರ್ಶನ್, ಅರ್ಜಿಯಲ್ಲಿ ಜೈಲಿನ ಅವ್ಯವಸ್ಥೆಗಳ ಬಗ್ಗೆ ಹೇಳಿಕೊಂಡಿದ್ದರು. ಕುಟುಂಬದ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ ಎಂಬುದು ಸಹ ಅವುಗಳಲ್ಲಿ ಒಂದಾಗಿತ್ತು. ಆರೋಪಕ್ಕೆ ಪ್ರತಿಯಾಗಿ ಜೈಲಧಿಕಾರಿಗಳು ದರ್ಶನ್ ಅವರ ಜೈಲು ಡೈರಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರ ಮಾಹಿತಿ ಇದೀಗ ಹೊರಬಿದ್ದಿದೆ.
ನಟ ದರ್ಶನ್ ಎಷ್ಟು ಬಾರಿ ಕುಟುಂಬದವರನ್ನು ಭೇಟಿ ಆಗಿದ್ದರು, ಎಷ್ಟು ಬಾರಿ ವಕೀಲರನ್ನು ಭೇಟಿ ಆಗಿದ್ದರು, ಎಷ್ಟು ಕರೆಗಳನ್ನು ಮಾಡಿದ್ದರು ಇನ್ನಿತರೆ ಮಾಹಿತಿಗಳನ್ನು ಜೈಲಧಿಕಾರಿಗಳು ನ್ಯಾಯಾಲಯಕ್ಕೆ ಒದಗಿಸಿದ್ದರು. ಅದರಂತೆ ದರ್ಶನ್ ಬರೋಬ್ಬರಿ 70ಕ್ಕೂ ಹೆಚ್ಚು ಬಾರಿ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. 28 ಬಾರಿ ವಕೀಲರನ್ನು ಭೇಟಿ ಮಾಡಿದ್ದಾರೆ. ಇಷ್ಟು ಬಾರಿ ವಕೀಲರ ಭೇಟಿ ಮಾಡಿದ್ದರೂ ಸಹ ಜಾಮೀನು ಸಿಗದೇ ಇರುವುದು ವಿಪರ್ಯಾಸ. ಇವುಗಳ ಜೊತೆಗೆ 73 ಬಾರಿ ಫೋನ್ ಕರೆಗಳನ್ನು ನಟ ದರ್ಶನ್ ಜೈಲಿನಿಂದ ಮಾಡಿದ್ದಾರೆ.
ಇದನ್ನೂ ಓದಿ:ದರ್ಶನ್ಗೆ ಸಿಗಲಿಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಇನ್ನು ದರ್ಶನ್ಗೆ ಜೈಲಿನಲ್ಲಿ ಇತರೆ ಖೈದಿಗಳಿಗೆ ಒದಗಿಸುವ ಎಲ್ಲ ಸೌಕರ್ಯಗಳ ಜೊತೆಗೆ ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ಬೆಡ್ ಶೀಟ್, ಬಾಚಣಿಗೆ ಇತರೆ ಸೌಲಭ್ಯಗಳನ್ನು ಸಹ ನೀಡಲಾಗಿದೆ. ಜೈಲು ಖೈದಿಗಳಿಗೆ ಎಫ್ಎಸ್ಎಸ್ಎಐ ನಿಯಮದಂತೆ ನೀಡುವ ಊಟದ ಜೊತೆಗೆ ಹೆಚ್ಚುವರಿಯಾಗಿ ಹಾಲು ಮತ್ತು ಮೊಟ್ಟೆ ಸಹ ನೀಡಲಾಗುತ್ತಿದೆ. ಹಾಗೂ ಸಂದರ್ಶಕರು ನೀಡುವ ಡ್ರೈ ಫ್ರೂಟ್ಸ್ ಮತ್ತು ಹಣ್ಣುಗಳನ್ನು ಸ್ವೀಕರಿಸಲು ಸಹ ಅನುಮತಿ ನೀಡಲಾಗಿದೆ ಎಂದು ಜೈಲಧಿಕಾರಿಗಳು ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಇತರೆ ಖೈದಿಗಳಿಂದ ಬೆದರಿಕೆ ಇದೆ ಎಂದು ಸಹ ದರ್ಶನ್, ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಅದಕ್ಕೆ ಪ್ರತಿಯಾಗಿ ದರ್ಶನ್ಗೆ ನೀಡಲಾಗಿರುವ ಭದ್ರತೆ ಬಗ್ಗೆಯೂ ಜೈಲಧಿಕಾರಿಗಳು ಮಾಹಿತಿ ನೀಡಿದ್ದು, ಹಗಲಿನಲ್ಲಿ ಭದ್ರತೆಗೆ ಒಬ್ಬ ಸಹಾಯಕ ಜೈಲರ್ ಮತ್ತು ವಾರ್ಡನ್ ಒಬ್ಬರನ್ನು ನೇಮಿಸಲಾಗಿದೆ. ರಾತ್ರಿ ವೇಳೆ ಇಬ್ಬರು ಹೆಡ್ ವಾರ್ಡರ್ಗಳು ದರ್ಶನ್ ಭದ್ರತೆ ಮತ್ತು ಕಾವಲಿಗೆ ನಿಯೋಜನೆಗೊಂಡಿದ್ದಾರೆ. ಅಷ್ಟೇ ಅಲ್ಲದೆ ಬೇರೆ ಕೈದಿಗಳು ಕಾರಿಡಾರ್ಗೆ ಬಾರದಂತೆ ಭದ್ರತೆಗಾಗಿ ವ್ಯವಸ್ಥೆ ಮಾಡಲಾಗಿದ್ದು ಬ್ಯಾರಕ್ ಮುಂಭಾಗದ ಕಾರಿಡಾರ್ನಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ