
ಭೀಮನ ಅಮವಾಸ್ಯೆ ಬಂತೆಂದರೆ ಆ ಕರಾಳ ರಾತ್ರಿಯ ನೆನಪು ಕನ್ನಡಿಗರಿಗೆ ಆಗಿಯೇ ಆಗುತ್ತದೆ. 26 ವರ್ಷಗಳ ಹಿಂದೆ 2000ರ ಭೀಮನ ಅಮಾವಾಸ್ಯೆಯ ದಿನದಂದೆ ಕನ್ನಡಿಗರ ಕಣ್ಮಣಿ ಡಾ ರಾಜ್ಕುಮಾರ್ (Dr Rajkumar) ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದ. ಆ ನಂತರ 108 ದಿನಗಳ ಕಾಲ ತನ್ನ ಅಧೀನದಲ್ಲಿ ಇರಿಸಿಕೊಂಡು ಅಂತಿಮವಾಗಿ ಬಿಡುಗಡೆ ಮಾಡಿದ್ದ. ಆದರೆ ಆ 108 ದಿನಗಳು ರಾಜ್ಕುಮಾರ್ ಕುಟುಂಬ, ಕನ್ನಡ ಚಿತ್ರರಂಗ, ಕರ್ನಾಟಕದ ಜನ ಸಾಕಷ್ಟು ನೋವು, ಆತಂಕಗಳನ್ನು ಅನುಭವಿಸಿದ್ದರು. ಅಂತಿಮವಾಗಿ ಎಲ್ಲವೂ ಸುಖಾಂತ್ಯವಾಯ್ತಾದರೂ, ಆ ಅಮಾವಾಸ್ಯೆಯ ರಾತ್ರಿ ನಡೆದಿದ್ದು ಏನು? ಹೇಗೆ? ಪಾರ್ವತಮ್ಮ-ವೀರಪ್ಪನ್ ನಡುವೆ ನಡೆದ ಮಾತುಕತೆ ಏನು? ಮಾಹಿತಿ ಇಲ್ಲಿದೆ…
ವೀರಪ್ಪನ್ಗೆ ಡಾ ರಾಜ್ಕುಮಾರ್ ಅವರನ್ನು ಅಪಹರಿಸುವ ಉದ್ದೇಶವೇ ಇರಲಿಲ್ಲ. ಮೊದಲಿಗೆ ಆತ ಯೋಜಿಸಿದ್ದು ರಜನೀಕಾಂತ್ರನ್ನು ಅಪಹರಿಸಲು ಆದರೆ ಚೆನ್ನೈನಲ್ಲಿ ಸಿಎಂ ನಿವಾಸದ ಪಕ್ಕದಲ್ಲೇ ವಾಸವಾಗಿರುವ ರಜನೀಕಾಂತ್ ಅನ್ನು ಅಪಹರಿಸಿ ಕಾಡಿಗೆ ತರುವುದು ಅಸಾಧ್ಯವೆಂದು ಆ ಯೋಜನೆಯನ್ನು ಕೈಬಿಟ್ಟ, ಆ ಬಳಿಕ ಆಗ ತಮಿಳುನಾಡು ಸಿಎಂ ಆಗಿದ್ದ ಕರುಣಾನಿಧಿಯ ಪುತ್ರ ಸ್ಟಾಲಿನ್ ಅನ್ನು ಅಪಹರಿಸುವ ಯೋಜನೆ ಮಾಡಲಾಯ್ತು. ಆದರೆ ಸ್ಟಾಲಿನ್ ಅದಾಗಲೇ ಚೆನ್ನೈನ ಮೇಯರ್ ಹಾಗೂ ಅವರ ಸುತ್ತಲೂ ಗನ್ಮ್ಯಾನ್ಗಳು ಇರುತ್ತಿದ್ದರು. ಹಾಗಾಗಿ ಆ ಯೋಚನೆಯನ್ನೂ ಕೈಬಿಟ್ಟ. ಕೊನೆಗೆ ಹೊಳೆದಿದ್ದು ರಾಜ್ಕುಮಾರ್ ಹೆಸರು. ವೀರಪ್ಪನ್ ಅಡಗುತಾಣದಿಂದ ಕೇವಲ 20 ಕಿ.ಮೀ ದೂರದಲ್ಲಿ ಡಾ ರಾಜ್ಕುಮಾರ್ ಅವರ ದೊಡ್ಡ ಗಾಜನೂರಿನ ಮನೆ ಇತ್ತು. ಹಾಗಾಗಿ ರಾಜ್ಕುಮಾರ್ ಅಪಹರಣ ಸುಲಭ ಮತ್ತು ಲಾಭದಾಯಕ ಎಂದು ವೀರಪ್ಪನ್ಗೆ ಅನಿಸಿತ್ತು.
ರಾಜ್ಕುಮಾರ್ ಅವರನ್ನು ಅಪಹರಿಸಲು ತನ್ನ ಜ್ಯೋತಿಷಿಗಳಿಂದ ಸಲಹೆಗಳನ್ನು ಸಹ ಪಡೆದಿದ್ದ. ಅಮವಾಸ್ಯೆಯಂದೇ ಅಪಹರಿಸುವುದು ಅವನ ಉದ್ದೇಶ ಆಗಿತ್ತು. ಅವನು ಅಂದುಕೊಂಡಂತೆ ಅದೇ ದಿನ ಅವರ ಕುಕೃತ್ಯ ಕೈಗೂಡಿತು. ತಮ್ಮ ಊರಿನಲ್ಲಿ ಕೊರೆಸಿದ್ದ ಬೋರ್ವೆಲ್ನಲ್ಲಿ ನೀರು ಬಂದ ಸುದ್ದಿ ತಿಳಿದ ಖುಷಿಯಲ್ಲಿ ರಾಜ್ಕುಮಾರ್ ಅವರು ದೊಡ್ಡ ಗಾಜನೂರಿಗೆ ಬಂದಿದ್ದರು. 2000ರ ಜುಲೈ 30ರಂದು ರಾತ್ರಿ ಊಟ ಮುಗಿಸಿ, ಆರಾಮವಾಗಿ ಕೂತಿದ್ದ ಸಮಯದಲ್ಲಿ ಬಂದೂಕುಗಳನ್ನು ಹಿಡಿದು ವೀರಪ್ಪನ್ ಸಹಚರರು ಮನೆಗೆ ಬಂದರು. ಮನೆಯಲ್ಲಿ ಪಾರ್ವತಮ್ಮ ರಾಜ್ಕುಮಾರ್, ಅಳಿಯ ಗೋವಿಂದರಾಜು, ಸಹಾಯಕ ನಾಗಪ್ಪ, ಸಂಬಂಧಿ ನಾಗೇಶ್, ಡ್ರೈವರ್ ಮತ್ತು ಪಾರ್ವತಮ್ಮ ಇದ್ದರು. ಜೊತೆಗೆ ಕೆಲವು ಕೆಲಸದವರು.
ಇದನ್ನೂ ಓದಿ:ದಸರಾ ‘ಉದ್ಘಾಟನೆ’ ಪ್ರಾರಂಭವಾಗಿದ್ದು ಡಾ ರಾಜ್ಕುಮಾರ್ ಅವರಿಂದ, ಹೇಗೆ ಗೊತ್ತೆ?
ಮೊದಲಿಗೆ ವೀರಪ್ಪನ್ ಸಹಚರರು ಮನೆಯೊಳಗೆ ಪ್ರವೇಶಿಸಿದರು. ಅದಾದ ಎರಡು ಮೂರು ನಿಮಿಷಗಳಲ್ಲಿ ವೀರಪ್ಪನ್ ಒಳಗೆ ಬಂದು ರಾಜ್ಕುಮಾರ್ ಅವರನ್ನುದ್ದೇಶಿಸಿ ‘ಅಯ್ಯ, ಹೊರಡೋಣ ಬನ್ನಿ’ ಎಂದ. ಪಾರ್ವತಮ್ಮ ಅವರ ಕೈಗೆ ಕ್ಯಾಸೆಟ್ ನೀಡಿ, ಇದನ್ನು ಸಿಎಂ ಎಸ್ಎಂ ಕೃಷ್ಣ ಅವರಿಗೆ ಕೊಡಿ, ನನಗೆ ಏನು ಬೇಕೋ ಅವರಿಗೆ ತಿಳಿಯುತ್ತದೆ. ಅಯ್ಯನವರ ಬಗ್ಗೆ ಚಿಂತಿಸಬೇಡಿ ಅವರಿಗೆ ಏನೂ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದ.
ಆದರೆ ಭಯ, ಆತಂಕದಲ್ಲಿ ಗದ್ಗದಿತರಾದ ಪಾರ್ವತಮ್ಮನವರಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ರಾಜ್ಕುಮಾರ್ ಅವರಿಗೆ ಸಹಾಯವಾಗಿರುತ್ತದೆ ಎಂದು ಅಳಿಯ ಗೋವಿಂದರಾಜು, ಸಹಾಯಕ ನಾಗಪ್ಪ, ಸಂಬಂಧಿ ನಾಗೇಶ್ ಅವರನ್ನು ಜೊತೆಗೆ ಕಳಿಸಿದರು. ಡ್ರೈವರ್ ಅನ್ನೂ ಕರೆದೊಯ್ಯುವ ಉದ್ದೇಶ ವೀರಪ್ಪನ್ಗೆ ಇತ್ತು, ಆದರೆ ಪಾರ್ವತಮ್ಮನವರು ಬೆಂಗಳೂರಿಗೆ ಹೋಗಬೇಕಲು ಡ್ರೈವರ್ ಅವಶ್ಯಕತೆ ಇದ್ದ ಕಾರಣ ಅವನನ್ನು ಅಲ್ಲಿಯೇ ಬಿಟ್ಟು ಹೋದ ವೀರಪ್ಪನ್. ಹೋಗಬೇಕಾದರೆ ‘ಇಂದು ನಿನ್ನ ಸಮಯ ಚೆನ್ನಾಗಿದೆ, ನೀನು ಕರೆದುಕೊಂಡು ಹೋಗು, ನಾನು ಕರೆದುಕೊಂಡು ಬರುತ್ತೇನೆ’ ಎಂದು ವೀರಪ್ಪನ್ಗೆ ಹೇಳಿದ್ದಾಗಿ ಪಾರ್ವತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.
ವೀರಪ್ಪನ್ ರಾಜ್ಕುಮಾರ್ ಅವರನ್ನು ಕರೆದುಕೊಂಡು ಕತ್ತಲಲ್ಲಿ ಮರೆಯಾಗುತ್ತಿದ್ದಂತೆ ಇತ್ತ ಪಾರ್ವತಮ್ಮನವರು ಡ್ರೈವರ್ ಅನ್ನು ಕರೆದುಕೊಂಡು ಗಾಜನೂರಿನಿಂದ ಬೆಂಗಳೂರಿಗೆ ಪ್ರಯಾಣ ಆರಂಭಿಸಿದರು. ಮೈಸೂರಿನಲ್ಲಿ ತಮ್ಮ ಪರಿಚಯದ ಜ್ಯೋತಿಷಿ ಬಾಷ್ಯಂಸ್ವಾಮಿ ಅವರ ಮನೆಗೆ ಹೋಗಿ, ಅಲ್ಲಿ, ರಾಜ್ಕುಮಾರ್ ಅವರ ವಿಷಯ ತಿಳಿಸಿ, ಭವಿಷ್ಯದ ಸಲಹೆ ಪಡೆದರು. ಅಲ್ಲಿಂದ ಹೊರಟು ನೇರವಾಗಿ ಸಿಎಂ ಎಸ್ಎಂ ಕೃಷ್ಣ ಅವರ ಮನೆಯನ್ನು ಪಾರ್ವತಮ್ಮನವರು ತಲುಪಿದಾಗ ಬೆಳಿಗಿನ ಜಾವ ಮೂರು ಗಂಟೆ.
ಆ ಸಮಯದಲ್ಲಿ ಸಿಎಂ ಅವರನ್ನು ಎಬ್ಬಿಸಿ, ಅವರಿಗೆ ನಡೆದಿದ್ದೆಲ್ಲವನ್ನೂ ತಿಳಿಸಿ, ಅವರಿಗೆ ಕ್ಯಾಸೆಟ್ ನೀಡಿದರು. ಕೂಡಲೇ ಸಿಎಂ ಅವರು ಗೃಹ ಸಚಿವ ಖರ್ಗೆ, ಡಿಜಿಪಿ ದಿನಕರ್, ಗೃಹ ಕಾರ್ಯದರ್ಶಿ ಪ್ರಕಾಶ್, ಭಟ್ಟಾಚಾರ್ಯ, ಸಚಿವ ಸಗೀರ್ ಅಹ್ಮದ್ ಇನ್ನೂ ಕೆಲವರನ್ನು ಕರೆಸಿಕೊಂಡು ವೀರಪ್ಪನ್ ಕಳಿಸಿದ್ದ ಕ್ಯಾಸೆಟ್ ಕೇಳಿ ತುರ್ತು ಸಭೆ ನಡೆಸಿದರು. ಅಲ್ಲಿಂದ 108 ದಿನಗಳ ವರೆಗೆ ಸರ್ಕಾರ ಸತತ ಪ್ರಯತ್ನ ಮಾಡಿ ರಾಜ್ಕುಮಾರ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ