‘ಹೊಂಬಾಳೆ ಫಿಲ್ಮ್ಸ್​’ ಮೂಲಕ ಕರ್ನಾಟಕದಲ್ಲಿ ಬಿಡುಗಡೆ ಆಗಲಿದೆ ‘ಆಡುಜೀವಿತಂ’ ಚಿತ್ರ

ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್​ ಅಭಿನಯದ ‘ಆಡುಜೀವಿತಂ’ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್​’ನ ವಿಜಯ್​ ಕಿರಗಂದೂರು ಅವರು ರಿಲೀಸ್​ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಬೆಂಗಳೂರಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಲಾಯಿತು. ಅದರಲ್ಲಿ ಚಿತ್ರತಂಡದವರು ಭಾಗಿಯಾಗಿದ್ದರು.

‘ಹೊಂಬಾಳೆ ಫಿಲ್ಮ್ಸ್​’ ಮೂಲಕ ಕರ್ನಾಟಕದಲ್ಲಿ ಬಿಡುಗಡೆ ಆಗಲಿದೆ ‘ಆಡುಜೀವಿತಂ’ ಚಿತ್ರ
‘ಆಡುಜೀವಿತಂ’ ಚಿತ್ರತಂಡದ ಸುದ್ದಿಗೋಷ್ಠಿ

Updated on: Mar 25, 2024 | 7:52 PM

ಬಹುನಿರೀಕ್ಷಿತ ‘ಆಡುಜೀವಿತಂ’ (ಗೋಟ್ ಲೈಫ್) ಸಿನಿಮಾ ಮಾರ್ಚ್​ 28ರಂದು ಬಿಡುಗಡೆ ಆಗಲಿದೆ. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬ್ಲೆಸ್ಸಿ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಕರ್ನಾಟಕದಲ್ಲಿ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಬಿಡುಗಡೆ ಮಾಡಲಿದೆ. ‘ಆಡುಜೀವಿತಂ’ ಚಿತ್ರದ ವಿತರಣೆಯ ಹಕ್ಕನ್ನು ಪಡೆದುಕೊಂಡಿರುವ ವಿಜಯ್ ಕಿರಗಂದೂರು ಅವರು ಈ ಸಿನಿಮಾವನ್ನು ಅರ್ಪಿಸಿ, ರಿಲೀಸ್​ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರು (Vijay Kiragandur) ಮತ್ತು ಪೃಥ್ವಿರಾಜ್ ಸುಕುಮಾರನ್ ನಡುವೆ ಉತ್ತಮ ಗೆಳೆತನ ಇದೆ.

‘ಹೊಂಬಾಳೆ ಫಿಲ್ಮ್ಸ್​’ ಮೂಲಕ ನಿರ್ಮಾಣ ಆಗಿದ್ದ ‘ಕೆಜಿಎಫ್’, ‘ಕಾಂತಾರ’ ಸಿನಿಮಾಗಳನ್ನು ಪೃಥ್ವಿರಾಜ್ ಸುಕುಮಾರನ್ ಅವರು ಕೇರಳದಲ್ಲಿ ರಿಲೀಸ್​ ಮಾಡಿದ್ದರು. ಈಗ ಪೃಥ್ವಿರಾಜ್ ಅಭಿನಯಿಸಿದ ‘ಆಡುಜೀವಿತಂ’ ಸಿನಿಮಾವನ್ನು ವಿಜಯ್​ ಕಿರಗಂದೂರು ಅವರು ಕರುನಾಡಿನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದು, ಈ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಹಾಲಿವುಡ್ ಕಲಾವಿದ ಜಿಮ್ಮಿ ಜೀನ್ ಲೂಯಿಸ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿರಾಜ್​ ಸುಕುಮಾರನ್​ ಅವರು, ‘ಹೊಂಬಾಳೆ ಫಿಲ್ಮ್ಸ್​ ಮೂಲಕ ನಮ್ಮ ಸಿನಿಮಾ ಬಿಡುಗಡೆ ಆಗುತ್ತಿರುವುದು ಬಹಳ ಖುಷಿ ನೀಡಿದೆ’ ಎಂದರು. ನಜೀಬ್ ಎಂಬ ವ್ಯಕ್ತಿಯ ಬದುಕಿನ ನೈಜ ಘಟನೆಗಳನ್ನು ಇಟ್ಟುಕೊಂಡು ಬರೆದ ‘ಆಡುಜೀವಿತಂ’ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಅಮಲಾ ಪೌಲ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎ.ಆರ್. ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಏಕಕಾಲಕ್ಕೆ ಮಲಯಾಳಂ, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ‘ಅಗತ್ಯ ಇದ್ದಿದ್ದಕ್ಕೆ ಲಿಪ್​ ಕಿಸ್​ ಮಾಡಿದೆ’: ಪೃಥ್ವಿರಾಜ್​​ ಜತೆಗಿನ ದೃಶ್ಯದ ಬಗ್ಗೆ ಅಮಲಾ ಪೌಲ್​ ಪ್ರತಿಕ್ರಿಯೆ

‘ನಿರ್ದೇಶಕ ಬ್ಲೆಸ್ಸಿ ಅವರು ಈ ಸಿನಿಮಾವನ್ನು ಮಾಡಬೇಕು ಎಂದುಕೊಂಡಿದ್ದು 2008ರಲ್ಲಿ. ಆದರೆ ಶೂಟಿಂಗ್​ ಆರಂಭವಾಗಿದ್ದು 2018ರಲ್ಲಿ. ಈ ಸಿನಿಮಾದ ಸಲುವಾಗಿ 16 ವರ್ಷಗಳ ಪರಿಶ್ರಮ ಹಾಕಲಾಗಿದೆ. ನಾನು ಈ ಪಾತ್ರಕ್ಕಾಗಿ 31 ಕೆಜಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದೇನೆ. ಬೆನ್ಯಾಮಿನ್ ಬರೆದ ಆಡುಜೀವಿತಂ ಕಾದಂಬರಿಯನ್ನು ಆಧರಿಸಿದ ಸಿನಿಮಾ ಇದು. ಈ ಫೇಮಸ್​ ಕಾದಂಬರಿಯು ಈವರೆಗೂ 251 ಬಾರಿ ಮುದ್ರಣವಾಗಿದೆ’ ಎಂದು ಪೃಥ್ವಿರಾಜ್​ ಸುಕುಮಾರನ್​ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us