ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ಭಾಗ್ಯರಾಜ್ ನಿಧನ; ಡಾ. ರಾಜ್ ರೀತಿ ನೇತ್ರದಾನ

73ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನರಾದ ಖ್ಯಾತ ನಿರ್ದೇಶಕ ಭಾಗ್ಯರಾಜ್ ಅವರು ತಮ್ಮ ಕೊನೆಯ ಆಸೆಯಂತೆ ಇಬ್ಬರು ಅಂಧರ ಬಾಳಿಗೆ ಬೆಳಕಾಗಲಿದ್ದಾರೆ. ನೇತ್ರದಾನ ಪ್ರಕ್ರಿಯೆ ಮುಗಿಸಿದ ವೈದ್ಯರು ಭಾಗ್ಯರಾಜ್ ಅವರ ನಿವಾಸದಿಂದ ತೆರಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ಭಾಗ್ಯರಾಜ್ ನಿಧನ; ಡಾ. ರಾಜ್ ರೀತಿ ನೇತ್ರದಾನ
K Bhagyaraj

Updated on: Jun 28, 2026 | 7:18 AM

ಮುಖ್ಯಾಂಶಗಳು

  • ನೇತ್ರದಾನ ಮಾಡಿ ಅಭಿಮಾನಿಗಳಿಗೆ ಮಾದರಿಯಾದ ನಿರ್ದೇಶಕ ಕೆ. ಭಾಗ್ಯರಾಜ್.
  • ಡಾ. ರಾಜ್​ಕುಮಾರ್ ರೀತಿ ಸಾವಿನಲ್ಲೂ ಸಾರ್ಥಕತೆ ಮೆರದ ಖ್ಯಾತ ನಿರ್ದೇಶಕ, ನಟ.
  • ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ತಮಿಳು ಚಿತ್ರರಂಗದ ಸೆಲೆಬ್ರಿಟಿಗಳು.

ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ (K Bhagyaraj) ಅವರು ಶನಿವಾರ (ಜೂನ್ 27) ಚೆನ್ನೈನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ತಮ್ಮ ವಿಶಿಷ್ಟ ಕಥಾಹಂದರ ಹಾಗೂ ಚಿತ್ರಕಥೆಯ ಮೂಲಕ ಚಿತ್ರರಂಗದಲ್ಲಿ ‘ಚಿತ್ರಕಥೆಯ ರಾಜ’ ಎಂದೇ ಖ್ಯಾತರಾಗಿದ್ದ ಭಾಗ್ಯರಾಜ್ ಅವರ ಅಗಲಿಕೆ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಡಾ. ರಾಜ್​ಕುಮಾರ್ ರೀತಿ ಕೆ. ಭಾಗ್ಯರಾಜ್ ಕೂಡ ನೇತ್ರದಾನ (Eye Donation) ಮಾಡಿದ್ದಾರೆ.

ಭಾಗ್ಯರಾಜ್ ಅವರು ತಮ್ಮ ನೇತ್ರಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಅವರ ನಿಧನದ ಬೆನ್ನಲ್ಲೇ ಕುಟುಂಬಸ್ಥರು ಆ ಆಸೆಯನ್ನು ತಕ್ಷಣವೇ ಈಡೇರಿಸಿದ್ದಾರೆ. ಭಾಗ್ಯರಾಜ್ ಅವರ ಮರಣದ ನಂತರ ಕುಟುಂಬಸ್ಥರು ಕಣ್ಣಿನ ಆಸ್ಪತ್ರೆಗೆ ಮಾಹಿತಿ ನೀಡಿದ್ದು, ವೈದ್ಯರ ತಂಡವು ಅವರ ನಿವಾಸಕ್ಕೆ ಆಗಮಿಸಿ ಕಾರ್ನಿಯಾ ನೇತ್ರದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಭಾಗ್ಯರಾಜ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ‘ಕೆ. ಭಾಗ್ಯರಾಜ್ ಅವರ ಅಂತಿಮ ದರ್ಶನಕ್ಕೆ ಹೋದಾಗ ಅವರು ನೇತ್ರದಾನ ಮಾಡಿರುವ ವಿಷಯ ತಿಳಿಯಿತು. ತಾನು ಮರಣ ಹೊಂದಿದ ಮೇಲೆಯೂ ಮತ್ತೊಬ್ಬರ ಬಾಳಿಗೆ ಬೆಳಕಾಗಬೇಕು ಎಂಬ ಅವರ ಆಲೋಚನೆ ಎಷ್ಟು ಶ್ಲಾಘಿಸಿದರೂ ಸಾಲದು. ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿರುವ ಇಂತಹ ಪ್ರಮುಖ ವ್ಯಕ್ತಿಗಳು ನೇತ್ರದಾನ ಮಾಡಿದಾಗ, ಅದು ಸಾರ್ವಜನಿಕರಲ್ಲಿ ದೊಡ್ಡ ಜಾಗೃತಿ ಮೂಡಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ, ಭಾರತದಲ್ಲಿ ವಾರ್ಷಿಕವಾಗಿ 1 ಲಕ್ಷದಿಂದ 2 ಲಕ್ಷ ಜನರಿಗೆ ಕಾರ್ನಿಯಾ ನೇತ್ರದಾನದ ಅಗತ್ಯವಿರುತ್ತದೆ, ಆದರೆ ಪ್ರಸ್ತುತ ದೇಶದಲ್ಲಿ ಕೇವಲ 45ರಿಂದ 50 ಸಾವಿರ ಕಾರ್ನಿಯಾಗಳು ಮಾತ್ರ ಲಭ್ಯವಾಗುತ್ತಿವೆ ಎಂದು ಅವರು ದೇಶದ ನೇತ್ರದಾನದ ಕೊರತೆಯ ಕುರಿತು ಕಳಕಳಿ ವ್ಯಕ್ತಪಡಿಸಿದ್ದಾರೆ. ಭಾಗ್ಯರಾಜ್ ಅವರು ನೇತ್ರದಾನ ಮಾಡಿರುವುದು ಇತರರಿಗೂ ಮಾದರಿ ಆಗಿದೆ.

ಇದನ್ನೂ ಓದಿ: ಅಪ್ಪು ಪ್ರೇರಣೆಯಿಂದ ನೇತ್ರದಾನಕ್ಕೆ ಸಹಿ ಹಾಕಿದ 105 ವಿದ್ಯಾರ್ಥಿಗಳು ಮತ್ತು ಪೋಷಕರು

ಭಾಗ್ಯರಾಜ್ ಅವರು ಪತ್ನಿ ಪೂರ್ಣಿಮಾ, ಮಗಳು ಶರಣ್ಯಾ ಮತ್ತು ಶಾಂತನು ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಅವರ ಗುರು ಹಾಗೂ ಆಪ್ತ ಸ್ನೇಹಿತರಾಗಿದ್ದ ನಿರ್ದೇಶಕ ಕೆ. ಭಾರತಿರಾಜ ಅವರು ನಿಧನರಾಗಿದ್ದರು. ಆ ನೋವು ಮಾಸುವ ಮುನ್ನವೇ ಭಾಗ್ಯರಾಜ್ ಅವರು ಇಹಲೋಕ ತ್ಯಜಿಸಿರುವುದು ತಮಿಳು ಚಿತ್ರರಂಗಕ್ಕೆ ಭರಿಸಲಾಗದ ನಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us