ಮತ್ತೆ ವಿವಾದದಲ್ಲಿ ಕಮಲ್ ಹಾಸನ್, ತಮಿಳುನಾಡಿನಲ್ಲಿ ಸಿನಿಮಾ ನಿಷೇಧಕ್ಕೆ ಆಗ್ರಹ

Kamal Haasan controversies: ಕಮಲ್ ಹಾಸನ್ ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತಲೂ ವಿವಾದಗಳಿಂದಲೇ ಹೆಚ್ಚಾಗಿ ಸುದ್ದಿ ಆಗುತ್ತಿದ್ದಾರೆ. ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಸಮಯದಲ್ಲಿ ಕಮಲ್ ಹಾಸನ್ ಆಡಿದ್ದ ಮಾತುಗಳು ಕರ್ನಾಟಕದಲ್ಲಿ ಕಿಚ್ಚು ಹಚ್ಚಿದ್ದವು. ಇದೀಗ ಮತ್ತೊಮ್ಮೆ ತಮ್ಮ ಮಾತುಗಳಿಂದ ಅಂಥಹುದೇ ಒಂದು ವಿವಾದಕ್ಕೆ ಸಿಲುಕಿದ್ದಾರೆ.

ಮತ್ತೆ ವಿವಾದದಲ್ಲಿ ಕಮಲ್ ಹಾಸನ್, ತಮಿಳುನಾಡಿನಲ್ಲಿ ಸಿನಿಮಾ ನಿಷೇಧಕ್ಕೆ ಆಗ್ರಹ
Kamal Haasan

Updated on: Aug 06, 2025 | 3:31 PM

ಭಾರತದ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ಕಮಲ್ ಹಾಸನ್ (Kamal Haasan) ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತಲೂ ಹೇಳಿಕೆಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ‘ಥಗ್​ ಲೈಫ್’ ಸಿನಿಮಾ ಬಿಡುಗಡೆ ಸಮಯದಲ್ಲಿ ಕಮಲ್ ಹಾಸನ್ ಕನ್ನಡ ಭಾಷೆಯ ಉಗಮದ ಬಗ್ಗೆ ಆಡಿದ್ದ ಮಾತು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕಮಲ್ ಹಾಸನ್ ಆಡಿದ ಮಾತಿನಿಂದಾಗಿ ಅವರ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಲಿಲ್ಲ, ಜೊತೆಗೆ ಸಿನಿಮಾ ಧಾರುಣವಾಗಿ ಸೋಲು ಕಂಡಿತು. ಆದರೆ ಇದೀಗ ಮತ್ತೊಮ್ಮೆ ಕಮಲ್ ಹಾಸನ್ ತಮ್ಮ ಮಾತಿನ ಕಾರಣಕ್ಕೆ ವಿವಾದದ ಕೇಂದ್ರವಾಗಿದ್ದಾರೆ.

ಕಮಲ್ ಹಾಸನ್ ಅವರು ಆಡಿರುವ ಮಾತಿಗೆ ಅವರ ರಾಜ್ಯದಲ್ಲಿಯೇ ವಿರೋಧ ವ್ಯಕ್ತವಾಗಿದೆ. ಮಾತ್ರವಲ್ಲದೆ ತಮಿಳುನಾಡಿನಲ್ಲಿ ಕಮಲ್ ಹಾಸನ್ ಅವರ ಸಿನಿಮಾಗಳಿಗೆ ನಿಷೇಧ ಹೇರುವಂತೆ ಒತ್ತಾಯ ಕೇಳಿ ಬರುತ್ತಿದೆ. ಈ ಹಿಂದೆ ಕನ್ನಡ ಭಾಷೆಯ ಬಗ್ಗೆ ಮಾತನಾಡಿ ಕೈಸುಟ್ಟುಕೊಂಡಿದ್ದ ಕಮಲ್ ಹಾಸನ್ ಈ ಬಾರಿ ಧರ್ಮದ ಬಗ್ಗೆ ಮಾತನಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ತಮಿಳಿನ ಸ್ಟಾರ್ ನಟ ಸೂರ್ಯ ಅವರು ಅರಗಂ ಹೆಸರಿನ ಫೌಂಡೇಶನ್ ಹೊಂದಿದ್ದು, ಆ ಫೌಂಡೇಶನ್ ಮೂಲಕ ಅದ್ಭುತ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. 6700ಕ್ಕೂ ಹೆಚ್ಚು ಮಕ್ಕಳಿಗೆ ಈ ಫೌಂಡೇಶನ್​ ಮೂಲಕ ಉಚಿತ ಶಿಕ್ಷಣ ನಿಡಲಾಗಿದೆ. ಈ ಫೌಂಡೇಶನ್ ನೆರವು ಪಡೆದು 51 ಮಂದಿ ಡಾಕ್ಟರ್​ಗಳಾಗಿದ್ದಾರೆ. ನೂರಾರು ಮಂದಿ ಎಂಜಿನಿಯರ್​ಗಳು ಹಾಗೂ ಇತರೆ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಫೌಂಡೇಶನ್​ನ 15ನೇ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಅತಿಥಿಯಾಗಿ ಭಾಗಿ ಆಗಿದ್ದರು.

ಇದನ್ನೂ ಓದಿ:ರಾಜ್ಯಸಭಾ ಸದಸ್ಯನಾಗಿ ಪ್ರಮಾಣವಚನ ಸ್ವೀಕರಿಸಿದ ಕಮಲ್ ಹಾಸನ್; ಸಂಬಳ ಎಷ್ಟು?

ಕಾರ್ಯಕ್ರಮದಲ್ಲಿ ಸೂರ್ಯ ಅವರ ಈ ಮಹತ್ ಕಾರ್ಯವನ್ನು ಕೊಂಡಾಡಿದ ಕಮಲ್ ಹಾಸನ್, ಅದೇ ಕಾರ್ಯಕ್ರಮದಲ್ಲಿ ನೀಟ್ ವ್ಯವಸ್ಥೆಯನ್ನು ವಿರೋಧಿಸಿದರು. ‘ನೀಟ್, ಹೆಚ್ಚಿನ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಕೆಳಹಂತದಿಂದ ಬರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್​ನ ಕನಸನ್ನು ನನಸಾಗಲು ಬಿಡುತ್ತಿಲ್ಲ. ಇದೇ ಕಾರಣಕ್ಕೆ ನಾವು ಅದನ್ನು ವಿರೋಧಿಸುತ್ತಾ ಬಂದಿದ್ದೇವೆ. ಈಗ ಯುದ್ಧ ನಡೆಯುತ್ತಿದೆ. ಈ ಯುದ್ಧವನ್ನು ಕೇವಲ ಶಿಕ್ಷಣದಿಂದ ಮಾತ್ರವೇ ಗೆಲ್ಲಲು ಸಾಧ್ಯ. ಸರಪಳಿಗಳನ್ನು ಒಡೆಯುವ ಆಯುಧ ಶಿಕ್ಷಣವೊಂದೇ, ಸರ್ವಾಧಿಕಾರಿ ಹಾಗೂ ಸನಾತನವನ್ನು ಸೋಲಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರವೇ ಇದೆ’ ಎಂದಿದ್ದಾರೆ ಕಮಲ್ ಹಾಸನ್.

ಇದೀಗ ತಮಿಳುನಾಡು ಬಿಜೆಪಿಯು ಕಮಲ್ ಹಾಸನ್ ಅವರ ಈ ಹೇಳಿಕೆಯನ್ನು ವಿರೋಧಿಸಿದ್ದು, ತಮಿಳುನಾಡು ಬಿಜೆಪಿ ಕಾರ್ಯದರ್ಶಿ ಅಮರ್ ಪ್ರಸಾದ್ ರೆಡ್ಡಿ ಮಾತನಾಡಿ, ಕಮಲ್ ಹಾಸನ್ ಸನಾತನ ಧರ್ಮವನ್ನು ಮುಗಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಕಮಲ್ ಹಾಸನ್ ಸಿನಿಮಾಗಳಿಗೆ ನಿಷೇಧ ಹೇರಬೇಕು ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ