ಸಲ್ಮಾನ್ ಖಾನ್ ಆಪ್ತನ ಜಿಮ್ ಮೇಲೆ ಬಿಷ್ಣೊಯಿ ಗ್ಯಾಂಗ್ ದಾಳಿ

Salman Khan: ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮತ್ತೊಮ್ಮೆ ದಾಳಿ ನಡೆಸಿದೆ. ಈ ಬಾರಿ ಸಲ್ಮಾನ್ ಖಾನ್​ ಆಪ್ತರೊಬ್ಬರನ್ನು ಗುರಿ ಮಾಡಿ ದಾಳಿ ಮಾಡಲಾಗಿದೆ. ಬುಧವಾರ ರಾತ್ರಿ ದೆಹಲಿಯ ಪಶ್ಚಿಮ ವಿಹಾರ್ ಪ್ರದೇಶದಲ್ಲಿರುವ ಪ್ರಸಿದ್ಧ ಗಾಯಕ ಗುರು ರಂಧಾವ ಒಡೆತನದ ಫಿಟ್‌ನೆಸ್ ಸೆಂಟರ್ ಮೇಲೆ ಗುಂಡಿನ ದಾಳಿ ನಡೆದಿದೆ. ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವ ಮೂಲಕ ಈ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ.

ಸಲ್ಮಾನ್ ಖಾನ್ ಆಪ್ತನ ಜಿಮ್ ಮೇಲೆ ಬಿಷ್ಣೊಯಿ ಗ್ಯಾಂಗ್ ದಾಳಿ
Guru Randhawa

Updated on: Jun 11, 2026 | 1:33 PM

ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್ ಮತ್ತೊಮ್ಮೆ ದಾಳಿ ನಡೆಸಿದೆ. ಈ ಬಾರಿ ಸಲ್ಮಾನ್ ಖಾನ್​ ಆಪ್ತರೊಬ್ಬರನ್ನು ಗುರಿ ಮಾಡಿ ದಾಳಿ ಮಾಡಲಾಗಿದೆ. ಬುಧವಾರ ರಾತ್ರಿ ದೆಹಲಿಯ ಪಶ್ಚಿಮ ವಿಹಾರ್ ಪ್ರದೇಶದಲ್ಲಿರುವ ಪ್ರಸಿದ್ಧ ಗಾಯಕ ಗುರು ರಂಧಾವ ಒಡೆತನದ ಫಿಟ್‌ನೆಸ್ ಸೆಂಟರ್ ಮೇಲೆ ಗುಂಡಿನ ದಾಳಿ ನಡೆದಿದೆ. ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವ ಮೂಲಕ ಈ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ.

ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿರುವ ಅನಿಲ್ ಪಂಡಿತ್ ಎಂಬಾತ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ‘ನಟ ಸಲ್ಮಾನ್ ಖಾನ್‌ಗೆ ಬಹಳ ಹತ್ತಿರವಾಗುತ್ತಿರುವ ಗಾಯಕನಿಗೆ ಎಚ್ಚರಿಕೆ ನೀಡಲು ಗುರು ರಂಧವ ಅವರ ’24HS ಫಿಟ್‌ನೆಸ್’ ಜಿಮ್‌ ಅನ್ನು ಗುರಿಯಾಗಿಸಲಾಗಿದೆ ಎಂದು ಹೇಳಿಕೊಂಡಿದ್ದಾನೆ. ‘ನಾವು ದೆಹಲಿಯಲ್ಲಿ ಗುರು ರಂಧವ ಅವರ ಜಿಮ್ ಅನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದೇವೆ, ಏಕೆಂದರೆ ಅವರು ಸಲ್ಮಾನ್ ಖಾನ್‌ಗೆ ತುಂಬಾ ಹತ್ತಿರವಾಗುತ್ತಿದ್ದಾರೆ’ ಎಂದು ಪಂಡಿತ್ ತನ್ನ ಪೋಸ್ಟ್‌ನಲ್ಲಿ ಹೇಳಿದ್ದು, ತನ್ನ ‘ಶತ್ರುಗಳ’ ಮೇಲೆ ಇನ್ನೂ ಹೆಚ್ಚಿನ ದಾಳಿಗಳನ್ನು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾನೆ.

ಗುಂಡಿನ ದಾಳಿಯ ಮಾಹಿತಿ ಪಡೆದ ನಂತರ ಪೊಲೀಸ್ ತಂಡಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿವೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ದೆಹಲಿ ಪೊಲೀಸರ ಪ್ರಕಾರ, ದೆಹಲಿಯ ನಿವಾಸಿಯೊಬ್ಬರು ಗುರು ರಂಧವ ಅವರ ‘24HS ಫಿಟ್‌ನೆಸ್’ ಫ್ರ್ಯಾಂಚೈಸ್‌ನ ಜಿಮ್ ಅನ್ನು ನಡೆಸುತ್ತಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಮುಖ ಮುಚ್ಚಿಕೊಂಡಿದ್ದ ಇಬ್ಬರು ಬೈಕ್ ಸವಾರರು ಜಿಮ್ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಪೊಲೀಸರು ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ:ದೆಹಲಿ ಉದ್ಯಮಿಯ ಕೊಲೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇತ್ತೀಚೆಗೆ ಸರಣಿ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ಮಾಡುತ್ತಿದೆ. 2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಮಾಡಿತ್ತು. ಕೆನಡಾದಲ್ಲಿ ಗಾಯಕ ಗಿಪ್ಪಿ ಗ್ರೆವಾಲ್ ಅವರ ಮನೆಯ ಮೇಲೆ ದಾಳಿ, ಮುಂಬೈನಲ್ಲಿ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಗುಂಡಿನ ದಾಳಿ, ಎಪಿ ಧಿಲ್ಲೋನ್ ಅವರಿಗೆ ಬೆದರಿಕೆ, ರಾಜಕಾರಣಿ ಬಾಬಾ ಸಿದ್ದಿಕಿ ಹತ್ಯೆ. ಕಪಿಲ್ ಶರ್ಮಾ ಅವರ ಕೆನಡಾದ ಕೆಫೆ ಮೇಲೆ ದಾಳಿ, ರೋಹಿತ್ ಶೆಟ್ಟಿ ಅವರ ಮುಂಬೈ ಮನೆಯ ಮೇಲೆ ದಾಳಿ, ನಟಿ ದಿಶಾ ಪಟಾನಿ ಅವರ ಮನೆಯ ಮೇಲೆ ದಾಳಿಗಳನ್ನು ಈ ತಂಡ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us