ಯೋಗರಾಜ್ ಭಟ್ಟರ ಸಿನಿಮಾದಲ್ಲಿ ನಟಿಸಿದ್ದ ಚೆಲುವೆ ಈಗ ಅಲ್ಲು ಅರ್ಜುನ್​ಗೆ ನಾಯಕಿ

Allu Arjun: ಯೋಗರಾಜ್ ಭಟ್ಟರ ಸಿನಿಮಾದಲ್ಲಿ ಗಣೇಶ್, ದಿಗಂತ್ ಜೊತೆ ನಟಿಸಿದ್ದ ಚೆಲುವೆ ಈಗ ಅಲ್ಲು ಅರ್ಜುನ್ ಮುಂದಿನ ಸಿನಿಮಾಕ್ಕೆ ನಾಯಕಿ. ಯಾರಾಕೆ?

ಯೋಗರಾಜ್ ಭಟ್ಟರ ಸಿನಿಮಾದಲ್ಲಿ ನಟಿಸಿದ್ದ ಚೆಲುವೆ ಈಗ ಅಲ್ಲು ಅರ್ಜುನ್​ಗೆ ನಾಯಕಿ
ಅಲ್ಲು ಅರ್ಜುನ್-ಸಂಯುಕ್ತಾ

Updated on: May 05, 2023 | 8:00 AM

ಅಲ್ಲು ಅರ್ಜುನ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಪುಷ್ಪ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದ್ದು, ಇದೀಗ ಪುಷ್ಪ 2 ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಎದ್ದಿದೆ. ಇದರ ನಡುವೆ ಅಲ್ಲು ಅರ್ಜುನ್​ರ ಮುಂದಿನ ಸಿನಿಮಾಗಳ ಬಗ್ಗೆಯೂ ಭಾರಿ ಚರ್ಚೆಗಳು ಈಗಲೆ ಪ್ರಾರಂಭವಾಗಿವೆ. ಪ್ರಸ್ತುತ ಅಲ್ಲು ಅರ್ಜುನ್ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಒಂದನ್ನು ತ್ರಿವಿಕ್ರಮ್ ನಿರ್ದೇಶನ ಮಾಡಲಿದ್ದರೆ ಮತ್ತೊಂದನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಲಿದ್ದಾರೆ. ಇವುಗಳಲ್ಲಿ ತ್ರಿವಿಕ್ರಮ್ ಸಿನಿಮಾ ಮೊದಲು ಆರಂಭವಾಗಲಿದ್ದು, ಕನ್ನಡದ ಒಂದು ಸಿನಿಮಾದಲ್ಲಿ ನಟಿಸಿದ್ದ ನಟಿಯೇ ಈಗ ಅಲ್ಲು ಅರ್ಜುನ್​ಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಕನ್ನಡದ ಗಾಳಿಪಟ 2 ಸಿನಿಮಾದಲ್ಲಿ ಅನುಪಮಾ ಪಾತ್ರದಲ್ಲಿ ನಟಿಸಿದ್ದ ಸಂಯುಕ್ತಾ, ಅಲ್ಲು ಅರ್ಜುನ್​ಗೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕೇರಳದ ಈ ಚೆಲುವೆ 2016 ರಲ್ಲಿಯೇ ಚಿತ್ರರಂಗಕ್ಕೆ ಪ್ರವೇಶ ಮಾಡಿದರೂ, ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿರುವುದು 2018ರ ಬಳಿಕವೇ. ತಮಿಳು, ತೆಲುಗು, ಮಲಯಾಳಂ ಮೂರು ಭಾಷೆಗಳಲ್ಲಿಯೂ ಬಹಳ ಬ್ಯುಸಿಯಾಗಿರುವ ಸಂಯುಕ್ತ, ಕನ್ನಡದ ಒಂದು ಸಿನಿಮಾದಲ್ಲಿ ಮಾತ್ರವೇ ನಟಿಸಿದ್ದಾರೆ ಅದುವೇ ಗಾಳಿಪಟ 2.

ಇತ್ತೀಚೆಗಷ್ಟೆ ಸಂಯುಕ್ತಾ ನಟನೆಯ ತೆಲುಗು ಸಿನಿಮಾ ವಿರೂಪಾಕ್ಷ ಸಿನಿಮಾ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಆ ಸಿನಿಮಾದಲ್ಲಿ ಮೆಗಾ ಕುಟುಂಬಕ್ಕೆ ಸೇರಿದ ಸಾಯಿ ಧರಮ್ ತೇಜ್ ನಾಯಕರಾಗಿ ನಟಿಸಿದ್ದಾರೆ. ಇದರ ಜೊತೆಗೆ ಡೆವಿಲ್ ಹೆಸರಿನ ಮತ್ತೊಂದು ತೆಲುಗು ಸಿನಿಮಾದಲ್ಲಿಯೂ ಸಂಯುಕ್ತಾ ನಟಿಸುತ್ತಿದ್ದಾರೆ.

ಇತ್ತೀಚೆಗೆ ಸಂಯುಕ್ತಾ ಹೆಸರು ವಿವಾದದ ಕಾರಣಕ್ಕೆ ಸುದ್ದಿಯಾಗಿತ್ತು. ಇದೇ ವರ್ಷದ ಆರಂಭದಲ್ಲಿ ತಮ್ಮ ಹೆಸರಿನಲ್ಲಿರುವ ಜಾತಿಸೂಚಲ ಮೆನನ್ ಅಡ್ಡನಾಮವನ್ನು ಕೈಬಿಡುತ್ತಿರುವುದಾಗಿ ಸಂಯುಕ್ತಾ ಘೋಷಿಸಿದ್ದರು. ಅದೇ ಸಮಯದಲ್ಲಿ ಸಂಯುಕ್ತಾ ನಟಿಸಿದ್ದ ಮಲಯಾಳಂನ ಬೂಮರಾಂಗ್ ಸಿನಿಮಾ ಬಿಡುಗಡೆ ಆಗಲಿತ್ತು. ಆ ಸಿನಿಮಾದ ನಾಯಕ ಟಾಮ್ ಶೈನ್ ಚಾಕೊ ಹಾಗೂ ನಿರ್ಮಾಪಕರು ಸಂಯುಕ್ತಾ, ಸಿನಿಮಾದ ಪ್ರಮೋಷನ್​ಗೆ ಬರುತ್ತಿಲ್ಲವೆಂದು, ಅಸಹಕಾರ ತೋರುತ್ತಿದ್ದಾರೆಂದು ದೂರಿದ್ದರು. ಆ ವೇಳೆಯಲ್ಲಿ ಮಾತನಾಡಿದ್ದ ಶೈನ್ ಟಾಮ್ ಚಾಕೊ, ”ನೀವು ನಿಮ್ಮ ಸರ್​ನೇಮ್ ಬದಲಾಯಿಸಿಕೊಂಡ ಮಾತ್ರಕ್ಕೆ ಕೆಟ್ಟವರಿಂದ ಒಳ್ಳೆಯವರಾಗಿಬಿಡುವುದಿಲ್ಲ” ಎಂದಿದ್ದರು.

ಈ ಬಗ್ಗೆ ಇತ್ತೀಚೆಗೆ ವಿರೂಪಾಕ್ಷ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ, ಸಂಯುಕ್ತಾ, ನಾನು ಪ್ರಗತಿಪರ ನಿಲುವಿನಿಂದಾಗಿ ನನ್ನ ಹೆಸರಿನಲ್ಲಿದ್ದ ಜಾತಿಸೂಚಕ ಪದವನ್ನು ಕೈಬಿಟ್ಟೆ. ಕೇರಳದಲ್ಲಿ ಹೀಗೆ ಪ್ರಗತಿಪರವಾಗಿ ಆಲೋಚಿಸುವವರ ದೊಡ್ಡ ಸಂಖ್ಯೆ ಇದೆ. ಆದರೆ ಕೆಲವರು ಇನ್ನೂ ಅದೇ ಹಳೆಯ ಆಲೋಚನೆಗಳಲ್ಲಿಯೇ ಮುಳುಗಿದ್ದಾರೆ. ಶೈನ್ ಟಾಮ್ ಚಾಕೋ ಆಡಿದ ಮಾತುಗಳು ನನಗೆ ನೋವು ತಂದಿವೆ” ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us