‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಎ’ ವಿಮರ್ಶೆ: ಪಾತ್ರ ಪರಿಚಯವೇ ಸುದೀರ್ಘ; ಭಾವ ತೀವ್ರತೆ ಅಮೋಘ

Sapta Sagaradaache Ello Review: ನಾಯಕ-ನಾಯಕಿ ನಡುವಿನ ಪ್ರೇಮ ಕಹಾನಿಯನ್ನು ತೋರಿಸಲು ನಿರ್ದೇಶಕರು ಜಾಸ್ತಿ ಒತ್ತು ನೀಡಿದ್ದಾರೆ. ತೀವ್ರವಾದ ಲವ್​ ಸ್ಟೋರಿ ಬಯಸುವ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟ ಆಗುತ್ತದೆ. ಈ ಪ್ರೇಮಿಗಳ ಪಾತ್ರಕ್ಕೆ ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅವರ ಜೋಡಿ ಬಹಳ ಚೆನ್ನಾಗಿ ಹೊಂದಿಕೆ ಆಗಿದೆ.

‘ಸಪ್ತ ಸಾಗರದಾಚೆ ಎಲ್ಲೋ - ಸೈಡ್​ ಎ’ ವಿಮರ್ಶೆ: ಪಾತ್ರ ಪರಿಚಯವೇ ಸುದೀರ್ಘ; ಭಾವ ತೀವ್ರತೆ ಅಮೋಘ
ರಕ್ಷಿತ್​ ಶೆಟ್ಟಿ, ರುಕ್ಮಿಣಿ ವಸಂತ್​

Updated on: Aug 31, 2023 | 11:54 AM

ಚಿತ್ರ: ಸಪ್ತ ಸಾಗರದಾಚೆ ಎಲ್ಲೋ (ಸೈಡ್​ ಎ). ನಿರ್ಮಾಣ: ಪರಂವಾ ಪಿಕ್ಚರ್ಸ್​. ನಿರ್ದೇಶನ: ಹೇಮಂತ್​ ಎಂ. ರಾವ್. ಪಾತ್ರವರ್ಗ: ರಕ್ಷಿತ್​ ಶೆಟ್ಟಿ, ರುಕ್ಮಿಣಿ ವಸಂತ್​, ರಮೇಶ್​ ಇಂದಿರಾ, ಅವಿನಾಶ್​, ಶರತ್​ ಲೋಹಿತಾಶ್ವ, ಅಚ್ಯುತ್​ ಕುಮಾರ್​, ಪವಿತ್ರಾ ಲೋಕೇಶ್​ ಮುಂತಾದವರು. ಸ್ಟಾರ್​: 3/5

ನಟ ರಕ್ಷಿತ್​ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್​ ಎಂ. ರಾವ್ (Hemanth M Rao)​ ಅವರದ್ದು ಹಿಟ್​ ಕಾಂಬಿನೇಷನ್​. ಅವರಿಬ್ಬರು ಒಟ್ಟಾಗಿ ಮಾಡಿದ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಜನಮನ ಗೆದ್ದಿತ್ತು. ಈಗ ಅವರ ಕಾಂಬಿನೇಷನ್​ನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ (ಸೈಡ್​ ಎ) ಸಿನಿಮಾ ಮೂಡಿಬಂದಿದೆ. ಯಾವುದೇ ಅವಸರ ಇಲ್ಲದೇ ಕಥೆಯನ್ನು ನಿರೂಪಿಸುವುದು ಹೇಮಂತ್​ ಎಂ. ರಾವ್​ ಅವರ ಟ್ರೇಡ್​ ಮಾರ್ಕ್​. ಅದನ್ನು ಅವರು ಈ ಬಾರಿಯೂ ಮುಂದುವರಿಸಿದ್ದಾರೆ. ಒಂದು ಗಾಢವಾದ ಪ್ರೇಮಕಥೆಯನ್ನು ಅವರು ಈ ಸಿನಿಮಾದಲ್ಲಿ ಹೇಳಿದ್ದಾರೆ. ಆ ಕಥೆಗೆ ರಕ್ಷಿತ್​ ಶೆಟ್ಟಿ (Rakshit Shetty), ರುಕ್ಮಿಣಿ ವಸಂತ್​ ಮುಂತಾದ ಕಲಾವಿದರು ಜೀವ ತುಂಬಿದ್ದಾರೆ. ಈ ಸಿನಿಮಾದಲ್ಲಿ ಏನೆಲ್ಲ ಇದೆ? ಯಾವ ಅಂಶಗಳು ಹೈಲೈಟ್​ ಆಗಿವೆ? ಕಲಾವಿದರ ನಟನೆ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಈ ವಿಮರ್ಶೆಯಲ್ಲಿದೆ ಉತ್ತರ..

ಮನು (ರಕ್ಷಿತ್​ ಶೆಟ್ಟಿ) ಮತ್ತು ಪ್ರಿಯಾ (ರುಕ್ಮಿಣಿ ವಸಂತ್​) ಎಂಬ ಇಬ್ಬರು ಮಧ್ಯಮ ವರ್ಗದ ಪ್ರೇಮಿಗಳ ಕಹಾನಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿದೆ. ಒಂದಷ್ಟು ಅನಿರೀಕ್ಷಿತ ಘಟನೆಗಳ ಕಾರಣದಿಂದ ಮನು ಜೈಲು ಸೇರುತ್ತಾನೆ. ಆ ಕಷ್ಟದ ಸಂದರ್ಭದಲ್ಲಿ ಈ ಪ್ರೇಮಿಗಳ ನಂಬಿಕೆ ಎಷ್ಟು ಗಟ್ಟಿಯಾಗಿರುತ್ತದೆ? ಮನು ಮಾಡಿದ ತಪ್ಪು ಏನು? ಅಂತಿಮವಾಗಿ ಆ ಕಷ್ಟದಿಂದ ಅವರು ಹೊರಬರುತ್ತಾರೋ ಇಲ್ಲವೋ ಎಂಬುದು ಈ ಸಿನಿಮಾದ ಕಥೆ. ಆದರೆ ಈ ಸಿನಿಮಾದಲ್ಲಿ ನಿರ್ದೇಶಕರು ಹೇಳಿರುವುದು ಅರ್ಧ ಕಥೆ ಮಾತ್ರ. ಇನ್ನುಳಿದ ಕಹಾನಿಯನ್ನು ಅವರು 2ನೇ ಪಾರ್ಟ್​ನಲ್ಲಿ, ಅಂದರೆ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್​ ಬಿ’ ಸಿನಿಮಾದಲ್ಲಿ ಹೇಳಲಿದ್ದಾರೆ.

ಇದನ್ನೂ ಓದಿ: Toby Review: ಮಾತನಾಡದೆ ಮನಸ್ಸಿಗೆ ನಾಟುವ ‘ಟೋಬಿ’; ಇಲ್ಲಿದೆ ಒಂದಷ್ಟು ಪ್ಲಸ್​, ಇನ್ನೊಂದಿಷ್ಟು ಮೈನಸ್​

ಈ ಸಿನಿಮಾದಲ್ಲಿ ಪ್ರೀತಿ-ಪ್ರೇಮ, ಬ್ರೇಕಪ್​, ಕ್ರೈಂ, ಕಪಟತನ ಇತ್ಯಾದಿ ಅಂಶಗಳು ಇವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನಾಯಕ-ನಾಯಕಿ ನಡುವಿನ ಪ್ರೇಮ್​ ಕಹಾನಿಯನ್ನು ತೋರಿಸಲು ನಿರ್ದೇಶಕರು ಜಾಸ್ತಿ ಒತ್ತು ನೀಡಿದ್ದಾರೆ. ಲವ್​ ಸ್ಟೋರಿ ಬಯಸುವ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟ ಆಗುತ್ತದೆ. ಈ ಪ್ರೇಮಿಗಳ ಪಾತ್ರಕ್ಕೆ ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅವರ ಜೋಡಿ ಬಹಳ ಚೆನ್ನಾಗಿ ಹೊಂದಿಕೆ ಆಗಿದೆ. ಪಕ್ಕಾ ಮಿಡಲ್​ ಕ್ಲಾಸ್​ ಹುಡುಗಿಯ ರೀತಿಯಲ್ಲಿ ರುಕ್ಮಿಣಿ ಅವರು ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಕ್ಷಿತ್​ ಶೆಟ್ಟಿ ಕೂಡ ಗಮನಾರ್ಹವಾಗಿ ನಟಿಸಿದ್ದಾರೆ. ಜೈಲಿನಲ್ಲಿ ಕಥಾನಾಯಕ ಎದುರಿಸುವ ಕರಾಳ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಲಾಗಿದೆ. ಆ ಸನ್ನಿವೇಶಗಳಲ್ಲಿ ನಟ ರಮೇಶ್​ ಇಂದಿರಾ ಅವರು ಹೆಚ್ಚು ಮೈಲೇಜ್​ ಪಡೆದಿದ್ದಾರೆ. ಶರತ್​ ಲೋಹಿತಾಶ್ವ ಅವರ ಪಾತ್ರ ಸರ್ಪ್ರೈಸಿಂಗ್​ ಆಗಿದೆ.

ಇದನ್ನೂ ಓದಿ: Kausalya Supraja Rama Review: ನೀವು ನಿಜವಾದ ಗಂಡಸು ಹೌದಾ? ಕೌಸಲ್ಯ ಸುಪ್ರಜಾ ರಾಮ; ಚಿತ್ರ ನೋಡಿದ್ರೆ ಬಯಲಾಗುತ್ತೆ ಸತ್ಯ

ಮೊದಲೇ ಹೇಳಿದಂತೆ ಇದು ಎರಡು ಪಾರ್ಟ್​ನಲ್ಲಿ ಹೇಳಲಾಗುತ್ತಿರುವ ಕಥೆ. ಹಾಗೆ ನೋಡಿದರೆ ಮೊದಲ ಪಾರ್ಟ್​ನ ಬಹುತೇಕ ದೃಶ್ಯಗಳು ಒಂದು ಸುದೀರ್ಘ ಪರಿಚಯದಂತೆ ಗೋಚರವಾಗಿದೆ. ಪ್ರಮುಖ ಪಾತ್ರಗಳನ್ನು ಮತ್ತು ಅವುಗಳ ಗುರಿ, ಉದ್ದೇಶ, ಆಸೆ, ಆಕಾಂಕ್ಷೆಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವ ಸಲುವಾಗಿ ಹೆಚ್ಚಿನ ಸಮಯವನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ. ಆ ಎಲ್ಲ ದೃಶ್ಯಗಳಲ್ಲಿ ಭಾವ ತೀವ್ರತೆಯನ್ನು ಕಟ್ಟಿಕೊಡಲು ನಿರ್ದೇಶಕರು ಮಾಡಿರುವ ಪ್ರಯತ್ನ ಅಮೋಘವಾಗಿದೆ. ಆದರೆ ಅದು ಅಗತ್ಯಕಿಂತಲೂ ಹೆಚ್ಚು ಸುದೀರ್ಘವಾಯಿತೇನೋ ಎಂಬ ಭಾವ ಮೂಡುತ್ತದೆ. ಅಸಲಿ ಕಥೆ ತೆರೆದುಕೊಳ್ಳುವ ವೇಳೆಗೆ ‘ಸೈಡ್​ ಎ’ ಕ್ಲೈಮ್ಯಾಕ್ಸ್​ ಹಂತವನ್ನು ತಲುಪುತ್ತದೆ. ಆಗ ಒಂದು ಬಗೆಯ ಅರೆಬರೆ ಭಾವ ಆವರಿಸುತ್ತದೆ. ಇನ್ನುಳಿದ ಕಥೆವನ್ನು ನೋಡಲು ‘ಸೈಡ್​ ಬಿ’ ಬರುವ ತನಕ ಕಾಯಬೇಕು.

ಇದನ್ನೂ ಓದಿ: ನಿರ್ದೇಶಕರಿಗೆ ಮೆಸೇಜ್​ ಮಾಡಿ ರಕ್ಷಿತ್​ ಶೆಟ್ಟಿ ನಟನೆಯ ಸಿನಿಮಾದಲ್ಲಿ ಚಾನ್ಸ್​ ಕೇಳಿದ ರುಕ್ಮಿಣಿ ವಸಂತ್​

ಇದು ಅಪ್ಪಟ ಪ್ರೇಮಕಥೆಯ ಸಿನಿಮಾ ಆಗಿದ್ದರೂ ಕೂಡ ಹಾಡುಗಳನ್ನು ತುರುಕುವ ಪ್ರಯತ್ನ ಆಗಿಲ್ಲ. ಸಂಗೀತ ನಿರ್ದೇಶಕ ಚರಣ್​ ರಾಜ್​ ಅವರು ಹಿನ್ನೆಲೆ ಸಂಗೀತದಲ್ಲೇ ಹೆಚ್ಚು ಸೆಳೆದುಕೊಳ್ಳುತ್ತಾರೆ. ಅಗತ್ಯ ಇರುವ ಕಡೆ ಅವರು ಮೌನದ ಭಾಷೆಗೆ ಜಾಗ ಮಾಡಿಕೊಟ್ಟಿದ್ದಾರೆ. ಅದ್ವೈತ್​ ಗುರುಮೂರ್ತಿ ಅವರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಈ ಸಿನಿಮಾದಲ್ಲಿನ ಸಂಭಾಷಣೆ ಕೆಲವೊಮ್ಮೆ ಸರಳತೆಯ ಕಾರಣದಿಂದ ಕಾಡುತ್ತದೆ. ಕೃತಕ ಎನಿಸಿದಾಗ ಕಾಡುವ ಗುಣವನ್ನು ಕಳೆದುಕೊಳ್ಳುತ್ತದೆ.

‘ಸೈಡ್​ ಬಿ’ ಬಗ್ಗೆ ನಿರೀಕ್ಷೆ ಮೂಡುವ ರೀತಿಯಲ್ಲಿ ‘ಸೈಡ್​ ಎ’ ಕೊನೆಯಾಗಿದೆ. ಮನು ಮತ್ತು ಪ್ರಿಯಾ ಪ್ರೇಮ್​ ಕಹಾನಿ ಏನಾಯಿತು? ಇಬ್ಬರ ನಡುವೆ ಸುರಭಿ (ಚೈತ್ರಾ ಆಚಾರ್​) ಪಾತ್ರ ಯಾಕೆ ಎಂಟ್ರಿ ನೀಡುತ್ತದೆ? ಅಂತಿಮವಾಗಿ ಮನು ಮನಸ್ಸಿನಲ್ಲಿದ್ದ ಪ್ರೀತಿ ಯಾರ ಮಡಿಲಿಗೆ ಸೇರುತ್ತದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಹುಟ್ಟುಹಾಕುವಲ್ಲಿ ‘ಸೈಡ್​ ಎ’ ಕ್ಲೈಮ್ಯಾಕ್ಸ್​ ಮೂಡಿಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:53 am, Thu, 31 August 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us