Thalaivii Movie Review: ‘ತಲೈವಿ’.. ಇದು ಕೇವಲ ಜಯಲಲಿತಾ ಕತೆಯಲ್ಲ

|

Updated on: Sep 10, 2021 | 2:24 PM

Thalaivii Movie Review: ‘ನಿರ್ದೇಶಕ ಎ.ಎಲ್​. ವಿಜಯ್​ ಅವರು ಜಯಲಲಿತಾ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದಾಗ ನನಗೆ ಅಚ್ಚರಿ ಆಗಿತ್ತು. ಈ ಪಾತ್ರಕ್ಕೆ ನಾನು ಸೂಕ್ತಳಲ್ಲ ಎಂದು ಅನಿಸಿತ್ತು’ ಎಂಬುದಾಗಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಂಗನಾ ಹೇಳಿಕೊಂಡಿದ್ದರು. ಆದರೆ, ಇದನ್ನು ಸುಳ್ಳು ಮಾಡೋಕೆ ‘ತಲೈವಿ’ ಸಿನಿಮಾದಲ್ಲಿ ಕಂಗನಾ ಸಾಕಷ್ಟು ಶ್ರಮ ಹಾಕಿದ್ದಾರೆ.

Thalaivii Movie Review: ‘ತಲೈವಿ’.. ಇದು ಕೇವಲ ಜಯಲಲಿತಾ ಕತೆಯಲ್ಲ
ಕಂಗನಾ
Follow us on

ಸಿನಿಮಾ: ತಲೈವಿ
ಪಾತ್ರವರ್ಗ: ಕಂಗನಾ ರಣಾವತ್​, ಅರವಿಂದ್​​ಸ್ವಾಮಿ, ನಾಸ್ಸರ್​  ಮೊದಲಾದವರು
ನಿರ್ದೇಶನ: ಎ.ಎಲ್​ ವಿಜಯ್​
ನಿರ್ಮಾಣ: ವಿಷ್ಣು ವರ್ಧನ್​ ಇಂದುರಿ, ಶೈಲೇಶ್​ ಸಿಂಗ್​, ಬೃಂದಾ ಪ್ರಸಾದ್
ಸ್ಟಾರ್​: 3/5

‘ನಿರ್ದೇಶಕ ಎ.ಎಲ್​. ವಿಜಯ್​ ಅವರು ಜಯಲಲಿತಾ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದಾಗ ನನಗೆ ಅಚ್ಚರಿ ಆಗಿತ್ತು. ಈ ಪಾತ್ರಕ್ಕೆ ನಾನು ಸೂಕ್ತಳಲ್ಲ ಎಂದು ಅನಿಸಿತ್ತು’ ಎಂಬುದಾಗಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಂಗನಾ ಹೇಳಿಕೊಂಡಿದ್ದರು. ಆದರೆ, ಇದನ್ನು ಸುಳ್ಳು ಮಾಡೋಕೆ ‘ತಲೈವಿ’ ಸಿನಿಮಾದಲ್ಲಿ ಕಂಗನಾ ಸಾಕಷ್ಟು ಶ್ರಮ ಹಾಕಿದ್ದಾರೆ. ಇದು ತೆರೆಮೇಲೆ ಎದ್ದು ಕಾಣುತ್ತದೆ. ಜಯಲಲಿತಾ ಜೀವನದ ಅವಮಾನ ಮತ್ತು ಯಶಸ್ಸಿನ ಹಾದಿಯ ಕಥೆಯನ್ನು ‘ತಲೈವಿ’ ಹೇಳುತ್ತದೆ.

ಜಯಲಲಿತಾ ಏಳುಬೀಳಿನ ಹಾದಿ

ಜಯಲಲಿತಾ ಸಣ್ಣ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಅವರಿಗೆ ಚಿತ್ರರಂಗಕ್ಕೆ ಬರೋದು  ಕೊಂಚವೂ ಇಷ್ಟವಿರಲಿಲ್ಲ. ತಾಯಿಯ ಒತ್ತಾಯಕ್ಕೆ ಬಣ್ಣದ ಬದುಕು ಆರಂಭಿಸುತ್ತಾರೆ. ಆರಂಭದಲ್ಲೇ ಅವರಿಗೆ ಎಂಜಿಆರ್​ ಜತೆ ನಟಿಸೋ ಅವಕಾಶ ಸಿಗುತ್ತದೆ. ಎಂಜಿಆರ್​ ಸಿನಿಮಾದ ಒಂದು ದೃಶ್ಯದ ಶೂಟ್​ ಅವರ ಇಡೀ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಂತರದಲ್ಲಿ ಖುದ್ದು ಎಂ​ಜಿಆರ್​ ಅವರಿಂದ ರಾಜಕೀಯಕ್ಕೆ ಬರೋಕೆ ಜಯಲಲಿತಾಗೆ ಆಹ್ವಾನ ಸಿಗುತ್ತದೆ. ರಾಜಕೀಯ ಕಂಡರೆ ಜಯಾಗೆ ಅಸಹ್ಯ. ಆದರೆ, ಒಂದು ಘಟನೆ ಅವರನ್ನು ರಾಜಕೀಯಕ್ಕೆ ಎಳೆದು ತರುತ್ತದೆ. ಎಂಜಿಆರ್​ ನಿಧನದ ನಂತರ ವಿಧಾನಸಭೆಯಲ್ಲಿ ಆಗುವ ಅವಮಾನ ಅವರನ್ನು ಸಿಟ್ಟಿಗೇಳಿಸುತ್ತದೆ. ಮುಖ್ಯಮಂತ್ರಿ ಆಗಿಯೇ ನಾನು ಮತ್ತೆ ಇಲ್ಲಿಗೆ ಕಾಲಿಡುತ್ತೇನೆ ಎನ್ನುವ ಜಯಲಲಿತಾ ಹಾಗೆಯೇ ಮಾಡಿ ತೋರಿಸುತ್ತಾರೆ.

‘ತಲೈವಿ’ ಕೇವಲ ಜಯಲಲಿತಾ ಕತೆಯಲ್ಲ

‘ನಾನು ನಿಮ್ಮಲ್ಲಿ ತಾಯಿ, ದೇವರು, ಗುರು ಎಲ್ಲವನ್ನೂ ಕಾಣುತ್ತೇನೆ’ ಎಂದು ಜಯಲಲಿತಾ ಅವರು ಎಂಜಿಆರ್​ಗೆ ಹೇಳುತ್ತಾರೆ. ಇದು ಪ್ರೇಕ್ಷರಿಗೆ ಅಕ್ಷರಶಃ ಫೀಲ್​ ಆಗುವಂತೆ ಕಟ್ಟಿಕೊಡಲಾಗಿದೆ. ತಲೈವಿ ಸಿನಿಮಾದಲ್ಲಿ ಜಯಲಲಿತಾ ಎಷ್ಟು ತುಂಬಿಕೊಂಡಿದ್ದಾರೋ ಅದಕ್ಕಿಂತ ಸ್ವಲ್ಪ ಹೆಚ್ಚಿನ ಪಾಲು ಎಂ​ಜಿಆರ್​ ಕಾಣಿಸುತ್ತಾರೆ. ಜಯಲಲಿತಾ ಜೀವನದಲ್ಲಿ ಎಂಜಿಆರ್​ ಎಷ್ಟು ಪ್ರಮುಖರಾಗಿದ್ದರು ಎಂಬುದನ್ನು ತೋರಿಸೋಕೆ ನಿರ್ದೇಶಕರು ಪ್ರಯತ್ನಿಸಿದ್ದಾರೆ. ಈ ಕಾರಣಕ್ಕೆ ಪರದೆಯಮೇಲೆ ಜಯಲಲಿತಾ ಪಾತ್ರದ ಜತೆ ಎಂಜಿಆರ್ ಪಾತ್ರ​ ಕೂಡ ಹೆಚ್ಚು ಕಾಣಿಸುಕೊಳ್ಳುತ್ತದೆ..

ನಟನೆಯಲ್ಲಿ ಅಂಕಗಿಟ್ಟಿಸಿಕೊಳ್ಳುವ ಕಲಾವಿದರು

ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್​ ಮಿಂಚಿದ್ದಾರೆ. ಜಯಲಲಿತಾ ಪಾತ್ರಕ್ಕೆ ಕಂಗನಾ ನ್ಯಾಯ ಒದಗಿಸೋಕೆ ಎಷ್ಟು ಸಾಧ್ಯವೋ ಅದೆಲ್ಲವನ್ನೂ ಪ್ರಯತ್ನಿಸಿದ್ದಾರೆ. ಕೆಲವು ಕಡೆ ನಿರೀಕ್ಷೆ ಮಟ್ಟ ತಲುಪೋಕೆ ಸಾಧ್ಯವಾಗಿಲ್ಲ. ಎಂಜಿಆರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅರವಿಂದ್​ಸ್ವಾಮಿ ನಟನೆ ಗಮನಸೆಳೆಯುತ್ತದೆ. ಎಂಜಿಆರ್​ ಹಾವಭಾವವನ್ನು ಅವರು ಅನುಕರಿಸಲು ಯಶಸ್ವಿಯಾಗಿದ್ದಾರೆ. ಸಿನಿಮಾದಲ್ಲಿ ಬರುವ ಪ್ರತಿ ಪಾತ್ರಗಳೂ ತಕ್ಕ ನ್ಯಾಯ ಒದಗಿಸಿವೆ.

ಪ್ರೇಕ್ಷಕನಿಗೆ ಬೇಕು ತಾಳ್ಮೆ

ಸಿನಿಮಾದ ಮೊದಲಾರ್ಧ ಜಯಲಲಿತಾ ಅವರ ಸಿನಿ ಜೀವನದ ಸುತ್ತವೇ ಸುತ್ತುತ್ತದೆ. ವೀಕ್ಷಕರು ಸ್ವಲ್ಪ ತಾಳ್ಮೆ ತೆಗೆದುಕೊಂಡು ಮೊದಲಾರ್ಧ ವೀಕ್ಷಿಸಬೇಕು. ಜಯಲಲಿತಾ ಬಣ್ಣದ ಬದುಕಿನ ಪ್ರತಿ ಅಂಶವನ್ನೂ ಚಿತ್ರಿಸಿಕೊಡಬೇಕು ಎಂಬುದು ನಿರ್ದೇಶಕರ ಆಲೋಚನೆ ಇರಬಹುದು. ಈ ಕಾರಣಕ್ಕೆ ಅವರು ಕೊಂಚ ವಿವರಿಸಲು ಹೋಗಿದ್ದಾರೆ. ದ್ವಿತೀಯಾರ್ಧದ ಆರಂಭವಾದ ಕೊಂಚ ಸಮಯದ ನಂತರದಲ್ಲಿ ಜಯಲಲಿತಾ ರಾಜಕೀಯ ಬದುಕು ತೆರೆದುಕೊಳ್ಳುತ್ತದೆ. ಅಲ್ಲಿಂದ ಸಿನಿಮಾ ಸ್ವಲ್ಪ ವೇಗ ಪಡೆದುಕೊಳ್ಳುತ್ತದೆ. ಮೊದಲಾರ್ಧದಲ್ಲಿ ನಿರ್ದೇಶಕರು ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ವೀಕ್ಷಕರು ಸ್ವಲ್ಪ ರಿಲೀಫ್​ ಪಡೆಯಬಹುದಿತ್ತು.

ಸಿನಿಮೀಯ ದೃಶ್ಯಗಳಿಗಿಲ್ಲ ಬರ

ಜಯಲಲಿತಾ ಬಯೋಪಿಕ್​ನಲ್ಲಿ ಸಾಕಷ್ಟು ಸಿನಿಮೀಯ ಅಂಶಗಳನ್ನು ನಿರ್ದೇಶಕರು ಸೇರಿಸಿದ್ದಾರೆ. ಜಯಾ ರಾಜಕೀಯಕ್ಕೆ ಸೇರುವುದಕ್ಕೂ ಮೊದಲು ಒಂದು ಮಗುವಿನ ಭೇಟಿ ಆಗಿರುತ್ತದೆ. ಆ ಮಗು ರೈಲ್ವೇ ಗೇಟ್​ ಬಳಿ ವಸ್ತುಗಳನ್ನು ಮಾರಾಟ ಮಾಡುತ್ತಾ ನಿಂತಿರುತ್ತದೆ. ಶಾಲೆಗೆ ಹೋಗುವಂತೆ ಜಯಾ ಮಗುವಿಗೆ ಸ್ಫೂರ್ತಿ ತುಂಬುತ್ತಾರೆ. ಅಂದು ರೈಲ್ವೇ ನಿಲ್ದಾಣದಲ್ಲಿ ಕಾಣಿಕೊಂಡಿದ್ದ  ಮಗುವೇ ಕ್ಲೈಮ್ಯಾಕ್ಸ್​ನಲ್ಲಿ ವೈದ್ಯೆಯಾಗಿ ಬರುತ್ತಾಳೆ ಜಯಲಲಿತಾ ಗೊತ್ತಾಗುತ್ತದೆ. ಈ ರೀತಿ ಸಿನಿಮೀಯ​ ಘಟನೆಗಳನ್ನು ನಿರ್ದೇಶಕರು ಸಾಕಷ್ಟು ತುರುಕಿದ್ದಾರೆ. ಅವರು ರಾಜಕೀಯಕ್ಕೆ ಕಾಲಿಡುವ ಸಂದರ್ಭದಲ್ಲಿ ಸಾಕಷ್ಟು ದೃಶ್ಯಗಳನ್ನು ವೈಭವೀಕರಿಸಲಾಗಿದೆ.

ಇಷ್ಟ ಆಗುವ ರೆಟ್ರೋ ಫೀಲ್​, ಸಂಗೀತ

‘ತಲೈವಿ’ ಕಥೆ ಸಾಗೋದು ರೆಟ್ರೋ ಶೈಲಿಯಲ್ಲೇ. ಇದನ್ನು ನಿರ್ದೇಶಕರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಎಲ್ಲ ವಿಚಾರಗಳನ್ನು ಅವರು ರೆಟ್ರೋ ಶೈಲಿಯಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಸಂಗೀತದ ವಿಚಾರದಲ್ಲಿ ಜಿ.ವಿ. ಪ್ರಕಾಶ್​ ಕುಮಾರ್​ ಮೆಚ್ಚುಗೆ ಗಳಿಸಿಕೊಳ್ಳುತ್ತಾರೆ

ಎದ್ದು ಕಾಣುತ್ತದೆ ನಿರ್ದೇಶಕರ ಶ್ರಮ

ಎ.ಎಲ್​. ವಿಜಯ್​ ಅವರು ತಲೈವಿ ಸಿನಿಮಾದ ರುವಾರಿ. ಬಯೋಪಿಕ್​ ಮಾಡುವಾಗ ಅದರಲ್ಲೂ ಜಯಲಲಿತಾರಂಥ ಮಹಾನ್​ ವ್ಯಕ್ತಿಗಳ ಬಯೋಪಿಕ್​ ಮಾಡುವಾಗ ಸಾಕಷ್ಟು ಎಚ್ಚರಿಕೆವಹಿಸಬೇಕು. ಸ್ವಲ್ಪ ಹೆಚ್ಚು ಕಡಿಮೆ ಆದರೂ ಅಭಿಮಾನಿಗಳು ಸಿಟ್ಟಿಗೇಳುತ್ತಾರೆ. ಒಬ್ಬ ನಿರ್ದೇಶಕ ಜಯಲಲಿತಾ ಜೀವನವನ್ನು ಕಥೆಯನ್ನಾಗಿ ಕ್ರೋಢೀಕರಿಸಿ, ಅದನ್ನು ತೆರೆಮೇಲೆ ತರೋದು ಖಂಡಿತವಾಗಿಯೂ ಒಂದು ದೊಡ್ಡ ಸವಾಲು. ಈ ಸವಾಲನ್ನು ಯಶಸ್ವಿಯಾಗಿ ವಿಜಯ್​ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ‘ಕಂಗನಾ ರಣಾವತ್​ ‘ತಲೈವಿ’ಗೆ ಐದು ರಾಷ್ಟ್ರ ಪ್ರಶಸ್ತಿ ಬರಲೇಬೇಕು, ಇಲ್ಲವಾದರೆ ಬೇಸರವಾಗುತ್ತದೆ’