ಭರ್ಜರಿ ಕಮ್‌ಬ್ಯಾಕ್ ಮಾಡಿದ ನಭಾ ನಟೇಶ್ : ‘ನಾಗಬಂಧಂ’ ಬಳಿಕ ಸಜ್ಜಾಗುತ್ತಿದೆ ‘ಸ್ವಯಂಭು’

ನಭಾ ನಟೇಶ್ ಅವರು ‘ನಾಗಬಂಧಂ’ ಸಿನಿಮಾದ ಸಕ್ಸಸ್ ಬೆನ್ನಲ್ಲೇ ‘ಸ್ವಯಂಭು’ ಮೂಲಕ ಮತ್ತೊಂದು ಗೆಲುವು ಪಡೆಯಲು ಸಜ್ಜಾಗುತ್ತಿದ್ದಾರೆ. ಇದರ ಜೊತೆಗೆ ಸಾಲು ಸಾಲು ಹೊಸ ಅವಕಾಶಗಳು ಕೂಡ ಅವರಿಗೆ ಸಿಗುತ್ತಿವೆ. ‘ನಾಗಬಂಧಂ’ ಸಿನಿಮಾದಲ್ಲಿ ನಭಾ ಅವರ ನಟನೆಗೆ ಪ್ರೇಕ್ಷಕರಿಂದ ಸಿಕ್ಕ ಪ್ರತಿಕ್ರಿಯೆ ಕಂಡು ಅವರಿಗೆ ಖುಷಿ ಆಗಿದೆ.

ಭರ್ಜರಿ ಕಮ್‌ಬ್ಯಾಕ್ ಮಾಡಿದ ನಭಾ ನಟೇಶ್ : ‘ನಾಗಬಂಧಂ’ ಬಳಿಕ ಸಜ್ಜಾಗುತ್ತಿದೆ ‘ಸ್ವಯಂಭು’
Nabha Natesh

Updated on: Jul 10, 2026 | 7:34 PM

ಮುಖ್ಯಾಂಶಗಳು

  • ಸುದೀರ್ಘ ಗ್ಯಾಪ್ ನಂತರ ಬಣ್ಣದ ಲೋಕಕ್ಕೆ ಮರಳಿರುವ ಖ್ಯಾತ ನಟಿ ನಭಾ ನಟೇಶ್.
  • ಪ್ಯಾನ್ ಇಂಡಿಯಾ ‘ನಾಗಬಂಧಂ’ ಸಿನಿಮಾದ ಮೂಲಕ ಭರ್ಜರಿ ಸಕ್ಸಸ್ ಕಂಡ ನಟಿ.
  • ‘ನಾಗಬಂಧಂ’ ಬಳಿಕ ‘ಸ್ವಯಂಭು’ ಸಿನಿಮಾದ ಮೇಲೆಯೂ ಮೂಡಿದೆ ನಿರೀಕ್ಷೆ.

ಕನ್ನಡತಿ ನಭಾ ನಟೇಶ್ (Nabha Natesh) ಅವರಿಗೆ ಪರಭಾಷೆಯಲ್ಲಿ ಬಹಳ ಬೇಡಿಕೆ ಇದೆ. ಸದ್ಯ ಟಾಲಿವುಡ್ ಮತ್ತು ಬಾಲಿವುಡ್ ಅಂಗಳದಲ್ಲಿ ಅವರು ಸಖತ್ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಅವರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ನಾಗಬಂಧಂ’ (Nagabandham) ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಧೂಳೆಬ್ಬಿಸುತ್ತಿದ್ದು, ನಭಾ ನಟೇಶ್ ಅವರ ಅಭಿನಯ ಮತ್ತು ನೃತ್ಯಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಹಾಗೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ಮೇಲ್ನೋಟಕ್ಕೆ ಇದೊಂದು ಸಂಪೂರ್ಣ ಆಧ್ಯಾತ್ಮಿಕ ಹಿನ್ನೆಲೆಯ ಸಿನಿಮಾ ಎಂದು ಅನಿಸಿದರೂ, ಕಮರ್ಷಿಯಲ್ ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಮನರಂಜನಾತ್ಮಕ ಅಂಶಗಳೂ ಈ ಚಿತ್ರದಲ್ಲಿವೆ. ಕಾರಣಾಂತರಗಳಿಂದ ನಭಾ ನಟೇಶ್ ಅವರು ಕೆಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದುಕೊಂಡಿದ್ದರು. ಈಗ ಅವರು ಮತ್ತೆ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ.

ಬಣ್ಣದ ಲೋಕಕ್ಕೆ ಕಮ್‌ಬ್ಯಾಕ್ ಮಾಡಿದ ನಭಾ:

ನಭಾ ನಟೇಶ್ ಅವರಿಗೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಅವರ ಎಡ ಭುಜದ ಮೂಳೆ ಮುರಿದು ಗಂಭೀರವಾದ ಪೆಟ್ಟಾಗಿತ್ತು. ಇದಕ್ಕಾಗಿ ಅವರು ಪದೇ ಪದೇ ಸರಣಿ ಶಸ್ತ್ರಚಿಕಿತ್ಸೆಗಳಿಗೂ ಒಳಗಾಗಬೇಕಾಯಿತು. ಗಾಯದ ತೀವ್ರತೆಯಿಂದಾಗಿ ಸುದೀರ್ಘ ಕಾಲ ಚೇತರಿಸಿಕೊಳ್ಳುತ್ತಿದ್ದ ಅವರು, ಅನಿವಾರ್ಯವಾಗಿ ಚಿತ್ರರಂಗದಿಂದ ಒಂದಷ್ಟು ಕಾಲ ಸಂಪೂರ್ಣ ದೂರ ಉಳಿದಿದ್ದರು. ಇದೀಗ ಎಲ್ಲ ನೋವುಗಳನ್ನು ಮೆಟ್ಟಿ ನಿಂತು ‘ನಾಗಬಂಧಂ’ ಮೂಲಕ ಭರ್ಜರಿ ಸಕ್ಸಸ್‌ ಜೊತೆಗೆ ಕಮ್‌ಬ್ಯಾಕ್ ಮಾಡಿದ್ದಾರೆ.

‘ಸ್ವಯಂಭು’ ಸಿನಿಮಾದಲ್ಲಿ ರಾಣಿ ಗೆಟಪ್:

‘ಕಾರ್ತಿಕೇಯ’, ‘ಕಾರ್ತಿಕೇಯ 2’ ಹಾಗೂ ‘ಸ್ಪೈ’ ರೀತಿಯ ಹಿಟ್ ಚಿತ್ರಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ನಿಖಿಲ್ ಸಿದ್ಧಾರ್ಥ್ ಅಭಿನಯದ ಮುಂದಿನ ಸಿನಿಮಾ ‘ಸ್ವಯಂಭು’ ಮೇಲೆ ಈಗಾಗಲೇ ಭಾರಿ ನಿರೀಕ್ಷೆಗಳಿವೆ. ಈ ಪಿರಿಯಾಡಿಕಲ್ ಹೈ-ಬಜೆಟ್ ಸಿನಿಮಾದಲ್ಲಿ ನಭಾ ನಟೇಶ್ ಸುಂದರವಲ್ಲಿ ಎಂಬ ವಿಶೇಷವಾದ ಪಾತ್ರವನ್ನು ಮಾಡಿದ್ದಾರೆ.

ಇದನ್ನೂ ಓದಿ: ನನ್ನ ದೇಹದಲ್ಲಿ ಸ್ಟೀಲ್ ರಾಡ್, ಹಲವು ಸ್ಕ್ರೂಗಳಿವೆ; ನಭಾ ನಟೇಶ್ ಬೇಸರ

ಘಟಾನುಘಟಿ ತಂತ್ರಜ್ಞರ ಜೊತೆ ಕೆಲಸ:

ಈ ಚಿತ್ರಕ್ಕೆ ಭರತ್ ಕೃಷ್ಣಮಾಚಾರಿ ನಿರ್ದೇಶನ ಮಾಡುತ್ತಿದ್ದು, ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ‘ಬಾಹುಬಲಿ’, ‘ಆರ್​ಆರ್​ಆರ್​’ ಖ್ಯಾತಿಯ ಸೆಂತಿಲ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಈಗಾಗಲೇ ಶೂಟಿಂಗ್ ಬಹುತೇಕ ಮುಗಿದಿದ್ದು, ತೆರೆಗೆ ಬರಲು ಸಜ್ಜಾಗುತ್ತಿದೆ. ಸಣ್ಣ ಗ್ಯಾಪ್‌ನ ನಂತರ ತೆಲುಗು ಚಿತ್ರರಂಗದಲ್ಲಿ ಮತ್ತೆ ನಭಾ ನಟೇಶ್ ಆ್ಯಕ್ಟೀವ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us