‘ಹನುಮಾನ್​’ ಸಿನಿಮಾ ನೋಡಿ ಭೇಷ್​ ಎಂದ ಬಾಲಯ್ಯ; ಹೆಚ್ಚಿತು ಚಿತ್ರತಂಡದ ಬಲ

|

Updated on: Jan 18, 2024 | 12:23 PM

ಬಾಲಯ್ಯ ಅವರಿಗಾಗಿ ‘ಹನುಮಾನ್​’ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಅವರ ಜೊತೆ ಚಿತ್ರತಂಡದವರು ಕೂಡ ಇದ್ದರು. ನಿರ್ದೇಶನ, ಛಾಯಾಗ್ರಹಣ, ವಿಎಫ್​ಎಕ್ಸ್​, ಸಂಗೀತ ಮುಂತಾದ ವಿಭಾಗವನ್ನು ಬಾಲಯ್ಯ ಶ್ಲಾಘಿಸಿದ್ದಾರೆ. ಎಲ್ಲ ಕಲಾವಿದರ ನಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾ ಗೆದ್ದಿದ್ದಕ್ಕೆ ಅವರು ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

‘ಹನುಮಾನ್​’ ಸಿನಿಮಾ ನೋಡಿ ಭೇಷ್​ ಎಂದ ಬಾಲಯ್ಯ; ಹೆಚ್ಚಿತು ಚಿತ್ರತಂಡದ ಬಲ
‘ಹನುಮಾನ್​’ ಚಿತ್ರತಂಡದ ಜೊತೆ ಬಾಲಯ್ಯ
Follow us on

ಚಿತ್ರಮಂದಿರಗಳಲ್ಲಿ ಹನುಮಾನ್​’ ಸಿನಿಮಾ (Hanuman Movie) ಸದ್ದು ಮಾಡುತ್ತಿದೆ. ಸೂಪರ್​ ಹೀರೋ ಕಾನ್ಸೆಪ್ಟ್​ ಹೊಂದಿರುವ ಈ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಯುವ ನಟ ತೇಜ ಸಜ್ಜಾ (Teja Sajja) ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈಗಾಗಲೇ ಶಿವರಾಜ್​ಕುಮಾರ್​ ಅವರು ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ಚಿತ್ರ ನೋಡುವುದಾಗಿ ಹೇಳಿದ್ದಾರೆ. ಈಗ ಟಾಲಿವುಡ್​ನ ಸ್ಟಾರ್​ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ‘ಹನುಮಾನ್​’ ಚಿತ್ರ ನೋಡಿ ಭೇಷ್​ ಎಂದಿದ್ದಾರೆ. ಅವರ ಬೆಂಬಲದಿಂದಾಗಿ ಸಿನಿಮಾ ತಂಡಕ್ಕೆ ಹೊಸ ಚೈತನ್ಯ ಬಂದಂತೆ ಆಗಿದೆ.

ಬಾಕ್ಸ್​ ಆಫೀಸ್​ನಲ್ಲಿ ‘ಹನುಮಾನ್​’ ಸಿನಿಮಾ ಉತ್ತಮವಾಗಿ ಕಲೆಕ್ಷನ್​ ಮಾಡುತ್ತಿದೆ. ಅದರ ಜೊತೆಗೆ ಸೆಲೆಬ್ರಿಟಿಗಳ ಮೆಚ್ಚುಗೆ ಸಿಗುತ್ತಿರುವುದರಿಂದ ಗಳಿಕೆ ಹೆಚ್ಚುತ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆದ ಈ ಸಿನಿಮಾವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ವಿಶೇಷವಾಗಿ ಆಂಜನೇಯನ ಭಕ್ತರಿಗೆ ಈ ಸಿನಿಮಾ ಮೆಚ್ಚುಗೆ ಆಗುತ್ತಿದೆ. ‘ಈ ಸಿನಿಮಾ ಗೆಲ್ಲುತ್ತದೆ ಅಂತ ನನಗೆ ಮೊದಲೇ ಭರವಸೆ ಇತ್ತು’ ಎಂದು ಬಾಲಯ್ಯ ಹೇಳಿದ್ದಾರೆ.

ಇದನ್ನೂ ಓದಿ: ‘ಹನುಮಾನ್’ ಸಿನಿಮಾ ನೋಡಿ ಶಿವಣ್ಣ ಹೇಳಿದ್ದು ಹೀಗೆ

ಬಾಲಯ್ಯ ಅವರಿಗಾಗಿ ‘ಹನುಮಾನ್​’ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಅವರ ಜೊತೆ ಚಿತ್ರತಂಡದವರು ಕೂಡ ಇದ್ದರು. ‘ಸಿನಿಮಾ ತುಂಬ ಚೆನ್ನಾಗಿದೆ. ಇದರಲ್ಲಿ ಒಳ್ಳೆಯ ಕಂಟೆಂಟ್​ ಇದೆ. ಅದನ್ನು ನಿರ್ದೇಶಕರು ಉತ್ತಮವಾಗಿ ಪ್ರಸ್ತುತಪಡಿಸಿದ್ದಾರೆ. ಕಣ್ಣಿಗೆ ಹಬ್ಬದಂತಿದೆ. ಆಂಜನೇಯ ಸ್ವಾಮಿ, ಶ್ರೀರಾಮನ ಕೃಪೆ ಇದೆ’ ಎಂದು ಹೇಳಿರುವ ಬಾಲಯ್ಯ ಅವರು ನಿರ್ದೇಶನ, ಛಾಯಾಗ್ರಹಣ, ವಿಎಫ್​ಎಕ್ಸ್​, ಸಂಗೀತ ಮುಂತಾದ ವಿಭಾಗವನ್ನು ಶ್ಲಾಘಿಸಿದ್ದಾರೆ.

ಈ ಸಿನಿಮಾದಲ್ಲಿ ತೇಜ ಸಜ್ಜಾ ಅವರಿಗೆ ಜೋಡಿಯಾಗಿ ಅಮೃತಾ ಐಯ್ಯರ್​ ನಟಿಸಿದ್ದಾರೆ. ಕನ್ನಡದ ನಟ ರಾಜ್​ ದೀಪಕ್​ ಶೆಟ್ಟಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ವರಲಕ್ಷ್ಮೀ ಶರತ್​ ಕುಮಾರ್​ ಅವರು ಹೀರೋ ಅಕ್ಕನ ಪಾತ್ರದಲ್ಲಿ ಮಿಂಚಿದ್ದಾರೆ. ಎಲ್ಲ ಕಲಾವಿದರ ನಟನೆಗೆ ಬಾಲಯ್ಯ ಮೆಚ್ಚುಗೆ ಸೂಚಿಸಿದ್ದಾರೆ. ‘ಹನುಮಾನ್​’ ಸಿನಿಮಾ ಗೆದ್ದಿದ್ದಕ್ಕೆ ಅವರು ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ತಾವು ಎರಡನೇ ಪಾರ್ಟ್​ಗಾಗಿ ಕಾದಿರುವುದಾಗಿ ಅವರು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ