ಪ್ರವಾಹ ಪೀಡಿತರಿಗಾಗಿ ಮಿಡಿದ ಬಾಲಯ್ಯನ ಮನ: 50 ಲಕ್ಷ ದೇಣಿಗೆ

Nandamuri Balakrishna: ನಂದಮೂರಿ ಬಾಲಕೃಷ್ಣ ಸಿನಿಮಾಗಳಲ್ಲಿ ಮಾತ್ರವಲ್ಲದೆ ಬಹಿರಂಗ ಕಾರ್ಯಕ್ರಮಗಳಲ್ಲಿಯೂ ಸಹ ಅವರು ತಮ್ಮ ಮ್ಯಾನರಿಸಂಗಳಿಂದ, ನೇರಾ-ನೇರ ಖಡಕ್ ಮಾತುಗಳಿಂದ ಜನರನ್ನು ರಂಜಿಸುತ್ತಾರೆ. ಜೊತೆಗೆ ಮಹಾ ಕೋಪಿಷ್ಟರು ಸಹ. ಆದರೆ ಅವರ ಆಪ್ತರು ಹೇಳುವಂತೆ ಬಾಲಯ್ಯ ಬಹಳ ಮೃದು ಮನಸ್ಸಿನವರು, ಪರರ ಕಷ್ಟಕ್ಕೆ ಬೇಗನೆ ಕರಗುವವರು. ಇದೀಗ ಬಾಲಯ್ಯನ ಮಾನವೀಯ ಮುಖ ಮತ್ತೊಮ್ಮೆ ಬೆಳಕಿಗೆ ಬಂದಿದೆ.

ಪ್ರವಾಹ ಪೀಡಿತರಿಗಾಗಿ ಮಿಡಿದ ಬಾಲಯ್ಯನ ಮನ: 50 ಲಕ್ಷ ದೇಣಿಗೆ
Balayya

Updated on: Aug 31, 2025 | 5:03 PM

ನಂದಮೂರಿ ಬಾಲಕೃಷ್ಣ (Nandamuri Balakrishna), ತೆಲುಗು ಚಿತ್ರರಂಗದ ಸ್ಟಾರ್ ನಟ ಜೊತೆಗೆ ಸಕ್ರಿಯ ರಾಜಕಾರಣಿ. ಬಾಲಯ್ಯ ತಮ್ಮ ಪವರ್​ಫುಲ್ ಆಕ್ಷನ್ ಸಿನಿಮಾಗಳಿಂದ ಜನಪ್ರಿಯರು. ಅವರ ಡೈಲಾಗ್​​ಗಳಿಗೆ ಜನ ಹುಚ್ಚೆದ್ದು ಕುಣಿಯುತ್ತಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ಬಹಿರಂಗ ಕಾರ್ಯಕ್ರಮಗಳಲ್ಲಿಯೂ ಸಹ ಅವರು ತಮ್ಮ ಮ್ಯಾನರಿಸಂಗಳಿಂದ, ನೇರಾ-ನೇರ ಖಡಕ್ ಮಾತುಗಳಿಂದ ಜನರನ್ನು ರಂಜಿಸುತ್ತಾರೆ. ಜೊತೆಗೆ ಮಹಾ ಕೋಪಿಷ್ಟರು ಸಹ. ಆದರೆ ಅವರ ಆಪ್ತರು ಹೇಳುವಂತೆ ಬಾಲಯ್ಯ ಬಹಳ ಮೃದು ಮನಸ್ಸಿನವರು, ಪರರ ಕಷ್ಟಕ್ಕೆ ಬೇಗನೆ ಕರಗುವವರು. ಇದೀಗ ಬಾಲಯ್ಯನ ಮಾನವೀಯ ಮುಖ ಮತ್ತೊಮ್ಮೆ ಬೆಳಕಿಗೆ ಬಂದಿದೆ.

ಬಾಲಕೃಷ್ಣ, ಆಂಧ್ರ ಪ್ರದೇಶದ ಹಿಂದೂಪುರದ ಹಾಲಿ ಶಾಸಕ. ಈ ಬಾರಿ ಅವರಿಗೆ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆತಿಲ್ಲ. ಇದೀಗ ಆಂಧ್ರದ ನೆರೆಯ ರಾಜ್ಯವಾಗಿರುವ ತೆಲಂಗಾಣದಲ್ಲಿ ಭಾರಿ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತೆಲುಗು ರಾಜ್ಯದ ಜನರ ಕಷ್ಟಕ್ಕೆ ಮರುಗಿರುವ ಬಾಲಯ್ಯ, ಪಕ್ಷ ಭೇದ ಮರೆತು ನೆರೆ ಸಂತ್ರಸ್ತರ ಸಹಾಯಕ್ಕೆ ಧಾವಿಸಿದ್ದಾರೆ. ನೆರೆ ಪರಿಹಾರಕ್ಕೆ ಬರೋಬ್ಬರಿ 50 ಲಕ್ಷ ರೂಪಾಯಿ ಹಣವನ್ನು ದೇಣಿಗೆ ನೀಡಿದ್ದಾರೆ.

ತೆಲಂಗಾಣದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ಹಣವನ್ನು ನಂದಮೂರಿ ಬಾಲಕೃಷ್ಣ ದೇಣಿಗೆಯಾಗಿ ನೀಡಿದ್ದಾರೆ. ಇತ್ತೀಚೆಗಷ್ಟೆ ಬಾಲಕೃಷ್ಣ ಅವರ ಸಿನಿಮಾ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್​ ಲಂಡನ್​ನವರು ಸನ್ಮಾನಿಸಿದ್ದಾರೆ. ಇದೇ ಕಾರಣಕ್ಕೆ ಇತ್ತೀಚೆಗೆ ಬಾಲಯ್ಯ ಅವರಿಗೆ ಅಭಿನಂದನೆ ಸಲ್ಲಿಸಲಾಯ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಯ್ಯ, ‘ತೆಲಂಗಾಣ ಪ್ರವಾಹ ಪೀಡಿತರ ಸಹಾಯಾರ್ಥವಾಗಿ 50 ಲಕ್ಷ ರೂಪಾಯಿ ದನರಾಶಿಯನ್ನು ಸಿಎಂ ಪರಿಹಾರ ನಿಧಿಗೆ ನೀಡಲಿದ್ದೇನೆ’ ಎಂದರು.

ಇದನ್ನೂ ಓದಿ:ಟ್ರೆಂಡ್ ಫಾಲೋ ಮಾಡಿದ ನಂದಮೂರಿ ಬಾಲಕೃಷ್ಣ, ಕೊಟ್ಟರು ದೊಡ್ಡ ಉಡುಗೊರೆ

ಮುಂದುವರೆದು ಮಾತನಾಡಿದ ಬಾಲಯ್ಯ, ‘ಎಲ್ಲರೂ ಇದ್ದಾಗ ಘೋಷಿಸುವುದು ನನಗೆ ಸರಿಬರುವುದಿಲ್ಲ ಅದು ರಾಜಕೀಯ ಅಂದುಕೊಳ್ಳುತ್ತಾರೆ. ಆದರೆ ಇದು ಪ್ರಜಾ ಸೇವೆ. ತಂದೆಯವರು ರಾಯಲಸೀಮ ಬರ ನಿವಾರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಣ ಸಹಾಯ ಮಾಡಿದ್ದರು. ನಾನು ಅವರ ದಾರಿಯಲ್ಲಿ ನಡೆಯುತ್ತಿದ್ದೇನೆ ಅಷ್ಟೆ. ಪ್ರವಾಹದಲ್ಲಿ ಹಲವರು ಆಸ್ತಿ ಕಳೆದುಕೊಂಡಿದ್ದಾರೆ. ರೈತರು ಬೆಳೆ ಕಳೆದುಕೊಂಡಿದ್ದಾರೆ. 50 ಲಕ್ಷದಿಂದ ದೊಡ್ಡ ಬದಲಾವಣೆ ಆಗದು, ಆದರೆ ಮುಂದೆಯೂ ಸಹ ನಾನು ಅವರ ಸಹಾಯಕ್ಕೆ ನಿಲ್ಲಲಿದ್ದೇನೆ’ ಎಂದರು.

‘ನನ್ನ ಅಭಿಮಾನಿಗಳು ಇಂಥಹಾ ಪರಿಸ್ಥಿತಿ ಜನರ ಸಹಾಯಕ್ಕೆ ಧಾವಿಸುತ್ತಾರೆ ಎಂಬ ವಿಶ್ವಾಸ ನನಗೆ ಇದೆ. ಜನರಿಗೆ ಏನೇ ಸಮಸ್ಯೆ ಆದರೂ ನನ್ನ ಅಭಿಮಾನಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಸಹಾಯಕ್ಕೆ ಧಾವಿಸುತ್ತಾರೆ. ನಾನು ಅವರಿಗೆ ಬೆಂಬಲವಾಗಿ ಇರಲಿದ್ದೇನೆ’ ಎಂದಿದ್ದಾರೆ ಬಾಲಯ್ಯ. ತೆಲುಗಿನ ಯಾವೊಬ್ಬ ನಟನೂ ಪರಿಹಾರ ಘೋಷಿಸುವ ಮುಂಚೆಯೇ ಬಾಲಯ್ಯ ಪರಿಹಾರ ಘೋಷಣೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ