ಟ್ರೆಂಡ್ ಫಾಲೋ ಮಾಡಿದ ನಂದಮೂರಿ ಬಾಲಕೃಷ್ಣ, ಕೊಟ್ಟರು ದೊಡ್ಡ ಉಡುಗೊರೆ

Nandamuri Balakrishna: ಸಿನಿಮಾಗಳು ಯಶಸ್ವಿಯಾದರೆ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರಮುಖರಿಗೆ ಐಶಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಟ್ರೆಂಡ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಶುರುವಾಗಿದೆ. ಇದು ಶುರುವಾಗಿದ್ದು ರಜನೀಕಾಂತ್​ರ ‘ಜೈಲರ್’ ಸಿನಿಮಾ ಮೂಲಕ, ಈಗ ನಂದಮೂರಿ ಬಾಲಕೃಷ್ಣ ಸಹ ಈ ಟ್ರೆಂಡ್ ಫಾಲೋ ಮಾಡಿದ್ದಾರೆ.

ಟ್ರೆಂಡ್ ಫಾಲೋ ಮಾಡಿದ ನಂದಮೂರಿ ಬಾಲಕೃಷ್ಣ, ಕೊಟ್ಟರು ದೊಡ್ಡ ಉಡುಗೊರೆ
Balakrishna Ss Thaman

Updated on: Feb 19, 2025 | 7:42 AM

ನಟ, ಶಾಸಕ ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’ ಸಿನಿಮಾ ಸಖತ್ ಹಿಟ್ ಆಗಿದೆ. ಸಂಕ್ರಾಂತಿಗೆ ಬಿಡುಗಡೆ ಆಗಿದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಜೊತೆಯಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಗೇಮ್ ಚೇಂಜರ್ ಮತ್ತು ಜೊತೆಯಲ್ಲಿ ಬಿಡುಗಡೆ ಆದ ಇತರೆ ಸಿನಿಮಾಗಳನ್ನು ಹಿಂದಿಕ್ಕಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿತು.

‘ಡಾಕೂ ಮಹಾರಾಜ್’ ಸಿನಿಮಾ ವಿಶ್ವದಾದ್ಯಂತ ಸುಮಾರು 150 ಕೋಟಿಗೂ ಹೆಚ್ಚಿನ ಮೊತ್ತವನ್ನು ಕಲೆ ಹಾಕಿತು. ಸೀಮಿತ ಬಜೆಟ್​ನಲ್ಲಿ ನಿರ್ಮಿಸಿದ ಈ ಸಿನಿಮಾ ಇಷ್ಟು ದೊಡ್ಡ ಕಲೆಕ್ಷನ್ ಮಾಡಿರುವುದು ಚಿತ್ರತಂಡಕ್ಕೆ, ಸಿನಿಮಾದ ನಾಯಕ ಸಹ ನಿರ್ಮಾಪಕ ಬಾಲಕೃಷ್ಣಗೆ ಅತೀವ ಸಂತಸ ನೀಡಿದೆ. ಇದೇ ಕಾರಣಕ್ಕೆ ಅವರು ಸಿನಿಮಾದ ಯಶಸ್ಸಿಗೆ ಮೂಲ ಕಾರಣಕರ್ತರಲ್ಲಿ ಒಬ್ಬರಾದ ಸಂಗೀತ ನಿರ್ದೇಶಕ ಎಸ್​ಎಸ್ ತಮನ್​ಗೆ ದುಬಾರಿ ಉಡುಗೊರೆ ನೀಡಿದ್ದಾರೆ.

ಸಂಗೀತ ನಿರ್ದೇಶಕ ಎಸ್​ಎಸ್ ತಮನ್​ಗೆ ಐಶಾರಾಮಿ ಪೋರ್ಶೆ ಕಾರನ್ನು ನಂದಮೂರಿ ಬಾಲಕೃಷ್ಣ ಉಡುಗೊರೆಯಾಗಿ ನೀಡಿದ್ದಾರೆ. ಎಸ್​ಎಸ್ ತಮನ್​, ಕಾರುಗಳ ಬಗ್ಗೆ ಕ್ರೇಜ್ ಉಳ್ಳ ವ್ಯಕ್ತಿ. ಇದೇ ಕಾರಣಕ್ಕೆ ನಂದಮೂರಿ ಬಾಲಕೃಷ್ಣ ಇದೀಗ ಎಸ್​ಎಸ್ ತಮನ್​ಗೆ ಪೋರ್ಶೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಬೆಲೆ ಸುಮಾರು 2 ಕೋಟಿಗೂ ಹೆಚ್ಚು. ‘ಡಾಕೂ ಮಹಾರಾಜ್’ ಸಿನಿಮಾದ ‘ದಬಿಡಿ-ದಿಬಿಡಿ’ ಹಾಡು ಭಾರಿ ವೈರಲ್ ಆಗಿತ್ತು, ಸಿನಿಮಾಕ್ಕೆ ಒಳ್ಳೆಯ ಆರಂಭ ದೊರಕಿಸಿಕೊಡುವಲ್ಲಿ ಈ ಹಾಡು ಪ್ರಮುಖ ಪಾತ್ರವಹಿಸಿತ್ತು. ಅಲ್ಲದೆ ಸಿನಿಮಾದ ಇತರೆ ಹಾಡುಗಳು ಸಹ ಹಿಟ್ ಆಗಿದ್ದವು. ಹಾಗಾಗಿ ಬಾಲಯ್ಯ ತಮನ್​ಗೆ ದುಬಾರಿ ಉಡುಗೊರೆ ನೀಡಿದ್ದಾರೆ.

ಇದನ್ನೂ ಓದಿ:ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ

ಇತ್ತೀಚೆಗೆ ಹೀಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವ ಟ್ರೆಂಡ್ ಹೆಚ್ಚಾಗುತ್ತಿದೆ. ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ ಬ್ಲಾಕ್ ಬಸ್ಟರ್ ಆದಾಗ ಅದರ ನಿರ್ಮಾಪಕ ಕಲಾನಿಧಿ ಮಾರನ್ ಅವರು ನಟ ರಜನೀಕಾಂತ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಮತ್ತು ನಿರ್ದೇಶಕ ನೆಲ್ಸನ್​ಗೆ ಐಶಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಜೊತೆಗೆ ಭಾರಿ ಮೊತ್ತದ ಹಣವನ್ನು ಸಹ ಉಡುಗೊರೆಯಾಗಿ ನೀಡಿದ್ದರು. ಅಲ್ಲಿಂದ ಪ್ರಾರಂಭವಾದ ಈ ಟ್ರೆಂಡ್ ಅನ್ನು ಹಲವು ಮಂದಿ ಫಾಲೋ ಮಾಡುತ್ತಿದ್ದಾರೆ. ‘ಮಹಾರಾಜ’ ಸಿನಿಮಾ ನಿರ್ದೇಶಕರಿಗೆ ವಿಜಯ್ ಸೇತುಪತಿ ಐಶಾರಾಮಿ ಕಾರು ಉಡುಗೊರೆಯಾಗಿ ಕೊಟ್ಟರು. ‘ಮಾಮನ್ನನ್’ ಸಿನಿಮಾ ನಿರ್ದೇಶಿಸಿದ ಮಾರಿ ಸೆಲ್ವರಾಜ್​ಗೆ ಉದಯ್​ನಿಧಿ ಸ್ಟಾಲಿನ್​ ಮಿನಿ ಕೂಪರ್ ಕಾರು ಉಡುಗೊರೆಯಾಗಿ ಕೊಟ್ಟರು. ‘ಕಾಟೇರ’ ಗೆದ್ದಾಗ ಕತೆಗಾರ ಜಡೇಶ್ ಮತ್ತು ಸಂಭಾಷಣೆಕಾರ ಮಾಸ್ತಿಗೆ ದರ್ಶನ್​ ಮತ್ತು ನಿರ್ಮಾಪಕರು ಸ್ವಿಫ್ಟ್ ಕಾರುಗಳನ್ನು ಉಡುಗೊರೆಯಾಗಿ ನಿಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us