15 ಕೋಟಿ ಖರ್ಚು ಮಾಡಿ ಮೂರನೇ ಪತ್ನಿ ವಿರುದ್ಧ ರಿವೇಂಜ್: ನರೇಶ್ ಹೇಳಿದ್ದು ಹೀಗೆ

|

Updated on: May 11, 2023 | 9:11 PM

Naresh-Pavithra Lokesh: ನರೇಶ್ ಪವಿತ್ರಾ ಲೋಕೇಶ್ ನಟನೆಯ ಮಳ್ಳಿ ಪೆಳ್ಳಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಅವರಿಬ್ಬರ ಜೀವನದಲ್ಲಿ ಇತ್ತೀಚೆಗೆ ನಡೆದ ಘಟನೆಗಳನ್ನೇ ಇರಿಸಿಕೊಂಡು ಸಿನಿಮಾ ಮಾಡಲಾಗಿರುವುದು ಟ್ರೈಲರ್​ನಿಂದ ತಿಳಿದು ಬರುತ್ತಿದೆ. ಆದರೆ ನರೇಶ್ ಹೇಳುತ್ತಿರುವುದೇ ಬೇರೆ.

15 ಕೋಟಿ ಖರ್ಚು ಮಾಡಿ ಮೂರನೇ ಪತ್ನಿ ವಿರುದ್ಧ ರಿವೇಂಜ್: ನರೇಶ್ ಹೇಳಿದ್ದು ಹೀಗೆ
ಮಳ್ಳಿ-ಪೆಳ್ಳಿ
Follow us on

ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ (Pavithra Lokesh) ನಟಿಸಿರುವ ‘ಮಳ್ಳಿ ಪೆಳ್ಳಿ‘ ಕನ್ನಡದಲ್ಲಿ ಮತ್ತೆ ಮದುವೆ (Malli Pelli) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೀವನದಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನೇ ಆಧರಿಸಿದ ಸಿನಿಮಾ ಇದಾಗಿರುವ ಬಗ್ಗೆ ಹಲವು ಸಾಕ್ಷ್ಯಗಳು ಟ್ರೈಲರ್​ನಲ್ಲಿವೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಆತ್ಮೀಯತೆ ಬಗ್ಗೆ ನರೇಶ್​ರ ಮೂರನೇ ಪತ್ನಿ ಜಗಳ ಮಾಡಿದ್ದು, ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ, ಮೈಸೂರು ಹೋಟೆಲ್​ನಲ್ಲಿ ನಡೆದ ಘಟನೆಗಳ ದೃಶ್ಯಗಳು ಸಿನಿಮಾದಲ್ಲಿವೆ.

ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ನಟ ನರೇಶ್, ಇದು ನನ್ನ ಜೀವನ ಆಧರಿಸಿದ ಸಿನಿಮಾ ಎಂದು ನೀವೇ ಊಹಿಸಿಬಿಟ್ಟಿದ್ದೀರ, ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದರೆ ಬೇರೆಯದೇ ಅನುಭವ ಆಗಲಿದೆ ಎಂದಿದ್ದಾರೆ.

ನಿಮ್ಮ ಮೂರನೇ ಪತ್ನಿ ರಮ್ಯಾ ರಘುಪತಿ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಮಾಡಿದ ಸಿನಿಮಾ ಇದಾ? ಎಂಬ ಪ್ರಶ್ನೆಗೆ ಉತ್ತರಿಸಿದ ನರೇಶ್, ದ್ವೇಷ ತೀರಿಸಿಕೊಳ್ಳಲು ಕತ್ತಿ, ಗುರಾಣಿ ಹಿಡಿದು ಹೋರಾಡಬೇಕಾಗುತ್ತದೆ. ಪೊಲೀಸ್ ಠಾಣೆ ಮೆಟ್ಟಿಲು ಏರಬೇಕಾಗುತ್ತದೆ, ಕೋರ್ಟ್​ಗೆ ತಿರುಗಬೇಕಾಗುತ್ತದೆ. ಸಿನಿಮಾ ಮೂಲಕ ಹೇಗೆ ದ್ವೇಷ ತೀರಿಸಿಕೊಳ್ಳಲು ಸಾಧ್ಯ, 15 ಕೋಟಿ ಖರ್ಚು ಮಾಡಿ ಯಾರ ಮೇಲೋ ದ್ವೇಷ ತೀರಿಸಿಕೊಳ್ಳುವ ವ್ಯಕ್ತಿ ನಾನಲ್ಲ ಎಂದಿದ್ದಾರೆ ನಟ ನರೇಶ್.

ಪವಿತ್ರಾ ಲೋಕೇಶ್ ಕರ್ನಾಟಕದಲ್ಲಿ ಜನಪ್ರಿಯ, ನಾನು ತೆಲುಗು ರಾಜ್ಯಗಳಲ್ಲಿ ಜನಪ್ರಿಯ ಹಾಗಾಗಿ ಈ ಎರಡೂ ಭಾಷೆಗಳ ಜೊತೆಗೆ ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿಯೂ ಸಿನಿಮಾವನ್ನು ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದೇವೆ, ನಿಜ ಹೇಳಬೇಕೆಂದರೆ ಮಳ್ಳಿ-ಪೆಳ್ಳಿ ರೀತಿಯ ಸಿನಿಮಾಗಳನ್ನು 600 ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಬೇಕು ಅಷ್ಟು ಒಳ್ಳೆಯ ಕಂಟೆಂಟ್ ಇದು. ಸದ್ಯಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆ ಮಾಡುತ್ತೇವೆ, ಮುಂದೆ ಅವಕಾಶ ದೊರೆತರೆ ಇನ್ನೂ ಹೆಚ್ಚಿನ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ ನರೇಶ್.

ಇದನ್ನೂ ಓದಿ:Pavitra Lokesh Marriage: ಪವಿತ್ರಾ ಲೋಕೇಶ್​ ತುಟಿಗೆ ಮುತ್ತಿಟ್ಟು ಮದುವೆ ನ್ಯೂಸ್​ ತಿಳಿಸಿದ ನರೇಶ್​; ವಿಡಿಯೋ ವೈರಲ್​

ಸಿನಿಮಾದ ನಿರ್ದೇಶಕ ಎಂಎಸ್ ರಾಜು ಅವರದ್ದು ಬಹಳ ಬೋಲ್ಡ್ ಆಲೋಚನೆ. ಪ್ರಪಂಚದಲ್ಲಿ ಏನು ನಡೆಯುತ್ತಿದೆಯೋ ಅದನ್ನೇ ನಾವು ತೋರಿಸಿದ್ದೇವೆ. ಇದು ಯಾರೋ ಒಬ್ಬರಿಗೆ ಸಂಬಂಧಿಸಿದ ಸಿನಿಮಾ ಅಲ್ಲ. ಇದು ಪೂರ್ತಿ ಯೂನಿಟ್​ನ ಸಿನಿಮಾ. ಇದು ಬಯೋಪಿಕ್ ಸಿನಿಮಾ ಅಲ್ಲ ಇದು ಪಕ್ಕಾ ಎಂಟರ್ಟೈನರ್​ ಸಿನಿಮಾ ಎಂದಿದ್ದಾರೆ ನರೇಶ್.

ನಿರ್ದೇಶಕ ಎಂಎಸ್ ರಾಜು ಮಾತನಾಡಿ, ”ಸಿನಿಮಾದ ಮೊದಲಾರ್ಧಕ್ಕಿಂತಲೂ ಎರಡನೇ ಅರ್ಧ ಚೆನ್ನಾಗಿರಬೇಕು ಎಂದುಕೊಳ್ಳುತ್ತೇವೆ ಹಾಗೆಯೇ ಜೀವನ ಸಹ. ಆದರೆ ಹಲವರ ಜೀವನದ ದ್ವಿತೀಯಾರ್ಧ ಚೆನ್ನಾಗಿರುವುದಿಲ್ಲ. ಇದೇ ವಿಷಯ ಆಧರಿಸಿ ಮಳ್ಳಿ-ಪೆಳ್ಳಿ ಸಿನಿಮಾ ಮಾಡಿದ್ದೇವೆ” ಎಂದರು. ಟ್ರೈಲರ್ ಲಾಂಚ್ ಸುದ್ದಿಗೋಷ್ಠಿಯಲ್ಲಿ ನಟಿ ಪವಿತ್ರಾ ಲೋಕೇಶ್ ಸಹ ಇದ್ದರು.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಹಲವು ವರ್ಷಗಳಿಂದ ಒಟ್ಟಿಗೆ ಜೀವಿಸುತ್ತಿದ್ದಾರೆ. ಆದರೆ ಕಳೆದ ವರ್ಷ ನರೇಶ್​ರ ಮೂರನೇ ಪತ್ನಿ ರಮ್ಯಾ ರಘುಪತಿ, ನರೇಶ್ ತಮಗೆ ಅನ್ಯಾಯ ಮಾಡಿದ್ದಾರೆಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದರು. ಆ ಬಳಿಕ ನರೇಶ್ ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿ ನಡೆಸಿ ರಮ್ಯಾ ವಿರುದ್ಧ ಆರೋಪಗಳನ್ನು ಮಾಡಿದ್ದರು. ಬಳಿಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇದ್ದ ಹೋಟೆಲ್​ಗೆ ತೆರಳಿದ್ದ ರಮ್ಯಾ ರಘುಪತಿ ಅಲ್ಲಿ ಗಲಾಟೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ