ಶಿವರಾಜ್​ಕುಮಾರ್ ಸಿನಿಮಾ ಮೇಲಿಲ್ಲ ನಿರ್ಬಂಧ; ಸ್ಪಷ್ಟಪಡಿಸಿದ ಚುನಾವಣಾ ಆಯೋಗ

‘ಸಿನಿಮಾ ಮತ್ತು ವೈಯಕ್ತಿಕ ವರ್ಚಸ್ಸಿನ ಮೂಲಕ ಶಿವರಾಜ್​ಕುಮಾರ್ ರಾಜ್ಯದಲ್ಲಿ ಪ್ರಭಾವ ಹೊಂದಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವ ತನಕ ಶಿವರಾಜ್​ಕುಮಾರ್​ ಅವರ ಸಿನಿಮಾ, ಬಿಲ್​ಬೋರ್ಡ್, ಜಾಹೀರಾತು ಪ್ರದರ್ಶನ ಮಾಡದಂತೆ ಚಿತ್ರಮಂದಿರ, ಟಿವಿ ಚಾನೆಲ್​, ಸೋಶಿಯಲ್​ ಮೀಡಿಯಾ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಬೇಕು’ ಎಂದು ಕೋರಿಕೆ ಸಲ್ಲಿಕೆ ಆಗಿತ್ತು.

ಶಿವರಾಜ್​ಕುಮಾರ್ ಸಿನಿಮಾ ಮೇಲಿಲ್ಲ ನಿರ್ಬಂಧ; ಸ್ಪಷ್ಟಪಡಿಸಿದ ಚುನಾವಣಾ ಆಯೋಗ
ಶಿವರಾಜ್​ಕುಮಾರ್​

Updated on: Mar 27, 2024 | 11:00 AM

ಗೀತಾ ಶಿವರಾಜ್​ಕುಮಾರ್ (Shivarajkumar) ಅವರು ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆಗೆ ಇಳಿದಿದ್ದಾರೆ. ಶಿವರಾಜ್​ಕುಮಾರ್ ಅವರು ಪತ್ನಿ ಪರವಾಗಿ ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರು ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಅವರು ನಟಿಸಿದ ಸಿನಿಮಾ, ಜಾಹೀರಾತುಗಳ ಮೇಲೆ ಬ್ಯಾನ್ ಹೇರುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಕೆ ಆಗಿತ್ತು. ಸಿನಿಮಾಗಳ ಮೇಲೆ ಬ್ಯಾನ್ ಹೇರಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಮನವಿ ಏನು?

ಭಾರತೀಯ ಜನತಾ ಪಾರ್ಟಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್​. ರಘು ಇತ್ತೀಚೆಗೆ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ವೇಳೆ ವಿಶೇಷ ಮನವಿ ಸಲ್ಲಿಕೆ ಮಾಡಿದ್ದರು. ‘ಸಿನಿಮಾ ಮತ್ತು ವೈಯಕ್ತಿಕ ವರ್ಚಸ್ಸಿನ ಮೂಲಕ ಶಿವರಾಜ್​ಕುಮಾರ್ ರಾಜ್ಯದಲ್ಲಿ ಪ್ರಭಾವ ಹೊಂದಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವ ತನಕ ಶಿವರಾಜ್​ಕುಮಾರ್​ ಅವರ ಸಿನಿಮಾ, ಬಿಲ್​ಬೋರ್ಡ್, ಜಾಹೀರಾತು ಪ್ರದರ್ಶನ ಮಾಡದಂತೆ ಚಿತ್ರಮಂದಿರ, ಟಿವಿ ಚಾನೆಲ್​, ಸೋಶಿಯಲ್​ ಮೀಡಿಯಾ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಬೇಕು’ ಎಂದು ಅವರು ಕೋರಿದ್ದರು.

ಪ್ರತಿಕ್ರಿಯಿಸಿದ ಆಯೋಗ

ಈ ಮನವಿಗೆ ಚುನಾವಣಾ ಆಯೋಗ ಉತ್ತರಿಸಿದೆ. ‘ಚುನಾವಣೆಗೆ ಸ್ಪರ್ಧಿಸುವ ಅಥವಾ ಪ್ರಚಾರ ಮಾಡುವ ನಟರನ್ನು ಒಳಗೊಂಡ ಸಿನಿಮಾಗಳ ಪ್ರದರ್ಶನವನ್ನು ಸರ್ಕಾರದ ಹಣದಿಂದ ನಡೆಸಲ್ಪಡುವ ದೂರದರ್ಶನದಲ್ಲಿ ಮಾತ್ರ ನಾವು ನಿಷೇಧಿಸಬಹುದು. ಖಾಸಗಿ ಟಿವಿ ಚಾನೆಲ್‌ಗಳು ಮತ್ತು ಸಿನಿಮಾ ಥಿಯೇಟರ್‌ಗಳಲ್ಲಿ ವಾಣಿಜ್ಯ ಪ್ರದರ್ಶನಗಳನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.

ಮೊದಲು ಹೀಗೆಯೇ ಆಗಿತ್ತು..

2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ  ಪರ ಸುದೀಪ್ ಅವರು ಪ್ರಚಾರ ಮಾಡಿದ್ದರು. ಆಗಲೂ ಇದೇ ರೀತಿಯ ಕೋರಿಕೆ ಬಂದಿತ್ತು. ಆಗಲೂ ಚುನಾವಣಾ ಆಯೋಗ ಇದೇ ರೀತಿಯ ಸ್ಪಷ್ಟನೆ ನೀಡಿತ್ತು.

ಇದನ್ನೂ ಓದಿ: ಶಿವರಾಜ್​ಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ಒಬಿಸಿ ಮೋರ್ಚಾ ದೂರು

ಭರ್ಜರಿ ಪ್ರಚಾರ

ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಗೀತಾ ಶಿವರಾಜ್​ಕುಮಾರ್ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರು ವಿವಿಧ ಕಡೆಗಳಲ್ಲಿ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಶಿವಣ್ಣ ಕೂಡ ಇವರಿಗೆ ಸಾಥ್ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us