ಕೊನೆಗೂ ತಲೆಗೂದಲಿಗೆ ಕತ್ತರಿ ಹಾಕಿದ ಪವನ್ ಕಲ್ಯಾಣ್ ಅಭಿಮಾನಿ

|

Updated on: Jun 14, 2024 | 3:02 PM

2019ರ ಚುನಾವಣೆಯಲ್ಲಿ ಸೋತ ಪವನ್ ಕಲ್ಯಾಣ್ ತೀವ್ರ ಅವಮಾನ ಎದುರಿಸಿದ್ದರು. ಅವರ ಅಭಿಮಾನಿಗಳು ಸಹ. ಅದೇ ಸಮಯದಲ್ಲಿ ಪವನ್ ಅಭಿಮಾನಿಯೊಬ್ಬ ನನ್ನ ಮೆಚ್ಚಿನ ನಟ ಗೆಲ್ಲುವವರೆಗೆ ತಲೆಗೂದಲು ಕತ್ತರಿಸುವುದಿಲ್ಲ ಎಂದು ಪ್ರಮಾಣ ಮಾಡಿದ್ದ.

ಕೊನೆಗೂ ತಲೆಗೂದಲಿಗೆ ಕತ್ತರಿ ಹಾಕಿದ ಪವನ್ ಕಲ್ಯಾಣ್ ಅಭಿಮಾನಿ
ಕೊನೆಗೂ ತಲೆಗೂದಲಿಗೆ ಕತ್ತರಿ ಹಾಕಿದ ಪವನ್ ಕಲ್ಯಾಣ್ ಅಭಿಮಾನಿ
Follow us on

2019 ರ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪವನ್ ಕಲ್ಯಾಣ್ (Pawan Kalyan) ತಮ್ಮ ಜನಸೇನಾ ಪಕ್ಷದಿಂದ ಎರಡು ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಪ್ರಚಾರವನ್ನೂ ಮಾಡಿದ್ದರು. ಆದರೆ ಎರಡೂ ಕ್ಷೇತ್ರಗಳಲ್ಲಿ ಸೋತು ನಗೆಪಾಟಲಿಗೀಡಾಗಿದ್ದರು. ನಗೆಪಾಟಲಿಗೀಡಾದ ಪವನ್, ಹೆದರಿ ಮನೆಯಲ್ಲಿ ಕೂರಲಿಲ್ಲ, ರಾಜಕೀಯದಿಂದ ದೂರ ಓಡಲಿಲ್ಲ. ಬದಲಿಗೆ ಮತ್ತೆ ಹೋರಾಟ ಮಾಡಿ ಈ ವಿಧಾನಸಭೆ ಚುನಾವಣೆಯಲ್ಲಿ ತಾವು ಮಾತ್ರವಲ್ಲ ತಮ್ಮ ಪಕ್ಷದ ಇನ್ನೂ 20 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದಾರೆ. ಪವನ್​ಗೆ ತಮ್ಮ ಮೇಲೆ ಇದ್ದಷ್ಟೆ ಭರವಸೆ, ಅವರ ಅಭಿಮಾನಿಗಳಿಗೆ ಪವನ್​ ಮೇಲೆ ಸಹ ಇತ್ತು. ಅದರಲ್ಲಿ ತೋಟ ನರೇಂದ್ರ ಎಂಬ ಅಭಿಮಾನಿಯಂತೂ ಪವನ್ ಗೆದ್ದೇ ಗೆಲ್ಲುತ್ತಾರೆಂದು ಸವಾಲು ಹಾಕಿ, ಪವನ್ ಗೆಲ್ಲುವವರೆಗೂ ತಲೆಗೂದಲು ಕತ್ತರಿವುದಿಲ್ಲ ಎಂದು ಪ್ರಮಾಣ ಮಾಡಿದ್ದರು. ಇದೀಗ ಕೊನೆಗೂ ಅವರ ತಲೆಗೂದಲಿಗೆ ಕತ್ತರಿ ಸೋಕುವಂತಾಗಿದೆ.

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಪ್ರಖ್ಯಾತ ಊರು ತೆನಾಲಿ ಸಮೀಪದ ಕಿಲಕಲೂರು ಗ್ರಾಮದ ನರೇಂದ್ರ, ಪವನ್ ಕಲ್ಯಾಣ್​ರ ಅಪ್ರತಿಮ ಅಭಿಮಾನಿ. ಪವನ್​ ಸಿನಿಮಾಗಳು ಮಾತ್ರವಲ್ಲದೆ, ಪವನ್​ರ ರಾಜಕೀಯ ಸಿದ್ಧಾಂತಕ್ಕೂ ಅಭಿಮಾನಿ. 2019ರಲ್ಲಿ ಪವನ್ ಕಲ್ಯಾಣ್ ಮೊದಲ ಬಾರಿ ವಿಧಾನಸಭೆ ಚುನಾವಣೆ ಎದುರಿಸಿದಾಗ ಪವನ್ ಗೆಲ್ಲುತ್ತಾರೆ ಎಂದುಕೊಂಡಿದ್ದ ಆದರೆ ಸೋತರು. ಅದೇ ದಿನ ನಿಶ್ಚಯ ಮಾಡಿದ, ಪವನ್ ಚುನಾವಣೆ ಗೆದ್ದ ಆಂಧ್ರ ವಿಧಾನಸಭೆ ಪ್ರವೇಶಿಸುವ ವರೆಗೂ ತಾನು ತಲೆಗೂದಲು ಕತ್ತರಿಸುವುದಿಲ್ಲ ಎಂದು. ಇದೀಗ 2024 ರ ವಿಧಾನಸಭೆ ಚುನಾವಣೆಯಲ್ಲಿ ಪವನ್ ಗೆದ್ದಿದ್ದಾರೆ. ಈಗ ನರೇಂದ್ರ ತಮ್ಮ ಉದ್ದನೆಯ ಕೇಶರಾಶಿಗೆ ಕತ್ತರಿ ಹಾಕಲು ಮುಂದಾಗಿದ್ದಾರೆ.

ಇದನ್ನೂ ಓದಿ:ಪ್ರಮಾಣ ವಚನ ಸ್ವೀಕರಿಸಿ ಅಣ್ಣನ ಕಾಲಿಗೆರಗಿದ ಪವನ್ ಕಲ್ಯಾಣ್

ಕೆಲವು ವರದಿಗಳ ಪ್ರಕಾರ, ಪವನ್ ಕಲ್ಯಾಣ್ ಸೋತರೆ ಗುಂಡು ಹೊಡೆಸಿಕೊಳ್ಳುತ್ತೇನೆಂದು ನರೇಂದ್ರ ಬೆಟ್ ಕಟ್ಟಿದ್ದರಂತೆ, 2019ರಲ್ಲಿ ಪವನ್ ಸೋತಾಗ ಗುಂಡು ಹೊಡೆಸಿಕೊಂಡಿದ್ದ ನರೇಂದ್ರ, ಅದೇ ದಿನ ಮತ್ತೊಂದು ಪ್ರಮಾಣ ಮಾಡಿದ್ದರು, ಪವನ್ ಗೆಲ್ಲುವವರೆಗೆ ತಲೆಗೂದಲು ಕತ್ತರಿಸುವುದಿಲ್ಲವೆಂದು. ಅಂತೆಯೇ ಕಳೆದ ಐದು ವರ್ಷಗಳಿಂದಲೂ ತಲೆಗೂದಲಿಗೆ ಕತ್ತರಿ ಸೋಗಿಸಿಲ್ಲ. ಇದರಿಂದ ಯುವತಿಯರ ಜಡೆಯಂತೆ ಉದ್ದ ಕೂದಲನ್ನು ನರೇಂದ್ರ ಬಿಟ್ಟಿದ್ದರು. ಇದರಿಂದ ಹಲವರು ಅವರನ್ನು ಛೇಡಿಸುತ್ತಿದ್ದರಂತೆ, ಅವಮಾನ ಮಾಡುತ್ತಿದ್ದರಂತೆ. ಪವನ್ ಗೆಲ್ಲುವುದಿಲ್ಲ ಕೂದಲು ಕಟ್ ಮಾಡಿಸಿಕೊ ಎನ್ನುತ್ತಿದ್ದರಂತೆ. ಆದರೆ ಯಾವುದಕ್ಕೂ ಜಗ್ಗದೆ ಪವನ್ ಮೇಲಿನ ನಂಬಿಕೆಯಿಂದ ತಲೆಗೂದಲು ಬೆಳೆಸಿಕೊಂಡಿದ್ದ ನರೇಂದ್ರ. ಈಗ ಪವನ್ ಗೆದ್ದ ಬಳಿಕ ಸಲೂನ್ ಕಡೆ ಮುಖ ಮಾಡಿದ್ದಾನೆ.

ಪವನ್ ಕಲ್ಯಾಣ್ ಸೇರಿದಂತೆ ಜನಸೇನಾದ 21 ಅಭ್ಯರ್ಥಿಗಳು ಈ ಬಾರಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಪವನ್ ಕಲ್ಯಾಣ್ ಪೀಠಾಪುರಂ ಕ್ಷೇತ್ರದಿಂದ ಚುನಾವಣೆ ಎದುರಿಸಿದ್ದರು. ಎದುರಾಳಿ ವೈಸಿಪಿ ಅಭ್ಯರ್ಥಿ ವಂಗಾ ಗೀತ ವಿರುದ್ಧ ಭಾರಿ ಅಂತರದ ಜಯವನ್ನು ಪವನ್ ಕಲ್ಯಾಣ್ ಪಡೆದಿದ್ದಾರೆ. ಮಾತ್ರವಲ್ಲದೆ ಚಂದ್ರಬಾಬು ನಾಯ್ಡು ಸಂಪುಟದಲ್ಲಿ ಉಪಮುಖ್ಯಮಂತ್ರಿ ಆಗಲಿದ್ದಾರೆ ಪವನ್ ಕಲ್ಯಾಣ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ