ಅಲ್ಲು ಅರ್ಜುನ್ ಹೆಸರು ಹೇಳಿ, ಅಭಿಮಾನಿಗಳ ಆಕ್ರೋಶ ತಣ್ಣಗೆ ಮಾಡಿದ ಪವನ್ ಕಲ್ಯಾಣ್

|

Updated on: Oct 17, 2024 | 12:51 PM

Pawan Kalyan: ಪವನ್ ಕಲ್ಯಾಣ್ ಮತ್ತು ಅಲ್ಲು ಅರ್ಜುನ್ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಇಬ್ಬರೂ ಸಹ ಪರಸ್ಪರರ ಬಗ್ಗೆ ಋಣಾತ್ಮಕವಾಗಿ ಮಾತನಾಡಿಕೊಂಡಿದ್ದರು. ಈಗ ಪವನ್ ಕಲ್ಯಾಣ್ ಹಳೆಯ ಮುನಿಸು ಮರೆತು ಅಲ್ಲು ಅರ್ಜುನ್​ಗೆ ಶುಭ ಹಾರೈಸಿದ್ದಾರೆ.

ಅಲ್ಲು ಅರ್ಜುನ್ ಹೆಸರು ಹೇಳಿ, ಅಭಿಮಾನಿಗಳ ಆಕ್ರೋಶ ತಣ್ಣಗೆ ಮಾಡಿದ ಪವನ್ ಕಲ್ಯಾಣ್
Follow us on

ಕೋನಿಡೇಲ ಕುಟುಂಬ ಅಥವಾ ಮೆಗಾ ಫ್ಯಾಮಿಲಿ ಎಂದರೆ ಆಂಧ್ರ-ತೆಲಂಗಾಣದಲ್ಲಿ ವಿಶೇಷ ಗೌರವ. ಪ್ರತಿಸ್ಪರ್ಧಿ ನಂದಮೂರಿ ಕುಟುಂಬದಲ್ಲಿ ಸಾಕಷ್ಟು ಒಡಕುಗಳು ಇವೆ, ಅವು ಬಹಿರಂಗವಾಗಿವೆ. ಆದರೆ ಕೋನಿಡೇಲ ಕುಟುಂಬ ಅಥವಾ ಮೆಗಾ ಕುಟುಂಬದಲ್ಲಿ ಎಲ್ಲರೂ ಬಹುತೇಕ ಅನ್ಯೋನ್ಯತೆಯಿಂದಲೇ ಇದ್ದರು. ಆದರೆ ಕೆಲ ತಿಂಗಳ ಹಿಂದಷ್ಟೆ ಮುಗಿದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಸಮಯದಲ್ಲಿ ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಅದು ದಿನಗಳೆದಂತೆ ಹೆಚ್ಚಾಗುತ್ತಲೇ ಹೋಗುತ್ತಿತ್ತು, ಆದರೆ ಹಿರಿಯ ವ್ಯಕ್ತಿಯಾಗಿ ತಾವೇ ಒಂದು ಹೆಜ್ಜೆ ಮುಂದೆ ಹೋಗಿ ಈ ಭಿನ್ನಾಭಿಪ್ರಾಯಕ್ಕೆ ಪುಲ್​ಸ್ಟಾಪ್ ಇಟ್ಟಿದ್ದಾರೆ ಪವನ್ ಕಲ್ಯಾಣ್.

ಪವನ್ ಕಲ್ಯಾಣ್ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಅವರ ಹೋರಾಟ ಇದ್ದಿದ್ದು ಜಗನ್ ಮೋಹನ್ ರೆಡ್ಡಿಯ ವೈಸಿಪಿ ಪಕ್ಷದ ಎದುರು. ಆದರೆ ಅಲ್ಲು ಅರ್ಜುನ್, ವೈಸಿಪಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದರು. ಇದು ಪವನ್ ಕಲ್ಯಾಣ್ ಅಭಿಮಾನಿಗಳಲ್ಲಿ ಹಾಗೂ ಪವನ್​ ಕಲ್ಯಾಣ್ ಸಹೋದರ ನಾಗಬಾಬುಗೆ ತೀವ್ರ ಆಕ್ರೋಶ ತರಿಸಿತ್ತು. ನಾಗಬಾಬು, ಅಲ್ಲು ಅರ್ಜುನ್ ಅನ್ನು ಗುರಿಯಾಗಿಸಿಕೊಂಡು ಖಾರವಾಗಿಯೇ ಟ್ವೀಟ್ ಮಾಡಿದ್ದರು. ಇದು ಎರಡು ಕುಟುಂಬದ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು.

ಅದಾದ ಬಳಿಕ ಅಲ್ಲು ಅರ್ಜುನ್ ಸಹ ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ‘ನನಗೆ ಇಷ್ಟವಾಗದೇ ಇದ್ದರೆ ನಾನು ಹೋಗುವುದಿಲ್ಲ, ನನಗೆ ಇಷ್ಟವಾದ ಕಡೆಗೆ ಕರೆಯದಿದ್ದರೂ ಹೋಗುತ್ತೆನೆ’ ಎಂದು ಪರೋಕ್ಷವಾಗಿ ಪವನ್ ಕಲ್ಯಾಣ್​ಗೆ ಟಾಂಗ್ ಕೊಟ್ಟಿದ್ದರು. ಅದಾದ ಬಳಿಕ ಪವನ್ ಕಲ್ಯಾಣ್ ಕರ್ನಾಟಕಕ್ಕೆ ಬಂದಿದ್ದಾಗ ಡಾ ರಾಜ್​ಕುಮಾರ್ ಅವರ ‘ಗಂಧದ ಗುಡಿ’ ಸಿನಿಮಾದ ಉದಾಹರಣೆ ತೆಗೆದುಕೊಂಡು ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾವನ್ನು ಟೀಕೆ ಮಾಡಿದ್ದರು. ಇದು ಸಹ ಸುದ್ದಿಯಾಗಿತ್ತು. ಇದಕ್ಕೆ ಅಲ್ಲು ಅರ್ಜುನ್ ಸಹ ನನ್ನನ್ನು ಯಾರೂ ಬೆಳೆಸಿಲ್ಲ ನನ್ನನ್ನು ಬೆಳೆಸಿದ್ದು ಅಭಿಮಾನಿಗಳು ಮಾತ್ರ ಎಂದು ಪರೋಕ್ಷವಾಗಿ ಮೆಗಾ ಫ್ಯಾಮಿಲಿಗೆ ಟಾಂಗ್ ಕೊಟ್ಟಿದ್ದರು.

ಇದನ್ನೂ ಓದಿ:ಮತ್ತೆ ಟ್ರ್ಯಾಕ್​ಗೆ ಮರಳಿದ ಪವನ್ ಕಲ್ಯಾಣ್ ಸಿನಿಮಾ; ‘ಒಜಿ’ ಕಡೆಯಿಂದ ಬಿಗ್ ಅಪ್​ಡೇಟ್

ಇದೆಲ್ಲ ಘಟನೆಗಳ ಬಳಿಕ ಅಲ್ಲು ಅರ್ಜುನ್ ಹಾಗೂ ಮೆಗಾ ಫ್ಯಾಮಿಲಿ ಮಧ್ಯೆ ಭಿನ್ನಾಭಿಪ್ರಾಯ ಹೆಚ್ಚಾಗಿತ್ತು. ಇದೀಗ ಪವನ್ ಕಲ್ಯಾಣ್ ಅದಕ್ಕೆ ಪೂರ್ಣ ವಿರಾಮ ಇಡಲು ಮುಂದಾಗಿದ್ದಾರೆ. ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಸಿನಿಮಾ ವೃತ್ತಿ, ಸಿನಿಮಾ ರಂಗದ ಬಗ್ಗೆ ಮಾತನಾಡುತ್ತಾ, ‘ನನಗೆ ಯಾರೂ ಪ್ರತಿಸ್ಪರ್ಧಿಗಳು ಇಲ್ಲ, ನಾನು ಯಾರನ್ನೂ ಪ್ರತಿಸ್ಪರ್ಧಿಗಳು ಎಂದುಕೊಂಡಿಲ್ಲ. ಬಾಲಕೃಷ್ಣ, ಚಿರಂಜೀವಿ, ಮಹೇಶ್ ಬಾಬು, ಎನ್​ಟಿಆರ್, ರಾಮ್ ಚರಣ್, ಅಲ್ಲು ಅರ್ಜುನ್ ಎಲ್ಲ ನಟರಿಗೂ ಒಳ್ಳೆಯದಾಗಲಿ, ಎಲ್ಲರೂ ಪ್ರೇಕ್ಷಕರಿಗಾಗಿ ಒಳ್ಳೆಯ ಸಿನಿಮಾಗಳನ್ನು ಮಾಡಲಿ’ ಎಂದಿದ್ದಾರೆ.

ಮುನಿಸು ಮರೆತು ಪವನ್ ಕಲ್ಯಾಣ್, ಅಲ್ಲು ಅರ್ಜುನ್​ಗೆ ಶುಭ ಹಾರೈಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ಕೆಲ ತಿಂಗಳಿನಿಂದಲೂ ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳ ಮಧ್ಯೆ ದೊಡ್ಡ ಕಂದಕ ನಿರ್ಮಾಣವಾಗಿತ್ತು. ಈಗ ಪವನ್​ ಒಂದು ಹೆಜ್ಜೆ ಮುಂದೆ ಹೋಗಿ ತಾವೇ ಸ್ನೇಹದ ಹಸ್ತ ಚಾಚಿದಂತಾಗಿದೆ. ಇದಕ್ಕೆ ಅಲ್ಲು ಅರ್ಜುನ್ ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ