ನಗೆಪಾಟಲಿಗೆ ಈಡಾದ ಮೈಸೂರಿನ ಪ್ರಭಾಸ್​ ಪ್ರತಿಮೆ; ತಕ್ಷಣ ತೆಗೆಸಲು ಮುಂದಾದ ‘ಬಾಹುಬಲಿ’ ನಿರ್ಮಾಪಕರು

Prabhas Wax Statue: ‘ಬಾಹುಬಲಿ’ ಸಿನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಇದು ಸೂಕ್ತವಾಗಿ ಅನುಮತಿ ಪಡೆದು ಮಾಡಿದ ಕೆಲಸ ಅಲ್ಲ. ನಮ್ಮ ಗಮನಕ್ಕೆ ಬಾರದಂತೆ, ಅನುಮತಿಯನ್ನೂ ಪಡೆಯದೇ ಇದನ್ನು ಮಾಡಲಾಗಿದೆ. ಇದನ್ನು ತೆಗೆಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಪೋಸ್ಟ್​ ಮಾಡಿದ್ದಾರೆ.

ನಗೆಪಾಟಲಿಗೆ ಈಡಾದ ಮೈಸೂರಿನ ಪ್ರಭಾಸ್​ ಪ್ರತಿಮೆ; ತಕ್ಷಣ ತೆಗೆಸಲು ಮುಂದಾದ ‘ಬಾಹುಬಲಿ’ ನಿರ್ಮಾಪಕರು
ಪ್ರಭಾಸ್​ ಮೇಣದ ಪ್ರತಿಮೆ

Updated on: Sep 26, 2023 | 12:49 PM

ಸದ್ಯಕ್ಕಂತೂ ಪ್ರಭಾಸ್​ (Prabhas) ಅವರ ಟೈಮ್ ಅಷ್ಟೇನೂ ಚೆನ್ನಾಗಿಲ್ಲ ಎಂದೇ ಹೇಳಬಹುದು. ಅವರು ಏನೇ ಮಾಡಿದರೂ ಟ್ರೋಲ್​ ಆಗುತ್ತಿದ್ದಾರೆ. ‘ಸಾಹೋ’, ‘ರಾಧೆ ಶ್ಯಾಮ್​’, ‘ಆದಿಪುರುಷ್​’ ಸಿನಿಮಾಗಳ ಸೋಲಿನಿಂದ ಅವರು ಚಾರ್ಮ್​ ತಗ್ಗಿದೆ. ಫಿಟ್ನೆಸ್​ ಕಳೆದುಕೊಂಡಿದ್ದಾರೆ ಎಂಬ ವಿಚಾರದಲ್ಲೂ ಅವರನ್ನು ನೆಟ್ಟಿಗರು ಟೀಕಿಸಿದ್ದುಂಟು. ಅದೂ ಸಾಲದೆಂಬಂತೆ, ಈಗ ಅವರ ಪ್ರತಿಮೆ ಕೂಡ ಟ್ರೋಲ್​ಗೆ ಒಳಗಾಗುತ್ತಿದೆ. ಅದು ಕೂಡ ಮೈಸೂರಿನಲ್ಲಿ! ಹೌದು, ಮೈಸೂರಿನಲ್ಲಿ ಪ್ರಭಾಸ್​ ಅವರ ಮೇಣದ (Prabhas Wax Statue) ಪ್ರತಿಮೆ ಮಾಡಲಾಗಿದೆ. ಅದು ಸರಿಯಾದ ರೂಪ ಮತ್ತು ಆಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡಿದ್ದಾರೆ. ಅದಕ್ಕೆ ‘ಬಾಹುಬಲಿ’ (Baahubali) ಸಿನಿಮಾ ನಿರ್ಮಾಪಕರು ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಲ್ಲಿ ಸೆಲೆಬ್ರಿಟಿ ವ್ಯಾಕ್ಸ್​ ಮ್ಯೂಸಿಯಂ ಇದೆ. ಇಲ್ಲಿ ಅನೇಕ ನಟ-ನಟಿಯರ ಮೇಣದ ಪ್ರತಿಮೆಯನ್ನು ಮಾಡಿ ಇಡಲಾಗಿದೆ. ಪ್ರಭಾಸ್​ ಅವರು ‘ಬಾಹುಬಲಿ’ ಸಿನಿಮಾದ ಗೆಟಪ್​ನಲ್ಲಿ ನಿಂತಿರುವ ಪ್ರತಿಮೆಯನ್ನು ಇಲ್ಲಿ ತಯಾರಿಸಲಾಗಿದೆ. ‘ಬಾಹುಬಲಿ’ ಪಾತ್ರದ ಕಾಸ್ಟ್ಯೂಮ್​ ನೋಡಿದರೆ ಮಾತ್ರ ಇದು ಪ್ರಭಾಸ್​ ಪ್ರತಿಮೆ ಎಂಬುದು ಗೊತ್ತಾಗುತ್ತದೆ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಅದನ್ನು ಪ್ರಭಾಸ್​ ಪ್ರತಿಮೆ ಅಂತ ಗುರುತಿಸುವುದು ಕಷ್ಟ. ಆ ಕಾರಣದಿಂದ ನೆಟ್ಟಿಗರು ಈ ಪ್ರತಿಮೆಯನ್ನು ಟ್ರೋಲ್​ ಮಾಡಿದ್ದಾರೆ.

‘ಬಾಹುಬಲಿ’ ಸಿನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಇದು ಸೂಕ್ತವಾಗಿ ಅನುಮತಿ ಪಡೆದು ಮಾಡಿರುವ ಕೆಲಸ ಅಲ್ಲ. ನಮ್ಮ ಗಮನಕ್ಕೆ ಬಾರದಂತೆ, ಅನುಮತಿಯನ್ನೂ ಪಡೆಯದೇ ಇದನ್ನು ಮಾಡಲಾಗಿದೆ. ಇದನ್ನು ತೆಗೆಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಸದ್ಯಕ್ಕಂತೂ ಈ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪ್ರಭಾಸ್​ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ರಾಜಮೌಳಿ ನಟನೆ? ಹಿರಿದಾಗುತ್ತಿದೆ ಪ್ರಭಾಸ್​ ಸಿನಿಮಾದ ಪಾತ್ರವರ್ಗ

ಪ್ರಭಾಸ್​ ಅವರು ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. ಅವರು ಈಗ ‘ಸಲಾರ್​’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದು, ಆ ಚಿತ್ರದ ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರಶಾಂತ್​ ನೀಲ್​ ನಿರ್ದೇಶನ, ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಎಂಬ ಕಾರಣಕ್ಕೆ ಹೈಪ್​ ಹೆಚ್ಚಾಗಿದೆ. ಈ ಸಿನಿಮಾದ ರಿಲೀಸ್​ ಡೇಟ್ ಬಗ್ಗೆ ಅಂತೆ-ಕಂತೆಗಳು ಹರಿದಾಡುತ್ತಿವೆ. ಡಿಸೆಂಬರ್​ ತಿಂಗಳಲ್ಲಿ ‘ಸಲಾರ್​’ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us