
ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ಮಿಂಚಿ ಪರಭಾಷೆಯಲ್ಲಿ ಗಮನ ಸೆಳೆದರು. ಅವರು ಕನ್ನಡದ ಹುಡುಗಿ ಎಂದು ಈಗ ಯಾರೂ ಗುರುತಿಸುವುದಿಲ್ಲ. ಏಕೆಂದರೆ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ ಎನ್ನಬಹುದು. ಇತ್ತೀಚಿನ ವರ್ಷಗಳಲ್ಲಿ ರಶ್ಮಿಕಾ ರೀತಿಯ ಯಶಸ್ಸು ಯಾರೊಬ್ಬರಿಗೂ ಸಿಕ್ಕಿಲ್ಲ ಎಂದರೂ ತಪ್ಪಾಗಲಾರದು. ಕನ್ನಡದ ಅನೇಕ ಹೀರೋಯಿನ್ಗಳು ತೆಲುಗಿನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಡರು. ಆದರೆ, ರಶ್ಮಿಕಾ ರೀತಿ ಆಗಲು ಸಾಧ್ಯವಾಗಿಲ್ಲ.
ಸಪ್ತಮಿ ಗೌಡ ಅವರು ಇತ್ತೀಚೆಗೆ ‘ತಮ್ಮುಡು’ ಸಿನಿಮಾದಲ್ಲಿ ನಟಿಸಿದರು. ‘ರತ್ನ’ ಹೆಸರಿನ ಪಾತ್ರದಲ್ಲಿ ಅವರು ಕಾಣಿಸಿಕೊಂಡರು. ನಿತಿನ್ ಚಿತ್ರದ ಹೀರೋ. ಆದರೆ, ಸಪ್ತಮಿ ಗೌಡ ಮಾಡಿದ ಪಾತ್ರಕ್ಕೆ ಸಾಕಷ್ಟು ಟೀಕೆ ಬಂತು. ಅವರು ಡೈಲಾಗ್ ಡೆಲಿವರಿಯನ್ನು ಸರಿಯಾಗಿ ಮಾಡಲು ಸಾಧ್ಯವಾಗಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದು ನಿಜ. ಇದರಿಂದ ಅವರಿಗೆ ಹಿನ್ನಡೆ ಆಯಿತು. ಸಪ್ತಮಿ ಗೌಡ ಅವರಿಗೆ ‘ಕಾಂತಾರ’ ಚಿತ್ರದ ಮೂಲಕ ಸಾಕಷ್ಟು ಖ್ಯಾತಿ ಬಂತು. ಆದರೆ, ಇದಾದ ಬಳಿಕ ಅವರಿಗೆ ದೊಡ್ಡ ಖ್ಯಾತಿ ಸಿಕ್ಕಿಲ್ಲ.
ರುಕ್ಮಿಣಿ ವಸಂತ್ ಕೂಡ ಪರಭಾಷೆಯಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ಅವರು ‘ಅಪ್ಪುಡೋ ಇಪ್ಪುಡೋ ಯಪ್ಪುಡೋ’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಎದುರು ಬಂದರು. ‘ಏಸ್’ ಹೆಸರಿನ ತಮಿಳು ಸಿನಿಮಾ ಕೂಡ ಮಾಡಿದರು. ಆದರೆ, ಯಾವುದೂ ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲೇ ಇಲ್ಲ. ರುಕ್ಮಿಣಿ ವಸಂತ್ ಅವರು ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಚಿತ್ರಕ್ಕೆ ನಾಯಕಿ. ಈ ಚಿತ್ರದ ಮೂಲಕ ಗೆಲ್ಲುವ ಭರವಸೆಯಲ್ಲಿ ಇದ್ದಾರೆ.
ಇದನ್ನೂ ಓದಿ:ಟಾಲಿವುಡ್ನ ಸ್ಟಾರ್ ಹೀರೋ ಚಿತ್ರಕ್ಕೆ ನಾಯಕಿ ಆದ ರಶ್ಮಿಕಾ ಮಂದಣ್ಣ
ಶ್ರೀಲೀಲಾ ಅವರು ಕೂಡ ತೆಲುಗಿನಲ್ಲಿ ಒಮ್ಮೆ ಮಿಂಚಿದರು. ಅವರಿಗೂ ದೊಡ್ಡ ಮಟ್ಟದಲ್ಲಿ ಮಿಂಚುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರು ರಶ್ಮಿಕಾ ಅಷ್ಟು ಅದೃಷ್ಟ ಸಿಕ್ಕಿಲ್ಲ. ಇತ್ತೀಚೆಗೆ ಅವರು ಡೇಟ್ಸ್ ಹೊಂದಾಣಿಕೆ ಸಾಧ್ಯವಾಗದೇ ಕೆಲವು ಸಿನಿಮಾಗಳಿಂದ ಹೊರಕ್ಕೆ ಹೋಗುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಅದೃಷ್ಟ ಬೇರೆಯದೇ ರೀತಿ ಇದೆ. ಅವರು ಯಾವುದೇ ಸಿನಿಮಾ ಮಾಡಿದರೂ ಅದು ಯಶಸ್ಸು ಕಾಣುತ್ತಿದೆ. ‘ಅನಿಮಲ್’, ‘ಛಾವ’ ಚಿತ್ರಗಳು 500 ಕೋಟಿ ರೂಪಾಯಿ ಕ್ಲಬ್ ಸೇರಿದರೆ, ‘ಪುಷ್ಪ 2’ ಸಿನಿಮಾ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇತ್ತೀಚೆಗೆ ಬಿಡುಗಡೆ ಕಂಡ ‘ಕುಬೇರ’ ಕೂಡ ಯಶಸ್ಸು ಪಡೆದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ