ಥಿಯೇಟರ್​ನಲ್ಲಿ ಬಹುಕೋಟಿ ಬಾಚುತ್ತಿದ್ದ ಸಲ್ಮಾನ್​ ಖಾನ್​ ಈಗ ರಾಧೆ ಚಿತ್ರದಿಂದ ಮೊದಲ ದಿನ ಗಳಿಸಿದ್ದು ಬರೀ 10 ಸಾವಿರ

Radhe Box Office Collection: ರಾಧೆ ಚಿತ್ರಕ್ಕೆ ಮೊದಲ ದಿನ 10,432 ರೂ. ಮಾತ್ರ ಕಲೆಕ್ಷನ್​ ಆಗಿದೆ. ಒಂದು ಕಾಲದಲ್ಲಿ ಚಿತ್ರಮಂದಿರಗಳಿಂದ ಬಹುಕೋಟಿ ಸಂಪಾದಿಸುತ್ತಿದ್ದ ಸಲ್ಮಾನ್​ ಖಾನ್​ ಸಿನಿಮಾ ಹೀಗೆ ಕೇವಲ 10 ಸಾವಿರ ಚಿಲ್ಲರೆ ಕಾಸು ಗಳಿಸುವಂತಾಗಿದ್ದು ಲಾಕ್​ಡೌನ್​ ಕಾರಣದಿಂದ.

ಥಿಯೇಟರ್​ನಲ್ಲಿ ಬಹುಕೋಟಿ ಬಾಚುತ್ತಿದ್ದ ಸಲ್ಮಾನ್​ ಖಾನ್​ ಈಗ ರಾಧೆ ಚಿತ್ರದಿಂದ ಮೊದಲ ದಿನ ಗಳಿಸಿದ್ದು ಬರೀ 10 ಸಾವಿರ
ಸಲ್ಮಾನ್ ಖಾನ್

Updated on: May 22, 2021 | 10:02 AM

ಭಾರತೀಯ ಚಿತ್ರರಂಗದಲ್ಲಿ ಸಲ್ಮಾನ್​ ಖಾನ್​ ಬಾಕ್ಸ್​ ಆಫೀಸ್​ ಸುಲ್ತಾನ ಎಂಬುದು ಈಗಾಗಲೇ ಸಾಬೀತಾಗಿದೆ. ಅವರ ಸಿನಿಮಾಗಳು ಮೊದಲ ದಿನವೇ ಎಲ್ಲೆಡೆ ಹೌಸ್​ಫುಲ್​ ಪ್ರದರ್ಶನ ಕಾಣುತ್ತವೆ. ಬಹುಕೋಟಿ ರೂಪಾಯಿ ಬಾಚಿಕೊಳ್ಳುತ್ತವೆ. ಆದರೆ ಇತ್ತೀಚೆಗೆ ತೆರೆಕಂಡ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಸಿನಿಮಾಗೆ ಕೆಲವು ವಿಘ್ನಗಳು ಎದುರಾದವು. ದೇಶದ ಹಲವು ಕಡೆಗಳಲ್ಲಿ ಲಾಕ್​ಡೌನ್​ ಜಾರಿಯಲ್ಲಿ ಇದ್ದಿದ್ದರಿಂದ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಹೆಚ್ಚು ಕಲೆಕ್ಷನ್​ ಮಾಡಲು ಸಾಧ್ಯವಾಗಿರಲಿಲ್ಲ. ಇಡೀ ದೇಶದಲ್ಲಿ ರಾಧೆ ರಿಲೀಸ್​ ಆಗಿದ್ದ ಮೂರು ಚಿತ್ರಮಂದಿರಗಳಲ್ಲಿ ಮಾತ್ರ.

ಬಹುತೇಕ ಕಡೆಗಳಲ್ಲಿ ಲಾಕ್​ಡೌನ್​ ಇದ್ದ ಕಾರಣ ರಾಧೆ ಚಿತ್ರತಂಡ ಓಟಿಟಿ ಮೊರೆ ಹೋಯಿತು. ಆದರ ನಡುವೆಯೂ ತ್ರಿಪುರದ ಮೂರು ಥಿಯೇಟರ್​ಗಳಲ್ಲಿ ರಾಧೆ ಬಿಡುಗಡೆ ಆಯಿತು. ಮೊದಲ ದಿನ ಮೂರು ಚಿತ್ರಮಂದಿರಗಳಿಂದ ಒಟ್ಟು 11 ಶೋಗಳು ಪ್ರದರ್ಶನ ಆಗಿವೆ. ಅವುಗಳಿಂದ ಮೊದಲ ದಿನ 10,432 ರೂ. ಮಾತ್ರ ಕಲೆಕ್ಷನ್​ ಆಗಿದೆ. ಒಂದು ಕಾಲದಲ್ಲಿ ಚಿತ್ರಮಂದಿರಗಳಿಂದ ಬಹುಕೋಟಿ ಸಂಪಾದಿಸುತ್ತಿದ್ದ ಸಲ್ಮಾನ್​ ಖಾನ್​ ಸಿನಿಮಾ ಹೀಗೆ ಕೇವಲ 10 ಸಾವಿರದಂತಹ ಚಿಲ್ಲರೆ ಕಾಸು ಗಳಿಸುವಂತಾಗಿದ್ದು ಲಾಕ್​ಡೌನ್​ ಕಾರಣದಿಂದ.

ತ್ರಿಪುರದಲ್ಲಿ ಕೂಡ ನೈಟ್​ ಕರ್ಫ್ಯೂ ಇದ್ದಿದ್ದರಿಂದ ಮಧ್ಯಾಹ್ನ 3 ಗಂಟೆಗೆ ಕೊನೇ ಶೋ ಇರುತ್ತಿತ್ತು. ಆದರೆ ಈ ಮೂರು ಚಿತ್ರಮಂದಿರಗಳಲ್ಲಿ ರಾಧೆ ಪ್ರದರ್ಶನ ಕಂಡಿದ್ದು ನಾಲ್ಕು ದಿನ ಮಾತ್ರ. 5ನೇ ದಿನಕ್ಕೆ ತ್ರಿಪುರದಲ್ಲೂ ಲಾಕ್​ಡೌನ್​ ಆರಂಭ ಆಗಿದ್ದರಿಂದ ರಾಧೆ ಅಂಗಡಿ ಮುಚ್ಚುವುದು ಅನಿವಾರ್ಯವಾಯಿತು. ಮೊದಲ ವೀಕೆಂಡ್​ ವೇಳೆಗೆ ಮೂರು ಚಿತ್ರಮಂದಿರದಿಂದ ಈ ಸಿನಿಮಾ ಗಳಿಸಿದ್ದು ಕೇವಲ 63 ಸಾವಿರ ರೂ. ಮಾತ್ರ ಎನ್ನುತ್ತಿವೆ ಮೂಲಗಳು.

ಚಿತ್ರಮಂದಿರದಲ್ಲಿ ರಾಧೆಗೆ ಹೀನಾಯ ಕಲೆಕ್ಷನ್​ ಆಗಿದೆ ನಿಜ. ಆದರೆ ಓಟಿಟಿಯಲ್ಲಿ ಭರ್ಜರಿ ಹಣ ಬಾಚಿಕೊಂಡಿದೆ. ಈದ್​ ಹಬ್ಬದ ಪ್ರಯುಕ್ತ ಮೇ 13ರಂದು ಜೀ5 ಒಡೆತನದ ಜೀ ಪ್ಲೆಕ್ಸ್​​ನಲ್ಲಿ ‘ರಾಧೆ ರಿಲೀಸ್​ ಆಗಿತ್ತು. ರಿಲೀಸ್​ ಆದ ಒಂದೇ ದಿನಕ್ಕೆ ಈ ಸಿನಿಮಾ 42 ಲಕ್ಷ ಬಾರೀ ವೀಕ್ಷಣೆ ಕಂಡಿದೆ. ಒಂದು ಬಾರಿ ಸಿನಿಮಾ ವೀಕ್ಷಿಸಬೇಕು ಎಂದರೆ 249 ರೂಪಾಯಿ ನೀಡಬೇಕು. ಅಂದರೆ, ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 108 ಕೋಟಿ ರೂಪಾಯಿ ಎಂದು ವರದಿ ಆಗಿದೆ.

ಇದನ್ನೂ ಓದಿ:

ತೌಕ್ತೆ ಚಂಡಮಾರುತದಿಂದ ಸಲ್ಮಾನ್​ ಖಾನ್​ಗೆ ಉಂಟಾಯ್ತು ದೊಡ್ಡ ನಷ್ಟ

ಲಾಕ್​ಡೌನ್​ ನಿಯಮ ಮೀರಿದ್ರೆ ರಾಧೆ ಚಿತ್ರವನ್ನು ಪದೇಪದೇ ತೋರಿಸಲಾಗುತ್ತದೆ; ಬೆಂಗಳೂರು ಸಿಟಿ ಪೊಲೀಸ್​ ಹೀಗೆ ಟ್ವೀಟ್​ ಮಾಡಿದ್ದು ನಿಜವೇ?

Published On - 9:41 am, Sat, 22 May 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us