ನಾನು ಅಮಾಯಕಿ, ದಯವಿಟ್ಟು ನನ್ನನ್ನು ಬದುಕಲು ಬಿಡಿ: ಅರುಣಾ ಕುಮಾರಿ

| Updated By: Digi Tech Desk

Updated on: Jul 13, 2021 | 1:08 PM

Darshan: ‘ದರ್ಶನ್ ಅವರಿಗೆ ವಂಚನೆಗೆ ಪ್ರಯತ್ನ’ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಅರುಣಾ ಕುಮಾರಿ ಅವರ ರಂಗಪ್ರವೇಶವಾಗಿದೆ. ಇದೇ ಮೊದಲ ಬಾರಿಗೆ ಅವರು ಮಾಧ್ಯಮಕ್ಕೆ ಹೇಳಿಕೆಗಳನ್ನು ನೀಡಿದ್ದು, ಉಮಾಪತಿಯವರ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಉಮಾಪತಿಯವರೂ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಅಮಾಯಕಿ, ದಯವಿಟ್ಟು ನನ್ನನ್ನು ಬದುಕಲು ಬಿಡಿ: ಅರುಣಾ ಕುಮಾರಿ
ಅರುಣಾ ಕುಮಾರಿ (ಎಡ), ದರ್ಶನ್ ತೂಗುದೀಪ(ಮಧ್ಯ), ಉಮಾಪತಿ ಶ್ರೀನಿವಾಸ್ ಗೌಡ(ಬಲ)- ಸಾಂದರ್ಭಿಕ ಚಿತ್ರ
Follow us on

ನಟ​ ‘ದರ್ಶನ್​ ಹೆಸರಿನಲ್ಲಿ ವಂಚನೆಗೆ ಯತ್ನ’ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರುಣಾ ಕುಮಾರಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೊ ಹೇಳಿಕೆ ಮುಖಾಂತರ ಅವರು ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಹಾಗೆಯೇ ದರ್ಶನ್ ಅವರು ಬಿಡುಗಡೆಗೊಳಿಸಿರುವ ದಾಖಲೆಯೂ ಸಂಪೂರ್ಣ ಸತ್ಯವಲ್ಲ ಎಂದಿದ್ದಾರೆ. ಇಡೀ ಪ್ರಕರಣದಲ್ಲಿ ತಾನು ಅಮಾಯಕಿಯಾಗಿದ್ದು, ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಗಳಲ್ಲಿ ಸಾಕಷ್ಟು ವೈರುಧ್ಯಗಳಿದ್ದು, ಪ್ರಕರಣವನ್ನು ಮತ್ತಷ್ಟು ಗೋಜಲಾಗಿಸಿದೆ.

ಅರುಣಾ ಕುಮಾರಿ ಹೇಳಿದ್ದೇನು?

ಅರುಣಾ ಕುಮಾರಿ ಇಡೀ ಪ್ರಕರಣದಲ್ಲಿ ತಾನು ಅಮಾಯಕಿ ಎಂಬುದನ್ನು ವಿಡಿಯೊ ಹೇಳಿಕೆ ಮುಖಾಂತರ ಸ್ಪಷ್ಟಪಡಿಸಲು ಪ್ರಯತ್ನಿಸಿದ್ದಾರೆ. ತನ್ನ ಮೇಲೆ ದಾಖಲಾಗಿರುವ ದೂರಿನಲ್ಲಿ ಲೋನ್​ಗೆ ಅಪ್ರೋಚ್ ಮಾಡಿದ್ದು ಎಂದು ಇದೆ. ಆದರೆ ಲೋನ್​ಗೆ ಅಪ್ಲೈ ಮಾಡಿ ವಂಚನೆಗೆ ಪ್ರಯತ್ನಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ನಿಜವಲ್ಲ ಎಂದು ಅರುಣಾ ಕುಮಾರಿ ತಿಳಿಸಿದ್ದಾರೆ. ತಾನು ಯಾರ ಫಾರ್ಮ್ ಹೌಸ್​ಗೂ ಹೋಗಿ ದುಡ್ಡು ತಿಂದಿಲ್ಲ, ಕಳ್ಳತನ ಮಾಡಿಲ್ಲ ಅಥವಾ ಹಣ ಕೇಳಿಲ್ಲ. ಹಾಗಿದ್ದ ಮೇಲೆ ನನ್ನ ಮೇಲೆ ಏಕೆ ಇಷ್ಟೊಂದು ಆರೋಪ ಮಾಡುತ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ.

ನನ್ನನ್ನು ಕರೆದು ನನಗೆ ಎರಡು ಏಟು ಕೊಟ್ಟು ನೀನು ಮಾಡಿದ್ದು ತಪ್ಪು ಎಂದಿದ್ದರೆ ನನ್ನ ತಪ್ಪನ್ನು ತಿಳಿದು ಒಪ್ಪಿಕೊಂಡು ಸುಮ್ಮನಾಗುತ್ತಿದ್ದೆ. ಆದರೆ ಇಡೀ ಪ್ರಕರಣವನ್ನು ನಾನೇ ನಡೆಸಿದ್ದು ಎಂದು ಆರೋಪಿಸಲಾಗುತ್ತಿದೆ. ಅವರ ಸಮಸ್ಯೆಗಳನ್ನು ಅವರು ಬಗೆಹರಿಸಿಕೊಳ್ಳಬೇಕಿತ್ತು. ನನ್ನನ್ನು ಇದರಲ್ಲಿ ಉಪಯೋಗಿಸಿಕೊಂಡಿದ್ದು ತಪ್ಪು. ದಯವಿಟ್ಟು ನನ್ನನ್ನು ಬದುಕಲು ಬಿಟ್ಟುಬಿಡಿ. ಅವರೆಲ್ಲಾ ದೊಡ್ಡವರು. ನನ್ನಂತ ಅಮಾಯಕಿಯನ್ನು ಇದರಲ್ಲಿ ಏಕೆ ಸಿಲುಕಿಸುತ್ತಿದ್ದಾರೆ ತಿಳಿಯುತ್ತಿಲ್ಲ. ನನ್ನ ಬದುಕು ಹಾಳಾದರೆ ಸರಿಪಡಿಸಲು ಯಾರು ಬರುತ್ತಾರೆ ಎಂದು ಅರುಣಾ ಪ್ರಶ್ನಿಸಿದ್ದಾರೆ.

ಉಮಾಪತಿ ಫೋನ್ ಮಾಡಿರುವುದು, ಕರೆದಿರುವುದು ಎಲ್ಲ ಸತ್ಯ. ಮಾರ್ಚ್‌ನಿಂದಲೂ ನನಗೆ ಉಮಾಪತಿಯವರಿಗೆ ಪರಿಚಯವಿದೆ. ಇದರಿಂದ ಉಮಾಪತಿಗೆ ಲಾಭವೋ, ನಷ್ಟವೋ ನನಗೆ ಗೊತ್ತಿಲ್ಲ. ಆದರೆ ಅವರು ನನ್ನನ್ನು ಉಪಯೋಗಿಸಿಕೊಂಡಿದ್ದು ತಪ್ಪು. ಇದರಿಂದ ನನಗೇನೂ 1 ರೂಪಾಯಿಯೂ ಸಿಕ್ಕಿಲ್ಲ. ನನಗೆ ಸಿಗುತ್ತಿರುವುದು ಅವಮಾನ ಅಷ್ಟೇ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ದರ್ಶನ್ ಬಿಡುಗಡೆಗೊಳಿಸಿದ ದಾಖಲೆಗಳ ಕುರಿತೂ ಮಾತನಾಡಿದ ಅರುಣಾ, ಅದು ಸಂಪೂರ್ಣ ಸತ್ಯವಲ್ಲ ಎಂದಿದ್ದಾರೆ. 32 ಪೇಜ್ ಚಾಟ್ ದಾಖಲೆ ಸುಳ್ಳು. ಮೆಸೇಜ್​ನಲ್ಲಿ ಉಮಾಪತಿಯವರೊಂದಿಗೆ ಜನರಲ್ ಆಗಿ ಮಾತನಾಡಿದ್ದಷ್ಟೇ ನಿಜ. ಉಳಿದದ್ದು ಸುಳ್ಳು ಎಂದಿದ್ದಾರೆ. ಚಾಟ್​ನಲ್ಲಿ ಹಾರ್ಟ್ ಸಿಂಬಲ್ ಕಳಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಅಣ್ಣ ತಂಗಿ, ತಂದೆಗೆ ಹಾರ್ಟ್ ಸಿಂಬಲ್ ಕಳಿಸೋಲ್ವಾ? ಅದು ಸಾಮಾನ್ಯವಾಗಿ ಆಡಿದ ಮಾತುಗಳಷ್ಟೇ ಎಂದಿದ್ದಾರೆ. ಅವರ ಈ ಮಾತುಗಳು ಪ್ರಕರಣದ ಸೂತ್ರಧಾರ ಮತ್ಯಾರೋ ಇದ್ದಾರಾ ಎಂಬ ಅನುಮಾನ ವ್ಯಕ್ತವಾಗುವಂತೆ ಮಾಡಿದೆ. ಇದು ಪ್ರಕರಣವನ್ನು ಮತ್ತಷ್ಟು ಗೋಜಲಾಗುವಂತೆ ಮಾಡಿದೆ.

ದರ್ಶನ್ ಅವರು ಸುದ್ದಿಗೋಷ್ಠಿಯಲ್ಲಿ ಮಾಡಿದ ಮತ್ತೊಂದು ಆರೋಪಕ್ಕೆ ಪ್ರತಿಕ್ರಿಯಿಸಿದ ಅರುಣಾ, ಅದು ನನ್ನ ವೈಯಕ್ತಿಕ ವಿಷಯ ಎಂದಿದ್ದಾರೆ. ತನ್ನನ್ನು ಮಾತ್ರ ತಪ್ಪಿತಸ್ಥೆ ಎಂಬಂತೆ ಬಿಂಬಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನನ್ನೂ ವಿಚಾರಣೆಗೆ ಕರೆದಿದ್ದರು. ಅವರನ್ನೂ(ಉಮಾಪತಿ) ವಿಚಾರಣೆಗೆ ಕರೆದಿದ್ದಾರೆ. ವಿಚಾರಣೆಗೂ ಮುನ್ನವೇ ನನ್ನನ್ನು ಮಾತ್ರ ತಪ್ಪಿತಸ್ಥೆ ಎನ್ನುವುದು ಯಾಕೆ ಎಂದಿದ್ದಾರೆ. ಜೊತೆಗೆ ನಾನು ಉಮಾಪತಿಯವರ ಮೇಲೂ ನಾನು ಆರೋಪ ಮಾಡುತ್ತಿಲ್ಲ. ದರ್ಶನ್ ಅವರ ಮೇಲೂ ಆರೋಪ ಮಾಡುತ್ತಿಲ್ಲ. ಅವರ ಸಮಸ್ಯೆಗೆ ಅವರೇ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಡೆಸಲಿ. ಅಲ್ಲಿಯವರೆಗೆ ನಮ್ಮನ್ನು ಬದುಕಲು ಬಿಡಿ ಎಂದು ಹೇಳಿರುವ ಅರುಣಾ, ತನಗೂ ಕುಟುಂಬವಿದೆ ಮಗುವಿದೆ. ಅವರ ಭವಿಷ್ಯವನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟ ವಿಡಿಯೊ ಇಲ್ಲಿದೆ.

ಅರುಣಾ ಕುಮಾರಿ ಆರೋಪಕ್ಕೆ ಉಮಾಪತಿ ಹೇಳಿದ್ದೇನು?
ದರ್ಶನ್ ಸ್ನೇಹಿತರು ನನ್ನ ವ್ಯಕ್ತಿತ್ವ ಹರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಹರ್ಷ ಮೇಲಾಂಟ ಮೊದಲಾದವರು ಸೇರಿ ನನ್ನನ್ನು ಸಿಲುಕಿಸುವಂತೆ ಮಾಡಿದರು. ಎಲ್ಲವೂ ಪೂರ್ವನಿಯೋಜತವಾಗಿತ್ತು. 25ಕೋಟಿ ಸಾಲ ವಿಚಾರದಲ್ಲಿ ನೀವು ಹೇಗೆ ಯಾಮಾರಿದ್ರಿ? ನಾನು ದಡ್ಡ ನಿಜ. ಆದರೆ ನಿಮಗೆ ತಿಳಿಯಬೇಕಾಗತ್ತಲ್ಲ ಎಂದು ಉಮಾಪತಿ ಶ್ರೀನಿವಾಸಗೌಡ ಪ್ರಶ್ನಿಸಿದ್ದಾರೆ. ಸ್ಟೇಶನ್ ಬೇಲ್ ಕೊಟ್ಟು ಆಕೆಯನ್ನು ಬಿಟ್ಟುಕಳಿಸಿದ್ದು ಯಾಕೆ? ಎಂದು ಉಮಾಪತಿ ದರ್ಶನ್ ಅವರ ಸ್ನೇಹಿತರನ್ನು ಪ್ರಶ್ನಿಸಿದ್ದಾರೆ. ಸದ್ಯಕ್ಕೆ ಆರೋಪಿ ಸ್ಥಾನದಲ್ಲಿರುವುದು ಅರುಣಾ ಕುಮಾರಿ ಮಾತ್ರ. ಅವರನ್ನು ಏಕೆ ಬಿಟ್ಟುಕಳಿಸಿದ್ದು ಎಂದು ಉಮಾಪತಿ ಹೇಳಿದ್ದಾರೆ. ದರ್ಶನ್ ಅವರ ಬಳಿ ನನ್ನ ಕುರಿತು ಬೇರೆಯವರು ಚುಚ್ಚಿಕೊಡುತ್ತಿದ್ದಾರೆ. ದರ್ಶನ್ ಅವರು ಅಮಾಯಕ. ಅವರ ಸುತ್ತ ಇರುವವರು ದರ್ಶನ್ ಅವರನ್ನು ಆಡಿಸುತ್ತಿದ್ದಾರೆ ಎಂದು ಉಮಾಪತಿ ಹೇಳಿದ್ದಾರೆ.

ಇಷ್ಟಾಗಿಯೂ ನನ್ನ ಮತ್ತು ದರ್ಶನ್ ಸ್ನೇಹ ಹಾಗೇ ಇದೆ. ಮಧ್ಯದಲ್ಲಿ ಯಾರೋ ಗೇಮ್ ಆಡುತ್ತಿದ್ದಾರೆ ಎಂದು ಉಮಾಪತಿ ಆರೋಪಿಸಿದ್ದಾರೆ. ಅರುಣಾ ಕುಮಾರಿ ಉಮಾಪತಿಯವರು ನನ್ನನ್ನು ಬಳಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಉಮಾಪತಿ, ಆಕೆಯ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನ್ಯಾಯಾಲಯವೇ ತೀರ್ಮಾನಿಸಲಿ ಎಂದಿದ್ದಾರೆ.  ಅರುಣಾ ಕುಮಾರಿ ಅವರೇ ನಮ್ಮ ನಡುವೆ ಅಷ್ಟೆಲ್ಲಾ ಮಾತುಕತೆ ನಡೆದಿಲ್ಲ ಎಂದು ಹೇಳಿದ ಮೇಲೆ ಆ 32 ಪುಟಗಳ ಡಾಕ್ಯುಮೆಂಟ್​ಗಳನ್ನು ಕ್ರಿಯೇಟ್  ಮಾಡಿದ್ದು ಯಾರು? ಎಂದು ಮರುಪ್ರಶ್ನಿಸಿದ್ದಾರೆ. ಆಕೆ ಹೇಳಿದ್ದಾಳೆ, ನಾನೇ ಮೊದಲು ಕರೆ ಮಾಡಿದ್ದು ಎಂದು. ಆದರೆ ದಾಖಲೆಯಲ್ಲಿರುವುದು ಆಕೆಯೇ ಕರೆ ಮಾಡಿದ್ದು ಎಂದು ಅವರು ಮರುಉತ್ತರ ನೀಡಿದ್ದಾರೆ. ದೂರು ನೀಡಿಯಾಗಿದೆ. ತನಿಖೆ ನಡೆಯಲಿ. ಇದು ಹಗರಣವೆಂದು ಕರೆದರೂ ಸಹ, ಯಾರ ಖಾತೆಯಿಂದಲೂ ಹಣ ಕಡಿತವಾಗಿಲ್ಲ. ಹಾಗಿದ್ದ ಮೇಲೆ ಇದು ಹಗರಣವಲ್ಲ. ವಂಚನೆಗೆ ಪ್ರಯತ್ನಿಸಿದ್ದಾರಷ್ಟೇ. ಪೊಲೀಸ್ ಸ್ಟೈಲ್​ನಲ್ಲಿ ತನಿಖೆ ನಡೆದರೆ ಸತ್ಯ ಹೊರಬರುತ್ತದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆಯೇ ಅರುಣಾ ಕುಮಾರಿಯವರಿಗೆ ಯಾರೋ ಹೇಳಿ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

(Aruna Kumari gives her first statement regarding Darshan and Umapathy fraud case controversy)

Published On - 12:16 pm, Tue, 13 July 21