ಶಿವರಾಜ್​ ಕುಮಾರ್-ಗೀತಾ ಮದುವೆಗೆ ಅಣ್ಣಾವ್ರು ಒಪ್ಪಿರಲಿಲ್ಲ, ಬಳಿಕ ಒಪ್ಪಿದ್ದಕ್ಕೆ ಕಾರಣವೇನು?

|

Updated on: Apr 28, 2023 | 6:34 PM

Dr Rajkumar: ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರ ಮದುವೆಗೆ ಆರಂಭದಲ್ಲಿ ಅಣ್ಣಾವ್ರು ಒಪ್ಪಿರಲಿಲ್ಲ ಆದರೆ ಬಳಿಕ ಮನಸ್ಸು ಬದಲಾಯಿಸಿದರು. ಕಾರಣವೇನು?

ಶಿವರಾಜ್​ ಕುಮಾರ್-ಗೀತಾ ಮದುವೆಗೆ ಅಣ್ಣಾವ್ರು ಒಪ್ಪಿರಲಿಲ್ಲ, ಬಳಿಕ ಒಪ್ಪಿದ್ದಕ್ಕೆ ಕಾರಣವೇನು?
ಶಿವರಾಜ್ ಕುಮಾರ್-ಗೀತಾ ಶಿವರಾಜ್ ಕುಮಾರ್ ಮದುವೆ
Follow us on

ಶಿವರಾಜ್​ ಕುಮಾರ್ (Shiva Rajkumar) ಹಾಗೂ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಅವರದ್ದು ಚಿತ್ರರಂಗದ ಕ್ಯೂಟೆಸ್ಟ್ ಜೋಡಿಗಳಲ್ಲೊಂದು. ಪರಸ್ಪರರ ಮೇಲೆ ಅವಲಂಬಿತರಾಗಿ, ಪರಸ್ಪರರನ್ನು ಪ್ರೋತ್ಸಾಹಿಸಿಕೊಂಡು, ಬೆಂಬಲಿಸಿಕೊಂಡು ಬಹುವರ್ಷಗಳಿಂದಲೂ ದಾಂಪತ್ಯ ಸಾಗಿಸಿಕೊಂಡು ಬರುತ್ತಿದ್ದಾರೆ. ಆದರೆ ಶಿವರಾಜ್ ಕುಮಾರ್ ಅವರು ಗೀತಾ ಅವರನ್ನು ವಿವಾಹವಾಗುವುದು ಡಾ ರಾಜ್​ಕುಮಾರ್ (Dr Rajkumar) ಅವರಿಗೆ ಇಷ್ಟವಿರಲಿಲ್ಲವಂತೆ, ಆದರೆ ಆ ನಂತರ ಅವರು ಮನಸು ಬದಲಿಸಿದರಂತೆ. ಏಕೆ ಇಷ್ಟವಿರಲಿಲ್ಲ, ಬಳಿಕ ಮನಸ್ಸು ಬದಲಿಸಿದ್ದು ಏಕೆ? ದೊಡ್ಮನೆಯ ಆಪ್ತ ಬಂಧು, ಪಾರ್ವತಮ್ಮ ರಾಜ್​ಕುಮಾರ್ ಅವರ ಸಹೋದರ, ನಿರ್ಮಾಪಕ ಚಿನ್ನೇಗೌಡರು ಈ ಬಗ್ಗೆ ಮಾತನಾಡಿದ್ದಾರೆ.

”ಗೀತಮ್ಮ ನನಗೆ ಬಹಳ ಆತ್ಮೀಯರು, ಗೀತಾ ಅವರನ್ನು ಶಿವರಾಜ್ ಕುಮಾರ್ ಅವರಿಗೆ ತಂದುಕೋಬೇಕು ಎಂದು ಮೊದಲು ಸಲಹೆ ಕೊಟ್ಟಿದ್ದು ನಾನೇ, ಆದರೆ ಭಾವ (ಡಾ ರಾಜ್​ಕುಮಾರ್) ಚಿನ್ನಪ್ಪ ಯಾಕಪ್ಪ ನಮಗೆ ರಾಜಕೀಯದವರ ಸಹವಾಸ, ಬೇಡ ಎಂದು ಬಿಟ್ಟರು. ಆದರೆ ನನಗೆ ಆಸೆಯಿತ್ತು. ನಾನು ಅಕ್ಕ (ಪಾರ್ವತಮ್ಮ ರಾಜ್​ಕುಮಾರ್) ಕಲಾವಿದರ ಸಂಘ ಕಟ್ಟಲು ಬಂಗಾರಪ್ಪನವರ ಮನೆಗೆ ಹೋಗಿ ಸಹಾಯ ಪಡೆದಿದ್ದೆವು. ಆಗ ಅಕ್ಕನ ಬಳಿಯೂ ಪೀಠಿಕೆ ಹಾಕಿ, ಬಂಗಾರಪ್ಪನವರ ಮಡದಿ ಶಾಕುಂತಲಮ್ಮ ಅವರು ಸಾಧ್ವಿ ಅವರ ಕೈಯಲ್ಲಿ ಬೆಳೆದ ಮಗಳು ಗೀತಾ ಅವರನ್ನು ಸೊಸೆ ಮಾಡಿಕೊಳ್ಳೋಣ ಎಂದೆ ಸರಿ ಎಂದಿದ್ದರು. ಆದರೆ ಆಗಲೂ ಭಾವ ಒಪ್ಪಿರಲಿಲ್ಲ” ಎಂದು ಚಿನ್ನೇಗೌಡರು ಹಳೆಯ ಸಂಗತಿ ಮೆಲುಕು ಹಾಕಿದರು.

ಅದಾದ ಬಳಿಕ, ಯಾವುದೋ ಕಾರ್ಯಕ್ರಮದ ನಿಮಿತ್ತ, ಬಂಗಾರಪ್ಪನವರು ರಾಜ್​ಕುಮಾರ್ ಅವರನ್ನು ಮನೆಗೆ ಆಹ್ವಾನಿಸಿದರು. ನಾವು ಆ ವೇಳೆಗಾಗಲೆ ಬೆಂಗಳೂರಿಗೆ ಶಿಫ್ಟ್ ಆಗಿದ್ದೆವು. ನಾನು, ಭಾವ, ಅಕ್ಕ, ವರದ ಮಾಮ ಎಲ್ಲರೂ ಊಟಕ್ಕೆ ಹೋದೆವು. ಅಲ್ಲಿ ಶಾಕುಂತಲಮ್ಮನವರನ್ನು ಕಂಡು ಭಾವನವರು ಬಹಳ ಪ್ರಭಾವಿತರಾದರು. ಅವರ ಗುಣ, ಮಾತು ಕೇಳಿ ಭಾವನವರಿಗೆ ಬಹಳ ಮೆಚ್ಚುಗೆಯಾಯ್ತು, ರಾಜಕಾರಣಿಗಳ ಮಡದಿಯೇನಾ ಇವರು ಎನಿಸಿತ್ತು, ಒಂದು ರೀತಿ ಸೋದರತೆ ಭಾವ ಭಾವನವರಿಗೆ ನಿರ್ಮಾಣ ವಾಗಿತ್ತು. ಅಲ್ಲಿಯೇ ರಾಜ್​ಕುಮಾರ್ ಅವರು ಮೊದಲಿಗೆ ಗೀತಾ ಅವರನ್ನು ಕಂಡಿದ್ದು ಎಂದಿದ್ದಾರೆ ಚಿನ್ನೇಗೌಡರು.

ಇದನ್ನೂ ಓದಿ:‘ಡಾ. ರಾಜ್​ಕುಮಾರ್​ ಬಗ್ಗೆ ಅವರ ತಂದೆ ನುಡಿದಿದ್ರು ಭವಿಷ್ಯ’: ಅಚ್ಚರಿಯ ಘಟನೆ ಮೆಲುಕು ಹಾಕಿದ ರಾಘಣ್ಣ

ಆ ಭೇಟಿ ಬಳಿಕ ಮತ್ತೆ ನಾನು ಗೀತಾ ಅವರನ್ನು ಶಿವರಾಜ್ ಕುಮಾರ್ ಅವರಿಗೆ ತಂದುಕೊಳ್ಳುವ ಪ್ರಸ್ತಾಪ ಮಾಡಿದೆ. ಶಾಕುಂತಲಮ್ಮನವರಂಥಹಾ ಗೃಹಿಣಿ ಕೈಯಲ್ಲಿ ಬೆಳೆದ ಮಕ್ಕಳು, ಇವರೂ ಸಹ ಅವರಂತೆಯೇ ಎಂದು ಹೇಳಿದೆ ಆಗ ರಾಜ್​ಕುಮಾರ್ ಅವರು ಒಪ್ಪಿ, ಸರಿ ಹಾಗಿದ್ದರೆ ಮಾಡಿ ಎಂದರು. ಅಂತೆಯೇ ಮದುವೆ ಮಾತುಕತೆ ಆಗಿ ಎರಡೂ ಕುಟುಂಬವರು ಒಪ್ಪಿ ಅದ್ಧೂರಿಯಾಗಿ ಮದುವೆಯಾಯಿತು. ಅರಮನೆ ಮೈದಾನದಲ್ಲಿ ಮದುವೆ ಆಯಿತು, ಆದರೆ ಅಷ್ಟು ಜನರನ್ನು ನಾನು ಎಂದೂ ನೋಡಿರಲಿಲ್ಲ. ಬಂಗಾರಪ್ಪನವರ ಅಭಿಮಾನಿಗಳು, ರಾಜ್​ಕುಮಾರ್ ಅವರ ಅಭಿಮಾನಿಗಳು ಒಟ್ಟಾಗಿ ಮದುವೆಗೆ ಬಂದಿದ್ದರು. ಮಾಡಿಸಿಟ್ಟಿದ್ದ ಅಡುಗೆಯೆಲ್ಲ ಖಾಲಿ, ಕುಟುಂಬದವರಿಗೆ ಊಟ ಸಿಗಲಿಲ್ಲ. ನಾನು, ಭಾವ, ಅಕ್ಕ ಎಲ್ಲ ಹೋಗಿ ಜನಾರ್ಧನ ಹೋಟೆಲ್​ನಲ್ಲಿ ಊಟ ಮಾಡಿದ್ದೆವು, ರಿಸೆಪ್ಷನ್​ಗೂ ಸಾವಿರಾರು ಸಂಖ್ಯೆಯಲ್ಲಿ ಜನ ಬಂದರು, ಒಂದು ಹಂತದಲ್ಲಂತೂ ಜನರನ್ನು ನಿಭಾಯಿಸಲು ಆಗಲಿಲ್ಲ. ಕೊನೆಗೆ 9 ಗಂಟೆಗೆ ವಧು-ವರರನ್ನು ಕರೆದುಕೊಂಡು ಹೊರಟುಬಿಟ್ಟೆವು ಎಂದು ಅಂದಿನ ಘಟನೆ ನೆನಪು ಮಾಡಿಕೊಂಡರು ಚಿನ್ನೇಗೌಡರು.

ರಾಜ್​ಕುಮಾರ್ ಹಾಗೂ ಬಂಗಾರಪ್ಪನವರು ಬೀಗರಾದರೂ ಬಂಗಾರಪ್ಪನವರು ರಾಜ್​ಕುಮಾರ್ ಅವರ ಬಳಿ ರಾಜಕೀಯ ಮಾತನಾಡುತ್ತಿರಲಿಲ್ಲ, ರಾಜ್​ಕುಮಾರ್ ಅವರಿಗೆ ಅದು ಇಷ್ಟವಿಲ್ಲ ಎಂದು ಅವರಿಗೆ ಗೊತ್ತಿತ್ತು, ಮಾತ್ರವಲ್ಲ ರಾಜ್​ಕುಮಾರ್ ಅವರನ್ನು ಎಂದಿಗೂ ರಾಜಕೀಯಕ್ಕೆ ಬಂಗಾರಪ್ಪನವರು ಆಹ್ವಾನಿಸಲೂ ಇಲ್ಲ ಎಂದು ಚಿನ್ನೇಗೌಡರು ಹೇಳಿದ್ದಾರೆ. ಇಂದು ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಸಹೋದರ ಮಧು ಬಂಗಾರಪ್ಪ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ