ಅಳಿದು ಉಳಿದವರ ಕಥೆ ಹೇಳಲು ಬಂದ ‘ಕಾಟೇರ’ ಕಥೆಗಾರ; ದುನಿಯಾ ವಿಜಯ್ ಜೊತೆ ಹೊಸ ಸಿನಿಮಾ

|

Updated on: Jan 20, 2024 | 10:23 AM

ಜಯ್ ಹುಟ್ಟುಹಬ್ಬದ ಪ್ರಯುಕ್ತ ದುನಿಯಾ ವಿಜಯ್ ಹಾಗೂ ಜಡೇಶ್ ಸಿನಿಮಾ ಅನೌನ್ಸ್ ಆಗಿದೆ. ಇದಕ್ಕೆ ತಾತ್ಕಾಲಿಕವಾಗಿ ‘VK29’ ಎಂದು ಶೀರ್ಷಿಕೆ ಇಡಲಾಗಿದೆ. ಶ್ವಾನ ಹಾಗೂ ಹುಲಿ ಕಿತ್ತಾಡಲು ರೆಡಿ ಆಗಿರೋ ದೃಶ್ಯ ಈ ಪೋಸ್ಟರ್​ನಲ್ಲಿದೆ.

ಅಳಿದು ಉಳಿದವರ ಕಥೆ ಹೇಳಲು ಬಂದ ‘ಕಾಟೇರ’ ಕಥೆಗಾರ; ದುನಿಯಾ ವಿಜಯ್ ಜೊತೆ ಹೊಸ ಸಿನಿಮಾ
ವಿಜಯ್
Follow us on

ಇತ್ತೀಚೆಗೆ ರಿಲೀಸ್ ಆದ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ (Kaatera Movie) ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮಣ್ಣಿನ ಕಥೆ ಜನರಿಗೆ ಇಷ್ಟ ಆಗಿದೆ. ಈ ಸಿನಿಮಾಗೆ ಕಥೆ ಬರೆದಿದ್ದು ಜಡೇಶ್ ಕುಮಾರ್ ಹಂಪಿ. ಅವರು ಈಗ ದುನಿಯಾ ವಿಜಯ್ ಜೊತೆ ಕೈ ಜೋಡಿಸಿದ್ದಾರೆ. ವಿಜಯ್ ನಟನೆಯ 29ನೇ ಸಿನಿಮಾಗೆ ಜಡೇಶ್ ನಿರ್ದೇಶನ ಮಾಡುತ್ತಿದ್ದಾರೆ. ಇಂದು (ಜನವರಿ 20) ದುನಿಯಾ ವಿಜಯ್ ಬರ್ತ್​ಡೇ. ಆ ಪ್ರಯುಕ್ತ ಸಿನಿಮಾ ಅನೌನ್ಸ್ ಆಗಿದೆ.

ಮಣ್ಣಿನ ಕಥೆಗಳಿಗೆ ಜಡೇಶ್ ಕುಮಾರ್ ಹಂಪಿ ಹೆಸರುವಾಸಿಯಾಗಿದ್ದಾರೆ. ಜಡೇಶ್ ಅವರ ಕಥೆಗಳು ಜನರಿಗೆ ಇಷ್ಟ ಆಗುತ್ತವೆ. ‘ಕಾಟೇರ’ ಗೆಲುವಿನ ಬಳಿಕ ಅವರ ಖ್ಯಾತಿಯೂ ಹೆಚ್ಚಿದೆ. ಈಗ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ದುನಿಯಾ ವಿಜಯ್ ಹಾಗೂ ಜಡೇಶ್ ಸಿನಿಮಾ ಅನೌನ್ಸ್ ಆಗಿದೆ. ಇದಕ್ಕೆ ತಾತ್ಕಾಲಿಕವಾಗಿ ‘VK29’ ಎಂದು ಶೀರ್ಷಿಕೆ ಇಡಲಾಗಿದೆ. ಶ್ವಾನ ಹಾಗೂ ಹುಲಿ ಕಿತ್ತಾಡಲು ರೆಡಿ ಆಗಿರೋ ದೃಶ್ಯ ಈ ಪೋಸ್ಟರ್​ನಲ್ಲಿದೆ. ‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ.’ ಅನ್ನೋ ಅಡಿ ಬರಹ ಗಮನ ಸೆಳೆದಿದೆ.

ಇದನ್ನೂ ಓದಿ: ಬರ್ತ್​ಡೇ ದಿನ ಮಕ್ಕಳ ಸಿನಿಮಾ ಜರ್ನಿ ಬಗ್ಗೆ ಅಪ್​ಡೇಟ್ ಕೊಟ್ಟ ದುನಿಯಾ ವಿಜಯ್

ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರ ಹಿರಿಯ ಮಗಳು ಮೋನಿಕಾ ನಟಿಸುತ್ತಿದ್ದಾರೆ. ವಿಜಯ್ ಹಾಗೂ ಮೋನಿಕಾ ತಂದೆ ಮಗಳ ಪಾತ್ರದಲ್ಲಿ ನಟಿಸಲಿದ್ದಾರೆ.  ಸದ್ಯ ದುನಿಯಾ ವಿಜಯ್ ಅವರು ‘ಭೀಮ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದಕ್ಕೆ ಬಂಡವಾಳ ಹೂಡಿರುವಂತಹ ಜಗದೀಶ್ ಗೌಡ ಅವರೇ ‘VK29’ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ಈ ಚಿತ್ರದ ಕುರಿತು ಇನ್ನಷ್ಟು ವಿಚಾರಗಳನ್ನ ‘ಭೀಮ’ ರಿಲೀಸ್ ಬಳಿಕ ತಂಡ ಬಿಟ್ಟುಕೊಡಲಿದೆ.

‘ಭೀಮ’ ಟೀಸರ್

ದುನಿಯಾ ವಿಜಯ್ ಬರ್ತ್​ಡೇ ಪ್ರಯುಕ್ತ ‘ಭೀಮ’ ಟೀಸರ್ ರಿಲೀಸ್ ಆಗಿದೆ. ಈ ಟೀಸರ್​ನಲ್ಲಿ ದುನಿಯಾ ವಿಜಯ್ ಅವರು ಖಡಕ್ ಅವತಾರ ಹಾಗೂ ಖಡಕ್ ಡೈಲಾಗ್ ಮೂಲಕ ಗಮನ ಸೆಳೆದಿದ್ದಾರೆ. ಈ ಟೀಸರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಆನೇಕಲ್ ಬಳಿಯ ಕುಂಬಾರಹಳ್ಳಿಯಲ್ಲಿ ವಿಜಯ್ ಅವರು ತಮ್ಮ ಬರ್ತ್​ಡೇ ಅನ್ನು ತಂದೆ, ತಾಯಿ ಸಮಾಧಿ ಬಳಿ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ವಿಜಯ್​ಗೆ ಸಾಥ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 10:21 am, Sat, 20 January 24