Minerva Mills: ಕನ್ನಡ ಚಿತ್ರರಂಗದ ನೆಚ್ಚಿನ ಶೂಟಿಂಗ್​ ಲೊಕೇಷನ್​ ಆಗಿದ್ದ ಮಿನರ್ವ ಮಿಲ್​ ಬಾಗಿಲಿಗೆ ಶಾಶ್ವತ ಬೀಗ

ಇಷ್ಟು ವರ್ಷಗಳ ಕಾಲ ಕನ್ನಡ ಸಿನಿಮಾಗಳ ಚಿತ್ರೀಕರಣಕ್ಕೆ ಮಿನರ್ವ ಮಿಲ್​ ಲಭ್ಯವಿತ್ತು. ಆದರೆ ಅದರ ಬಾಗಿಲಿಗೆ ಈಗ ಬೀಗ ಬಿದ್ದಿದೆ. ಒಂದು ಮಾಹಿತಿ ಪ್ರಕಾರ ಇತ್ತೀಚೆಗೆ ತೆರೆಕಂಡ ‘ಘೋಸ್ಟ್​’ ಚಿತ್ರವೇ ಅಲ್ಲಿ ಚಿತ್ರೀಕರಣಗೊಂಡ ಕೊನೇ ಸಿನಿಮಾ. ಆ ಲೊಕೇಷನ್​ ಲಭ್ಯವಿಲ್ಲದ ಕಾರಣ ಕನ್ನಡ ಚಿತ್ರರಂಗಕ್ಕೆ ತೊಂದರೆ ಹೆಚ್ಚಿದೆ.

Minerva Mills: ಕನ್ನಡ ಚಿತ್ರರಂಗದ ನೆಚ್ಚಿನ ಶೂಟಿಂಗ್​ ಲೊಕೇಷನ್​ ಆಗಿದ್ದ ಮಿನರ್ವ ಮಿಲ್​ ಬಾಗಿಲಿಗೆ ಶಾಶ್ವತ ಬೀಗ
ಮಿನರ್ವ ಮಿಲ್​ನಲ್ಲಿ ಚಿತ್ರೀಕರಣಗೊಂಡಿದ್ದ ‘ಕಬ್ಜ’, ‘ಕೆಜಿಎಫ್​: ಚಾಪ್ಟರ್​ 1’

Updated on: Oct 24, 2023 | 6:48 PM

ಹೈದರಾಬಾದ್​ನಲ್ಲಿ ಸುಸಜ್ಜಿತವಾದ ರಾಮೋಜಿ ರಾವ್​ ಫಿಲ್ಮ್​ ಸಿಟಿ ಇದೆ. ಆದರೆ ಕರ್ನಾಟಕದಲ್ಲಿ ಅಂತಹ ವ್ಯವಸ್ಥೆ ಇಲ್ಲ. ಹಾಗಾಗಿ ಕನ್ನಡ ಚಿತ್ರರಂಗದವರು (Kannada Film Industry) ಚಿತ್ರೀಕರಣಕ್ಕೆ ಅನುಕೂಲ ಆಗುವಂತಹ ಪರ್ಯಾಯ ಸ್ಥಳಗಳನ್ನು ಅವಲಂಬಿಸಿದ್ದಾರೆ. ಬೆಂಗಳೂರಿನಲ್ಲಿ ಬೆರಳಿಕೆಯಷ್ಟು ಸ್ಟುಡಿಯೋಗಳಿವೆ. ಅಬ್ಬಯ್ಯ ನಾಯ್ಡು ಸ್ಡುಡಿಯೋ, ಅಭಿಮಾನ್​ ಸ್ಡುಡಿಯೋ, ಕಂಠೀರವ ಸ್ಟುಡಿಯೋ ಸದಾ ಬ್ಯುಸಿ ಆಗಿರುತ್ತವೆ. ಇದೆಲ್ಲವನ್ನೂ ಹೊರತುಪಡಿಸಿ ಕೆಲವು ನಿರ್ದಿಷ್ಟ ದೃಶ್ಯಗಳನ್ನು ಚಿತ್ರೀಕರಿಸಬೇಕು ಎಂದರೆ ಕನ್ನಡ ಚಿತ್ರರಂಗದ ಮಂದಿಗೆ ಥಟ್​ ಅಂತ ನೆನಪಾಗುತ್ತಿದ್ದದ್ದು ಮಿನರ್ವ ಮಿಲ್​ (Minerva Mill). ಬೆಂಗಳೂರಿನ ಹೃದಯಭಾಗದಲ್ಲೇ ಇದ್ದ ಈ ಜಾಗದಲ್ಲಿ ಲೆಕ್ಕವಿಲ್ಲದಷ್ಟು ಸಿನಿಮಾಗಳ ಶೂಟಿಂಗ್​ ನಡೆದಿದೆ. ಆದರೆ ಈಗ ಆ ಜಾಗಕ್ಕೆ ಸ್ಯಾಂಡಲ್​ವುಡ್​ (Sandalwood) ಮಂದಿ ವಿದಾಯ ಹೇಳಬೇಕಾಗಿದೆ. ಇನ್ಮುಂದೆ ಸಿನಿಮಾಗಳ ಚಿತ್ರೀಕರಣಕ್ಕೆ ಅಲ್ಲಿ ಅವಕಾಶ ಸಿಗುವುದಿಲ್ಲ.

ಬೇರೆ ಸ್ಟುಡಿಯೋಗಳ ರೀತಿಯಲ್ಲಿ ಮಿನರ್ವ ಮಿಲ್​ ಒಂದು ಸುಸಜ್ಜಿತವಾದ ಸ್ಡುಡಿಯೋ ಅಲ್ಲ. ಹಾಗೆ ನೋಡಿದರೆ ಅದೊಂದು ಪಾಳುಬಿದ್ದ ಜಾಗ. ಅಲ್ಲಿನ ವಿಶಾಲವಾದ ಜಾಗದಲ್ಲಿ ಹಲವು ಸಿನಿಮಾಗಳಿಗೆ ಸೆಟ್​ ಹಾಕಲಾಗುತ್ತಿತ್ತು. ಸಾವಿರಾರು ಫೈಟಿಂಗ್​ ದೃಶ್ಯಗಳನ್ನು ಈ ಜಾಗದಲ್ಲಿ ಶೂಟ್​ ಮಾಡಲಾಗಿದೆ. ಹಾಡುಗಳ ಚಿತ್ರೀಕರಣ ಕೂಡ ನಡೆದಿದೆ. ಭೂಗತ ಲೋಕದ ದೃಶ್ಯಗಳನ್ನು ಚಿತ್ರಿಸಬೇಕು ಎಂದರೆ ಮಿನರ್ವ ಮಿಲ್​ ಹೆಚ್ಚು ಸೂಕ್ತವಾಗಿತ್ತು. ಅದೇ ಕಾರಣಕ್ಕೋ ಏನೋ ‘ವಿಕ್ರಾಂತ್​ ರೋಣ’ ‘ಕಬ್ಜ’, ‘ಘೋಸ್ಟ್​’, ‘ಉಗ್ರಂ’, ‘ಪೊಗರು’ ಸೇರಿದಂತೆ ಅನೇಕ ಮಾಸ್​ ಸಿನಿಮಾಗಳನ್ನು ಅಲ್ಲಿ ಚಿತ್ರೀಕರಿಸಲಾಗಿತ್ತು.

ಇಷ್ಟು ವರ್ಷಗಳ ಕಾಲ ಕನ್ನಡ ಸಿನಿಮಾಗಳ ಚಿತ್ರೀಕರಣಕ್ಕೆ ಮಿನರ್ವ ಮಿಲ್​ ಲಭ್ಯವಿತ್ತು. ಆದರೆ ಅದರ ಬಾಗಿಲಿಗೆ ಈಗ ಬೀಗ ಬಿದ್ದಿದೆ. ಒಂದು ಮಾಹಿತಿ ಪ್ರಕಾರ ಇತ್ತೀಚೆಗೆ ತೆರೆಕಂಡ ‘ಘೋಸ್ಟ್​’ ಚಿತ್ರವೇ ಮಿನರ್ವ ಮಿಲ್​ನಲ್ಲಿ ಚಿತ್ರೀಕರಣಗೊಂಡ ಕೊನೇ ಸಿನಿಮಾ. ಲುಲು ಮಾಲ್​ ಸಮೀಪ ಇರುವ ಈ ಜಾಗಕ್ಕೆ ಇರುವ ಮಾರುಕಟ್ಟೆ ಬೆಲೆ ಊಹಿಸಲಸಾಧ್ಯ. ಅದರ ಅಕ್ಕ ಪಕ್ಕ ಗಗನ ಚುಂಬಿಸುವಂತಹ ಅಪಾರ್ಟ್​ಮೆಂಟ್​ಗಳು ನಿರ್ಮಾಣ ಆಗಿವೆ. ಮಿನರ್ವ ಮಿಲ್​ನಲ್ಲಿಯೂ ದೊಡ್ಡ ಕಟ್ಟಡ ತಲೆ ಎತ್ತುವ ಸಾಧ್ಯತೆ ಇದೆ ಅಥವಾ ಬೇರೆ ಏನಾದರೂ ಕಾಮಗಾರಿ ಆರಂಭ ಆಗವಹುದು. ಆ ಕಾರಣದಿಂದಲೇ ಅಲ್ಲಿ ಈಗ ಸಿನಿಮಾಗಳ ಚಿತ್ರೀಕರಣಕ್ಕೆ ಅವಕಾಶ ಸಿಗುತ್ತಿಲ್ಲ.

ಇದನ್ನೂ ಓದಿ: Film City: ಮೈಸೂರಿನಲ್ಲಿ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಸಿಎಂಗೆ ಮನವಿ; ಕನ್ನಡದ ಸೆಲೆಬ್ರಿಟಿಗಳ ಜತೆ ಬಾಲಿವುಡ್​ ಮಂದಿ ಸಹಿ

ಮಿನರ್ವ​ ಮಿಲ್​ ಒಂದು ಪಾಳು ಬಿದ್ದ ಜಾಗವಾಗಿತ್ತು. ಅಲ್ಲಿ ಬೇಕಾದಷ್ಟು ದಿನಗಳ ಕಾಲ ಶೂಟಿಂಗ್​ ಮಾಡಲು ಅವಕಾಶ ಇತ್ತು. ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಕಲಾವಿದರು ಆ ಜಾಗದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲಿ ತಲೆ ಎತ್ತಿದ ಸೆಟ್​ಗಳು ಭರ್ಜರಿಯಾಗಿ ಕಾಣುತ್ತಿದ್ದವು. ಇರುವ ಮಿತವಾದ ಸೌಲಭ್ಯಗಳನ್ನೇ ಬಳಸಿಕೊಂಡು ಈ ಜಾಗದಲ್ಲಿ ವೈಭವದ ದೃಶ್ಯಗಳನ್ನು ಕಟ್ಟಿಕೊಟ್ಟ ನಿರ್ದೇಶಕರು ಅನೇಕರಿದ್ದಾರೆ. ಬೆಂಗಳೂರಿನ ನಗರದೊಳಗೆ ಇದ್ದ ಲೊಕೇಷನ್​ ಇದಾದ ಕಾರಣ ಸಿನಿಮಾ ಮಂದಿಗೆ ಇದು ಫೇವರಿಟ್​ ಆಗಿತ್ತು. ಅದೇ ಜಾಗದಲ್ಲಿ ಚಿಕ್ಕ ಕಲಾವಿದನಾಗಿ ಬಂದು, ಹೀರೋ ಆಗುವ ಮಟ್ಟಕ್ಕೆ ಬೆಳೆದ ನಟರೂ ಇದ್ದಾರೆ. ಬರಿಗೈನಲ್ಲಿ ಬಂದು ದೊಡ್ಡ ನಿರ್ಮಾಪಕನಾದವರೂ ಇದ್ದಾರೆ. ಆ ಎಲ್ಲ ಘಟನೆಗಳಿಗೆ ಸಾಕ್ಷಿಯಾಗಿತ್ತು ಮಿನರ್ವ ಮಿಲ್​.

‘ಕೆಜಿಎಫ್​’ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್​ ಅವರು ಮಿನರ್ವ ಮಿಲ್​ನಲ್ಲಿ ಸಾಕಷ್ಟು ಸಿನಿಮಾಗಳ ಶೂಟಿಂಗ್​ ಮಾಡಿದ್ದಾರೆ. ಆ ಬಗ್ಗೆ ಅವರು ‘ಟಿವಿ9 ಕನ್ನಡ ಡಿಜಿಟಲ್​’ ಜೊತೆ ಮಾತನಾಡಿದ್ದಾರೆ. ‘ನಮ್ಮಲ್ಲಿ ಶೂಟಿಂಗ್​ ಫ್ಲೋರ್​ಗಳು ಕಡಿಮೆ. ಸೂಕ್ತವಾದ ಸೌಲಭ್ಯಗಳು ಇಲ್ಲ. ಅಂಥದ್ದರಲ್ಲಿ ಮಿನರ್ವ ಮಿಲ್​ನಲ್ಲಿ ಶೂಟಿಂಗ್​ಗೆ ಜಾಗ ಸಿಗುತ್ತಿತ್ತು. ನಗರದ ಒಳಗೆ ಇದ್ದರೂ ಕೂಡ ಅದು ಶೂಟಿಂಗ್​ ಫ್ರೆಂಡ್ಲಿ ಆಗಿತ್ತು. ನಾವು ಕಬ್ಜ ಸಿನಿಮಾವನ್ನು ಪೂರ್ತಿಯಾಗಿ ಅಲ್ಲೇ ಶೂಟ್​ ಮಾಡಿದ್ದೆವು. ಸತತ ಮೂರು ವರ್ಷ ಅಲ್ಲಿ ಚಿತ್ರೀಕರಣ ಮಾಡಿದ್ದೆವು. ‘ಕೆಜಿಎಫ್​: ಚಾಪ್ಟರ್​ 1’ ಚಿತ್ರಕ್ಕೆ ಅಂದಾಜು 45 ದಿನ ಶೂಟಿಂಗ್​ ನಡೆದಿತ್ತು. ‘ಕೆಜಿಎಫ್​ 2’ ಚಿತ್ರದ ಒಂದಷ್ಟು ದೃಶ್ಯಗಳ ಚಿತ್ರೀಕರಣ ಅಲ್ಲಿಯೇ ನಡೆದಿತ್ತು’ ಎಂದಿದ್ದಾರೆ ಶಿವಕುಮಾರ್​.

ಇದನ್ನೂ ಓದಿ: Film City: ಮೈಸೂರಿನಲ್ಲಿ ಫಿಲ್ಮ್​ಸಿಟಿ ನಿರ್ಮಾಣದ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

‘ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿ ಇರುವ ಜಾಗ ಆದ್ದರಿಂದ ಚಿತ್ರತಂಡದವರು ಸುಲಭವಾಗಿ ಕಡಿಮೆ ಸಮಯದಲ್ಲಿ ಅಲ್ಲಿಗೆ ತಲುಪಬಹುದಿತ್ತು. ಆ ಕಾರಣದಿಂದಲೂ ಅದು ಫೇವರಿಟ್​ ಆಗಿತ್ತು. ಜೈಲು, ಫ್ಯಾಕ್ಟರಿ ಸೇರಿದಂತೆ ಯಾವುದೇ ರೀತಿಯ ಸೆಟ್​ಗಳನ್ನೂ ಹಾಕಲು ಅನುಕೂಲಕರವಾಗಿತ್ತು. ಜಿಎಸ್​ಟಿ ಸೇರಿ ದಿನಕ್ಕೆ 50 ಸಾವಿರ ರೂಪಾಯಿ ಕೊಟ್ಟು ನಿರ್ಮಾಪಕರು ಅಲ್ಲಿ ಶೂಟಿಂಗ್​ ಮಾಡುತ್ತಿದ್ದರು. ದುಬಾರಿ ಆದರೂ ಕೂಡ ಸೂಕ್ತವಾದ ಲೊಕೇಷನ್​ ಅದಾಗಿತ್ತು. ಅಂಥ ಜಾಗ ಈಗ ಇಲ್ಲವಾದರೆ ತುಂಬ ತೊಂದರೆ ಆಗುತ್ತದೆ. ನಮ್ಮಲ್ಲಿ ನಿರ್ಮಾಪಕರು ಖರ್ಚು ಮಾಡಲು ತಯಾರಿದ್ದಾರೆ. ಆದರೆ ಅದಕ್ಕೆ ತಕ್ಕಂತಹ ಸೌಲಭ್ಯಗಳು ಇಲ್ಲದಂತಾಗಿವೆ’ ಎಂದು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ ಕಲಾ ನಿರ್ದೇಶಕ ಶಿವಕುಮಾರ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us