ಸಿನಿಮಾ ಆಗಲಿದೆ ಇಮ್ಮಡಿ ಪುಲಿಕೇಶಿ ಜೀವನ-ಸಾಧನೆ: ಸಿನಿಮಾ ಹೆಸರೇನು?

Immadi Pulikeshi: ಕನ್ನಡದಲ್ಲಿ ಎಲ್ಲೋ ಅಲ್ಲೊಂದು ಇಲ್ಲೊಂದು ಐತಿಹಾಸಿಕ ಸಿನಿಮಾಗಳು ಸೆಟ್ಟೇರುತ್ತವೆಯಷ್ಟೆ. ಅದರಲ್ಲೂ ರಾಜ-ಮಹಾರಾಜರ ಜೀವನ ಆಧರಿಸಿದ ಸಿನಿಮಾಗಳಂತೂ ಬಹಳ ವಿರಳ. ಆದರೆ ಇದೀಗ ಕನ್ನಡದ ದೊರೆ ಇಮ್ಮಡಿ ಪುಲಿಕೇಶಿ ಜೀವನ, ಸಾಹಸ, ಸಾಧನೆ ಕುರಿತು ಹೇಳುವ ಕನ್ನಡ ಸಿನಿಮಾ ಒಂದು ಸೆಟ್ಟೇರಲು ಸಿದ್ಧವಾಗಿದೆ.

ಸಿನಿಮಾ ಆಗಲಿದೆ ಇಮ್ಮಡಿ ಪುಲಿಕೇಶಿ ಜೀವನ-ಸಾಧನೆ: ಸಿನಿಮಾ ಹೆಸರೇನು?
Immadi Pulikeshi

Updated on: Apr 10, 2026 | 7:48 AM

ಬಾಲಿವುಡ್​​ನಲ್ಲಿ (Bollywood) ಒಂದರ ಹಿಂದೊಂದು ಐತಿಹಾಸಿಕ ಸಿನಿಮಾಗಳು, ಜೀವನ ಆಧರಿತ ಬಯೋಪಿಕ್ ಸಿನಿಮಾಗಳು ನಿರ್ಮಾಣ ಆಗುತ್ತಲೇ ಇರುತ್ತವೆ. ಅದರಲ್ಲೂ ಇತ್ತೀಚೆಗೆ ಐತಿಹಾಸಿಕ ಮಹತ್ವವುಳ್ಳ ರಾಜರ, ಮಹಾರಾಜರ ಕತೆಗಳು ಸಿನಿಮಾಗಳಾಗುತ್ತಿವೆ. ಆದರೆ ಈ ಪದ್ಧತಿ ದಕ್ಷಿಣದಲ್ಲಿ ವಿಶೇಷವಾಗಿ ಕನ್ನಡದಲ್ಲಿ ಬಹಳ ವಿರಳ. ಎಲ್ಲೋ ಅಲ್ಲೊಂದು ಇಲ್ಲೊಂದು ಐತಿಹಾಸಿಕ ಸಿನಿಮಾಗಳು ಸೆಟ್ಟೇರುತ್ತವೆಯಷ್ಟೆ. ಅದರಲ್ಲೂ ರಾಜ-ಮಹಾರಾಜರ ಜೀವನ ಆಧರಿಸಿದ ಸಿನಿಮಾಗಳಂತೂ ಬಹಳ ವಿರಳ. ಆದರೆ ಇದೀಗ ಕನ್ನಡದ ದೊರೆ ಇಮ್ಮಡಿ ಪುಲಿಕೇಶಿ ಜೀವನ, ಸಾಹಸ, ಸಾಧನೆ ಕುರಿತು ಹೇಳುವ ಕನ್ನಡ ಸಿನಿಮಾ ಒಂದು ಸೆಟ್ಟೇರಲು ಸಿದ್ಧವಾಗಿದೆ.

ದಕ್ಷಿಣ ಭಾರತದ ಶ್ರೇಷ್ಠ ದೊರೆ, ಚಾಲುಕ್ಯ ಸಾಮ್ರಾಜ್ಯದ ಅಧಿಪತಿ ಇಮ್ಮಡಿ ಪುಲಕೇಶಿಯ ಸಾಹಸಮಯ ಬದುಕನ್ನು ತೆರೆಯ ಮೇಲೆ ತರಲು ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ಕೆಎಂ ಚೈತನ್ಯ ಸಜ್ಜಾಗಿದ್ದಾರೆ. ಈ ಬೃಹತ್‌ ಐತಿಹಾಸಿಕ ಚಿತ್ರಕ್ಕೆ ‘ಎರೆಯ’ ಎಂದು ಹೆಸರಿಡಲಾಗಿದ್ದು, ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿದೆ. ಈ ಹಿಂದೆ ಡಾ ರಾಜ್​​ಕುಮಾರ್ ಅವರು ‘ಇಮ್ಮಡಿ ಪುಲಿಕೇಶಿ’ ಸಿನಿಮಾನಲ್ಲಿ ನಟಿಸಿದ್ದರು. ಡಾಲಿ ಧನಂಜಯ್ ನಟನೆಯ ಸಿನಿಮಾ ಘೋಷಣೆ ಆಗಿತ್ತಾದರೂ ಅದು ಸೆಟ್ಟೇರಿದಂತಿಲ್ಲ.

6ನೇ ಶತಮಾನದಲ್ಲಿ ದಕ್ಷಿಣ ಭಾರತವನ್ನಾಳಿದ ದಂತಕಥೆ ಇಮ್ಮಡಿ ಪುಲಕೇಶಿಯ ಜೀವನ, ಆಡಳಿತ ಚಾತುರ್ಯ ಮತ್ತು ಯುದ್ಧದ ಸಾಹಸಗಾಥೆಗಳನ್ನು ಈ ಸಿನಿಮಾ ಒಳಗೊಂಡಿರಲಿವೆ. ಇಮ್ಮಡಿ ಪುಲಕೇಶಿಯ ಆಳ್ವಿಕೆಯ ಸುವರ್ಣಯುಗವನ್ನು ಚಿತ್ರದಲ್ಲಿ ಮರುಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ‘ಆ ದಿನಗಳು’ ನಿರ್ದೇಶಕ ಕೆಎಂ ಚೈತನ್ಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇತಿಹಾಸ ತಜ್ಞ ಡಾ ಭೂಷಣ್ ಶಾನಭಾಗ್ ಅವರು ನಡೆಸಿರುವ ಆಳವಾದ ಸಂಶೋಧನೆಯ ಆಧಾರದ ಮೇಲೆ ಚಿತ್ರಕಥೆಯನ್ನು ಸಿದ್ಧಪಡಿಸಿದ್ದಾರೆ ಚೈತನ್ಯ.

ಇದನ್ನೂ ಓದಿ:‘ಸ್ಪಿರಿಟ್’ ಬಳಿಕ ಮತ್ತೊಬ್ಬ ಸ್ಟಾರ್ ನಟನ ಜೊತೆ ಸಂದೀಪ್ ರೆಡ್ಡಿ ಸಿನಿಮಾ

ವಿಂಗ್‌ಸ್ಪ್ಯಾನ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸುನೀತ್ ಜಾವಡೇಕರ್ ಮತ್ತು ನಿವೇದಿತಾ ಕೊಠಾರೆ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಗೆ ಹಿಂದಿ ಮತ್ತು ದಕ್ಷಿಣ ಭಾರತದ ಉಳಿದ ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ. ಸಿನಿಮಾದ ನಾಯಕ ಸೇರಿದಂತೆ ಇತರೆ ಪಾತ್ರಗಳ ಆಯ್ಕೆ ಜಾರಿಯಲ್ಲಿದ್ದು, ಶೀಘ್ರವೇ ತಾರಾಗಣ ಹಾಗೂ ತಾಂತ್ರಿಕ ವರ್ಗವನ್ನು ಘೋಷಿಸಲಾಗುವುದು ಎಂದು ಚಿತ್ರತಂಡ ಹೇಳಿದೆ. ಕೆಎಂ ಚೈತನ್ಯ ಸದ್ಯಕ್ಕೆ ‘ಬಲರಾಮನ ದಿನಗಳು’ ಸಿನಿಮಾದ ಚಿತ್ರೀಕರಣ ಮತ್ತು ಬಿಡುಗಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆ ಸಿನಿಮಾದ ಕೆಲಸಗಳು ಮುಗಿದ ಬಳಿಕ ‘ಎರೆಯ’ ಸಿನಿಮಾದ ಕಾರ್ಯ ಶುರುವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿಸಿ

Follow Us