Sri Murali: ಕೊವಿಡ್​ ಸಂಕಷ್ಟದಲ್ಲಿ 5 ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಊಟ ನೀಡುತ್ತಿರುವ ನಟ ಶ್ರೀಮುರಳಿ

Sriimurali: ದಿನವಿಡೀ ಪಿಪಿಇ ಕಿಟ್​ ಧರಿಸಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳು ಊಟ ಮಾಡಲು ಕೂಡ ಕಷ್ಟಪಡುತ್ತಿದ್ದಾರೆ ಎಂಬುದು ಶ್ರೀಮುರಳಿ ಅವರ ಗಮನಕ್ಕೆ ಬಂದಿದೆ. ಹಾಗಾಗಿ ಅಂಥವರ ನೆರವಿಗೆ ಶ್ರೀಮುರಳಿ ಧಾವಿಸಿದ್ದಾರೆ.

Sri Murali: ಕೊವಿಡ್​ ಸಂಕಷ್ಟದಲ್ಲಿ 5 ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಊಟ ನೀಡುತ್ತಿರುವ ನಟ ಶ್ರೀಮುರಳಿ
ನಟ ಶ್ರೀಮುರಳಿ

Updated on: May 09, 2021 | 9:49 AM

ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆಯೇ ವೈದ್ಯರು, ನರ್ಸ್​ಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂಥ ಕೊರೊನಾ ವಾರಿಯರ್​ಗಳ ಕಾಳಜಿ ವಹಿಸಬೇಕಾಗಿರುವುದು ಕೂಡ ಈ ಹೊತ್ತಿನ ಅಗತ್ಯತೆ. ಅವರು ಚೆನ್ನಾಗಿದ್ದರೆ ಮಾತ್ರ ಈ ಭೀಕರ ಪರಿಸ್ಥಿತಿಯನ್ನು ಎದುರಿಸಬಹುದು. ಆ ಕಾರಣಕ್ಕಾಗಿ ನಟ ಶ್ರೀಮುರಳಿ ಅವರು ತಮ್ಮ ನೆರವಿನ ಹಸ್ತ ಚಾಚಿದ್ದಾರೆ. ಬೆಂಗಳೂರಿನ 5 ಸರ್ಕಾರಿ ಆಸ್ಪತ್ರೆಯ ವೈದ್ಯರು, ನರ್ಸ್​ಗಳು ಹಾಗೂ ಸಿಬ್ಬಂದಿಗೆ ಊಟ ನೀಡುವ ಕಾಯಕಕ್ಕೆ ರೋರಿಂಗ್​ ಸ್ಟಾರ್​ ಮುಂದಾಗಿದ್ದಾರೆ.

ದಿನವಿಡೀ ಪಿಪಿಇ ಕಿಟ್​ ಧರಿಸಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳು ಊಟ ಮಾಡಲು ಕೂಡ ಕಷ್ಟಪಡುತ್ತಿದ್ದಾರೆ ಎಂಬುದು ಶ್ರೀಮುರಳಿ ಅವರ ಗಮನಕ್ಕೆ ಬಂದಿದೆ. ಹಾಗಾಗಿ ಇಂದಿನಿಂದ (ಮೇ 9) ಉಚಿತವಾಗಿ ಊಟದ ವ್ಯವಸ್ಥೆ ಮಾಡಲು ಅವರು ನಿರ್ಧರಿಸಿದ್ದಾರೆ. ಕೆಸಿ ಜನರಲ್​ ಆಸ್ಪತ್ರೆ, ರಾಜಾಜಿನಗರದ ಇಎಸ್​ಐ ಆಸ್ಪತ್ರೆ, ಸಿವಿ ರಾಮನ್​ ಜನರಲ್​ ಆಸ್ಪತ್ರೆ, ಜಯನಗರ ಜನರಲ್​ ಆಸ್ಪತ್ರೆ ಹಾಗೂ ಬೌರಿಂಗ್​ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಮತ್ತು ನರ್ಸ್​ಗಳಿಗೆ ಶ್ರೀಮುರಳಿ ಊಟದ ವ್ಯವಸ್ಥೆ ಮಾಡಲು ಪಣತೊಟ್ಟಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ಪರಿಸ್ಥಿತಿ ಕೈ ಮೀರಿದೆ. ಸೂಕ್ತ ಚಿಕಿತ್ಸೆ ಇಲ್ಲದೆ ಜನ ಸಾಮಾನ್ಯರು ಕಷ್ಟಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರು ಮಾಡುವ ಸಣ್ಣ ಸಣ್ಣ ಸಹಾಯ ಕೂಡ ದೊಡ್ಡ ಪರಿಣಾಮ ಬೀರಲಿದೆ. ಅದರಲ್ಲೂ ಸ್ಟಾರ್​ ನಟರು ಇಂಥ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡರೆ ಅದರಿಂದ ಇನ್ನೂ ಅನೇಕರಿಗೆ ಮಾದರಿ ಆಗಲಿದೆ. ಲಾಕ್​ಡೌನ್​ ಆರಂಭ ಆಗುವುದಕ್ಕೂ ಮುನ್ನ ಮದಗಜ ಸಿನಿಮಾದ ಶೂಟಿಂಗ್​ ಕೆಲಸಗಳಲ್ಲಿ ಶ್ರೀಮುರಳಿ ಬ್ಯುಸಿ ಆಗಿದ್ದರು. ಆ ಚಿತ್ರಕ್ಕೆ ‘ಅಯೋಗ್ಯ’ ಖ್ಯಾತಿಯ ಮಹೇಶ್​ ನಿರ್ದೇಶನ ಮಾಡುತ್ತಿದ್ದಾರೆ.

ಕನ್ನಡದ ಚಿತ್ರರಂಗದ ಹಲವು ಕಲಾವಿದರು ಈಗ ಕೊವಿಡ್​ ವಾರಿಯರ್​ಗಳಾಗಿ ಕೆಲಸ ಮಾಡುತ್ತಿದ್ದಾರೆ. ನಟ ಅರ್ಜುನ್​ ಗೌಡ ಅವರು ಈ ಕಷ್ಟದ ಸಂದರ್ಭದಲ್ಲಿ ಆ್ಯಂಬುಲೆನ್ಸ್​ ಚಾಲಕನಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್​ ಗೌಡ ಅವರು ತಮ್ಮದೇ ಹೆಲ್ಪ್​ಲೈನ್​ ಆರಂಭಿಸಿ, ಆ ಮೂಲಕ ಜನರ ಸಹಾಯಕ್ಕೆ ನಿಂತಿದ್ದಾರೆ. ನಟ ಜಗ್ಗೇಶ್​ ಅವರು ಅಗತ್ಯ ಇರುವವರರಿಗೆ ಆಕ್ಸಿಜನ್​ ಸಿಲಿಂಡರ್​ ಒದಗಿಸಿದ್ದಾರೆ. ಬಹುಭಾಷಾ ನಟ ಸೋನು ಸೂದ್​ ಅವರು ಸಮರೋಪಾದಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಈ ಸಾಲಿಗೆ ಈಗ ಶ್ರೀಮುರಳಿ ಕೂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ:

Actor Arjun Gowda: ಜನರ ಕಷ್ಟ ನೋಡಲಾಗದೇ ಆ್ಯಂಬುಲೆನ್ಸ್​ ಚಾಲಕನಾದ ಕನ್ನಡ ಸಿನಿಮಾ ನಟ ಅರ್ಜುನ್​​ ಗೌಡ

ರಿಯಲ್​ ಹೀರೋ ಆದ ಜಗ್ಗೇಶ್​; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us