ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತಕ್ಕೆ ದಿನಾಂಕ ನಿಗದಿ: ಸಚಿವ ಅಶ್ವಥ್ ನಾರಾಯಣ ಚಿತ್ರಕತೆ

ವಿವಾದಿತ ಉರಿಗೌಡ-ನಂಜೇಗೌಡ ಪಾತ್ರಗಳನ್ನು ಆಧರಿಸಿ ಸಿನಿಮಾ ಮಾಡುವುದಾಗಿ ನಿರ್ಮಾಪಕ, ಸಚಿವ ಮುನಿರತ್ನ ಘೋಷಿಸಿದ್ದು, ಸಿನಿಮಾದ ಮುಹೂರ್ತ ಮೇ 18 ರಂದು ನಡೆಯಲಿದೆ. ಚಿತ್ರಕತೆ, ನಿರ್ದೇಶನ ಇತ್ಯಾದಿ ವಿವರ ಇಲ್ಲಿದೆ.

ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತಕ್ಕೆ ದಿನಾಂಕ ನಿಗದಿ: ಸಚಿವ ಅಶ್ವಥ್ ನಾರಾಯಣ ಚಿತ್ರಕತೆ
ಉರಿಗೌಡ-ನಂಜೇಗೌಡ ಸಿನಿಮಾ ಪೋಸ್ಟರ್

Updated on: Mar 18, 2023 | 9:31 PM

ರಾಜ್ಯ ರಾಜಕೀಯದಲ್ಲಿ (Politics) ವಿವಾದಿತ ಪಾತ್ರಗಳಾಗಿ ಚರ್ಚೆಯಲ್ಲಿರುವ ಉರಿಗೌಡ-ನಂಜೇಗೌಡ (Urigowda Nanjegowda) ಅವರುಗಳನ್ನು ಆಧರಿಸಿದ ಸಿನಿಮಾ ಮಾಡಲು ನಿರ್ಮಾಪಕ, ಹಾಲಿ ಸಚಿವ ಮುನಿರತ್ನ (Munirathna) ಟೈಟಲ್ ರಿಜಿಸ್ಟರ್​ಗೆ ಅರ್ಜಿ ಹಾಕಿದ ಬೆನ್ನಲ್ಲೆ ಇದೀಗ ಸಿನಿಮಾದ ಮುಹೂರ್ತ ದಿನಾಂಕವನ್ನೂ ಘೋಷಿಸಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಮುನಿರತ್ನ, ಮೇ 18 ರಂದು ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತ ಮಾಡಲಾಗುವುದು ಎಂದಿದ್ದಾರೆ.

ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಚಿತ್ರಕತೆಯನ್ನು ಸಚಿವ ಅಶ್ವಥ್ ನಾರಾಯಣ ಒದಗಿಸುತ್ತಿದ್ದು, ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿರುವುದು ಸಚಿವ ಆರ್.ಅಶೋಕ್ ಹಾಗೂ ಸಿಟಿ ರವಿ ಎಂಬುದು ವಿಶೇಷ. ಈ ಸಿನಿಮಾವನ್ನು ನಿರ್ದೇಶಕ ಆರ್.ಎಸ್.ಗೌಡ ನಿರ್ದೇಶನ ಮಾಡಲಿದ್ದಾರೆ. ಮೇ 18 ರಂದು ಬೆಳಿಗ್ಗೆ 10 ಗಂಟೆಗೆ ಕಂಠೀರವ ಸ್ಟುಡಿಯೋನಲ್ಲಿ ಸಿನಿಮಾದ ಮುಹೂರ್ತ ನಡೆಯಲಿದ್ದು, ಮುನಿರತ್ನ ತಮ್ಮ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಲಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಉರಿಗೌಡ-ನಂಜೇಗೌಡ ಹಾಗೂ ನಂಜೇಗೌಡ-ಉರಿಗೌಡ ಟೈಟಲ್ ಅನ್ನು ರಿಜಿಸ್ಟರ್ ಮಾಡಲು ತಮ್ಮ ನಿರ್ಮಾಣ ಸಂಸ್ಥೆಯಾದ ವೃಷಭಾದ್ರಿ ಪ್ರೊಡಕ್ಷನ್ ಹೌಸ್ ವತಿಯಿಂದ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಮುನಿರತ್ನ ಅರ್ಜಿ ಸಲ್ಲಿಸಿದ್ದರು. ಈ ವಿವಾದಿತ ಪಾತ್ರಗಳ ಬಗ್ಗೆ ಸಿನಿಮಾ ಮಾಡಲು ಮುಂದಾಗಿರುವ ಮುನಿರತ್ನರ ಯೋಜನೆಯನ್ನು ಕಟುವಾಗಿ ಟೀಕಿಸಿದ್ದ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ, ಈ ಸಿನಿಮಾಕ್ಕೆ ಸಿಟಿ ರವಿ ಚಿತ್ರಕತೆ ಬರೆಯುತ್ತಾರೆಯೇ? ಎಂದು ಪ್ರಶ್ನಿಸಿದ್ದರು. ಸಿನಿಮಾಕ್ಕೆ ಚಿತ್ರಕತೆ ಬರೆಯಲು ಸಿಟಿ ರವಿಯವರ ಬದಲಾಗಿ ಅಶ್ವಥ್ ನಾರಾಯಣ್ ಅವರನ್ನು ಮುನಿರತ್ನ ಆರಿಸಿದ್ದಾರೆ.

ಮುನಿರತ್ನ ಅವರು ಟೈಟಲ್​ಗೆ ಅರ್ಜಿ ಸಲ್ಲಿಸಿದ್ದರ ವಿರುದ್ಧ ಈಗಾಗಲೇ ಆಕ್ಷೇಪ ವ್ಯಕ್ತವಾಗಿದ್ದು ಒಕ್ಕಲಿಗ ಯುವಬ್ರಿಗೆಡ್ ಹಾಗೂ ಅನಿವಾಸಿ ಭಾರತೀಯ ಒಕ್ಕಲಿಗ ಯುವಬ್ರಿಗೆಡ್ ಅವರು ಈ ಕುರಿತು ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ‘ವೃಷಭಾದ್ರಿ ಪ್ರೊಡಕ್ಷನ್ಸ್ ಅವರು ಉರೀಗೌಡ, ನಂಜೇಗೌಡ ಚಲನಚಿತ್ರ ನಿರ್ಮಿಸಲು ವಾಣಿಜ್ಯ ಮಂಡಳಿಗೆ ಮನವಿಯನ್ನು ಸಲ್ಲಿಸಿರುತ್ತಾರೆ. ಉರೀಗೌಡ, ನಂಜೇಗೌಡ ಎನ್ನುವ ಇಬ್ಬರೂ ವ್ಯಕ್ತಿಗಳ ಮೇಲೆ ಯಾವುದೇ ತರಹದ ಮಾಹಿತಿ ಸರ್ಕಾರದ ದಾಖಲೆಗಳಲ್ಲಿ, ಇತಿಹಾಸದ ದಾಖಲೆಗಳಲ್ಲಿ ಹಾಗೂ ಸ್ಥಳೀಯ ಆಡಳಿತದಲ್ಲಿ ಸಿಗುವ ಕರಡು ಪ್ರತಿಗಳಲ್ಲಿ ಇಲ್ಲ’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us